TOP NEWS

Narendra Modi: ಮೋದಿ ವಿಡಿಯೋಗೆ ಸಿಜೆಪಿ ನಾಯಕನ ಬಾಲಿಶ ಕಾಮೆಂಟ್: ಜ್ಞಾನವಿಲ್ಲದ ಕೆಳಮಟ್ಟದ ಟ್ರೋಲ್ ವಿರುದ್ಧ ನೆಟ್ಟಿಗರ ತೀವ್ರ ಆಕ್ರೋಶ!

CJP Leader Faces Backlash for Childish Remarks on PM Narendra Modis Video Netizens Call it Cheap Trolling

ನವದೆಹಲಿ: ಪರೀಕ್ಷಾ ಅಕ್ರಮ ತಡೆ ತಿದ್ದುಪಡಿ ಕಾಯ್ದೆ-2026 ಸಂಸತ್ತಿನಲ್ಲಿ ಅಂಗೀಕಾರಗೊಂಡಿರುವುದನ್ನು ಶ್ಲಾಘಿಸಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಬಿಡುಗಡೆ ಮಾಡಿರುವ ಸೆಲ್ಫಿ ವಿಡಿಯೋ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಪ್ರಧಾನಿ ಮೋದಿ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿರುವ ಕಾಕರೂಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜೀತ್ ದಿಪ್ಕೆ, ದೇಶದ ಭವಿಷ್ಯಕ್ಕಿಂತ ನಿಮ್ಮ ಚರ್ಮವೇ ಹೆಚ್ಚು ಹೊಳೆಯುತ್ತಿದೆ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ವ್ಯಂಗ್ಯವಾಡಿದ್ದಾರೆ.

ಸೆಲ್ಫಿ ವಿಡಿಯೋ ಹಂಚಿಕೊಂಡ ಮೋದಿ

ಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಹೊಸ ತಿದ್ದುಪಡಿ ಮಸೂದೆಯನ್ನು ಜಾರಿಗೆ ತಂದಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸೆಲ್ಫಿ ಶೈಲಿಯ ವಿಡಿಯೋ ಹಂಚಿಕೊಂಡಿದ್ದ ಪ್ರಧಾನಿ ಮೋದಿ, ಪೇಪರ್ ಮಾಫಿಯಾ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ತಂತ್ರಜ್ಞಾನದ ಬಳಕೆಯ ಮೂಲಕ ಪರೀಕ್ಷಾ ವ್ಯವಸ್ಥೆಯನ್ನು ಮತ್ತಷ್ಟು ಪಾರದರ್ಶಕಗೊಳಿಸಲಾಗುವುದು ಎಂದು ಭರವಸೆ ನೀಡಿದ್ದರು. ಪರೀಕ್ಷಾ ಅಕ್ರಮಗಳ ವಿಷಯಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಬಿಡುಗಡೆ ಮಾಡುತ್ತಿರುವ ನಾಲ್ಕನೇ ಸೆಲ್ಫಿ ವಿಡಿಯೋ ಇದಾಗಿದ್ದು, ಇದು ವಿರೋಧ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.

ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗುವುದು ಒಳಿತು

ಪ್ರಧಾನಿ ಮೋದಿ ಅವರ ಈ ವಿಡಿಯೋ ಪ್ರಚಾರವನ್ನು ತೀವ್ರವಾಗಿ ಟೀಕಿಸಿರುವ ಅಭಿಜೀತ್ ದಿಪ್ಕೆ, ಪ್ರಧಾನಿಯವರು ರಾಜಕಾರಣ ಬಿಟ್ಟು ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗುವುದು ಒಳಿತು ಎಂದು ಲೇವಡಿ ಮಾಡಿದ್ದಾರೆ. ಮಹಾರಾಷ್ಟ್ರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಅವರು, ಮೋದಿ ಅವರು ವಿಡಿಯೋಗಳನ್ನು ತುಂಬಾ ಚೆನ್ನಾಗಿ ಮಾಡುತ್ತಾರೆ, ಹಾಗಾಗಿ ಅವರು ಪ್ರಧಾನಿ ಹುದ್ದೆಯನ್ನು ಬೇರೆಯವರಿಗೆ ಬಿಟ್ಟುಕೊಟ್ಟು ಪೂರ್ಣ ಪ್ರಮಾಣದ ಇನ್‌ಫ್ಲುಯೆನ್ಸರ್ ಆಗಬೇಕು ಎಂದು ಲೇವಡಿ ಮಾಡಿದ್ದರು. ಇದೇ ವಿಷಯವಾಗಿ ಸಂಸತ್ತಿನಲ್ಲಿ ಧ್ವನಿ ಎತ್ತಿದ್ದ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಕೂಡ, ಹೊಸ ಹೊಸ ಕೋನಗಳಲ್ಲಿ ವಿಡಿಯೋ ಮಾಡುವುದರಿಂದ ಯುವ ಪೀಳಿಗೆಯ ಬೆಂಬಲ ಸಿಗುವುದಿಲ್ಲ, ಪ್ರಧಾನಿಯವರು ಕ್ಯಾಮೆರಾ ಆಂಗಲ್ ಬದಲಾಯಿಸುವ ಬದಲು ತಮ್ಮ ಹೃದಯದ ಆಂಗಲ್ ಬದಲಾಯಿಸಬೇಕು ಎಂದು ಟೀಕಿಸಿದ್ದರು.

ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ನೀಟ್ (NEET-UG) ಪರೀಕ್ಷೆ ಪೇಪರ್ ಸೋರಿಕೆ ಹಗರಣದ ಬಳಿಕ ಶಿಕ್ಷಣ ಸಚಿವರಾಗಿದ್ದ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದರು ಮತ್ತು ಪ್ರಲ್ಹಾದ್ ಜೋಶಿ ಅವರು ಆ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು 2024ರ ಮೂಲ ಕಾಯ್ದೆಗೆ ತಿದ್ದುಪಡಿ ತಂದು, ತಪ್ಪಿತಸ್ಥರಿಗೆ ಕಠಿಣ ಜೈಲು ಶಿಕ್ಷೆ, ಭಾರಿ ದಂಡ ಹಾಗೂ ಶೀಘ್ರ ತನಿಖೆಗಾಗಿ ಫಾಸ್ಟ್‌ ಟ್ರ್ಯಾಕ್ ನ್ಯಾಯಾಲಯಗಳನ್ನು ಸ್ಥಾಪಿಸುವ ನಿಯಮವನ್ನು ಒಳಗೊಂಡ ಹೊಸ ಬಿಲ್ ಅನ್ನು ಸಂಸತ್ತಿನಲ್ಲಿ ಅಂಗೀಕರಿಸಿದೆ.

ಆದರೆ, ಸಿಜೆಪಿ (CJP) ಪಕ್ಷವು ಈ ಹೊಸ ಕಾನೂನನ್ನು ಕಟುವಾಗಿ ಟೀಕಿಸಿದೆ. ಪೇಪರ್ ಸೋರಿಕೆಯಾದ ನಂತರ ಶಿಕ್ಷೆ ನೀಡುವುದರ ಬಗ್ಗೆ ಕಾನೂನಿನಲ್ಲಿ ಹೇಳಲಾಗಿದೆಯೇ ಹೊರತು, ಪೇಪರ್ ಸೋರಿಕೆಯನ್ನು ಮೊದಲೇ ತಡೆಯಲು ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬ ಉಲ್ಲೇಖವಿಲ್ಲ ಎಂದು ಪಕ್ಷದ ರಾಷ್ಟ್ರೀಯ ವಕ್ತಾರ ಅಶುತೋಷ್ ರಂಕಾ ಆಕ್ಷೇಪಿಸಿದ್ದಾರೆ. ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ವ್ಯವಸ್ಥೆಯನ್ನು ಸಂಪೂರ್ಣವಾಗಿ ಸುಧಾರಿಸದ ಹೊರತು ಇಂತಹ ಕಾನೂನುಗಳಿಂದ ಯಾವುದೇ ಪ್ರಯೋಜನವಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಅಷ್ಟೇ ಅಲ್ಲದೆ, ಮೂರು ದಿನಗಳ ಹಿಂದೆ ಫಾಸ್ಟ್‌ ಟ್ರ್ಯಾಕ್ ಕೋರ್ಟ್ ರಚನೆಯ ಭರವಸೆ ನೀಡಲಾಗಿತ್ತು, ಆದರೆ ಸಿಬಿಐ ಪರ ವಕೀಲರು ಗೈರಾಗಿದ್ದರಿಂದ ಮೊದಲ ವಿಚಾರಣೆಯೇ ಮುಂದೂಡಲ್ಪಟ್ಟಿದೆ. ಸರ್ಕಾರದ ಉದ್ದೇಶ ಸರಿಯಿಲ್ಲದಿದ್ದರೆ ಇಂತಹ ಎಷ್ಟು ಕಾನೂನುಗಳು ಬಂದರೂ ಪರೀಕ್ಷಾ ಅಕ್ರಮಗಳನ್ನು ತಡೆಯಲು ಸಾಧ್ಯವಿಲ್ಲ ಎಂದು ಅಭಿಜೀತ್ ದಿಪ್ಕೆ ಆಕ್ರೋಶ ಹೊರಹಾಕಿದ್ದಾರೆ.

ಇನ್ನು ಈ ಗಂಭೀರ ವಿಷಯದ ಕುರಿತು ಕಾಕರೂಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜೀತ್ ದಿಪ್ಕೆ ಮಾಡಿರುವ ಕಾಮೆಂಟ್ ಈಗ ಸಾರ್ವಜನಿಕರ ಮತ್ತು ನೆಟ್ಟಿಗರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ದೇಶದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಂಬಂಧಿಸಿದ ಪೇಪರ್ ಲೀಕ್ ಕಾಯ್ದೆಯ ಬಗ್ಗೆ ಬೌದ್ಧಿಕವಾಗಿ ಅಥವಾ ಸಕಾರಾತ್ಮಕವಾಗಿ ಚರ್ಚಿಸುವ ಬದಲು, ಸಿಜೆಪಿ ನಾಯಕ ಅಭಿಜೀತ್ ದಿಪ್ಕೆ ಕೆಳಮಟ್ಟದ ಟ್ರೋಲ್ ಮಾಡುವವರಂತೆ ವರ್ತಿಸಿದ್ದಾರೆ. “ದೇಶದ ಭವಿಷ್ಯಕ್ಕಿಂತ ನಿಮ್ಮ ಚರ್ಮವೇ ಹೆಚ್ಚು ಹೊಳೆಯುತ್ತಿದೆ” ಎಂದು ಪ್ರಧಾನಿ ಮೋದಿಯವರ ವೈಯಕ್ತಿಕ ಲುಕ್ ಮತ್ತು ಚರ್ಮದ ಬಣ್ಣವನ್ನು ಗುರಿಯಾಗಿಸಿ ಅವರು ಕಾಮೆಂಟ್ ಮಾಡಿದ್ದಾರೆ. ಒಬ್ಬ ರಾಜಕೀಯ ಪಕ್ಷದ ಮುಖ್ಯಸ್ಥರಾಗಿ ಇಂತಹ ಗಂಭೀರ ವಿಷಯದಲ್ಲಿ ಯಾವುದೇ ಕನಿಷ್ಠ ಜ್ಞಾನವಿಲ್ಲದೆ, ತೀರ ಕೀಳುಮಟ್ಟದ ವೈಯಕ್ತಿಕ ನಿಂದನೆಗೆ ಇಳಿದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ.

ಒಂದು ಕಡೆ ಪೇಪರ್ ಸೋರಿಕೆ ತಡೆಯಲು ಫಾಸ್ಟ್‌ ಟ್ರ್ಯಾಕ್ ನ್ಯಾಯಾಲಯ ಹಾಗೂ ಕಠಿಣ ತನಿಖೆಯಂತಹ ಮಹತ್ವದ ಸುಧಾರಣೆಗಳ ಬಗ್ಗೆ ಕಾನೂನು ರೂಪಿತವಾಗುತ್ತಿದ್ದರೆ, ವಿರೋಧ ಪಕ್ಷದ ನಾಯಕರು ಕೇವಲ ಕ್ಯಾಮೆರಾ ಆಂಗಲ್ ಮತ್ತು ಪ್ರಧಾನಿಯವರ ಮುಖದ ಕಾಂತಿಯ ಬಗ್ಗೆ ಮಾತನಾಡುತ್ತಿರುವುದು ಅವರ ರಾಜಕೀಯ ದಿವಾಳಿತನವನ್ನು ತೋರಿಸುತ್ತದೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ. ಗಂಭೀರ ರಾಜಕೀಯ ಮುತ್ಸದ್ದಿತನ ಪ್ರದರ್ಶಿಸುವ ಬದಲು ಸಾಮಾಜಿಕ ಜಾಲತಾಣದ ಕಸದಂತಹ (Trash) ಟ್ರೋಲ್‌ಗಳ ಮೂಲಕ ಪ್ರಚಾರ ಗಿಟ್ಟಿಸಿಕೊಳ್ಳಲು ಸಿಜೆಪಿ ಯತ್ನಿಸುತ್ತಿದೆ ಎಂದು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: ಪಂಜಾಬ್ ಪೇಪರ್ ಲೀಕ್ ವಿವಾದ: ದೆಹಲಿ ಎಎಪಿ ಕಚೇರಿ ಎದುರು ಬಿಜೆಪಿ ಭಾರಿ ಪ್ರತಿಭಟನೆ

Leave a Reply

Your email address will not be published. Required fields are marked *