ಮುಂಬೈ: ಆದಿತ್ಯ ಧರ್ ನಿರ್ದೇಶನದ ‘ಧುರಂಧರ್’ ಹಾಗೂ ಅದರ ಮುಂದುವರಿದ ಭಾಗ ‘ಧುರಂಧರ್: ದಿ ರಿವೇಂಜ್’ ಚಿತ್ರಗಳು ಚಿತ್ರಮಂದಿರಗಳಲ್ಲಿ ಸೂಪರ್ ಹಿಟ್ ಪ್ರದರ್ಶನ ಕಾಣುತ್ತಿದ್ದರೂ, ಒಂದು ವಿಭಾಗದ ವಿಮರ್ಶಕರಿಂದ ಭಾರಿ ಟೀಕೆಗೆ ಗುರಿಯಾಗಿದ್ದವು. ಈ ಸಿನಿಮಾಗಳು ಸರ್ಕಾರದ ತಪ್ಪುಗಳನ್ನು ಮುಚ್ಚಿಹಾಕಲು ಮಾಡಿದ ‘ಪ್ರೋಪಗಂಡ’ (ಪ್ರಚಾರ) ಚಿತ್ರಗಳು ಎಂಬ ಆರೋಪಗಳು ಕೇಳಿಬಂದಿದ್ದವು. ಇದೀಗ ಈ ಎಲ್ಲಾ ವಿಮರ್ಶೆಗಳಿಗೆ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿರುವ ನಟ ಆರ್ ಮಾಧವನ್ (R Madhavan) ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.
ದೇಶಭಕ್ತಿಯನ್ನು ತೋರಿಸಿಕೊಳ್ಳುವುದರಲ್ಲಿ ಏನು ತಪ್ಪಿದೆ?
ಸಂದರ್ಶನವೊಂದರಲ್ಲಿ ಮಾತನಾಡಿರುವ ಮಾಧವನ್, “ಭಾರತೀಯನಾಗಿ ತನ್ನ ದೇಶಭಕ್ತಿಯನ್ನು ತೋರಿಸಿಕೊಳ್ಳುವುದರಲ್ಲಿ ಏನು ತಪ್ಪಿದೆ? ‘ಹೆಚ್ಚು ಭಾರತೀಯನಾಗಿರುವುದು’ ಎಂದರೆ ಅರ್ಥವೇನು ಎಂದು ನನಗೆ ತಿಳಿಯುತ್ತಿಲ್ಲ. ಸಿನಿಮಾ ಮೂಲಕ ಭಾರತೀಯತೆಯನ್ನು ಪ್ರದರ್ಶಿಸುವುದು ತಪ್ಪೇ? ಇದು ಯಾವುದೇ ರಾಜಕೀಯ ಹೇಳಿಕೆಯಲ್ಲ. ‘ಧುರಂಧರ್’ ಕಥೆ ಪಾಕಿಸ್ತಾನದ ಹಿನ್ನೆಲೆಯಲ್ಲಿ ನಡೆಯುತ್ತದೆ. ಭಾರತದಲ್ಲಿದ್ದಂತೆ ಅಲ್ಲೂ ಒಳ್ಳೆಯದು ಮತ್ತು ಕೆಟ್ಟದ್ದು ಎರಡೂ ನಡೆಯುತ್ತದೆ. ಹೀಗಿರುವಾಗ ಇದರಲ್ಲಿ ಪ್ರೋಪಗಂಡ ಎಲ್ಲಿದೆ?” ಎಂದು ಪ್ರಶ್ನಿಸಿದ್ದಾರೆ.
ತಮ್ಮ ನಿರ್ದೇಶನದ ಮೊದಲ ಸಿನಿಮಾ ‘ರಾಕೆಟ್ರಿ: ದಿ ನಂಬಿ ಎಫೆಕ್ಟ್’ ಕುರಿತಾಗಿಯೂ ಮಾತನಾಡಿದ ಅವರು, “ನಂಬಿ ನಾರಾಯಣನ್ ಅವರ ಜೀವನದಲ್ಲಿ ನಡೆದ ನೈಜ ಘಟನೆಗಳನ್ನು ಮಾತ್ರ ನಾನು ತೋರಿಸಿದ್ದೇನೆ. ಅವರ ನಿಜವಾದ ವ್ಯಕ್ತಿತ್ವವನ್ನು ತೋರಿಸಲು ನಾನು ಭಯಪಟ್ಟರೆ ಕಥೆಗೆ ಪ್ರಮಾಣಿಕವಾಗಿರಲು ಸಾಧ್ಯವಿಲ್ಲ. ನಂಬಿ ಸರ್ ದೇವಸ್ಥಾನಕ್ಕೆ ಹೋಗುವ ಭಕ್ತರಾಗಿದ್ದರು, ಆದರೆ ವಿಜ್ಞಾನಿ ಜಿ.ಡಿ. ನಾಯ್ಡು ಅವರು ನಾಸ್ತಿಕರಾಗಿದ್ದರು. ಒಬ್ಬ ನಟನಾಗಿ ಕಥೆ ಮತ್ತು ಪಾತ್ರಕ್ಕೆ ತಕ್ಕಂತೆ ನಟಿಸುವುದು ನನ್ನ ಧರ್ಮ. ಭಾರತದ ಒಳ್ಳೆಯ ವಿಷಯಗಳನ್ನು ಜಗತ್ತಿಗೆ ಎತ್ತಿ ತೋರಿಸುವುದು ನನ್ನ ವೈಯಕ್ತಿಕ ಅಭಿಪ್ರಾಯ. ದೇಶದ ಶ್ರೇಷ್ಠತೆಯನ್ನು ಎತ್ತಿಹಿಡಿಯುವುದು ಖಂಡಿತಾ ಅಪರಾಧವಲ್ಲ” ಎಂದು ಸಮರ್ಥಿಸಿಕೊಂಡಿದ್ದಾರೆ.
ನಮಗೆ ದೇಶವೇ ಮೊದಲ ಆದ್ಯತೆ
ಚಿಕ್ಕಂದಿನಿಂದಲೂ ನಮಗೆ ದೇಶವೇ ಮೊದಲ ಆದ್ಯತೆ ಎಂಬುದನ್ನು ಕಲಿಸಲಾಗಿದೆ ಎಂದ ಮಾಧವನ್, ತಾವು ಸಾಮಾಜಿಕ ಜಾಲತಾಣದಲ್ಲಾಗಲಿ ಅಥವಾ ಸಂದರ್ಶನಗಳಲ್ಲಾಗಲಿ ಯಾವುದೇ ರಾಜಕೀಯ ಪಕ್ಷ ಅಥವಾ ನಾಯಕರ ಕುರಿತು ಕೆಟ್ಟದಾಗಿ ಮಾತನಾಡಿಲ್ಲ ಎಂದಿದ್ದಾರೆ. ಅಲ್ಲದೆ, ಸೋಶಿಯಲ್ ಮೀಡಿಯಾದಲ್ಲಿ ಬರುವ ನಕಲಿ ಹಾಗೂ ಹಣ ಕೊಟ್ಟು ಮಾಡಿಸುವ ನೆಗೆಟಿವ್ ವಿಮರ್ಶೆಗಳನ್ನು ಹೇಗೆ ಗುರುತಿಸಬೇಕು ಎಂಬುದನ್ನು ಕೂಡ ಅವರು ವಿವರಿಸಿದ್ದಾರೆ. ಮಾಧವನ್ ಅಭಿನಯದ, ಸಂಶೋಧಕ ಜಿ.ಡಿ. ನಾಯ್ಡು ಅವರ ಬಯೋಪಿಕ್ ‘ಜಿಡಿಎನ್’ ಸಿನಿಮಾ ಪ್ರಸ್ತುತ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.
ಇದನ್ನೂ ಓದಿ: ಯಶ್ ‘ಟಾಕ್ಸಿಕ್’ ಸಿನಿಮಾದ ನಟಿಯರ ಸಂಭಾವನೆ ಎಷ್ಟು ಗೊತ್ತಾ? ರಾಯನಿಗೆ ಸಿಕ್ಕಿದ್ದೆಷ್ಟು?
