TOP NEWS

Crime: ಮೊಟ್ಟೆ ಖರೀದಿಯ ಚಿಲ್ಲರೆ ಜಗಳಕ್ಕೆ ವರ್ತಕ ಬಲಿ; ಮೂವರು ಆರೋಪಿಗಳ ಬಂಧನ, ರಟ್ಟಿಹಳ್ಳಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್!

Crime Haveri small fight turned into huge mistake 4 men took one person life

ಹಾವೇರಿ: ಜಿಲ್ಲೆಯ ರಟ್ಟಿಹಳ್ಳಿ ಪಟ್ಟಣದಲ್ಲಿ ಕ್ಷುಲ್ಲಕ ಕಾರಣಕ್ಕೆ ಆರಂಭವಾದ (Crime) ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದ್ದು, ಅಮಾಯಕ ವರ್ತಕರೊಬ್ಬರು ಜೀವ ಕಳೆದುಕೊಂಡಿದ್ದಾರೆ. ಮೊಟ್ಟೆ ಕೊಳ್ಳುವಾಗ ಹಣದ ಚಿಲ್ಲರೆ ವಿಚಾರವಾಗಿ ನಡೆದ ಮಾತಿನ ಚಕಮಕಿ ತಳ್ಳಾಟಕ್ಕೆ ತಿರುಗಿ, ಗೂಡಂಗಡಿ ನಡೆಸುತ್ತಿದ್ದ 55 ವರ್ಷದ ಶಿವಾಜಿರಾವ್ ಬೈರೋಜಿ ಎಂಬುವವರು ಮೃತಪಟ್ಟಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ರಟ್ಟಿಹಳ್ಳಿ ಪೊಲೀಸರು ನಾಲ್ವರ ವಿರುದ್ಧ ಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದು, ಈಗಾಗಲೇ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಯ ಪತ್ತೆಗಾಗಿ ವಿಶೇಷ ತಂಡ ರಚಿಸಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ.

ಏನಿದು ಪ್ರಕರಣ?

ರಟ್ಟಿಹಳ್ಳಿಯ ಜನತಾ ಪ್ಲಾಟ್ ನಿವಾಸಿಯಾದ ಶಿವಾಜಿರಾವ್ ತಮ್ಮ ಮಗ ಭರತ್ ಜೊತೆ ಸೇರಿ ಸಣ್ಣದೊಂದು ಅಂಗಡಿ ನಡೆಸುತ್ತಿದ್ದರು. ಮಂಗಳವಾರ ಸಂಜೆ 7 ಗಂಟೆ ಸುಮಾರಿಗೆ ವಾಸೀಮ್ ಮುಲ್ಲಾ ಎಂಬ ಯುವಕ ಅಂಗಡಿಗೆ ಬಂದು ಐದು ಮೊಟ್ಟೆಗಳನ್ನು ಖರೀದಿಸಿದ್ದಾನೆ. ಈ ವೇಳೆ ಹಣ ನೀಡುವಾಗ ತಾನು 500 ರೂಪಾಯಿ ನೋಟು ಕೊಟ್ಟಿದ್ದಾಗಿ ವಾಸೀಮ್ ವಾದಿಸಿದರೆ, ನೀನು ನೀಡಿದ್ದು ಕೇವಲ 100 ರೂಪಾಯಿ ಎಂದು ಭರತ್ ಹೇಳಿದ್ದಾನೆ. ಈ ಸಣ್ಣ ಗೊಂದಲ ಇಬ್ಬರ ನಡುವೆ ಭಾರಿ ಜಗಳಕ್ಕೆ ಕಾರಣವಾಗಿದೆ. ಮಾತಿಗೆ ಮಾತು ಬೆಳೆದು ವಾಸೀಮ್ ಪರವಾಗಿ ಆತನ ಸಹೋದರರಾದ ಸರ್ಪರಾಜ್, ಸಾದಿಕ್ ಹಾಗೂ ಸಿರಾಜ್ ಮುಲ್ಲಾ ಕೂಡ ಸ್ಥಳಕ್ಕೆ ಬಂದು ಭರತ್ ಮೇಲೆ ಮುಗಿಬಿದ್ದಿದ್ದಾರೆ. ಈ ವೇಳೆ ಮಗನನ್ನು ರಕ್ಷಿಸಲು ಮಧ್ಯಪ್ರವೇಶಿಸಿದ ತಂದೆ ಶಿವಾಜಿರಾವ್ ಅವರ ಮೇಲೂ ಆರೋಪಿಗಳು ದಾಳಿ ನಡೆಸಿದ್ದು, ಅವರು ಸ್ಥಳದಲ್ಲೇ ಪ್ರಜ್ಞೆ ಕಳೆದುಕೊಂಡು ಕೆಳಗೆ ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ ಅಷ್ಟರಲ್ಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಘಟನೆಯಲ್ಲಿ ಮಗ ಭರತ್‌ಗೂ ಗಾಯಗಳಾಗಿದ್ದು, ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಘಟನೆಯ ಬೆನ್ನಲ್ಲೇ ರಟ್ಟಿಹಳ್ಳಿಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ. ಮರಣೋತ್ತರ ಪರೀಕ್ಷೆಯ ಬಳಿಕ ಶಿವಾಜಿರಾವ್ ಅವರ ಪಾರ್ಥಿವ ಶರೀರ ಊರಿಗೆ ಬರುತ್ತಿದ್ದಂತೆ ಕುಟುಂಬಸ್ಥರು ಮತ್ತು ಸ್ಥಳೀಯರ ಆಕ್ರಂದನ ಮುಗಿಲು ಮುಟ್ಟಿತ್ತು. ಎಲ್ಲಾ ಆರೋಪಿಗಳನ್ನು ಬಂಧಿಸುವವರೆಗೂ ಅಂತ್ಯಕ್ರಿಯೆ ನಡೆಸುವುದಿಲ್ಲ ಎಂದು ಕುಟುಂಬಸ್ಥರು ಪಟ್ಟು ಹಿಡಿದಿದ್ದರು. ಆದರೆ ಪೊಲೀಸರು ಮೂವರನ್ನು ಈಗಾಗಲೇ ಬಂಧಿಸಿರುವ ಮಾಹಿತಿ ನೀಡಿ, ಉಳಿದ ಕಾನೂನು ಕ್ರಮಗಳ ಭರವಸೆ ನೀಡಿದ ಬಳಿಕ ಅಂತ್ಯಕ್ರಿಯೆ ನೆರವೇರಿತು. ಸ್ಥಳಕ್ಕೆ ಭೇಟಿ ನೀಡಿದ ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಯಶೋದಾ ವಂಟಗೋಡಿ ಅವರು, ಈ ಪ್ರಕರಣಕ್ಕೂ ಕೋಮು ವೈಷಮ್ಯಕ್ಕೂ ಯಾವುದೇ ಸಂಬಂಧವಿಲ್ಲ ಎಂದು ವದಂತಿಗಳಿಗೆ ತೆರೆ ಎಳೆದಿದ್ದಾರೆ. ಎರಡು ಕುಟುಂಬಗಳು ಮೊದಲಿನಿಂದಲೂ ಪರಿಚಯಸ್ಥರಾಗಿದ್ದು, ವ್ಯಾಪಾರದ ಚಿಲ್ಲರೆ ವಿಚಾರಕ್ಕೆ ತಳ್ಳಾಟ ನಡೆದಿದೆ. ಮೇಲ್ನೋಟಕ್ಕೆ ಮೃತರ ದೇಹದ ಮೇಲೆ ಯಾವುದೇ ಗಂಭೀರ ಹೊರಗಾಯಗಳಿಲ್ಲ ಹಾಗೂ ಅವರಿಗೆ ಹೃದಯ ಸಂಬಂಧಿ ಕಾಯಿಲೆ ಇತ್ತು ಎನ್ನಲಾಗಿದ್ದು, ಮರಣೋತ್ತರ ಪರೀಕ್ಷೆಯ ಪೂರ್ಣ ವರದಿ ಬಂದ ಬಳಿಕವಷ್ಟೇ ಸಾವಿನ ನಿಖರ ಕಾರಣ ತಿಳಿಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ನಗರದಾದ್ಯಂತ ಬಂದೋಬಸ್ತ್

ಆದರೆ, ಮಗ ಭರತ್ ಮಾತ್ರ ಆರೋಪಿಗಳು ತಂದೆಯನ್ನು ನೆಲಕ್ಕೆ ಕೆಡವಿ ಎದೆಗೆ ಕಾಲಿನಿಂದ ತುಳಿದು ಕೊಂದಿದ್ದಾರೆ, ಅವರು ಮೊದಲಿನಿಂದಲೂ ನಮ್ಮ ವ್ಯಾಪಾರವನ್ನು ಸಹಿಸುತ್ತಿರಲಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ. ಸದ್ಯ ಪಟ್ಟಣದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಬಂದೋಬಸ್ತ್ ಮುಂದುವರಿದಿದ್ದು, ಎರಡೂ ಸಮುದಾಯದ ಮುಖಂಡರೊಂದಿಗೆ ಶಾಂತಿ ಸಭೆ ನಡೆಸಿ ಸೌಹಾರ್ದತೆ ಕಾಪಾಡಲು ಪೊಲೀಸರು ಕ್ರಮ ವಹಿಸಿದ್ದಾರೆ.

ಇದನ್ನೂ ಓದಿ: ಕೇತನ್ ಅಗರ್ವಾಲ್ ಹತ್ಯೆ ಕೇಸ್: ಆರೋಪಿ ಸಿಯಾ ಗೋಯಲ್‌ಗೆ ಸುಳ್ಳು ಪತ್ತೆ ಪರೀಕ್ಷೆ

Leave a Reply

Your email address will not be published. Required fields are marked *