TOP NEWS

DK Shivakumar: ನಾಳೆ ಬೆಂಗಳೂರು ನಿವಾಸಿಗಳಿಗೆ ಸಿಗಲಿದೆ ಗುಡ್‌ನ್ಯೂಸ್‌, ಏನಿದು ಡಿಕೆಶಿ ಗ್ಯಾರಂಟಿ?

Bengaluru people curiosity increased regarding dk shivakumar big announcement on may 13

ಬೆಂಗಳೂರು: ಅಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರು ರಾಜಧಾನಿಯ ಜನತೆಗೆ ಹೊಸ ‘ಗ್ಯಾರಂಟಿ’ಗಳನ್ನು ನೀಡುವ ಸುಳಿವು ನೀಡಿದ್ದಾರೆ. ಸೋಮವಾರ ಈ ಬಗ್ಗೆ ಮಾತನಾಡಿದ ಅವರು, ಬೆಂಗಳೂರಿಗಾಗಿ ವಿಶೇಷ ಯೋಜನೆಗಳನ್ನು ಸಿದ್ಧಪಡಿಸಲಾಗಿದ್ದು, ಇದರ ಸಂಪೂರ್ಣ ವಿವರಗಳನ್ನು ಮೇ 13ರಂದು ಹಂಚಿಕೊಳ್ಳಲಾಗುವುದು ಎಂದು ತಿಳಿಸಿದರು. ಈಗಾಗಲೇ ಮೇ 16ರಿಂದ ‘ನನ್ನ ಖಾತೆ’ ಅಭಿಯಾನ ಮತ್ತು ಪ್ರತಿ ಶನಿವಾರ ನಗರಾದ್ಯಂತ ‘ಖಾತೆ ಮೇಳ’ಗಳನ್ನು ನಡೆಸುವುದಾಗಿ ಘೋಷಿಸಿರುವ ಅವರು, ಈಗ ನೀಡಲಿರುವ ಹೊಸ ಆಶ್ವಾಸನೆಗಳು ಅದರ ಭಾಗವೇ ಅಥವಾ ಸಂಪೂರ್ಣ ಹೊಸ ಯೋಜನೆಯೇ ಎಂಬ ಕುತೂಹಲ ಮೂಡಿದೆ.

ಚರ್ಚೆಗೆ ಕಾರಣವಾದ ಈ ಘೋಷಣೆ

ಈ ಮಹತ್ವದ ಘೋಷಣೆಯು ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಭಾನುವಾರವಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರೊಂದಿಗೆ ಡಿ.ಕೆ. ಶಿವಕುಮಾರ್ ಸುದೀರ್ಘ ಸಮಾಲೋಚನೆ ನಡೆಸಿದ್ದರು. ಮುಂಬರುವ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಈ ‘ಬೆಂಗಳೂರು ಗ್ಯಾರಂಟಿ’ ಘೋಷಿಸಲು ಸರ್ಕಾರ ಮುಂದಾಗಿದೆ ಎನ್ನಲಾಗುತ್ತಿದೆ. ಬಿಬಿಎಂಪಿ ಚುನಾವಣೆ ನಡೆಸಲು ಸುಪ್ರೀಂ ಕೋರ್ಟ್ ನೀಡಿರುವ ಗಡುವನ್ನು ಇನ್ನೂ ಮೂರು ತಿಂಗಳು ವಿಸ್ತರಿಸುವಂತೆ ಕೋರುವ ಬಗ್ಗೆಯೂ ಈ ಸಭೆಯಲ್ಲಿ ಚರ್ಚಿಸಲಾಗಿದೆ.

ಒಂದು ವೇಳೆ ಸುಪ್ರೀಂ ಕೋರ್ಟ್ ಕಾಲಾವಕಾಶ ನೀಡದಿದ್ದರೆ ಜೂನ್ 30ರೊಳಗೆ ಚುನಾವಣೆ ನಡೆಸಬೇಕಾಗುತ್ತದೆ. ಆದರೆ, ಪಶ್ಚಿಮ ಏಷ್ಯಾದ ಬಿಕ್ಕಟ್ಟಿನಿಂದಾಗಿ ಡಾಂಬರು ಲಭ್ಯವಿಲ್ಲದೆ ನಗರದ ಅನೇಕ ರಸ್ತೆ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಮಳೆಗಾಲದ ಆರಂಭದಲ್ಲೇ ಚುನಾವಣೆ ಎದುರಿಸುವುದು ಆಡಳಿತ ಪಕ್ಷಕ್ಕೆ ಸವಾಲಾಗಬಹುದು ಎಂಬ ಆತಂಕವೂ ಇದೆ. ಅಲ್ಲದೆ, ರಾಷ್ಟ್ರೀಯ ಜನಗಣತಿ ಮತ್ತು ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕಾರ್ಯಗಳು ನಡೆಯುತ್ತಿರುವುದರಿಂದ ಜೂನ್ ಅಂತ್ಯದೊಳಗೆ ಚುನಾವಣೆ ನಡೆಸುವುದು ತಾಂತ್ರಿಕವಾಗಿ ಕಷ್ಟ ಎಂಬ ನಿಲುವನ್ನು ಸರ್ಕಾರ ಹೊಂದಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಪರಿಸ್ಥಿತಿಯನ್ನು ವಿವರಿಸಿ ಮೂರು ತಿಂಗಳ ವಿಸ್ತರಣೆ ಕೋರಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ತಿಳಿಸಿದ್ದಾರೆ.

ಮತ್ತೊಂದೆಡೆ, ಈ ಚುನಾವಣೆಗಳು ರಾಜ್ಯ ರಾಜಕೀಯದ ನಾಯಕತ್ವ ಬದಲಾವಣೆಯ ಚರ್ಚೆಯ ಮೇಲೂ ಪ್ರಭಾವ ಬೀರಲಿವೆ. ಮುಖ್ಯಮಂತ್ರಿ ಸ್ಥಾನಕ್ಕಾಗಿ ಪಟ್ಟು ಹಿಡಿದಿರುವ ಡಿ.ಕೆ. ಶಿವಕುಮಾರ್ ಅವರಿಗೆ ಬೆಂಗಳೂರು ಚುನಾವಣೆಯ ಫಲಿತಾಂಶ ಅತ್ಯಂತ ನಿರ್ಣಾಯಕವಾಗಿದೆ. ನಗರದ ಅಭಿವೃದ್ಧಿ ಮತ್ತು ಪಕ್ಷದ ಸಂಘಟನೆ ಎರಡೂ ಅವರ ಜವಾಬ್ದಾರಿಯಾಗಿರುವುದರಿಂದ, ಈ ‘ಹೊಸ ಗ್ಯಾರಂಟಿ’ಗಳ ಮೂಲಕ ಜನರ ವಿಶ್ವಾಸ ಗಳಿಸಲು ಅವರು ಮುಂದಾಗಿದ್ದಾರೆ. ರಾಜಧಾನಿಯ ಜನರ ದೈನಂದಿನ ಸಮಸ್ಯೆಗಳಿಗೆ ಈ ಯೋಜನೆಗಳು ಎಷ್ಟರಮಟ್ಟಿಗೆ ಪರಿಹಾರ ನೀಡಲಿವೆ ಎಂಬುದನ್ನು ಮೇ 13ರಂದು ಕಾದು ನೋಡಬೇಕಿದೆ.

ಇದನ್ನೂ ಓದಿ: ನೀಟ್ ಪರೀಕ್ಷೆ ಅಕ್ರಮ: ಕೇಂದ್ರ ಸರ್ಕಾರದ ವಿರುದ್ಧ ಸಚಿವ ಮಧು ಬಂಗಾರಪ್ಪ ವಾಗ್ದಾಳಿ, “ವಿದ್ಯಾರ್ಥಿಗಳ ಬದುಕು ಬೀದಿಗೆ” ಎಂದು ಆಕ್ರೋಶ

Leave a Reply

Your email address will not be published. Required fields are marked *