ಮುಂಬೈ: ಸೀರೆ ತಂದುಕೊಡಲಿಲ್ಲ ಎಂಬ (Crime) ಸಣ್ಣ ಕಾರಣಕ್ಕೆ ಶುರುವಾದ ಕೌಟುಂಬಿಕ ಕಲಹವೊಂದು ಪತಿಯ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮಹಾರಾಷ್ಟ್ರದ ಠಾಣೆ ಜಿಲ್ಲೆಯ ಬದ್ಲಾಪುರದಲ್ಲಿ ನಡೆದಿದೆ. ಸೀರೆ ತರದ್ದಕ್ಕೆ ಗರಂ ಆದ ಪತ್ನಿಯು ಪ್ರೆಶರ್ ಕುಕ್ಕರ್ ಮುಚ್ಚಳದಿಂದ ಪತಿಗೆ ಮನಬಂದಂತೆ ಥಳಿಸಿ, ಬಳಿಕ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ಈ ಸಂಬಂಧ 30 ವರ್ಷದ ಸುನೀತಾದೇವಿ ಹರೇರಾಮ್ ಸಿಂಗ್ ಎಂಬಾಕೆಯನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಬಂಧಿತ ಮಹಿಳೆ ಮೂಲತಃ ಬಿಹಾರದ ರೋಹ್ಟಾಸ್ ಜಿಲ್ಲೆಯವಳಾಗಿದ್ದು, ಬದ್ಲಾಪುರ ಪೂರ್ವದಲ್ಲಿ ಪತಿಯೊಂದಿಗೆ ವಾಸವಾಗಿದ್ದಳು.
ಏನಿದು ಪ್ರಕರಣ?
ಜುಲೈ 19 ರಂದು ಬದ್ಲಾಪುರ ಪೂರ್ವದ ತಮ್ಮ ಮನೆಯಲ್ಲಿ ದಂಪತಿ ನಡುವೆ ಸೀರೆ ತರುವ ವಿಚಾರವಾಗಿ ಜೋರಾದ ಜಗಳ ನಡೆದಿತ್ತು. ಪತಿ 35 ವರ್ಷದ ಹರೇರಾಮ್ ಕಿಶುಂಜಿ ಸಿಂಗ್ ಸೀರೆ ತರಲು ವಿಫಲರಾಗಿದ್ದಕ್ಕೆ ತೀವ್ರ ಕೋಪಗೊಂಡ ಸುನೀತಾದೇವಿ, ಮನೆಯಲ್ಲಿದ್ದ ಪ್ರೆಶರ್ ಕುಕ್ಕರ್ ಮುಚ್ಚಳವನ್ನು ತೆಗೆದುಕೊಂಡು ಪತಿಯ ಮೇಲೆ ತೀವ್ರ ಹಲ್ಲೆ ನಡೆಸಿದ್ದಾಳೆ. ಅಷ್ಟಕ್ಕೇ ನಿಲ್ಲಿಸದೆ ಆತನ ಕತ್ತು ಹಿಸುಕಿ ಪ್ರಾಣ ತೆಗೆದಿದ್ದಾಳೆ. ಕೊಲೆಯ ನಂತರ ಯಾರಿಗೂ ಸಂಶಯ ಬಾರದಿರಲಿ ಎಂದು ಪತಿ ಆಕಸ್ಮಿಕವಾಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರಿಗೆ ಸುಳ್ಳು ಮಾಹಿತಿ ನೀಡಿ ಹಾದಿ ತಪ್ಪಿಸಲು ಯತ್ನಿಸಿದ್ದಾಳೆ.
ನಾಟಕ ಮಾಡಿದ ಹೆಂಡತಿ ಸಿಕ್ಕಿಬಿದ್ದಿದ್ದು ಹೇಗೆ?
ಆರಂಭದಲ್ಲಿ ಪತ್ನಿ ನೀಡಿದ ಹೇಳಿಕೆಯ ಆಧಾರದ ಮೇಲೆ ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ ಸರ್ಕಾರಿ ಆಸ್ಪತ್ರೆಯಿಂದ ಬಂದ ಮರಣೋತ್ತರ ಪರೀಕ್ಷೆಯ ವರದಿಯು ಇಡೀ ಪ್ರಕರಣಕ್ಕೆ ಭಾರಿ ತಿರುವು ನೀಡಿತು. ಹರೇರಾಮ್ ಸಾವು ನೈಸರ್ಗಿಕವಾಗಿ ಸಂಭವಿಸಿಲ್ಲ, ಬದಲಿಗೆ ಅವರ ಕತ್ತು ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂಬ ಆಘಾತಕಾರಿ ಸತ್ಯ ವೈದ್ಯಕೀಯ ವರದಿಯಲ್ಲಿ ಬಯಲಾಯಿತು. ಇದರಿಂದ ಅಲರ್ಟ್ ಆದ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದರು.
ಬದ್ಲಾಪುರ ಪೂರ್ವ ಪೊಲೀಸ್ ಠಾಣೆಯ ಹಿರಿಯ ಇನ್ಸ್ಪೆಕ್ಟರ್ ನಿತಿನ್ ಪಾಟೀಲ್ ನೇತೃತ್ವದಲ್ಲಿ ಪೊಲೀಸರು ಮೃತರ ಕುಟುಂಬಸ್ಥರು ಹಾಗೂ ಮನೆಯ ಮಾಲೀಕರನ್ನು ಸುದೀರ್ಘವಾಗಿ ವಿಚಾರಣೆಗೆ ಒಳಪಡಿಸಿದಾಗ ಪತ್ನಿಯ ಮೇಲಿನ ಸಂಶಯ ಬಲವಾಯಿತು. ಕೊನೆಗೆ ಪೊಲೀಸರ ತನಿಖೆಯ ಮುಂದೆ ಮಂಡಿಯೂರಿದ ಸುನೀತಾದೇವಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ. ಆರೋಪಿ ಮಹಿಳೆಯನ್ನು ಮಂಗಳವಾರ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಕೋರ್ಟ್ ಆಕೆಯನ್ನು ಜುಲೈ 29 ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಆದೇಶ ನೀಡಿದೆ.
ಇದನ್ನೂ ಓದಿ: ರಾಜಾ ರಘುವಂಶಿ ಹತ್ಯೆ ಕೇಸ್: ಹನಿಮೂನ್ ಕೊಲೆ ಆರೋಪಿ ಸೋನಮ್ಗೆ ಸುಪ್ರೀಂ ಕೋರ್ಟ್ ಕಠಿಣ ಗಡುವು
