ಬೆಂಗಳೂರು: ಶ್ರೀಲಂಕಾ ಪ್ರವಾಸದ ಹೊಸ್ತಿಲಲ್ಲಿರುವ ಭಾರತ ಕ್ರಿಕೆಟ್ (Cricket) ತಂಡಕ್ಕೆ ಪ್ರಮುಖ ಆಟಗಾರರ ಗಾಯದ ಸಮಸ್ಯೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸದ್ಯ ರಾಷ್ಟ್ರೀಯ ತಂಡದಲ್ಲಿರುವ ಹಾಗೂ ಭವಿಷ್ಯದ ಆಯ್ಕೆಗೆ ಪರಿಗಣನೆಯಲ್ಲಿರುವ ಬರೋಬ್ಬರಿ 13 ಪ್ರಮುಖ ಆಟಗಾರರು ಗಾಯಗೊಂಡು, ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ನಲ್ಲಿ (CoE) ಚಿಕಿತ್ಸೆ ಮತ್ತು ರಿಹ್ಯಾಬಿಲಿಟೇಶನ್ನಲ್ಲಿದ್ದಾರೆ.
ಜಸ್ಪ್ರೀತ್ ಬುಮ್ರಾ, ಹರ್ಷಿತ್ ರಾಣಾ ಮತ್ತು ನಿತೀಶ್ ಕುಮಾರ್ ರೆಡ್ಡಿ ಹೊರಗೆ
ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ, ಹರ್ಷಿತ್ ರಾಣಾ ಮತ್ತು ನಿತೀಶ್ ಕುಮಾರ್ ರೆಡ್ಡಿ ಈಗಾಗಲೇ ಶ್ರೀಲಂಕಾ ಪ್ರವಾಸದಿಂದ ಹೊರಬಿದ್ದಿದ್ದರೆ, ವಾಷಿಂಗ್ಟನ್ ಸುಂದರ್ ಹಾಗೂ ಸಾಯಿ ಸುದರ್ಶನ್ ಅವರ ಫಿಟ್ನೆಸ್ ಕುರಿತಾಗಿಯೂ ಆತಂಕ ಎದುರಾಗಿದೆ. ಎಡ ಮೊಣಕಾಲು ನೋವಿನಿಂದ ಬಳಲುತ್ತಿರುವ ಬುಮ್ರಾ, ಜಾಗಿಂಗ್ ಮತ್ತು ವ್ಯಾಯಾಮ ಮಾಡುವಾಗ ಮತ್ತೆ ಅಸ್ವಸ್ಥತೆ ಅನುಭವಿಸಿದ್ದು, ಅವರು ಕಣಕ್ಕಿಳಿಯಲು ಇನ್ನು ಎಷ್ಟು ಸಮಯ ಬೇಕಾಗಬಹುದು ಎಂಬುದು ಸ್ಪಷ್ಟವಾಗಿಲ್ಲ.
ಇನ್ನೊಂದೆಡೆ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ತೊಡೆಯ ಗಾಯದಿಂದ ಚೇತರಿಸಿಕೊಂಡು ಪೂರ್ಣ ಪ್ರಮಾಣದಲ್ಲಿ ಬೌಲಿಂಗ್ ಆರಂಭಿಸಿದ ಬೆನ್ನಲ್ಲೇ, ಅವರ ಬಲಗಾಲಿನ ಸ್ನಾಯುವಿನಲ್ಲಿ ನೋವು ಕಾಣಿಸಿಕೊಂಡಿದೆ. ತಪಾಸಣೆಯಲ್ಲಿ ಯಾವುದೇ ಗಂಭೀರ ಸಮಸ್ಯೆಯಿಲ್ಲ ಎಂದು ತಿಳಿದುಬಂದಿದ್ದರೂ, ಮುನ್ನೆಚ್ಚರಿಕೆಯಾಗಿ ಓಡುವುದು ಮತ್ತು ಬೌಲಿಂಗ್ ಮಾಡುವುದನ್ನು ನಿಲ್ಲಿಸಲು ಸೂಚಿಸಲಾಗಿತ್ತು. ಪ್ರಸ್ತುತ ಚಿಕಿತ್ಸೆಗೆ ಸ್ಪಂದಿಸಿರುವ ಅವರು ಮತ್ತೆ ಓಟದ ಅಭ್ಯಾಸವನ್ನು ಆರಂಭಿಸಿದ್ದು, ಶೀಘ್ರದಲ್ಲೇ ಬೌಲಿಂಗ್ ಪ್ರಮಾಣ ಹೆಚ್ಚಿಸುವ ನಿರೀಕ್ಷೆಯಿದೆ.
ಶುಭಮನ್ ಗಿಲ್ಗೂ ಗಾಯ
ಇದರ ನಡುವೆ ಕೊಲಂಬೊದಲ್ಲಿ ಶ್ರೀಲಂಕಾ ಇಲೆವೆನ್ ವಿರುದ್ಧದ ಅಭ್ಯಾಸ ಪಂದ್ಯದ ವೇಳೆ ನಾಯಕ ಶುಭಮನ್ ಗಿಲ್ ಅವರಿಗೂ ಬಲಗೈನ ಬೆರಳಿಗೆ ಗಾಯವಾಗಿದೆ. ಹೀಗಾಗಿ ಮುನ್ನೆಚ್ಚರಿಕೆಯಾಗಿ ಅವರು ಅಭ್ಯಾಸ ಪಂದ್ಯದ ಮೊದಲ ದಿನ ಕಣಕ್ಕಿಳಿಯಲಿಲ್ಲ. ಅವರ ಅನುಪಸ್ಥಿತಿಯಲ್ಲಿ ಕೆ.ಎಲ್. ರಾಹುಲ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಆಗಸ್ಟ್ 15 ರಿಂದ ಗಾಲ್ನಲ್ಲಿ ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳ ಸರಣಿಗೆ ಮುನ್ನ ಭಾರತ ತಂಡಕ್ಕೆ ಈ ಗಾಯದ ಸಮಸ್ಯೆಗಳು ಹಿನ್ನಡೆ ತಂದೊಡ್ಡಿವೆ.
ಇದನ್ನೂ ಓದಿ: Commonwealth: ಜಾವೆಲಿನ್ ಥ್ರೋ ರೋಚಕ ತ್ರಿಕೋನ ಸ್ಪರ್ಧೆ
