ಲಕ್ನೋ: ಪಶ್ಚಿಮ ಉತ್ತರ ಪ್ರದೇಶದ (Uttar Pradesh) ಪ್ರಮುಖ ರಸ್ತೆಗಳಲ್ಲಿ ಸಾಗುವ ಕಂವಾರ ಯಾತ್ರಿಕರಿಗೆ ಈ ಬಾರಿ ವಿಶೇಷ ರೀತಿಯ ಗೌರವ ಸಿಗಲಿದೆ. ಆ ಆಗಸ್ಟ್ 9 ಮತ್ತು 10 ರಂದು ಏಳು ಜಿಲ್ಲೆಗಳಾದ್ಯಂತ ಹೆಲಿಕಾಪ್ಟರ್ ಮೂಲಕ ಕಂವಾರಿಯರ ಮೇಲೆ ಹೂವಿನ ಮಳೆ ಸುರಿಸಲು ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿದೆ. ಶಿವಭಕ್ತರ ಯಾತ್ರೆ ಅತ್ಯಂತ ವೈಭವದಿಂದ, ಸುರಕ್ಷಿತವಾಗಿ ಮತ್ತು ಶ್ರದ್ಧಾಭಕ್ತಿಗಳಿಂದ ನಡೆಯುವಂತೆ ಮಾಡಲು ಸರ್ಕಾರ ಈ ವಿಶೇಷ ವ್ಯವಸ್ಥೆ ಮಾಡಿದೆ.
ಹೀಗಿದೆ ಸರ್ಕಾರದ ವೇಳಾಪಟ್ಟಿ
ಸರ್ಕಾರ ಬಿಡುಗಡೆ ಮಾಡಿರುವ ವೇಳಾಪಟ್ಟಿಯ ಪ್ರಕಾರ, ಆಗಸ್ಟ್ 9 ರಂದು ಬೆಳಿಗ್ಗೆ 8 ಗಂಟೆಗೆ ಲಕ್ನೋದಿಂದ ಹೊರಡುವ ಹೆಲಿಕಾಪ್ಟರ್ ಬಾಗ್ಪತ್ ತಲುಪಲಿದೆ. ಅಲ್ಲಿ ಬೆಳಿಗ್ಗೆ 10:30 ರಿಂದ 11:15 ರವರೆಗೆ ಭಕ್ತರ ಮೇಲೆ ಪುಷ್ಪವೃಷ್ಟಿ ಮಾಡಲಾಗುತ್ತದೆ. ನಂತರ ಶಹರಾನ್ಪುರದಲ್ಲಿ ಬೆಳಿಗ್ಗೆ 11:45 ರಿಂದ ಮಧ್ಯಾಹ್ನ 12:45 ರವರೆಗೆ, ಮುಜಫರ್ನಗರದಲ್ಲಿ ಮಧ್ಯಾಹ್ನ 1:30 ರಿಂದ 2:15 ರವರೆಗೆ ಹಾಗೂ ಮೀರತ್ನಲ್ಲಿ ಮಧ್ಯಾಹ್ನ 3:45 ರಿಂದ ಸಂಜೆ 4:30 ರವರೆಗೆ ಹೂವಿನ ಮಳೆ ಸುರಿಸಲಾಗುತ್ತದೆ. ಮೊದಲ ದಿನ ಹೆಲಿಕಾಪ್ಟರ್ ಒಟ್ಟು 6 ಗಂಟೆ 10 ನಿಮಿಷಗಳ ಕಾಲ ಹಾರಾಟ ನಡೆಸಲಿದೆ.
ಇನ್ನು ಎರಡನೇ ದಿನ ಅಂದರೆ ಆಗಸ್ಟ್ 10 ರಂದು ಮೀರತ್ನಿಂದ ಹೆಲಿಕಾಪ್ಟರ್ ಕಾರ್ಯಾಚರಣೆ ಆರಂಭಗೊಳ್ಳಲಿದೆ. ಬೆಳಿಗ್ಗೆ 8:30 ರಿಂದ 9:15 ರವರೆಗೆ ಗಾಜಿಯಾಬಾದ್ನಲ್ಲಿ, 9:45 ರಿಂದ 10:30 ರವರೆಗೆ ಪ್ರಸಿದ್ಧ ಪ್ರವಾಸಿ ತಾಣವಾದ ಹಾಪುರ್ನಲ್ಲಿ ಹಾಗೂ 11:15 ರಿಂದ ಮಧ್ಯಾಹ್ನ 12:00 ಗಂಟೆಯವರೆಗೆ ಬುಲಂದ್ಶಹರ್ನಲ್ಲಿ ಶ್ರಾವಣ ಮಾಸದ ಕಂವಾರ ಯಾತ್ರಿಕರ ಮೇಲೆ ಪುಷ್ಪವೃಷ್ಟಿ ನಡೆಯಲಿದೆ. ನಂತರ ಮಧ್ಯಾಹ್ನ 12:30 ಕ್ಕೆ ಬುಲಂದ್ಶಹರ್ನಿಂದ ಹೆಲಿಕಾಪ್ಟರ್ ಲಕ್ನೋಗೆ ವಾಪಸಾಗಲಿದೆ.
ಎರಡನೇ ದಿನ ಒಟ್ಟು 3 ಗಂಟೆ 45 ನಿಮಿಷಗಳ ಕಾಲ ಹಾರಾಟ ನಡೆಯಲಿದ್ದು, ಎರಡು ದಿನ ಸೇರಿ ಒಟ್ಟು 9 ಗಂಟೆ 55 ನಿಮಿಷಗಳ ಕಾಲ ಬೃಹತ್ ಪುಷ್ಪವೃಷ್ಟಿ ಅಭಿಯಾನ ನಡೆಯಲಿದೆ. ಈ ಮೂಲಕ ಯುಪಿ ಸರ್ಕಾರ ಕಂವಾರ ಯಾತ್ರೆಗೆ ಆಗಮಿಸುವ ಭಕ್ತರಿಗೆ ಮರೆಯಲಾಗದ ಸಾಂಸ್ಕೃತಿಕ ಹಾಗೂ ದೈವಿಕ ಅನುಭವ ನೀಡಲು ಸಜ್ಜಾಗಿದೆ.
