ನವದೆಹಲಿ: ಕೇಂದ್ರ ಸರ್ಕಾರದ E20 ಪೆಟ್ರೋಲ್ ನೀತಿಯನ್ನು ತೀವ್ರವಾಗಿ ವಿರೋಧಿಸಿ ಆಮ್ ಆದ್ಮಿ ಪಾರ್ಟಿ (ಆಪ್) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ (Arvind Kejriwal) ನೇತೃತ್ವದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಯಿತು. ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ನಿವಾಸ ‘೭, ಲೋಕ ಕಲ್ಯಾಣ ಮಾರ್ಗ’ಕ್ಕೆ ಪಾದಯಾತ್ರೆ ನಡೆಸಲುತ್ನಿಸಿದ ಕೇಜ್ರಿವಾಲ್ ಸೇರಿದಂತೆ ಹಲವು ಆಪ್ ನಾಯಕರನ್ನು ದೆಹಲಿ ಪೊಲೀಸರು ಮಾರ್ಗ ಮಧ್ಯದಲ್ಲೇ ಬ್ಯಾರಿಕೇಡ್ ಹಾಕಿ ತಡೆದರು.
ಫಿರೋಜ್ ಶಾ ರಸ್ತೆಯಲ್ಲಿ ಧರಣಿ ಸತ್ಯಾಗ್ರಹ ಪೊಲೀಸರ ತಡೆಯಿಂದಾಗಿ ಪಾದಯಾತ್ರೆ ಮುಂದುವರಿಸಲಾಗದೆ, ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಮತ್ತು ಸಂಸದ ಸಂಜಯ್ ಸಿಂಗ್ ಅವರು ಬೆಂಬಲಿಗರೊಂದಿಗೆ ಫಿರೋಜ್ ಶಾ ರಸ್ತೆಯಲ್ಲೇ ರಸ್ತೆ ತಡೆದು ಧರಣಿ ಕುಳಿತರು. E20 ಇಂಧನ ಬಳಕೆಯಿಂದ ಸಾರ್ವಜನಿಕರ ವಾಹನಗಳು ಹಾಳಾಗುತ್ತಿವೆ ಎಂದು ಆರೋಪಿಸಿ, ಸುಮಾರು ೨.೩೦ ಲಕ್ಷಕ್ಕೂ ಅಧಿಕ ಜನರಿಂದ ಸಂಗ್ರಹಿಸಲಾದ ಮನವಿ ಪತ್ರಗಳನ್ನು ಪ್ರಧಾನಿಯವರಿಗೆ ತಲುಪಿಸುವುದು ಈ ಮೆರವಣಿಗೆಯ ಪ್ರಮುಖ ಉದ್ದೇಶವಾಗಿತ್ತು. ಈ ಪಾದಯಾತ್ರೆಯಲ್ಲಿ ಇಂಧನ ಸಮಸ್ಯೆಯಿಂದ ವಾಹನ ಕಳೆದುಕೊಂಡ ಸುಮಾರು ೧೦೦ಕ್ಕೂ ಹೆಚ್ಚು ಸಂತ್ರಸ್ತ ಮಾಲೀಕರು ಭಾಗವಹಿಸಿದ್ದರು.
ಕೇಜ್ರಿವಾಲ್ ಗಂಭೀರ ಆರೋಪ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕೇಜ್ರಿವಾಲ್, “ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಒತ್ತಡಕ್ಕೆ ಮಣಿದು ಮೋದಿ ಸರ್ಕಾರ ಅಲ್ಲಿಂದ ಅಪಾರ ಪ್ರಮಾಣದ ಎಥನಾಲ್ ಆಮದು ಮಾಡಿಕೊಳ್ಳುತ್ತಿದೆ. ಅಮೆರಿಕದ ಹಿತಾಸಕ್ತಿಗಾಗಿ ದೇಶದ ಜನಸಾಮಾನ್ಯರ ಮೇಲೆ E20 ಪೆಟ್ರೋಲ್ ಅನ್ನು ಬಲವಂತವಾಗಿ ಹೇರಲಾಗುತ್ತಿದೆ” ಎಂದು ದೂರಿದರು.
ವಾಹನ ಸವಾರರಿಂದ ವ್ಯಾಪಕ ದೂರುಗಳು ಬಂದರೂ ಸರ್ಕಾರ ಈ ಇಂಧನ ನೀತಿಯನ್ನು ಸಮರ್ಥಿಸಿಕೊಳ್ಳುತ್ತಿರುವುದರ ಹಿಂದೆ ‘ಗೂಢ ಉದ್ದೇಶ’ಡಗಿದೆ ಎಂದು ಅವರು ಕಿಡಿಕಾರಿದರು. ಪ್ರಧಾನಿಯವರನ್ನು ಖುದ್ದಾಗಿ ಭೇಟಿಯಾಗಿ ಸಾರ್ವಜನಿಕರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವವರೆಗೆ ಹೋರಾಟ ಮುಂದುವರಿಸುವುದಾಗಿ ಆಪ್ ನಾಯಕರು ಎಚ್ಚರಿಸಿದ್ದಾರೆ.
ಇದನ್ನೂ ಓದಿ: ತಂಜಾವೂರು ಭಾಷಣ ವಿವಾದ: ಉದಯನಿಧಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಂತೆ ಮದ್ರಾಸ್ ಹೈಕೋರ್ಟ್ ಮೌಖಿಕ ಸೂಚನೆ
