ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಹೋರಾಟ ಮತ್ತಷ್ಟು ತೀವ್ರಗೊಂಡಿದ್ದು, ನಟ ದರ್ಶನ್ ಹಾಗೂ ಅವರ ಗ್ಯಾಂಗ್ ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದೆ. ಈ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿ ಪ್ರದೋಷ್ ಮಾಫಿ ಸಾಕ್ಷಿಯಾಗಿ ಬದಲಾಗಿರುವುದು, ಇಬ್ಬರು ಆರೋಪಿಗಳು ಜೈಲು ಬದಲಾವಣೆ ಕೋರಿ ಅರ್ಜಿ ಸಲ್ಲಿಸಿರುವುದು, ಪವಿತ್ರಾ ಗೌಡ ಅವರ ಬ್ಯಾರಕ್ ಶಿಫ್ಟ್ ಅರ್ಜಿ ಹಾಗೂ ನಟ ದರ್ಶನ್ (Actor Darshan) ಅವರ ವೈಯಕ್ತಿಕ ಕೋರ್ಟ್ ಹಾಜರಾತಿಗೆ ಸಂಬಂಧಿಸಿದಂತೆ ವಿವಿಧ ಕಾನೂನು ಅರ್ಜಿಗಳ ವಿಚಾರಣೆ ನ್ಯಾಯಾಲಯದಲ್ಲಿ ಸಕ್ರಿಯವಾಗಿ ಮುಂದುವರಿದಿದೆ.
ಖದ್ದು ಹಾಜರಿಗೆ ಮನವಿ ಮಾಡಿದ್ದ ದರ್ಶನ್
ಈ ಹಿಂದೆ ಸೆಪ್ಟೆಂಬರ್ 10ರಂದು ನಟ ದರ್ಶನ್ ಪರ ವಕೀಲರು ಕೋರ್ಟ್ಗೆ ಖುದ್ದು ಹಾಜರಾಗಲು ಅವಕಾಶ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯು ಹೈಕೋರ್ಟ್ನಲ್ಲಿ ನ್ಯಾಯಮೂರ್ತಿ ಶ್ರೀಶಾನಂದ ಅವರ ಪೀಠದ ಮುಂದೆ ಜರುಗಿತು. ಈ ವೇಳೆ ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ ವಾದ ಮಂಡಿಸಿ, ಸಾಕ್ಷಿಗಳ ವಿಚಾರಣೆಯನ್ನು ನೇರವಾಗಿ ಆಲಿಸುವುದು ಮತ್ತು ವೀಕ್ಷಿಸುವುದು ಆರೋಪಿಯ ಮೂಲಭೂತ ಹಕ್ಕುಗಳಾಗಿವೆ. ಪ್ರತ್ಯಕ್ಷ ಸಾಕ್ಷಿಗಳು ತಮ್ಮ ಹೇಳಿಕೆಗಳನ್ನು ನೀಡುವಾಗ ಆರೋಪಿಯ ಸಮಕ್ಷಮದಲ್ಲಿಯೇ ಇರಬೇಕು, ಆದ್ದರಿಂದ ಸಾಕ್ಷ್ಯ ಸಂಗ್ರಹಣೆ ಹಾಗೂ ವಿಚಾರಣೆ ವೇಳೆ ದರ್ಶನ್ ಅವರನ್ನು ಖುದ್ದಾಗಿ ಕೋರ್ಟ್ಗೆ ಹಾಜರುಪಡಿಸಲು ಅವಕಾಶ ನೀಡಬೇಕು ಎಂದು ಬಲವಾಗಿ ಮನವಿ ಮಾಡಿದರು.
ಆದರೆ, ನಟನನ್ನು ಪ್ರತಿ ವಿಚಾರಣೆಯ ದಿನದಂದು ಭದ್ರತೆಯೊಂದಿಗೆ ಸಾರ್ವಜನಿಕ ಕೋರ್ಟ್ಗೆ ಕರೆತರುವುದರಿಂದ ಕಾನೂನು ಸುವ್ಯವಸ್ಥೆ ಹಾಗೂ ಜನದಟ್ಟಣೆ ನಿಯಂತ್ರಣದ ಸವಾಲುಗಳು ಎದುರಾಗಬಹುದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು. ಒಂದು ವೇಳೆ ಆರೋಪಿಯನ್ನು ಕಡ್ಡಾಯವಾಗಿ ಹಾಜರುಪಡಿಸಬೇಕಾದರೆ ಭದ್ರತಾ ದೃಷ್ಟಿಯಿಂದ ಬಲವಾದ ರಕ್ಷಣೆ ನೀಡಬೇಕಾಗುತ್ತದೆ. ಬದಲಾಗಿ, ಅಗತ್ಯವಿದ್ದರೆ ಪರಪ್ಪನ ಅಗ್ರಹಾರ ಜೈಲಿನಲ್ಲಿಯೇ ವಿಶೇಷ ಕೋರ್ಟ್ ವ್ಯವಸ್ಥೆಯನ್ನು ಕಲ್ಪಿಸಿ, ಅಲ್ಲೇ ವಿಚಾರಣೆ ನಡೆಸುವಂತೆ ಸೂಚನೆ ನೀಡಬಹುದು ಎಂಬ ಅಭಿಪ್ರಾಯವನ್ನು ನ್ಯಾಯಾಧೀಶರು ವ್ಯಕ್ತಪಡಿಸಿದರು.
ಸಾಮಾನ್ಯವಾಗಿ ಅತಿ ಸೂಕ್ಷ್ಮ ಹಾಗೂ ಗಂಭೀರ ಪ್ರಕರಣಗಳಲ್ಲಿ ಆರೋಪಿಗಳನ್ನು ಹೊರಗೆ ಕರೆತರುವುದು ಭದ್ರತೆಯ ದೃಷ್ಟಿಯಿಂದ ಕಷ್ಟಕರ ಅಥವಾ ಅಪಾಯಕಾರಿ ಎಂದು ಪರಿಗಣಿಸಲಾದಾಗ, ಜೈಲಿನಲ್ಲಿಯೇ ತಾತ್ಕಾಲಿಕ ಕೋರ್ಟ್ ಕೊಠಡಿ ಸ್ಥಾಪಿಸಿ ವಿಚಾರಣೆ ನಡೆಸುವ ಇಂತಹ ವಿಶೇಷ ವ್ಯವಸ್ಥೆಗಳನ್ನು ಜಾರಿಗೆ ತರಲಾಗುತ್ತದೆ. ಇಂತಹ ಸಂದರ್ಭದಲ್ಲಿ ನ್ಯಾಯಾಧೀಶರು, ಸರ್ಕಾರಿ ವಕೀಲರು ಹಾಗೂ ರಕ್ಷಣಾ ವಕೀಲರು ಎಲ್ಲರೂ ಜೈಲಿನ ಆವರಣಕ್ಕೆ ತೆರಳಬೇಕಾಗುತ್ತದೆ ಮತ್ತು ಎಲ್ಲಾ ಪ್ರಕರಣದ ಕಡತಗಳನ್ನು ಅಲ್ಲಿಗೆ ಸ್ಥಳಾಂತರಿಸಬೇಕಾಗುತ್ತದೆ.
ವಿಡಿಯೋ ಕಾನ್ಫರೆನ್ಸಿಂಗ್ ಉತ್ತಮ ಎಂದ ಜಡ್ಜ್
ವಿಚಾರಣೆಯ ಹಂತದಲ್ಲಿ ಖುದ್ದಾಗಿ ಕೋರ್ಟ್ಗೆ ಬರುವುದಕ್ಕಿಂತ ವಿಡಿಯೋ ಕಾನ್ಫರೆನ್ಸಿಂಗ್ (VC) ವ್ಯವಸ್ಥೆಯು ಉತ್ತಮ ಹಾಗೂ ಸ್ಪಷ್ಟವಾಗಿರುತ್ತದೆ ಎಂದು ನ್ಯಾಯಮೂರ್ತಿಗಳು ತಿಳಿಸಿದರು. ಯಾವುದೇ ಅನಗತ್ಯ ಗೊಂದಲಗಳಿಲ್ಲದೆ ಸೌಹಾರ್ದಯುತವಾಗಿ ವಿಚಾರಣೆಯನ್ನು ಮುಗಿಸಬೇಕು ಎಂದು ಸೂಚಿಸಿದ ನ್ಯಾಯಾಲಯ, ಇಬ್ಬರ ಕಡೆಯ ವಕೀಲರು ಪರಸ್ಪರ ಚರ್ಚಿಸಿ ಒಂದು ಸ್ಪಷ್ಟ ನಿರ್ಧಾರಕ್ಕೆ ಬರುವಂತೆ ತಿಳಿಸಿತು. ಪ್ರತಿ ಬಾರಿಯ ವಿಚಾರಣೆಗೆ ಆರೋಪಿಗಳು ಕಡ್ಡಾಯವಾಗಿ ಖುದ್ದು ಬರುವ ಅಗತ್ಯವಿಲ್ಲ ಎಂಬುದನ್ನು ಸ್ಪಷ್ಟಪಡಿಸಿ, ಕ್ರಾಸ್ ಎಗ್ಸಾಮಿನೇಷನ್ ಯಾವಾಗ ನಡೆಸಲಾಗುತ್ತದೆ ಎಂಬುದನ್ನು ಕೋರ್ಟ್ಗೆ ತಿಳಿಸುವಂತೆ ನಿರ್ದೇಶಿಸಿ ವಿಚಾರಣೆಯನ್ನು ಸೆಪ್ಟೆಂಬರ್ 16ಕ್ಕೆ ಮುಂದೂಡಿದೆ. ಈ ಕಾನೂನು ಪ್ರಕ್ರಿಯೆಯಲ್ಲಿ ವಕೀಲರು ಯಾವ ನಿರ್ಧಾರ ಕೈಗೊಳ್ಳುತ್ತಾರೆ ಹಾಗೂ ನ್ಯಾಯಾಲಯವು ಜೈಲಿನಲ್ಲಿ ವಿಶೇಷ ವ್ಯವಸ್ಥೆ ಕಲ್ಪಿಸುತ್ತದೆಯೇ ಅಥವಾ ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್: ದರ್ಶನ್ ಖುದ್ದು ಹಾಜರಾತಿಗೆ ಹೈಕೋರ್ಟ್ ನಕಾರ
