ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿವಾದದ ಬೆಂಕಿ ಈಗ ಸಿನಿರಂಗಕ್ಕೂ ವ್ಯಾಪಿಸಿದೆ. ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ (ದಳಪತಿ ವಿಜಯ್) ಅಭಿನಯದ ಜಾಗತಿಕ ಬಾಕ್ಸ್ ಆಫೀಸ್ ಸೂಪರ್ ಹಿಟ್ ಸಿನಿಮಾ ‘ಜನನಾಯಗನ್’ (Jana Nayagan) ಚಿತ್ರದ ಪ್ರದರ್ಶನವನ್ನು ಕರ್ನಾಟಕದ ಚಿತ್ರಮಂದಿರಗಳಲ್ಲಿ ದಿಢೀರ್ ಸ್ಥಗಿತಗೊಳಿಸಲಾಗಿದೆ. ರಾಜ್ಯದಲ್ಲಿ ಕಾವೇರಿ ವಿವಾದದ ಹಿನ್ನೆಲೆಯಲ್ಲಿ ಉದ್ವಿಗ್ನ ವಾತಾವರಣ ಇರುವುದರಿಂದ ಚಿತ್ರ ಪ್ರದರ್ಶನವನ್ನು ನಿಲ್ಲಿಸಲು ಥಿಯೇಟರ್ ಮಾಲೀಕರು ತೀರ್ಮಾನಿಸಿದ್ದಾರೆ. ಮತ್ತೊಂದೆಡೆ, ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಅವರೊಂದಿಗೆ ನಿಗದಿಯಾಗಿದ್ದ ಸಭೆಯನ್ನು ಸದ್ಯದ ಪರಿಸ್ಥಿತಿಯಲ್ಲಿ ಮುಂದೂಡುವುದು ಸೂಕ್ತ ಎಂದು ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಕಟಿಸಿದ್ದಾರೆ. ಕಾವೇರಿ ನೀರು ನಿಯಂತ್ರಣ ಸಮಿತಿ (CWRA) ಮತ್ತು ನಿರ್ವಹಣಾ ಪ್ರಾಧಿಕಾರ (CWMA) ನೀಡಿರುವ ಇತ್ತೀಚಿನ ಆದೇಶಗಳು ಹಾಗೂ ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ಪಾಲಿಸುವುದು ಸರ್ಕಾರದ ಕರ್ತವ್ಯವಾಗಿದ್ದು, ಮುಂದಿನ ಕಾನೂನು ಹೋರಾಟದ ಕುರಿತು ಚರ್ಚಿಸಲು ಭಾನುವಾರ ಸರ್ವಪಕ್ಷ ಸಭೆ ಕರೆಯಲಾಗಿದೆ ಎಂದು ಡಿಕೆಶಿ ಸ್ಪಷ್ಟಪಡಿಸಿದ್ದಾರೆ.
ಆಗಸ್ಟ್ 13 ರಂದು ಇಡೀ ‘ಕರ್ನಾಟಕ ಬಂದ್’ಗೆ ಕರೆ
ಇದೇ ವಿಷಯವಾಗಿ ಬೆಂಗಳೂರಿನಲ್ಲಿ ತುರ್ತು ಸಭೆ ನಡೆಸಿದ ಕನ್ನಡ ಪರ ಸಂಘಟನೆಗಳ ಒಕ್ಕೂಟದ ಮುಖಂಡರಾದ ವಾಟಾಳ್ ನಾಗರಾಜ್, ಕಾವೇರಿ ರಕ್ಷಣೆಗಾಗಿ ಆಗಸ್ಟ್ 13 ರಂದು ಇಡೀ ‘ಕರ್ನಾಟಕ ಬಂದ್’ಗೆ ಕರೆ ನೀಡಿದ್ದಾರೆ. ಈ ಹೋರಾಟಕ್ಕೆ ರಾಜ್ಯದ 1,600 ಕ್ಕೂ ಹೆಚ್ಚು ಕನ್ನಡಪರ ಸಂಘಟನೆಗಳು, 1,000 ಕ್ಕೂ ಅಧಿಕ ಪ್ರಗತಿಪರ ಸಂಘಟನೆಗಳು ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (KFCC) ಸಂಪೂರ್ಣ ಬೆಂಬಲ ಘೋಷಿಸಿದೆ. ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಕಾವೇರಿ ನೀರು ಬಿಡಬಾರದು ಎಂಬುದು ನಮ್ಮ ಏಕೈಕ ಆಗ್ರಹವಾಗಿದೆ. ಆಗಸ್ಟ್ 3 ರಂದು ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ಬೆಂಗಳೂರಿಗೆ ಭೇಟಿ ನೀಡುತ್ತಿದ್ದಾರೆ ಎಂಬ ಮಾಹಿತಿ ಇದೆ. ಅವರು ಕೇವಲ ಸೌಹಾರ್ದಯುತವಾಗಿ ಸಿಎಂ ಭೇಟಿಯಾಗಲು ಬಂದರೆ ಸ್ವಾಗತ. ಆದರೆ ಕಾವೇರಿ ನೀರಿಗಾಗಿ ಒತ್ತಾಯಿಸಲು ಬಂದರೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಮುತ್ತಿಗೆ ಹಾಕಿ ಅವರ ಭೇಟಿಯನ್ನು ತಡೆಯುವುದಾಗಿ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.
ಬರೋಬ್ಬರಿ 10 ಕೋಟಿ ರೂಪಾಯಿ ಗಳಿಸಿದ ಸಿನಿಮಾ
ಈ ಎಲ್ಲ ರಾಜಕೀಯ ಹಾಗೂ ಸಾಂಸ್ಥಿಕ ಸಂಘರ್ಷಗಳ ನಡುವೆಯೂ ದಳಪತಿ ವಿಜಯ್ ಅವರ ‘ಜನನಾಯಗನ್’ ಸಿನಿಮಾ ಜಾಗತಿಕ ಬಾಕ್ಸ್ ಆಫೀಸ್ನಲ್ಲಿ ದಾಖಲೆ ಬರೆಯುತ್ತ ಮುನ್ನುಗ್ಗುತ್ತಿದೆ. ಸ್ಯಾಕ್ನಿಲ್ಕ್ ವರದಿಗಳ ಪ್ರಕಾರ, ವಾರದ ದಿನಗಳಲ್ಲೂ ಭಾರಿ ಕಲೆಕ್ಷನ್ ಮಾಡುತ್ತಿರುವ ಈ ಚಿತ್ರ ಬುಧವಾರದ ಒಂದೇ ದಿನ ವಿಶ್ವಾದ್ಯಂತ ಬರೋಬ್ಬರಿ 10 ಕೋಟಿ ರೂಪಾಯಿ ಗಳಿಸಿದೆ. ಇದರೊಂದಿಗೆ ಸಿನಿಮಾ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಜಾಗತಿಕವಾಗಿ ಒಟ್ಟು 255 ಕೋಟಿ ರೂಪಾಯಿಗಳಿಗೂ ಅಧಿಕ ಬಿಸಿನೆಸ್ ಮಾಡುವ ಮೂಲಕ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿದೆ. ಆದರೆ ಕರ್ನಾಟಕದಲ್ಲಿ ಪ್ರದರ್ಶನ ರದ್ದಾಗಿರುವುದು ಚಿತ್ರದ ಕಲೆಕ್ಷನ್ಗೆ ಕೊಂಚ ಹಿನ್ನಡೆ ತರುವ ಸಾಧ್ಯತೆಯಿದೆ.
ಇದನ್ನೂ ಓದಿ: ಅಭಿಮಾನಿಗಳಿಗೆ ವಿಮೆ ಗಿಫ್ಟ್ ನೀಡಿದ ಅಲ್ಲು ಅರ್ಜುನ್: ನೆಗೆಟಿವಿಟಿ, ಟ್ರೋಲ್ಗಳಿಂದ ದೂರವಿರಿ ಎಂದು ಐಕಾನ್ ಸ್ಟಾರ್ ಕಿವಿಮಾತು!
