ಬೆಂಗಳೂರು: ದಶಕಗಳ ಕಾಲ ಕಾಡುಗಳ್ಳ ವೀರಪ್ಪನ್ ಪತ್ತೆಗಾಗಿ ಪ್ರಾಣದ ಹಂಗು ತೊರೆದು ಕಾಡಿನಲ್ಲಿ ಹೋರಾಡಿದ ಎಸ್ಟಿಎಫ್ (STF) ಸಿಬ್ಬಂದಿಗೆ (High Court) ಕೊನೆಗೂ ಸಿಹಿ ಸುದ್ದಿ ಸಿಕ್ಕಿದೆ. ವೀರಪ್ಪನ್ ಹತ್ಯೆಯಾಗಿ ಎರಡು ದಶಕಗಳೇ ಕಳೆದಿದ್ದರೂ, ಘೋಷಿತ ಬಹುಮಾನದಿಂದ ವಂಚಿತರಾಗಿದ್ದ 72 ಮಂದಿ ಸಿಬ್ಬಂದಿಗೆ ಮೂರು ತಿಂಗಳೊಳಗೆ ಬಾಕಿ ಮೊತ್ತ ಪಾವತಿಸುವಂತೆ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಖಡಕ್ ನಿರ್ದೇಶನ ನೀಡಿದೆ.
ಸರ್ಕಾರದ ನಡೆಗೆ ನ್ಯಾಯಾಲಯದ (High Court) ಅಸಮಾಧಾನ
2004ರಲ್ಲಿ ನಡೆದ ‘ಆಪರೇಷನ್ ಕೊಕೂನ್’ ಕಾರ್ಯಾಚರಣೆಯಲ್ಲಿ ವೀರಪ್ಪನ್ ಹತ್ಯೆಯಾದ ನಂತರ, ಸರ್ಕಾರವು ಎಲ್ಲಾ ಸಿಬ್ಬಂದಿಗೆ ಬಹುಮಾನ ಘೋಷಿಸಿತ್ತು. ಆದರೆ, ನಂತರದ ದಿನಗಳಲ್ಲಿ ಕೇವಲ ಆರು ಮಂದಿಗೆ ಮಾತ್ರ ಹಣ ನೀಡಿ, ಉಳಿದವರಿಗೆ ಆರ್ಥಿಕ ಮುಗ್ಗಟ್ಟಿನ ನೆಪವೊಡ್ಡಿತ್ತು. ಸರ್ಕಾರದ ಈ ತಾರತಮ್ಯವನ್ನು ಪ್ರಶ್ನಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರ ಪೀಠವು, “ವೀರಪ್ಪನ್ ಹತ್ಯೆ ಎಂಬುದು ಕೇವಲ ಒಂದು ದಿನದ ಕೆಲಸವಲ್ಲ. ಅದರ ಹಿಂದೆ ನೂರಾರು ಸಿಬ್ಬಂದಿ ವರ್ಷಗಟ್ಟಲೆ ಕಾಡಿನಲ್ಲಿ ಪಟ್ಟ ಶ್ರಮವಿದೆ” ಎಂದು ಹೇಳುವ ಮೂಲಕ ಸರ್ಕಾರದ ವಾದವನ್ನು ತಳ್ಳಿಹಾಕಿದೆ.
ಯಾರಿಗೆ ಎಷ್ಟು (High Court) ಸಿಗಲಿದೆ ಬಹುಮಾನ?
ಹೈಕೋರ್ಟ್ ಆದೇಶದ ಅನ್ವಯ, ಎಸ್ಟಿಎಫ್ನಲ್ಲಿ ಸಲ್ಲಿಸಿದ ಸೇವೆಯ ಅವಧಿಯನ್ನು ಆಧರಿಸಿ ಒಟ್ಟು 72 ಸಿಬ್ಬಂದಿಗೆ (ಅರಣ್ಯ ರಕ್ಷಕರು, ವಾಚರ್ಗಳು ಮತ್ತು ಚಾಲಕರು) ಈ ಕೆಳಗಿನಂತೆ ಹಣ ವಿತರಿಸಬೇಕಿದೆ:
- 3 ವರ್ಷಕ್ಕೂ ಹೆಚ್ಚು ಸೇವೆ: ₹3 ಲಕ್ಷ
- 2 ರಿಂದ 3 ವರ್ಷ: ₹2 ಲಕ್ಷ
- 1 ರಿಂದ 2 ವರ್ಷ: ₹1 ಲಕ್ಷ
- 1 ವರ್ಷಕ್ಕಿಂತ ಕಡಿಮೆ: ₹50,000 ಇದರ ಜೊತೆಗೆ, ಅರ್ಹ ಅಧಿಕಾರಿಗಳಿಗೆ ಈ ಹಿಂದೆ ಶಿಫಾರಸ್ಸು ಮಾಡಲಾಗಿದ್ದ ನಿವೇಶನಗಳನ್ನು (ಸೈಟ್) ನೀಡುವ ಬಗ್ಗೆಯೂ ಕ್ರಮ ವಹಿಸಬೇಕಿದೆ.
‘ಸರ್ಕಾರ ಕೊಟ್ಟ ಮಾತು (High Court) ಉಳಿಸಿಕೊಳ್ಳಬೇಕು’
“ಒಂದು ಸಾರ್ವಭೌಮ ಸರ್ಕಾರವು ತನ್ನ ನೌಕರರಿಗೆ ನೀಡಿದ ವಾಗ್ದಾನವನ್ನು ಯಾವುದೇ ಕಾರಣಕ್ಕೂ ಮುರಿಯಬಾರದು. ಸರ್ಕಾರದ ಭರವಸೆಗೆ ತನ್ನದೇ ಆದ ಗೌರವವಿರುತ್ತದೆ” ಎಂದು ಹೈಕೋರ್ಟ್ ಮಾರ್ಮಿಕವಾಗಿ ಹೇಳಿದೆ. ಈ ಹಿಂದೆ ಕೆಲವು ಸಿಬ್ಬಂದಿಗೆ ನೀಡಲಾದ ಸೌಲಭ್ಯವನ್ನೇ ಈಗಿನ ಅರ್ಜಿದಾರರಿಗೂ ಅನ್ವಯಿಸಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಈ ಮಹತ್ವದ ತೀರ್ಪಿನಿಂದಾಗಿ, ನ್ಯಾಯಕ್ಕಾಗಿ ದಶಕಗಳಿಂದ ಕಾಯುತ್ತಿದ್ದ ಹಿರಿಯ ಎಸ್ಟಿಎಫ್ ಸಿಬ್ಬಂದಿಗಳ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಂತಾಗಿದೆ.
