ಪಾಕಿಸ್ತಾನ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (POK) ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ನಾಗರಿಕರ ಮೇಲೆ ಪಾಕಿಸ್ತಾನಿ ರಕ್ಷಣಾ ಪಡೆಗಳು ನಡೆಸಿದ ಭೀಕರ ಗುಂಡಿನ ದಾಳಿಯನ್ನು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಸಮರ್ಥಿಸಿಕೊಂಡಿದ್ದು, ತೀವ್ರ ವಿವಾದಕ್ಕೆ ಕಾರಣವಾಗಿದ್ದಾರೆ. ಪಿಒಕೆಯ ಪ್ರತಿಭಟನಾಕಾರರನ್ನು ತಾವು “ಭಾರತದಂತೆಯೇ ದೇಶದ ಶತ್ರುಗಳು” ಎಂದು ಪರಿಗಣಿಸುವುದಾಗಿ ಅವರು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.
32 ಕಾಶ್ಮೀರಿ ಪ್ರತಿಭಟನಾಕಾರರು ಸಾವು
ಪಿಒಕೆಯ ರಾವಲಾಕೋಟ್ ಮತ್ತು ಮೀರ್ಪುರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಕಳೆದ ಎರಡು ದಿನಗಳಲ್ಲಿ ಪಾಕಿಸ್ತಾನಿ ಪಡೆಗಳು ನಡೆಸಿದ ಸರಣಿ ದಾಳಿಯಲ್ಲಿ ಕನಿಷ್ಠ 32 ಕಾಶ್ಮೀರಿ ಪ್ರತಿಭಟನಾಕಾರರು ಜೀವ ಕಳೆದುಕೊಂಡಿದ್ದಾರೆ. ಜೂನ್ 5 ರಿಂದ ಈ ಭಾಗದಲ್ಲಿ ನಡೆಯುತ್ತಿರುವ ಸಂಘರ್ಷ ಮತ್ತು ಹಿಂಸಾಚಾರಕ್ಕೆ ಇಲ್ಲಿಯವರೆಗೆ 90ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೊಗಳಲ್ಲಿ ಪಾಕ್ ಭದ್ರತಾ ಸಿಬ್ಬಂದಿ ನಾಗರಿಕರ ಮೇಲೆ ಸಾಗರೋಪಾದಿಯಲ್ಲಿ ಗುಂಡು ಹಾರಿಸುವುದು ಮತ್ತು ಮೃತದೇಹಗಳನ್ನು ವಾಹನಗಳಿಗೆ ತುಂಬಿಸಿಕೊಂಡು ಹೋಗುವುದು ಸ್ಪಷ್ಟವಾಗಿ ಕಾಣಿಸುತ್ತಿದದೆ
ಮಾನವ ಹಕ್ಕುಗಳ ಉಲ್ಲಂಘನೆಯನ್ನು ಪ್ರಶ್ನಿಸಿದ್ದಕ್ಕಾಗಿ ಪಾಕಿಸ್ತಾನ ಸರ್ಕಾರದಿಂದ ನಿಷೇಧಕ್ಕೊಳಗಾದ ‘ಜಾಯಿಂಟ್ ಅವಾಮಿ ಆಕ್ಷನ್ ಕಮಿಟಿ’ (ಜೆಎಎಸಿ) ಸದಸ್ಯರು ಮತ್ತು ಸ್ಥಳೀಯ ಸಾರ್ವಜನಿಕರು ಈ ದಾಳಿಗೆ ತುತ್ತಾಗಿದ್ದಾರೆ. ಜಂಟಿ ಅಮಾಮಿ ಆಕ್ಷನ್ ಕಮಿಟಿಯ ಸಂಸ್ಥಾಪಕ ಸದಸ್ಯ ಉಮರ್ ನಜೀರ್ ಅವರ ಕಿರಿಯ ಸಹೋದರ ಉಸ್ಮಾನ್ ನಜೀರ್ ಕೂಡ ಈ ಗುಂಡಿನ ದಾಳಿಯಲ್ಲಿ ಮೃತಪಟ್ಟಿದ್ದಾರೆ. ರಸ್ತೆಗಳಲ್ಲಿ ಬಿದ್ದಿರುವ ಶವಗಳು ಮತ್ತು ಬೈಕ್ಗಳು ಪಾಕ್ ಪಡೆಗಳು ನಡೆಸಿದ ಕ್ರೌರ್ಯಕ್ಕೆ ಸಾಕ್ಷಿಯಾಗಿವೆ.
ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ
ಈ ದೌರ್ಜನ್ಯದ ವಿರುದ್ಧ ಜೆಎಎಸಿ ಸಂಸ್ಥೆಯು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಪಾಕಿಸ್ತಾನಿ ಮಾಧ್ಯಮಗಳು ಪ್ರತಿಭಟನಾಕಾರರು ಬಲವಂತವಾಗಿ ರಾವಲಾಕೋಟ್ಗೆ ನುಗ್ಗಲು ಯತ್ನಿಸುತ್ತಿದ್ದಾರೆ ಎಂದು ಸುಳ್ಳು ವರದಿ ಮಾಡುತ್ತಿವೆ ಎಂದು ಆರೋಪಿಸಿರುವ ಸಂಘಟನೆ, ರಾವಲಾಕೋಟ್ ನಮ್ಮ ಸ್ವಂತ ನಗರ. ಅದನ್ನು ಪಾಕಿಸ್ತಾನ ಅಕ್ರಮವಾಗಿ ಆಕ್ರಮಿಸಿಕೊಂಡಿದೆ ಮತ್ತು ಶಾಂತಿಯುತವಾಗಿ ಹೋರಾಡುತ್ತಿದ್ದ ನಿಶಸ್ತ್ರ ನಾಗರಿಕರ ಮೇಲೆ ಅಶ್ರುವಾಯು ಹಾಗೂ ಗುಂಡಿನ ದಾಳಿ ನಡೆಸಿ ಅನೇಕರನ್ನು ಹತ್ಯೆ ಮಾಡಿದೆ ಎಂದು ಆಕ್ರೋಶ ಹೊರಹಾಕಿದೆ.
ಇದನ್ನೂ ಓದಿ: ಪ್ರಧಾನಿ ಮೋದಿ ವಿರುದ್ಧ ನಿಂದನಾತ್ಮಕ ಪೋಸ್ಟ್: ಎಕ್ಸ್ ಖಾತೆಗಳಿಗೆ ದೆಹಲಿ ಪೊಲೀಸರಿಂದ ನೋಟಿಸ್
