ಮುಂಬೈ: 2026ರ ಅತ್ಯಂತ ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ‘ರಾಮಾಯಣ’ದ ಬಗ್ಗೆ ಈಗ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ಈ ಚಿತ್ರದಲ್ಲಿ ಸೀತಾ ಮಾತೆಯ ಪಾತ್ರವನ್ನು ನಿರ್ವಹಿಸುತ್ತಿರುವ ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿ (Sai Pallavi) ಅವರ ಧ್ವನಿಯನ್ನು ಬದಲಾಯಿಸಲು ಚಿತ್ರತಂಡ ನಿರ್ಧರಿಸಿದೆ ಎಂದು ವರದಿಯಾಗಿದೆ. ಸಾಯಿ ಪಲ್ಲವಿ ಸೀತೆಯ ಪಾತ್ರಕ್ಕೆ ಜೀವ ತುಂಬುತ್ತಿದ್ದರೂ, ಅವರ ಹಿಂದಿ ಭಾಷೆಯ ಉಚ್ಚಾರಣೆ ಮತ್ತು ಸಂಭಾಷಣೆಗಳನ್ನು ಮತ್ತಷ್ಟು ಸ್ಪಷ್ಟವಾಗಿ ಮತ್ತು ಪರಿಣಾಮಕಾರಿಯಾಗಿ ಕೇಳುವಂತೆ ಮಾಡಲು ಬೇರೆ ಧ್ವನಿಯನ್ನು ಬಳಸಲು ನಿರ್ಮಾಪಕರು ಮುಂದಾಗಿದ್ದಾರೆ ಎನ್ನಲಾಗಿದೆ.
ಹಿಂದಿ ಉಚ್ಛಾರಣೆಯ ಬಗ್ಗೆ ಅಸಮಾಧಾನ
ಸಾಯಿ ಪಲ್ಲವಿ ಇತ್ತೀಚೆಗೆ ‘ಏಕ್ ದಿನ್’ ಎಂಬ ಚಿತ್ರದ ಮೂಲಕ ಬಾಲಿವುಡ್ಗೆ ಪದಾರ್ಪಣೆ ಮಾಡಿದ್ದರು. ಆ ಚಿತ್ರದಲ್ಲಿ ಅವರ ಹಿಂದಿ ಉಚ್ಚಾರಣೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ವ್ಯಕ್ತವಾಗಿದ್ದವು. ಈ ಹಿನ್ನೆಲೆಯಲ್ಲಿ ಸೀತಾ ಮಾತೆಯಂತಹ ಪವಿತ್ರ ಮತ್ತು ಪ್ರಮುಖ ಪಾತ್ರದ ಸಂಭಾಷಣೆಗಳು ಅತ್ಯಂತ ಶುದ್ಧವಾಗಿರಬೇಕು ಎಂಬ ಉದ್ದೇಶದಿಂದ ಚಿತ್ರತಂಡ ಡಬ್ಬಿಂಗ್ ಮೊರೆ ಹೋಗಿದೆ ಎಂದು ಹೇಳಲಾಗುತ್ತಿದೆ. ಆದರೆ ಚಿತ್ರತಂಡದ ಈ ನಿರ್ಧಾರವು ‘ಏಕ್ ದಿನ್’ ಚಿತ್ರದ ಸೋಲಿಗೂ ಸಂಬಂಧಿಸಿಲ್ಲ, ಬದಲಿಗೆ ಕೇವಲ ಪಾತ್ರದ ನೈಜತೆಗಾಗಿ ಈ ಬದಲಾವಣೆ ಮಾಡಲಾಗುತ್ತಿದೆ ಎಂದೂ ಕೆಲವು ವರದಿಗಳು ತಿಳಿಸಿವೆ.
ಈ ಚಿತ್ರದಲ್ಲಿ ರಣಬೀರ್ ಕಪೂರ್ ಶ್ರೀರಾಮನ ಪಾತ್ರದಲ್ಲಿ ನಟಿಸುತ್ತಿದ್ದು, ಇತ್ತೀಚೆಗೆ ನಡೆದ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಅವರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಆರಂಭದಲ್ಲಿ ಈ ಪಾತ್ರವನ್ನು ನಿರ್ವಹಿಸಲು ತಮಗೆ ಭಯವಿತ್ತು ಮತ್ತು ಅದಕ್ಕೆ ತಾನು ಅರ್ಹನಲ್ಲ ಎಂದು ಭಾವಿಸಿ ಆಫರ್ ತಿರಸ್ಕರಿಸಿದ್ದಾಗಿ ಅವರು ತಿಳಿಸಿದರು. ಆದರೆ ನಂತರದ ದಿನಗಳಲ್ಲಿ ತಂದೆಯಾದ ಮೇಲೆ ಜೀವನದ ಬಗ್ಗೆ ದೃಷ್ಟಿಕೋನ ಬದಲಾಯಿತು ಮತ್ತು ಈ ಪಾತ್ರಕ್ಕೆ ನ್ಯಾಯ ಒದಗಿಸಲು ತಾನು ಸಿದ್ಧನಾದೆ ಎಂದು ಅವರು ಹೇಳಿದ್ದಾರೆ.
ರಾಮಾಯಣ ಚಿತ್ರದಲ್ಲಿ ದೊಡ್ಡ ತಾರಾಗಣವೇ ಇದ್ದು, ರಾವಣನಾಗಿ ರಾಕಿಂಗ್ ಸ್ಟಾರ್ ಯಶ್, ಹನುಮಂತನಾಗಿ ಸನ್ನಿ ಡಿಯೋಲ್, ಲಕ್ಷ್ಮಣನಾಗಿ ರವಿ ದುಬೆ ಮತ್ತು ಶೂರ್ಪನಖಿಯಾಗಿ ರಾಕುಲ್ ಪ್ರೀತ್ ಸಿಂಗ್ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಕೈಕೇಯಿಯಾಗಿ ಲಾರಾ ದತ್ತಾ ಹಾಗೂ ಮಂಥರೆಯಾಗಿ ಶೀಬಾ ಚಡ್ಡಾ ಅಭಿನಯಿಸುತ್ತಿದ್ದಾರೆ. ಎರಡು ಭಾಗಗಳಲ್ಲಿ ತೆರೆಗೆ ಬರಲಿರುವ ಈ ಚಿತ್ರದ ಮೊದಲ ಭಾಗ 2026ರ ದೀಪಾವಳಿಗೆ ಹಾಗೂ ಎರಡನೇ ಭಾಗ 2027ರ ದೀಪಾವಳಿಗೆ ಬಿಡುಗಡೆಯಾಗಲಿದೆ ಎಂದು ಘೋಷಿಸಲಾಗಿದೆ. ಈ ಬೃಹತ್ ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಈಗಲೇ ಭಾರಿ ಕುತೂಹಲ ಮೂಡಿದೆ.
ಇದನ್ನೂ ಓದಿ: ಸೂರ್ಯ-ತ್ರಿಶಾ ನಟನೆಯ ‘ಕರುಪ್ಪು’ ಸಿನಿಮಾಗೆ ಸಂಕಷ್ಟ, ಬೆಳಗಿನ ಶೋ ರದ್ದು
