TOP NEWS

Rahul Gandhi: ದೇಶದ ಶಿಕ್ಷಣ ವ್ಯವಸ್ಥೆ ಆರ್‌ಎಸ್‌ಎಸ್ ಹಿಡಿತದಲ್ಲಿದೆ!; ಕಿಡಿಕಾರಿದ ರಾಹುಲ್ ಗಾಂಧಿ!

Tempestuous scenes in Lok Sabha Rahul Gandhis controversial word usage over exam leak law triggers chaos

ನವದೆಹಲಿ: ಸಂಸತ್ತಿನ ಕೆಳಮನೆಯಾದ ಲೋಕಸಭೆಯು ಬುಧವಾರ ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವಿನ ತೀವ್ರ ವಾಕ್ಸಮರ ಮತ್ತು ಭಾರಿ ಗದ್ದಲಕ್ಕೆ ಸಾಕ್ಷಿಯಾಯಿತು. ಪರೀಕ್ಷಾ ಅಕ್ರಮ ತಡೆ ತಿದ್ದುಪಡಿ ಕಾಯ್ದೆಯ ಮೇಲಿನ ಚರ್ಚೆಯ ವೇಳೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಬಳಸಿದ “ಅಸಂಸದೀಯ” ಪದವು ಸದನದಲ್ಲಿ ತೀವ್ರ ಹಂಗಾಮೆ ಸೃಷ್ಟಿಸಿತು. ದೇಶದಲ್ಲಿ ಇತ್ತೀಚೆಗೆ ನಡೆದ ಯುವ ಸಮೂಹದ ಆಕ್ರೋಶದ ಕುರಿತು ಮಾತನಾಡಿದ ಅವರು, 18 ವರ್ಷದ ಯುವತಿಯೊಬ್ಬಳೊಂದಿಗಿನ ಸಂಭಾಷಣೆಯನ್ನು ಉಲ್ಲೇಖಿಸಿ “ನಿಜವಾದ ವಿದ್ಯಾರ್ಥಿ” ಹಾಗೂ “ಈಡಿಯಟ್ಸ್” (ಮೂರ್ಖರು) ನಡುವಿನ ವ್ಯತ್ಯಾಸವನ್ನು ಸದನದಲ್ಲಿ ವ್ಯಾಖ್ಯಾನಿಸಿದರು. ಮುಕ್ತ ಮನಸ್ಸಿನಿಂದ ಜ್ಞಾನ ಹುಡುಕುವವರೇ ವಿದ್ಯಾರ್ಥಿಗಳು ಎಂದ ರಾಹುಲ್, ತಾವೇ ದೇವರು ಎಂದು ಬೀಗುತ್ತಾ ಇತರರ ಮಾತು ಕೇಳದ ಅಹಂಕಾರಿಗಳು ಮತ್ತೊಂದು ವರ್ಗಕ್ಕೆ ಸೇರಿದವರು ಎಂದು ಕೇಂದ್ರ ಸರ್ಕಾರದ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು. ಇದಕ್ಕೆ ಆಡಳಿತ ಪಕ್ಷದ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಸದನದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.

ಕಾವೇರಿದ ತಿದ್ದುಪಡಿ ಮೇಲಿನ ಚರ್ಚೆ

ಇದೇ ವೇಳೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ನೀಟ್-ಯುಜಿ (NEET-UG) ಪರೀಕ್ಷಾ ಹಗರಣದ ಹಿನ್ನೆಲೆಯಲ್ಲಿ ಮಂಡಿಸಲಾದ ‘ಸಾರ್ವಜನಿಕ ಪರೀಕ್ಷಾ ತಿದ್ದುಪಡಿ ವಿಧೇಯಕ-2026’ರ ಮೇಲಿನ ಚರ್ಚೆಯು ಕಾವೇರಿತು. ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ವಂಚನೆ ಜಾಲಕ್ಕೆ ಕಠಿಣ ಶಿಕ್ಷೆ ವಿಧಿಸುವ ಈ ಮಸೂದೆಯನ್ನು ಪ್ರಧಾನಿ ಕಚೇರಿಯ ಸಹಾಯಕ ಸಚಿವ ಡಾ. ಜಿತೇಂದ್ರ ಸಿಂಗ್ ಮಂಡಿಸಿ, ಇದು ದೇಶದ ಇತಿಹಾಸದಲ್ಲೇ ಮೈಲಿಗಲ್ಲಾಗಲಿದ್ದು ವಿದ್ಯಾರ್ಥಿಗಳ ಹಿತ ಕಾಯಲಿದೆ ಎಂದು ಸಮರ್ಥಿಸಿಕೊಂಡರು. ಆದರೆ ಇದರ ಬೆನ್ನಲ್ಲೇ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿದ ರಾಹುಲ್ ಗಾಂಧಿ, ದೇಶದ ಇಡೀ ಶಿಕ್ಷಣ ವ್ಯವಸ್ಥೆಯನ್ನು ಆರ್‌ಎಸ್‌ಎಸ್ ತನ್ನ ಹಿಡಿತದಲ್ಲಿಟ್ಟುಕೊಂಡಿದೆ ಮತ್ತು ಮಾಜಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಕೇವಲ ಹೆಸರಿಗಷ್ಟೇ ಇದ್ದರು ಎಂದು ಗಂಭೀರ ಆರೋಪ ಮಾಡಿದರು.

ಮತ್ತೊಂದೆಡೆ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ ಮಂಡಿಸಿ, ನೀಟ್ ಪರೀಕ್ಷಾ ಅಕ್ರಮವನ್ನು ತಡೆಯುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ಸೋತಿದೆ ಎಂದು ಆಕ್ರೋಶ ಹೊರಹಾಕಿದರು. ನ್ಯಾಯಕ್ಕಾಗಿ ಯುವಜನತೆ ರಸ್ತೆಗೆ ಇಳಿದು ಹೋರಾಡುತ್ತಿದ್ದರೂ ಸರ್ಕಾರ ಅವರ ಧ್ವನಿಯನ್ನು ಹತ್ತಿಕ್ಕುತ್ತಿದೆ ಎಂದು ದೂರಿ, ನೂತನ ಶಿಕ್ಷಣ ಸಚಿವ ಪ್ರಲ್ಹಾದ್ ಜೋಶಿ ಅವರನ್ನು ಗುರಿಯಾಗಿಸಿಕೊಂಡು ಮಾತನಾಡಿದ್ದು ಸದನದ ತಾಪಮಾನವನ್ನು ಮತ್ತಷ್ಟು ಹೆಚ್ಚಿಸಿತು.

Gen Z ಭಾಷೆ ಬಳಸಿ ಬಿಜೆಪಿ ತಿರುಗೇಟು

ಈ ವಾಗ್ದಾಳಿಗೆ ತಿರುಗೇಟು ನೀಡಿದ ಬಿಜೆಪಿ ಸಂಸದೆ ಬಾನ್ಸುರಿ ಸ್ವರಾಜ್, ಇಂದಿನ ತಲೆಮಾರಿನ ‘Gen Z’ ಭಾಷಾ ಶೈಲಿಯನ್ನು ಬಳಸಿ ಗಮನ ಸೆಳೆದರು. ಪ್ರಧಾನಿ ಮೋದಿ ಅವರು ಪರಿಸ್ಥಿತಿಯನ್ನು ಸರಿಯಾಗಿ ಗ್ರಹಿಸಿ (Clocked it) ವಿದ್ಯಾರ್ಥಿಗಳ ರಕ್ಷಣೆಗೆ ಸೂಕ್ತ ಕಾನೂನು ತಂದಿದ್ದಾರೆ ಎಂದು ಶ್ಲಾಘಿಸಿದರು. ಇದೇ ವೇಳೆ ವಿರೋಧ ಪಕ್ಷದ ನಾಯಕರು ತಪ್ಪು ಮಾಹಿತಿ ನೀಡುತ್ತಿದ್ದಾರೆ ಹಾಗೂ ಸಚಿವರ ಮೇಲೆ ವೈಯಕ್ತಿಕ ದಾಳಿ ನಡೆಸುತ್ತಿದ್ದಾರೆ ಎಂದು ಆಡಳಿತ ಪಕ್ಷದ ಸದಸ್ಯರು ಹರಿಹಾಯ್ದಿದ್ದರಿಂದ ಲೋಕಸಭೆಯು ಬುಧವಾರ ಸಂಪೂರ್ಣ ಗದ್ದಲದ ಗೂಡಾಗಿ ಪರಿಣಮಿಸಿತು.

ಇದನ್ನೂ ಓದಿ: ರಷ್ಯಾದಿಂದ ಇಂಧನ ಖರೀದಿ: ಭಾರತ, ಚೀನಾಗೆ ಶೇ. 100ರಷ್ಟು ತೆರಿಗೆ ವಿಧಿಸುವ ಮಸೂದೆಗೆ ಅಮೆರಿಕ ಸೆನೆಟ್ ಅಂಕಿತ

Leave a Reply

Your email address will not be published. Required fields are marked *