ಸಾಗರ: ಸ್ವಾತಂತ್ರ್ಯೋತ್ಸವದ (Sagara) ಸಂಭ್ರಮದ ನಡುವೆಯೇ ವಿಶಿಷ್ಟ ರೀತಿಯಲ್ಲಿ ದೇಶಪ್ರೇಮ ಮೆರೆಯುವ ಕಾರ್ಯಕ್ರಮವೊಂದು ನೆರವೇರಿದೆ. ನಡುರಾತ್ರಿಯ ಕತ್ತಲಿನಲ್ಲಿ ಸಿಗಂದೂರು ಸೇತುವೆಯ ಮೇಲೆ ಧ್ವಜಾರೋಹಣ ನೆರವೇರಿಸಲಾಗಿದೆ.
ಧ್ವಜಾರೋಹಣ ನೆರವೇರಿಸಿದ ಪ್ರಸನ್ನ ಕೆರೆಕೈ
ಈ ಅದ್ಭುತ ಕಾರ್ಯಕ್ರಮಕ್ಕೆ ಸ್ಥಳೀಯ ನಾಯಕ ಪ್ರಸನ್ನ ಕೆರೆಕೈ ಅವರು ಧ್ವಜಾರೋಹಣ ನೆರವೇರಿಸುವ ಮೂಲಕ ಅರ್ಥಪೂರ್ಣ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮನ್ನೇ ಸಮರ್ಪಿಸಿಕೊಂಡ ಮಹಾತ್ಮರನ್ನು ಸ್ಮರಿಸಿದ ಅವರು, ಇಂದಿನ ಯುವಜನತೆ ದೇಶಕ್ಕಾಗಿ ತ್ಯಾಗ ಮಾಡಿದ ಮಹನೀಯರ ಆದರ್ಶಗಳನ್ನು ಮೈಗೂಡಿಸಿಕೊಂಡು ಅವರ ಹಾದಿಯಲ್ಲಿ ಸಾಗಬೇಕೆಂದು ಕರೆ ನೀಡಿದರು.
ಸೇತುವೆಯ ಸ್ವಚ್ಛತೆ ಕಾಪಾಡಿ
ಇದೇ ವೇಳೆ ಸೇತುವೆಯ ಮೇಲಿನ ಅಶುಚಿತ್ವದ ಕುರಿತು ತೀವ್ರ ಬೇಸರ ವ್ಯಕ್ತಪಡಿಸಿದ ಪ್ರಸನ್ನ ಕೆರೆಕೈ ಅವರು, ದಿನನಿತ್ಯ ಈ ಸೇತುವೆಯನ್ನು ಬಳಸುವ ಸಾರ್ವಜನಿಕರು ಹಾಗೂ ಯುವಕರು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಮುಖ್ಯವಾಗಿ ಸೇತುವೆ ನೋಡಲು ಬರುವ ಪ್ರವಾಸಿಗರು ಆಸ್ತಿಯನ್ನು ಗಲೀಜು ಮಾಡದೆ ನೈರ್ಮಲ್ಯ ಕಾಪಾಡಬೇಕು ಎಂದಿರುವ ಅವರು, ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ಕಿವಿಮಾತು ಹೇಳಿದರು.

ಈ ಅರ್ಥಪೂರ್ಣ ಹಾಗೂ ವಿಶಿಷ್ಟ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಊರಿನ ಪ್ರಮುಖರಾದ ರಾಜೇಂದ್ರ ಅವಿನಹಳ್ಳಿ, ಗಿರೀಶ್, ಜಯರಾಮ್ ಶೆಟ್ರು, ರೂಪ ರಮೇಶ್, ಗಣಪತಿ , ಶ್ರೀಧರ್ ಚುಟ್ಟಿಕೆರೆ ಹಾಗೂ ವಸಂತ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದು, ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾದರು.
ವರದಿ: ಪ್ರಶಾಂತ್ ಭಟ್
ಇದನ್ನೂ ಓದಿ: ಶರಾವತಿ ಸಂತ್ರಸ್ತರ ಶಾಪ ವಿಮೋಚನಾ ಸೇತುವೆ ಮೇಲೆ 80ನೇ ಸ್ವಾತಂತ್ರ್ಯ ದಿನಾಚರಣೆ: ಆಗಸ್ಟ್ 14ರ ಮಧ್ಯರಾತ್ರಿ ಧ್ವಜಾರೋಹಣ
