TOP NEWS

Arvind Kejriwal: ‘ಅಶಿಕ್ಷಿತರ ಸರ್ಕಾರದಿಂದ ದೇಶಕ್ಕೆ ಸಕ್ಕರೆ ಅಭಾವ!’: ಕೇಂದ್ರದ ಇ-20 ಇಂಧನ ನೀತಿ ವಿರುದ್ಧ ಕೇಜ್ರಿವಾಲ್ ಗರಂ!

Government Run by Illiterates Arvind Kejriwal Attacks Centre Over Ethanol Policy and Sugar Shortage

ನವದೆಹಲಿ: ಕೇಂದ್ರ ಸರ್ಕಾರದ (Central Government) ಎಥನಾಲ್ ಮಿಶ್ರಿತ ಇಂಧನ ನೀತಿ ಮತ್ತು ಇ-20 (E20) ಪೆಟ್ರೋಲ್ ಜಾರಿ ಕುರಿತಂತೆ ಆಮ್ ಆದ್ಮಿ ಪಾರ್ಟಿ (ಆಪ್) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ (Arvind Kejriwal) ಕೇಂದ್ರ ಸರ್ಕಾರದ ವಿರುದ್ಧ ವೀಟೋ ದಾಳಿ ನಡೆಸಿದ್ದಾರೆ. ದೇಶದಲ್ಲಿ ಸಕ್ಕರೆ ಕೊರತೆಗೆ ಸರ್ಕಾರದ ಅಸಮರ್ಪಕ ನೀತಿಯೇ ಕಾರಣ ಎಂದು ಆರೋಪಿಸಿರುವ ಅವರು, ಪ್ರಸ್ತುತ ಆಡಳಿತ ನಡೆಸುತ್ತಿರುವುದು ‘ಅಶಿಕ್ಷಿತರ ಸರ್ಕಾರ’ ಎಂದು ಕಟುವಾಗಿ ವೀಮರ್ಶಿಸಿದ್ದಾರೆ.

ವಿಡಿಯೋ ಹಂಚಿಕೊಂಡ ಮಾಜಿ ಸಿಎಂ

ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಹಂಚಿಕೊಂಡಿರುವ ದೆಹಲಿಯ ಮಾಜಿ ಮುಖ್ಯಮಂತ್ರಿ ಕೇಜ್ರಿವಾಲ್, “ಕಚ್ಚಾ ತೈಲ ಆಮದಿಗೆ ವೆಚ್ಚವಾಗುವ ವಿದೇಶಿ ವಿನಿಮಯವನ್ನು ಉಳಿಸುವ ನೆಪದಲ್ಲಿ ಕೇಂದ್ರ ಸರ್ಕಾರವು ಕಬ್ಬಿನಿಂದ ಎಥನಾಲ್ ತಯಾರಿಕೆಗೆ ಚಾಲನೆ ನೀಡಿತು. ಆದರೆ, ಇದರ ಪರಿಣಾಮವಾಗಿ ಇಂದು ದೇಶದಲ್ಲಿ ಸಕ್ಕರೆಯ ಅಭಾವ ಸೃಷ್ಟಿಯಾಗಿದೆ. ಈಗ ಅದೇ ಸಕ್ಕರೆಯನ್ನು ಆಮದು ಮಾಡಿಕೊಳ್ಳಲು ಸರ್ಕಾರ ವಿದೇಶಿ ವಿನಿಮಯವನ್ನು ವೆಚ್ಚ ಮಾಡಲು ಹೊರಟಿದೆ. ಸರ್ಕಾರದಲ್ಲಿರುವವರಿಗೆ ನಿರ್ಧಾರಗಳ ಪರಿಣಾಮ ಏನೆಂಬುದು ತಿಳಿಯದಂತಾಗಿದೆ” ಎಂದು ವ್ಯಂಗ್ಯವಾಡಿದ್ದಾರೆ.

ಇದಷ್ಟೇ ಅಲ್ಲದೆ, ಇ-20 ಇಂಧನ ನೀತಿಯ ವಿರುದ್ಧ ಸಾರ್ವಜನಿಕರ ದನಿಯನ್ನು ಅಡಗಿಸಲು ಯತ್ನಿಸಲಾಗುತ್ತಿದೆ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ. ಅಮೆರಿಕ, ರಷ್ಯಾ ಹಾಗೂ ಭಾರತದ ಪೊಲೀಸರ ನಡುವಿನ ತಮಾಷೆಯ ಕಥೆಯೊಂದನ್ನು ಉಲ್ಲೇಖಿಸಿ ವಿಡಿಯೋ ಹಂಚಿಕೊಂಡಿರುವ ಅವರು, ದೇಶದ 140 ಕೋಟಿ ಜನರ ಮೇಲೆಯೂ ಬಲವಂತವಾಗಿ ಇ-20 ಇಂಧನ ನೀತಿಯನ್ನು ಹೇರಲಾಗುತ್ತಿದೆ. ಈ ನೀತಿಯನ್ನು ಪ್ರಶ್ನಿಸುವವರ ಅಥವಾ ಸೋಷಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡುವವರ ಪೋಸ್ಟ್‌ಗಳನ್ನು ಡಿಲೀಟ್ ಮಾಡಲಾಗುತ್ತಿದೆ, ವಿಡಿಯೋಗಳನ್ನು ತೆಗೆದುಹಾಕಲಾಗುತ್ತಿದೆ ಮತ್ತು ಎಫ್‌ಐಆರ್ ದಾಖಲಿಸಲಾಗುತ್ತಿದೆ. ಆದರೆ, ಇಷ್ಟೊಂದು ಬೃಹತ್ ಜನಸಂಖ್ಯೆಯ ದನಿಯನ್ನು ಹತೋಟಿಯಲ್ಲಿಡಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ. ಪೆಟ್ರೋಲ್ ಬಂಕ್‌ಗಳಲ್ಲಿ ಜನರಿಗೆ ಪರ್ಯಾಯವಾಗಿ ಸಾಮಾನ್ಯ ಪೆಟ್ರೋಲ್ ಆಯ್ಕೆಯನ್ನೂ ನೀಡಬೇಕು ಎಂದು ಆಪ್ ಆಗ್ರಹಿಸಿದೆ.

ಸ್ಪಷ್ಟನೆ ನೀಡಿದ ಕೇಂದ್ರ ತೈಲ ಮತ್ತು ನೈಸರ್ಗಿಕ ಅನಿಲ ಸಚಿವಾಲಯ

ಇತ್ತ ಕೇಜ್ರಿವಾಲ್ ಮತ್ತು ಆಪ್ ಮಾಡಿರುವ ಆರೋಪಗಳಿಗೆ ಕೇಂದ್ರ ತೈಲ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಸ್ಪಷ್ಟನೆ ನೀಡಿದೆ. ವಾಹನಗಳ ಮೈಲೇಜ್ ಕಡಿಮೆಯಾಗಲು ಕೇವಲ ಇ-20 ಪೆಟ್ರೋಲ್ ಕಾರಣವಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಚಾಲನಾ ಶೈಲಿ, ಸಂಚಾರ ದಟ್ಟಣೆ, ವಾಹನದ ನಿರ್ವಹಣೆ, ಟೈರ್ ಗಾಳಿ ಹಾಗೂ ಎಸಿ ಬಳಕೆ ಸೇರಿದಂತೆ ಹಲವು ಅಂಶಗಳು ಮೈಲೇಜ್ ಮೇಲೆ ಪ್ರಭಾವ ಬೀರುತ್ತವೆ. ಇ-20 ಇಂಧನವನ್ನು ವ್ಯಾಪಕ ತಪಾಸಣೆ ಮತ್ತು ಪ್ರಮಾಣೀಕರಣಕ್ಕೆ ಒಳಪಡಿಸಿದ ನಂತರವೇ ಜಾರಿಗೆ ತರಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ: ಜೈಲಿನಲ್ಲಿಯೇ ಕೊನೆಯುಸಿರೆಳೆದ ಸಿಖ್ ವಿರೋಧಿ ದಂಗೆಯ ಪ್ರಮುಖ ರೂವಾರಿ ಸಜ್ಜನ್ ಕುಮಾರ್!

Leave a Reply

Your email address will not be published. Required fields are marked *