ಬೆಂಗಳೂರು: ಕರ್ನಾಟಕದಾದ್ಯಂತ ವಿವಿಧ ರೈಲ್ವೆ ನಿಲ್ದಾಣಗಳು, ಕ್ಯಾಂಟೀನ್ಗಳು ಹಾಗೂ ಪ್ರಮುಖ ರೈಲುಗಳಲ್ಲಿ ಪೂರೈಸಲಾಗುವ ಆಹಾರದ ನೈರ್ಮಲ್ಯ (Big News) ಮತ್ತು ಗುಣಮಟ್ಟವನ್ನು ಪರಿಶೀಲಿಸುವ ಉದ್ದೇಶದಿಂದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ನಿಯಂತ್ರಣ ಅಧಿಕಾರಿಗಳ ತಂಡವು ಆಗಸ್ಟ್ 20, 2026 ರಂದು ರಾಜ್ಯಾದ್ಯಂತ ಬೃಹತ್ ರೇಡ್ ನಡೆಸಿ ತಪಾಸಣೆ ನಡೆಸಿದೆ.
112ಕ್ಕೂ ಹೆಚ್ಚು ಆಹಾರ ಸಂಸ್ಥೆಗಳ ಮೇಲೆ ದಾಳಿ
ಆಹಾರ ಪದಾರ್ಥಗಳ ಸಂರಕ್ಷಣೆ, ಲೇಬಲಿಂಗ್ ನಿಯಮಗಳು ಹಾಗೂ ಅಡುಗೆಮನೆಗಳ ನೈರ್ಮಲ್ಯವನ್ನು ಸೂಕ್ಷ್ಮವಾಗಿ ಪರಿಶೀಲಿಸಲು ಈ ವಿಶೇಷ ತಪಾಸಣಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಾಚರಣೆಯ ವೇಳೆ ಬೆಂಗಳೂರಿನ ಕೆಎಸ್ಆರ್, ಯಶವಂತಪುರ, ಕೆ.ಆರ್. ಪುರಂ, ಯಲಹಂಕ, ಕೆಜಿಎಫ್ನ ಕೋಲಾರ, ಮೈಸೂರು, ಹಾವೇರಿ, ಉಡುಪಿ, ಕೊಪ್ಪಳ, ಗದಗ, ದಾವಣಗೆರೆ, ಬಾಗಲಕೋಟೆ, ಕಾರವಾರ, ಯಾದಗಿರಿ, ಬೀರೂರು, ಕಡೂರು ಜಂಕ್ಷನ್, ಬಳ್ಳಾರಿ, ಹೊಸಪೇಟೆ, ಹುಬ್ಬಳ್ಳಿ ಹಾಗೂ ಮಂಗಳೂರು ಸೇರಿದಂತೆ ಒಟ್ಟು 36 ಪ್ರಮುಖ ರೈಲು ನಿಲ್ದಾಣಗಳಲ್ಲಿರುವ 112ಕ್ಕೂ ಹೆಚ್ಚು ಆಹಾರ ಸಂಸ್ಥೆಗಳ ಮೇಲೆ ದಾಳಿ ನಡೆಸಲಾಯಿತು. ರೈಲ್ವೆ ಪ্যান্ট್ರಿ ಕಾರ್, ನಿಲ್ದಾಣದ ಕ್ಯಾಂಟೀನ್ ಮತ್ತು ಖಾಸಗಿ ಹೋಟೆಲ್ಗಳನ್ನು ಈ ತಪಾಸಣೆಗೆ ಒಳಪಡಿಸಲಾಯಿತು.
ತಪಾಸಣೆಯ ವೇಳೆ ಮಂಗಳೂರು-ಕೇರಳ ಹಾಗೂ ಹುಬ್ಬಳ್ಳಿ-ಬೆಂಗಳೂರು ಮಾರ್ಗದ ‘ವಂದೇ ಭಾರತ್’ ರೈಲುಗಳಲ್ಲಿ ಆಹಾರ ತಯಾರಿಕೆ ಮತ್ತು ನೈರ್ಮಲ್ಯ ಉತ್ತಮ ಮಟ್ಟದಲ್ಲಿದೆ ಎಂಬುದು ಕಂಡುಬಂತು. ಆದರೆ, ಬಹುತೇಕ ರೈಲು ನಿಲ್ದಾಣಗಳ ಹೋಟೆಲ್ಗಳಲ್ಲಿ ಭೀಕರ ಹಾಗೂ ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿಯಾದ ಅಕ್ರಮಗಳು ಬೆಳಕಿಗೆ ಬಂದಿವೆ.
ಆಹಾರ ಪದಾರ್ಥಗಳಿಗೆ ಶರೀರಕ್ಕೆ ಹಾನಿಕರವಾದ ಕೃತಕ ಬಣ್ಣಗಳನ್ನು ಬಳಸುವುದು ಪತ್ತೆಯಾಗಿದೆ. ಜಿಲೇಬಿಗೆ ಅಪಾಯಕಾರಿ ಹಳದಿ ಬಣ್ಣ ಹಾಗೂ ಖೋವಾ ಪೇಡಾಗೆ ಅತಿಯಾದ ಗುಲಾಬಿ ಬಣ್ಣದ ರಾಸಾಯನಿಕಗಳನ್ನು ಬೆರೆಸಿರುವುದು ಕಂಡುಬಂದಿದೆ. ಹಾವೇರಿ ಜಿಲ್ಲೆಯ ರೈಲು ನಿಲ್ದಾಣದ ಹೋಟೆಲ್ಗಳಲ್ಲಿ ಅವಧಿ ಮೀರಿದ ಎಕ್ಸ್ಪೈರ್ಡ್ ನಂದಿನಿ ಮೊಸರು ಹಾಗೂ ದೊಡ್ಲಾ ಹಾಲಿನ ಪ್ಯಾಕೆಟ್ಗಳನ್ನು ಗ್ರಾಹಕರಿಗೆ ಬಳಸಲಾಗುತ್ತಿತ್ತು. ಕೆ.ಆರ್. ಪುರಂ ರೈಲು ನಿಲ್ದಾಣದ ಹೋಟೆಲ್ ಒಂದರ ಅಡುಗೆಮನೆ ತೀವ್ರ ಅನೈರ್ಮಲ್ಯದಿಂದ ಕೂಡಿದ್ದು, ನೋಡುಗರಲ್ಲೇ ವಾಕರಿಕೆ ತರಿಸುವಂತಿತ್ತು.
ಮೈಸೂರಿನ ರೈಲು ನಿಲ್ದಾಣದಲ್ಲಿ ಘೋರ ನಿರ್ಲಕ್ಷ್ಯ
ಸಂಪ್ರದಾಯಿಕ ಮತ್ತು ಸಾಂಸ್ಕೃತಿಕ ನಗರಿ ಮೈಸೂರಿನ ರೈಲು ನಿಲ್ದಾಣದಲ್ಲಿ ಘೋರ ನಿರ್ಲಕ್ಷ್ಯ ಕಂಡುಬಂದಿದೆ. ಇಲ್ಲಿ ಪ್ಲಾಸ್ಟಿಕ್ ಹಾಳೆಗಳು ಹಾಗೂ ಕ್ಯಾಪ್ಸುಲ್ಗಳನ್ನು ಬಳಸಿ ಬಿಸಿಬಿಸಿ ಇಡ್ಲಿ ತಯಾರಿಸುತ್ತಿದ್ದುದು ಅಧಿಕಾರಿಗಳ ತಪಾಸಣೆ ವೇಳೆ ಬಯಲಾಗಿದೆ. ಮೈಸೂರು ನಿಲ್ದಾಣದ ಅಡುಗೆಮನೆಗಳಲ್ಲಿ ಅವಧಿ ಮುಗಿದ ಆಹಾರ ಧಾನ್ಯಗಳು ಪತ್ತೆಯಾಗಿವೆ. ಇನ್ನು ಹೋಟೆಲ್ಗಳಲ್ಲಿ ಬಳಸಲು ಇಡಲಾಗಿದ್ದ ಈರುಳ್ಳಿ ಮತ್ತು ತರಕಾರಿಗಳ ಮೇಲೆ ಬೂಷ್ಟು ಅಂದರೆ ಶಿಲೀಂಧ್ರ ಬೆಳೆದಿರುವುದು ಪತ್ತೆಯಾಗಿದೆ. ಚಟ್ನಿಯಂತಹ ದ್ರವ ರೂಪದ ಆಹಾರವನ್ನು ವಿಷಕಾರಿ ಪ್ಲಾಸ್ಟಿಕ್ ಬಕೆಟ್ಗಳಲ್ಲಿ ಸಂಗ್ರಹಿಸಿಡಲಾಗಿತ್ತು. ಈ ಎಲ್ಲಾ ಅಕ್ರಮಗಳನ್ನು ಕಂಡು ಅಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ನಿರ್ಧರಿಸಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಜಾಹೀರಾತು ವಿರುದ್ಧ ಬಿಜೆಪಿ ಮಾನನಷ್ಟ ಮೊಕದ್ದಮೆ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್!
