TOP NEWS

Narendra Modi: ಮಕ್ಕಳ ಸ್ಕ್ರೀನ್ ಟೈಮ್ ಕಡಿಮೆ ಮಾಡಿ: ರಾಷ್ಟ್ರೀಯ ಪ್ರಶಸ್ತಿ ವಿಜೇತ ಶಿಕ್ಷಕರಿಗೆ ಪ್ರಧಾನಿ ಮೋದಿ ಕರೆ

PM Narendra Modi Urges Award Winning Teachers to Curb Screen Addiction and Raise Drug Awareness

ನವದೆಹಲಿ: ಶಿಕ್ಷಕರ ದಿನಾಚರಣೆಯ ಮುನ್ನಾದಿನದಂದು ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರು ನವದೆಹಲಿಯ ಲೋಕ ಕಲ್ಯಾಣ ಮಾರ್ಗದಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ 2026ರ ಸಾಲಿನ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ ವಿಜೇತರೊಂದಿಗೆ ಆತ್ಮೀಯ ಸಂವಾದ ನಡೆಸಿದರು. ಈ ಸುದೀರ್ಘ ಸಂವಾದದ ಸಮಯದಲ್ಲಿ ಪ್ರಶಸ್ತಿ ಪುರಸ್ಕೃತ ಶಿಕ್ಷಕರು ತಮ್ಮ ಬೋಧನಾ ವಿಧಾನಗಳು, ಶೈಕ್ಷಣಿಕ ಪ್ರಯೋಗಗಳು, ವಿದ್ಯಾರ್ಥಿಗಳ ಆಕಾಂಕ್ಷೆಗಳು ಹಾಗೂ ಮಕ್ಕಳಲ್ಲಿನ ಕೌಶಲ್ಯಗಳನ್ನು ಗುರುತಿಸಿ ಪ್ರೋತ್ಸಾಹಿಸಲು ತಾವು ಕೈಗೊಂಡ ವಿಶಿಷ್ಟ ಕ್ರಮಗಳ ಕುರಿತು ಅನುಭವಗಳನ್ನು ಹಂಚಿಕೊಂಡರು.

ಪಠ್ಯಕ್ರಮಕ್ಕೆ ಸೀಮಿತವಾಗದೆ ಮಕ್ಕಳ ಜೀವನಕ್ಕೆ ಹತ್ತಿರವಾಗಬೇಕು

ಸಂವಾದದ ವೇಳೆ ಮಾತನಾಡಿದ ಪ್ರಧಾನಿ ಮೋದಿ, ಇಂದಿನ ಮಕ್ಕಳಲ್ಲಿ ಮೊಬೈಲ್ ಹಾಗೂ ಟಿವಿ ಸ್ಕ್ರೀನ್ ನೋಡುವುದು ಒಂದು ರೀತಿಯ ವ್ಯಸನವಾಗಿ ಪರಿಣಮಿಸುತ್ತಿದ್ದು, ಇದನ್ನು ತಡೆಗಟ್ಟಲು ಶಿಕ್ಷಕರು ವಿಶೇಷ ಗಮನಹರಿಸಬೇಕು ಎಂದು ಕರೆ ನೀಡಿದರು. ಮಕ್ಕಳು ಸ್ಕ್ರೀನ್ ಟೈಮ್ ಕಡಿಮೆ ಮಾಡಿದಾಗ ಮಾತ್ರ ಅವರಲ್ಲಿ ಹೊರಾಂಗಣ ಕ್ರೀಡೆಗಳ ಬಗ್ಗೆ ಆಸಕ್ತಿ ಮೂಡಲು ಸಾಧ್ಯ. ಈ ಕ್ರೀಡೆಗಳು ವೀಡಿಯೊ ಗೇಮ್‌ಗಳಾಗಿರದೆ ಮೈದಾನದಲ್ಲಿ ಆಡುವ ಆಟಗಳಾಗಿರಬೇಕು. ಇದರೊಂದಿಗೆ ಶಾಲಾ ಹಂತದಲ್ಲಿಯೇ ಮಕ್ಕಳ ಸೃಜನಶೀಲತೆಯನ್ನು ಉತ್ತೇಜಿಸುವ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಅವರು ಹೇಳಿದರು. ಇದೇ ವೇಳೆ ಶೈಕ್ಷಣಿಕ ಸಂಸ್ಥೆಗಳಲ್ಲಿ ಹೆಚ್ಚುತ್ತಿರುವ ಡ್ರಗ್ಸ್ ಹಾವಳಿಯ ವಿರುದ್ಧ ಶಿಕ್ಷಕರು ಜಾಗೃತಿ ಮೂಡಿಸಬೇಕು. ಮಕ್ಕಳ ನಡವಳಿಕೆ ಅಥವಾ ಭಾವನೆಗಳಲ್ಲಿ ಯಾವುದೇ ಬದಲಾವಣೆ ಅಥವಾ ಭಯ ಕಂಡುಬಂದಲ್ಲಿ ತಕ್ಷಣ ಗಮನಿಸಬೇಕು ಎಂದು ಸೂಚಿಸಿದರು. ಶಿಕ್ಷಣ ಕ್ಷೇತ್ರವು ಕೇವಲ ಪಠ್ಯಪುಸ್ತಕ ಮತ್ತು ಪಠ್ಯಕ್ರಮಕ್ಕೆ ಸೀಮಿತವಾಗದೆ ಮಕ್ಕಳ ಜೀವನಕ್ಕೆ ಹತ್ತಿರವಾಗಬೇಕು ಹಾಗೂ ಪ್ರತಿಯೊಬ್ಬ ಶಿಕ್ಷಕನೂ ತನ್ನೊಳಗಿನ ಬಾಲ್ಯವನ್ನು ಜೀವಂತವಾಗಿಟ್ಟುಕೊಂಡು ಮಕ್ಕಳ ಬಾಲ್ಯವನ್ನು ಪೋಷಿಸಬೇಕು ಎಂದು ಮೋದಿ ಹೇಳಿದರು.

ಪ್ರತಿಯೊಬ್ಬ ಮಗುವಿನಲ್ಲೂ ವಿಶಿಷ್ಟ ಕೌಶಲ್ಯಗಳಿದ್ದು ಅದನ್ನು ಗುರುತಿಸಿ

ಸಂವಾದದಲ್ಲಿ ಭಾಗವಹಿಸಿದ್ದ ಶಿಕ್ಷಕರು ತಮ್ಮ ಶಾಲೆಗಳಲ್ಲಿ ಕೈಗೊಂಡ ವಿನೂತನ ಪ್ರಯೋಗಗಳನ್ನು ಪ್ರಧಾನಿಯವರೊಂದಿಗೆ ಹಂಚಿಕೊಂಡರು. ಶೈಕ್ಷಣಿಕವಾಗಿ ಹಿಂದುಳಿದ ಮಕ್ಕಳಲ್ಲಿರುವ ಇತರೆ ಪ್ರತಿಭೆಗಳನ್ನು ಗುರುತಿಸುವ ಬಗ್ಗೆ ಪ್ರಧಾನಿ ಪ್ರಶ್ನಿಸಿದಾಗ, ಪ್ರತಿಯೊಬ್ಬ ಮಗುವಿನಲ್ಲೂ ವಿಶಿಷ್ಟ ಕೌಶಲ್ಯಗಳಿದ್ದು ಅದನ್ನು ಗುರುತಿಸಿ ಪ್ರೋತ್ಸಾಹಿಸಲಾಗುತ್ತಿದೆ ಎಂದು ಶಿಕ್ಷಕರು ವಿವರಿಸಿದರು. ಏಕಲವ್ಯ ಮಾದರಿ ವಸತಿ ಶಾಲೆಗಳ (EMRS) ಸ್ಥಾಪನೆಯಿಂದಾಗಿ ಮೊದಲ ತಲೆಮಾರಿನ ಗಿರಿಜನ ವಿದ್ಯಾರ್ಥಿಗಳು ಇಂದು ಐಐಟಿ, ಎನ್‌ಐಟಿ ಹಾಗೂ ವೈದ್ಯಕೀಯ ಕಾಲೇಜುಗಳ ಕನಸು ಕಾಣುತ್ತಿದ್ದಾರೆ ಎಂದು ಶಿಕ್ಷಕರೊಬ್ಬರು ಪ್ರಧಾನಿಯವರಿಗೆ ಧನ್ಯವಾದ ಸಲ್ಲಿಸಿದರು. ಮತ್ತೊಬ್ಬ ಶಿಕ್ಷಕಿ ಸ್ತನ ಕ್ಯಾನ್ಸರ್ ಜಾಗೃತಿ ಕುರಿತು ತಮ್ಮ ಸಂಶೋಧನೆಯನ್ನು ವಿವರಿಸಿದಾಗ, ಕಾಶಿಯ ಸಂಸದರಾಗಿ ತಾವು ಕೂಡ ಅಲ್ಲಿ ಇಂತಹ ಉಚಿತ ತಪಾಸಣೆ ಮತ್ತು ಜಾಗೃತಿ ಅಭಿಯಾನ ಕೈಗೊಂಡಿದ್ದನ್ನು ಪ್ರಧಾನಿ ಮೋದಿ ಸ್ಮರಿಸಿದರು.

ಇದನ್ನೂ ಓದಿ: ಆರ್.ಜಿ. ಕರ್ ವೈದ್ಯೆ ಹತ್ಯೆ ಪ್ರಕರಣ: ಸಾಕ್ಷ್ಯ ನಾಶಕ್ಕೆ ಸಂಚು ರೂಪಿಸಿದ್ದ ಆರೋಪಿ ಬೆಂಗಳೂರಿನಲ್ಲಿ ಬಂಧನ!

Leave a Reply

Your email address will not be published. Required fields are marked *