TOP NEWS

Hubballi: ಹುಬ್ಬಳ್ಳಿ-ಧಾರವಾಡದಲ್ಲಿ ಗಣೇಶೋತ್ಸವಕ್ಕೆ ಖಡಕ್ ಪೊಲೀಸ್ ಬಂದೋಬಸ್ತ್: 5 ಹಂತಗಳಲ್ಲಿ ಡ್ರೈ ಡೇ ಜಾರಿ

Ganesha Festival Strictures Hubballi Police Announce Dry Days Crack Down on Alcohol

ಹುಬ್ಬಳ್ಳಿ: ಮುಂಬರುವ ಗಣೇಶೋತ್ಸವ ಹಾಗೂ ಮೂರ್ತಿ ವಿಸರ್ಜನಾ ಮೆರವಣಿಗೆಗಳ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ (Hubballi) ಅವಳಿ ನಗರಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಸಶಕ್ತವಾಗಿ ಕಾಪಾಡುವ ಉದ್ದೇಶದಿಂದ ಪೊಲೀಸ್ ಇಲಾಖೆಯು ಅತ್ಯಂತ ಕಠಿಣ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಹಬ್ಬದ ಆಚರಣೆಗಳ ಸಮಯದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ತಡೆಯಲು ನಗರ ಪೊಲೀಸ್ ಆಯುಕ್ತರು ಹಾಗೂ ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ಭೂಷಣ್ ಬೊರಸೆ ಅವರು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಐದು ವಿಭಿನ್ನ ಹಂತಗಳಲ್ಲಿ ಮದ್ಯ ಮಾರಾಟ, ಸಾಗಾಣಿಕೆ ಹಾಗೂ ಸೇವನೆಯನ್ನು ಸಂಪೂರ್ಣವಾಗಿ ನಿಷೇಧಿಸಿ (ಡ್ರೈ ಡೇ) ಅಧಿಕೃತ ಆದೇಶ ಹೊರಡಿಸಿದ್ದಾರೆ.

ಯಾವಾಗಿನಿಂದ ಇರಲಿದೆ ಈ ಮಧ್ಯ ನಿಷೇಧ?

ಈ ವಿಶೇಷ ಮದ್ಯ ನಿಷೇಧ ಆದೇಶದಂತೆ, ಸೆಪ್ಟೆಂಬರ್ 21ರ ರಾತ್ರಿ 11.59ರಿಂದ ಆರಂಭಗೊಂಡು ಸೆಪ್ಟೆಂಬರ್ 23ರ ಬೆಳಗ್ಗೆ 6.00 ಗಂಟೆಯವರೆಗೆ ಹಾಗೂ ತದನಂತರ ಸೆಪ್ಟೆಂಬರ್ 24ರ ರಾತ್ರಿ 11.59ರಿಂದ ಸೆಪ್ಟೆಂಬರ್ 26ರ ಬೆಳಗ್ಗೆ 6.00 ಗಂಟೆಯವರೆಗೆ ಮದ್ಯ ಮಾರಾಟಕ್ಕೆ ಸಂಪೂರ್ಣ ತಡೆ ಇರಲಿದೆ. ಈ ಅವಧಿಯಲ್ಲಿ ಹುಬ್ಬಳ್ಳಿ-ಧಾರವಾಡ ನಗರ ವ್ಯಾಪ್ತಿಯಲ್ಲಿ ಬರುವ ಎಲ್ಲಾ ರೀತಿಯ ಮದ್ಯದಂಗಡಿಗಳು, ವೈನ್ ಶಾಪ್‌ಗಳು, ಬಾರ್ ಮತ್ತು ರೆಸ್ಟೋರೆಂಟ್‌ಗಳು ಹಾಗೂ ಪರವಾನಗಿ ಹೊಂದಿರುವ ಮದ್ಯ ಮಾರಾಟ ಕೇಂದ್ರಗಳು ಕಡ್ಡಾಯವಾಗಿ ಬಂದ್ ಆಗಿರಲಿವೆ. ಕೇವಲ ಮದ್ಯ ಮಾರಾಟ ಮತ್ತು ಸಾಗಾಣಿಕೆಷ್ಟೇ ಅಲ್ಲದೆ, ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಸೇವನೆ ಮಾಡುವುದನ್ನೂ ಕೂಡ ಕಾನೂನುಬಾಹಿರ ಎಂದು ಘೋಷಿಸಲಾಗಿದೆ.

ಪೊಲೀಸ್‌ ಇಲಾಖೆಯಿಂದ ಕಟ್ಟುನಿಟ್ಟಿನ ಆದೇಶ

ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ, ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಮುಖ್ಯವಾಗಿ ಬೃಹತ್ ವಿಸರ್ಜನಾ ಮೆರವಣಿಗೆಗಳ ಸಂದರ್ಭದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವುದು ಪೊಲೀಸ್ ಇಲಾಖೆಯ ಮುಖ್ಯ ಆದ್ಯತೆಯಾಗಿದೆ. ಹೀಗಾಗಿ, ಮೆರವಣಿಗೆಯಲ್ಲಿ ಮದ್ಯಪಾನ ಮಾಡಿ ಭಾಗವಹಿಸುವವರು ಅಥವಾ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುವ ಪುಂಡರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸುವುದಾಗಿ ಪೊಲೀಸರು ಈಗಾಗಲೇ ಕಠಿಣ ಎಚ್ಚರಿಕೆ ನೀಡಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಅನುಮಾನಾಸ್ಪದವಾಗಿ ಕಂಡುಬರುವ ವ್ಯಕ್ತಿಗಳನ್ನು ತಪಾಸಣೆಗೊಳಪಡಿಸಲು ಮತ್ತು ‘ಬ್ರೀಥ್ ಅನಲೈಸರ್’ (ಉಸಿರಾಟ ಪರೀಕ್ಷೆ) ಉಪಕರಣಗಳನ್ನು ಬಳಸಿ ಮದ್ಯಪಾನ ತಪಾಸಣೆ ನಡೆಸಲು ವಿಶೇಷ ಪೊಲೀಸ್ ತುಕಡಿಗಳನ್ನು ನಿಯೋಜಿಸಲಾಗಿದೆ. ಸಾರ್ವಜನಿಕರು ಹಾಗೂ ಸಂಘಟಕರು ಈ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಿ, ಶಾಂತಿಯುತವಾಗಿ ಗಣೇಶೋತ್ಸವ ಆಚರಿಸಲು ಸಹಕರಿಸಬೇಕು ಎಂದು ಪೊಲೀಸ್ ಆಡಳಿತ ಮನವಿ ಮಾಡಿದೆ.

ಇದನ್ನೂ ಓದಿ:  ಕಸ್ತೂರಿ ರಂಗನ್ ವರದಿ: ರೈತರ ಜೊತೆ ಚರ್ಚಿಸಿದ ನಂತರವೇ ಆಕ್ಷೇಪಣೆ ಸಲ್ಲಿಕೆ – ಡಿಕೆ ಶಿವಕುಮಾರ್ ಭರವಸೆ!

Leave a Reply

Your email address will not be published. Required fields are marked *