TOP NEWS

Road Mishap: ದಾವಣಗೆರೆ ಟೋಲ್ ಪ್ಲಾಜಾದಲ್ಲಿ ಭೀಕರ ಅಪಘಾತ: ಕಾರಿಗೆ ಡಿಕ್ಕಿ ಹೊಡೆದ ಕಂಟೇನರ್ ಟ್ರಕ್

Davanagere road mishap Speeding Container Truck Rams Stopped Car at Toll Gate Miraculous Escape for Passengers

ದಾವಣಗೆರೆ: ಜಿಲ್ಲೆಯ ದಾವಣಗೆರೆ ತಾಲೂಕಿನ ಟೋಲ್ ಪ್ಲಾಜಾವೊಂದರಲ್ಲಿ ಭೀಕರ ಜಾಗರೂಕತೆಯ ಕೊರತೆಯಿಂದ ಸಂಭವಿಸಬಹುದಾಗಿದ್ದ ದೊಡ್ಡ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಟೋಲ್ ಶುಲ್ಕ ಪಾವತಿಸಲು ಸಾಲಿನಲ್ಲಿ ನಿಂತಿದ್ದ ಕಾರಿಗೆ ವೇಗವಾಗಿ ಬಂದ ಕಂಟೇನರ್ ಟ್ರಕ್ ಹಿಂಬದಿಯಿಂದ ಭೀಕರವಾಗಿ ಡಿಕ್ಕಿ (Road Mishap) ಹೊಡೆದಿದೆ.

ಆಗಿದ್ದೇನು?

ಅತಿಯಾದ ವೇಗದಲ್ಲಿದ್ದ ಕಂಟೇನರ್ ಲಾರಿ ನಿಯಂತ್ರಣ ಸಿಗದೆ ಕಾರಿಗೆ ಗುದ್ದಿದ ರಭಸಕ್ಕೆ ಕಾರು ಮುಂಭಾಗಕ್ಕೆ ನುಗ್ಗಿದೆ. ಡಿಕ್ಕಿಯ ತೀವ್ರತೆಗೆ ಕಾರಿನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸದಿರುವುದು ಎಲ್ಲರೂ ನಿಟ್ಟುಸಿರು ಬಿಡುವಂತೆ ಮಾಡಿದೆ. ಟೋಲ್ ಪ್ಲಾಜಾದ ಸಿಸಿಟಿವಿ ಕ್ಯಾಮೆರಾದಲ್ಲಿ ಈ ಇಡೀ ಭೀಕರ ಅಪಘಾತದ ದೃಶ್ಯಾವಳಿಗಳು ಸೆರೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಆತಂಕ ಮೂಡಿಸಿದೆ. ಈ ಅಪಘಾತಕ್ಕೆ ಸಂಬಂಧಿಸಿದಂತೆ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಬೀದರ್ ಗಡಿಯಲ್ಲಿ ಭೀಕರ ಅಪಘಾತ: ಟ್ಯಾಂಕರ್-ಆಟೋ ಮುಖಾಮುಖಿ ಡಿಕ್ಕಿ, ಆಟೋ ಚಾಲಕ ಸೇರಿ ಐವರು ಕೂಲಿ ಕಾರ್ಮಿಕರು ದುರ್ಮರಣ!

ಬೀದರ್: ದಿನದ ದುಡಿಮೆ ಮುಗಿಸಿ ನೆಮ್ಮದಿಯಿಂದ ಮನೆಗೆ ಮರಳುತ್ತಿದ್ದ ಕೃಷಿ ಕಾರ್ಮಿಕರ ಪಾಲಿಗೆ ಹೆದ್ದಾರಿಯೇ ಮೃತ್ಯುಕೂಪವಾಗಿ ಪರಿಣಮಿಸಿದೆ. ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಜಹೀರಾಬಾದ್ ಸಮೀಪದ ಚಿರಾಘಪಲ್ಲಿ-ಸತ್ವಾರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ದುರಂತದಲ್ಲಿ ಆಟೋ ಚಾಲಕ ಸೇರಿದಂತೆ ಐವರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ. ಮೃತಪಟ್ಟವರೆಲ್ಲರೂ ಬೀದರ್ ಜಿಲ್ಲೆಯ ರಾಜ್‌ಗಿರಿ ಗ್ರಾಮದ ನಿವಾಸಿಗಳೆಂದು ಗುರುತಿಸಲಾಗಿದೆ.

ದಿನವಿಡೀ ಗದ್ದೆ ಕೆಲಸ ಮುಗಿಸಿಕೊಂಡು ಕಾರ್ಮಿಕರು ಆಟೋ ರಿಕ್ಷಾದಲ್ಲಿ ತಮ್ಮ ಊರಿಗೆ ವಾಪಸ್ ಆಗುತ್ತಿದ್ದಾಗ, ಎದುರಿನಿಂದ ಅತಿ ವೇಗವಾಗಿ ಬಂದ ಟ್ಯಾಂಕರ್ ಲಾರಿಯೊಂದು ಆಟೋಗೆ ಭೀಕರವಾಗಿ ಅಪ್ಪಳಿಸಿದೆ. ಡಿಕ್ಕಿಯ ರಭಸಕ್ಕೆ ಆಟೋ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ತೀವ್ರ ರಕ್ತಸ್ರಾವದಿಂದಾಗಿ ಐವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಘಟನೆಯಲ್ಲಿ ಮತ್ತೇಳು ಮಂದಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಜಹೀರಾಬಾದ್‌ನ ಸರ್ಕಾರಿ ಏರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುಗಳ ಪೈಕಿ ಕೆಲವರ ಪರಿಸ್ಥಿತಿ ತೀರಾ ಚಿಂತಾಜನಕವಾಗಿದ್ದು, ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ ಎನ್ನಲಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಧಾವಿಸಿದ ತೆಲಂಗಾಣ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಚಿವ ಈಶ್ವರ ಖಂಡ್ರೆ ಕಂಬನಿ, ನೆರವಿಗಾಗಿ ಸೂಚನೆ ಬೀದರ್ ಮೂಲದ ಕಾರ್ಮಿಕರ ಈ ದಾರುಣ ಸಾವಿಗೆ ಅರಣ್ಯ ಹಾಗೂ ಜೈವಿಕ ತಂತ್ರಜ್ಞಾನ ಸಚಿವ ಈಶ್ವರ ಖಂಡ್ರೆ ಅವರು ತೀವ್ರ ಆಘಾತ ಮತ್ತು ಕಂಬನಿ ಮಿಡಿದಿದ್ದಾರೆ. ಮೃತರ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸಿರುವ ಅವರು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳಿಗೆ ಅತ್ಯುತ್ತಮ ಹಾಗೂ ಉಚಿತ ವೈದ್ಯಕೀಯ ಸೌಲಭ್ಯ ಕಲ್ಪಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ಇದರೊಂದಿಗೆ, ತೆಲಂಗಾಣದಲ್ಲಿರುವ ಮೃತದೇಹಗಳನ್ನು ಆದಷ್ಟು ಬೇಗ ಅವರ ಸ್ವಗ್ರಾಮಕ್ಕೆ ತರಲು ಅಗತ್ಯವಿರುವ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಬೀದರ್ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದ್ದಾರೆ.

ಇದನ್ನೂ ಓದಿ: ರೇಣುಕಾಸ್ವಾಮಿ ತಾಯಿ ಮರು ಪಾಟೀ ಸವಾಲಿಗೆ ಪ್ರಾಸಿಕ್ಯೂಷನ್ ಪಟ್ಟು

Leave a Reply

Your email address will not be published. Required fields are marked *