ಹೈದರಾಬಾದ್: ಸಾಮಾನ್ಯವಾಗಿ ಜೈಲು ಎಂದರೆ ಅಪರಾಧಿಗಳನ್ನು ಸುಧಾರಿಸುವ ಕೇಂದ್ರ. ಆದರೆ ಕಂಬಿಗಳ ಹಿಂದಿನ ಜೀವನ ನಿಜಕ್ಕೂ ಹೇಗಿರುತ್ತದೆ ಎಂಬ ಕುತೂಹಲ (Telangana) ಎಲ್ಲರಲ್ಲೂ ಇರುತ್ತದೆ. ಈ ಕುತೂಹಲವನ್ನು ತಣಿಸುವ ಜೊತೆಗೆ, ಅಪರಾಧ ಕೃತ್ಯಗಳಿಂದ ದೂರವಿರಬೇಕು ಎಂಬ ಸಂದೇಶ ಸಾರಲು ತೆಲಂಗಾಣದ ಕಾರಾಗೃಹ ಇಲಾಖೆಯು ಹೈದರಾಬಾದ್ನಲ್ಲಿ ಒಂದು ವಿಭಿನ್ನ ಪ್ರಯತ್ನಕ್ಕೆ ಚಾಲನೆ ನೀಡಿದೆ.
ಜೈಲು ಜೀವನದ ನೇರ ದರ್ಶನ ನಗರದ ಐತಿಹಾಸಿಕ ಚಂಚಲ್ಗುಡ ಕೇಂದ್ರ ಕಾರಾಗೃಹದಲ್ಲಿ ‘ಫೀಲ್ ದಿ ಜೈಲ್’ ಎಂಬ ವಿನೂತನ ಯೋಜನೆಯನ್ನು ಆರಂಭಿಸಲಾಗಿದೆ. ಇದರ ಅಡಿಯಲ್ಲಿ ಸಾಮಾನ್ಯ ಜನರಿಗೂ ಜೈಲಿನ ವಾತಾವರಣವನ್ನು ಹತ್ತಿರದಿಂದ ನೋಡುವ ಅವಕಾಶ ಸಿಗಲಿದೆ. ರಾಜ್ಯಪಾಲ ಶಿವಪ್ರತಾಪ್ ಶುಕ್ಲಾ ಅವರು ಇತ್ತೀಚೆಗೆ ಈ ಯೋಜನೆಗೆ ಚಾಲನೆ ನೀಡಿದ್ದು, ಜೈಲಿನ ಬ್ಯಾರಕ್ಗಳು ಮತ್ತು ಅಲ್ಲಿನ ಕಠಿಣ ಜೀವನಶೈಲಿಯನ್ನು ವೀಕ್ಷಿಸಿದ್ದಾರೆ. ಕ್ಷಣಿಕ ಆವೇಶದಲ್ಲಿ ಮಾಡುವ ತಪ್ಪುಗಳು ಮನುಷ್ಯನ ಸ್ವಾತಂತ್ರ್ಯವನ್ನು ಹೇಗೆ ಕಿತ್ತುಕೊಳ್ಳುತ್ತವೆ ಎಂಬುದನ್ನು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡುವುದು ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ.
ಇತಿಹಾಸದ ಪುಟ ತೆರೆದ ಮ್ಯೂಸಿಯಂ ಇದೇ ಆವರಣದಲ್ಲಿ ಸ್ಥಾಪಿಸಲಾಗಿರುವ ‘ಜೈಲು ಮ್ಯೂಸಿಯಂ’ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದೆ. ಹೈದರಾಬಾದ್ ನಿಜಾಮರ ಕಾಲದಲ್ಲಿ ನಿರ್ಮಾಣಗೊಂಡ ಈ ಜೈಲಿನ ಪುರಾತನ ನೆನಪುಗಳನ್ನು ಇಲ್ಲಿ ಸಂರಕ್ಷಿಸಿಡಲಾಗಿದೆ. ಅಂದಿನ ಕಾಲದ ಕೈದಿಗಳಿಗೆ ತೊಡಿಸುತ್ತಿದ್ದ ಕಬ್ಬಿಣದ ಸರಪಳಿಗಳು, ಬೇಡಿಗಳು, ಹಳೆಯ ಆಯುಧಗಳು ಮತ್ತು ಭಯಾನಕ ನೇಣುಗಂಬಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಶಿಕ್ಷೆಯ ಸ್ವರೂಪ ಎಷ್ಟೊಂದು ಭೀಕರವಾಗಿತ್ತು ಎಂಬುದಕ್ಕೆ ಈ ಮ್ಯೂಸಿಯಂ ಸಾಕ್ಷಿ ನುಡಿಯುತ್ತದೆ.
ಯುವಜನತೆಗೆ ಎಚ್ಚರಿಕೆಯ ಸಂದೇಶ ಯುವ ಪೀಳಿಗೆಯು ದಾರಿ ತಪ್ಪಿ ಅಪರಾಧ ಲೋಕಕ್ಕೆ ಕಾಲಿಡದಂತೆ ತಡೆಯುವುದು ಈ ಇಡೀ ಯೋಜನೆಯ ಹಿಂದಿರುವ ದೊಡ್ಡ ಗುರಿ. ಜೈಲಿನ ಕತ್ತಲು ಕೋಣೆಗಳನ್ನು ಪ್ರತ್ಯಕ್ಷವಾಗಿ ನೋಡುವುದರಿಂದ, ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದರೆ ಭವಿಷ್ಯ ಏನಾಗಬಹುದು ಎಂಬ ಅರಿವು ಮೂಡುತ್ತದೆ. ಕೇವಲ ಶಿಕ್ಷೆಯ ಭಯ ಹುಟ್ಟಿಸುವುದಕ್ಕಿಂತ ಹೆಚ್ಚಾಗಿ, ಜೈಲು ಜೀವನದ ನೈಜ ಕಷ್ಟಗಳನ್ನು ಜನರಿಗೆ ಪರಿಚಯಿಸಿ ಅವರನ್ನು ಸನ್ಮಾರ್ಗದಲ್ಲಿ ನಡೆಸಲು ತೆಲಂಗಾಣ ಸರ್ಕಾರ ಈ ಮಹತ್ವದ ಹೆಜ್ಜೆ ಇಟ್ಟಿದೆ.
ಇದನ್ನೂ ಓದಿ: ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ನಾಲ್ಕು ಚಿರತೆ ಮರಿಗಳ ಸಾವು
