TOP NEWS

Ration Rice: ಮಡಿಕೇರಿಯಲ್ಲಿ ಪಡಿತರ ಅಕ್ಕಿ ಕಾಳಸಂತೆ ಶಂಕೆ: 60ಕ್ಕೂ ಹೆಚ್ಚು ಮೂಟೆ ಜಪ್ತಿ, ಸಾಗಾಟ ತಡೆದ ಸಾರ್ವಜನಿಕರು!

Madikeri Crackdown Vehicle Seized with 60 Bags of Ration Rice Meant for Black Market

ಮಡಿಕೇರಿ: ಬಡಜನರಿಗೆ ವಿತರಿಸಬೇಕಿದ್ದ ಸರ್ಕಾರದ ಪಡಿತರ ಅಕ್ಕಿಯನ್ನು (Ration Rice) ಅಕ್ರಮವಾಗಿ ಸಂಗ್ರಹಿಸಿ ಕಾಳಸಂತೆಯಲ್ಲಿ ಮಾರಾಟ ಮಾಡಲು ಸಾಗಿಸಲಾಗುತ್ತಿತ್ತೇ ಎಂಬ ಬಲವಾದ ಅನುಮಾನ ಇದೀಗ ಮಡಿಕೇರಿಯಲ್ಲಿ ವ್ಯಕ್ತವಾಗಿದೆ. ನಗರದ ಸಂಪಿಗೆಕಟ್ಟೆ ಸಮೀಪ ಅನುಮಾನಾಸ್ಪದ ರೀತಿಯಲ್ಲಿ ಚಲಿಸುತ್ತಿದ್ದ ವಾಹನವೊಂದನ್ನು ಕೊಡಗು ಅಭಿವೃದ್ಧಿ ಸಮಿತಿಯ ಸದಸ್ಯರು ತಡೆದು ತಪಾಸಣೆ ನಡೆಸಿದಾಗ ಬೃಹತ್ ಪ್ರಮಾಣದ ಅಕ್ಕಿ ಚೀಲಗಳು ಪತ್ತೆಯಾಗಿವೆ.

60ಕ್ಕೂ ಹೆಚ್ಚು ಮೂಟೆ ಅಕ್ಕಿ ವಶ

ಸಮಿತಿಯ ಸದಸ್ಯರು ವಾಹನವನ್ನು ತಪಾಸಣೆ ನಡೆಸಿದ ಸಂದರ್ಭದಲ್ಲಿ ತಲಾ 25 ಕೆಜಿ ತೂಕದ 60ಕ್ಕೂ ಅಧಿಕ ಅಕ್ಕಿ ಮೂಟೆಗಳು ಪತ್ತೆಯಾಗಿವೆ. ಇವು ಪಡಿತರ ಯೋಜನೆಯಡಿ ಬಡವರಿಗೆ ತಲುಪಬೇಕಿದ್ದ ಅಕ್ಕಿ ಇರಬಹುದೆಂದು ಶಂಕಿಸಿದ ಸದಸ್ಯರು, ತಕ್ಷಣವೇ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಆಹಾರ ಪರಿವೀಕ್ಷಕಿ (ಫುಡ್ ಇನ್‌ಸ್ಪೆಕ್ಟರ್) ವೀಣಾ ಅವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ನಂತರ ಮಡಿಕೇರಿ ನಗರ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಶ್ರೀಧರ್ ಅವರು ಸ್ಥಳಕ್ಕೆ ಭೇಟಿ ನೀಡಿ, ವಾಹನ ಮತ್ತು ಅಕ್ಕಿ ಮೂಟೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ರೈಸ್ ಮಿಲ್‌ನಿಂದ ಕೋಡ್ಲಿಪೇಟೆಗೆ ಸಾಗಾಟ?

ಪ್ರಾಥಮಿಕ ತನಿಖೆ ನಡೆಸಿದ ಆಹಾರ ಇಲಾಖೆಯ ಅಧಿಕಾರಿಗಳು, ವಶಪಡಿಸಿಕೊಂಡಿರುವ ಅಕ್ಕಿ ಮೇಲ್ನೋಟಕ್ಕೆ ಸಹಕಾರ ಸಂಘಗಳ (ಸೊಸೈಟಿ) ಮೂಲಕ ವಿತರಿಸಲಾಗುವ ಪಡಿತರ ಅಕ್ಕಿಯನ್ನೇ ಹೋಲುತ್ತಿದೆ ಎಂದು ತಿಳಿಸಿದ್ದಾರೆ. ಮಡಿಕೇರಿ ನಗರದ ಮೋಹನ್ ಎಂಬುವವರಿಗೆ ಸೇರಿದ ರೈಸ್ ಮಿಲ್‌ನಿಂದ ಈ ಅಕ್ಕಿಯನ್ನು ಸಂಗ್ರಹಿಸಿ, ವಾಹನದ ಮೂಲಕ ಕೋಡ್ಲಿಪೇಟೆಗೆ ಸಾಗಿಸಲು ಯೋಜಿಸಲಾಗಿತ್ತು ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.

ರೇಷನ್ ಕಾರ್ಡ್ ರದ್ದುಗೊಳಿಸುವ ಎಚ್ಚರಿಕೆ

ಗ್ರಾಮೀಣ ಭಾಗಗಳಲ್ಲಿ ಕೆಲವರು ತಮಗೆ ಸಿಗುವ ಉಚಿತ ಅಥವಾ ರಿಯಾಯಿತಿ ದರದ ಪಡಿತರ ಅಕ್ಕಿಯನ್ನು ಸ್ವಂತ ಬಳಕೆಗೆ ಬಳಸದೆ, ಹಣದಾಸೆಗೆ ಮಧ್ಯವರ್ತಿಗಳಿಗೆ ಮಾರಾಟ ಮಾಡುತ್ತಿರುವ ಜಾಲ ಸಕ್ರಿಯವಾಗಿ ಕೆಲಸ ಮಾಡುತ್ತಿದೆಯೇ ಎಂಬ ಸಂಶಯ ಮೂಡಿದೆ. ಈ ಹಿನ್ನೆಲೆಯಲ್ಲಿ ಅಕ್ಕಿಯ ನೈಜ ಮೂಲ ಹಾಗೂ ಇದರ ಹಿಂದೆ ಇರುವ ಅಕ್ರಮ ಜಾಲದ ಕುರಿತು ಪೊಲೀಸರು ಮತ್ತು ಆಹಾರ ಇಲಾಖೆ ಅಧಿಕಾರಿಗಳು ಜಂಟಿ ತನಿಖೆ ಕೈಗೊಂಡಿದ್ದಾರೆ.

ಈ ಕುರಿತು ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯ ವೇಳೆ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಮಾರಾಟ ಮಾಡಿದ್ದು ದೃಢಪಟ್ಟರೆ, ಅಂತಹ ಫಲಾನುಭವಿಗಳ ರೇಷನ್ ಕಾರ್ಡ್‌ಗಳನ್ನು ತಕ್ಷಣವೇ ರದ್ದುಗೊಳಿಸಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ. ಬಡವರ ಪಾಲಿನ ಆಹಾರ ಧಾನ್ಯಗಳು ಕಾಳಸಂತೆಕೋರರ ಪಾಲಾಗುತ್ತಿರುವುದಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇಂತಹ ಅಕ್ರಮ ಸಾಗಾಟಕ್ಕೆ ಶಾಶ್ವತ ತಡೆ ನೀಡಬೇಕೆಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಯುವ ದಸರಾಗೆ ಭಾರತೀಯ ನೃತ್ಯ ಗಾರುಡಿಗನ ಮೆರುಗು: ಮೈಸೂರು ಆಹ್ವಾನ ಸ್ವೀಕರಿಸಿದ ನಟ ಪ್ರಭುದೇವ್

Leave a Reply

Your email address will not be published. Required fields are marked *