ಚಿಕ್ಕಬಳ್ಳಾಪುರ: ಪ್ರಮುಖ ಹಾಗೂ ಜನಪ್ರಿಯ ಕಂಪನಿಗಳ ಬ್ರ್ಯಾಂಡ್ ಹೆಸರನ್ನು ದುರುಪಯೋಗಪಡಿಸಿಕೊಂಡು ನಕಲಿ ಕೀಟನಾಶಕಗಳನ್ನು ತಯಾರಿಸಿ (Crime) ಮುಗ್ಧ ರೈತರಿಗೆ ವಂಚಿಸುತ್ತಿದ್ದ ಬೃಹತ್ ದಂಧೆಯನ್ನು ಕೃಷಿ ಇಲಾಖೆಯ ಜಾಗೃತ ದಳ ಭೇದಿಸಿದೆ. ನಗರದ ವಸತಿ ಗೃಹವೊಂದರ ಮೇಲೆ ಅನಿರೀಕ್ಷಿತ ದಾಳಿ ನಡೆಸಿದ ಅಧಿಕಾರಿಗಳ ತಂಡ, ಲಕ್ಷಾಂತರ ರೂಪಾಯಿ ಮೌಲ್ಯದ ಖೋಟಾ ಕೀಟನಾಶಕ ಹಾಗೂ ಪ್ಯಾಕಿಂಗ್ ಪರಿಕರಗಳನ್ನು ವಶಪಡಿಸಿಕೊಂಡಿದೆ.
ಖೋಟಾ ಜಿಎಸ್ಟಿ ಬಳಸಿ ವಂಚನೆ: ಕಾಲಾವಧಿ ಮುಗಿದಿರುವ ಹಳೆಯ ಕೃಷಿ ರಾಸಾಯನಿಕಗಳನ್ನು ಅನಧಿಕೃತವಾಗಿ ಮಿಶ್ರಣ ಮಾಡಿ ಈ ನಕಲಿ ಕೀಟನಾಶಕವನ್ನು ಸಿದ್ಧಪಡಿಸಲಾಗುತ್ತಿತ್ತು. ದೇಶದ ಪ್ರಸಿದ್ಧ 11 ರಿಂದ 12 ಕಂಪನಿಗಳ ಹುಸಿ ಲೇಬಲ್ ಹಾಗೂ ನಕಲಿ ಜಿಎಸ್ಟಿ (GST) ಸಂಖ್ಯೆಗಳನ್ನು ಸೃಷ್ಟಿಸಿ ಇದನ್ನು ಮಾರುಕಟ್ಟೆಗೆ ಬಿಡಲಾಗುತ್ತಿತ್ತು. ದಾಳಿಯ ಸಂದರ್ಭದಲ್ಲಿ ಸುಮಾರು 200 ಲೀಟರ್ಗೂ ಅಧಿಕ ಪ್ರಮಾಣದ ಕೃತಕ ರಾಸಾಯನಿಕ ದ್ರಾವಣ, ಖಾಲಿ ಬಾಟಲಿಗಳು ಮತ್ತು ನಕಲಿ ಲೇಬಲ್ಗಳನ್ನು ಜಪ್ತಿ ಮಾಡಲಾಗಿದೆ.
‘ಬೆಳೆ ತಜ್ಞ’ನ ಸೋಗಿನಲ್ಲಿ ಜಮೀನಿಗೇ ಎಂಟ್ರಿ: ಬಂಧಿತ ಆರೋಪಿ ಸೋಮಸುಂದರ್ ತಾನೊಬ್ಬ ಕೃಷಿ ತಜ್ಞ ಎಂದು ರೈತರ ಮುಂದೆ ಬಿಂಬಿಸಿಕೊಳ್ಳುತ್ತಿದ್ದ. ವಿಶೇಷವಾಗಿ ದ್ರಾಕ್ಷಿ, ಮಾವು ಹಾಗೂ ದಾಳಿಂಬೆ ಬೆಳೆಯುವ ತೋಟಗಾರಿಕಾ ರೈತರನ್ನು ಗುರಿಯಾಗಿಸಿಕೊಂಡು ಅವರ ನಂಬಿಕೆ ಗಳಿಸುತ್ತಿದ್ದ. ಪ್ರತಿದಿನ ಕನಿಷ್ಠ 50 ಲೀಟರ್ ನಕಲಿ ಔಷಧ ತಯಾರಿಸುತ್ತಿದ್ದ ಈತ, ನೇರವಾಗಿ ರೈತರ ಜಮೀನುಗಳಿಗೇ ತೆರಳಿ ವಿತರಣೆ ಮಾಡುತ್ತಿದ್ದ. ಅಧಿಕಾರಿಗಳ ತೀವ್ರ ವಿಚಾರಣೆ ವೇಳೆ ತಾನು ನಕಲಿ ಕೀಟನಾಶಕ ದಂಧೆ ನಡೆಸುತ್ತಿರುವುದನ್ನು ಒಪ್ಪಿಕೊಂಡಿರುವ ಆರೋಪಿ, ಕೇವಲ ಮೂರು ದಿನಗಳ ಹಿಂದಷ್ಟೇ ಈ ಕೆಲಸ ಆರಂಭಿಸಿದ್ದಾಗಿ ಹೇಳಿಕೆ ನೀಡಿದ್ದಾನೆ.
ಅಧಿಕೃತ ಅಂಗಡಿಗಳಲ್ಲೇ ಖರೀದಿಸಿ – ಕೃಷಿ ಇಲಾಖೆ ಮನವಿ: ಇಂತಹ ನಕಲಿ ಮತ್ತು ಕಳಪೆ ಗುಣಮಟ್ಟದ ರಾಸಾಯನಿಕಗಳ ಬಳಕೆಯಿಂದಾಗಿ ಕೈಗೆ ಬಂದ ಬೆಳೆ ನಾಶವಾಗುವುದಲ್ಲದೆ, ಜಮೀನಿನ ಮಣ್ಣಿನ ಗುಣಮಟ್ಟ ಹಾಗೂ ಪರಿಸರದ ಮೇಲೂ ಗಂಭೀರ ಪರಿಣಾಮ ಬೀರಲಿದೆ ಎಂದು ಕೃಷಿ ಜಾಗೃತ ದಳದ ಅಧಿಕಾರಿ ಮೋಹನ್ ಎಚ್ಚರಿಸಿದ್ದಾರೆ. ಹೀಗಾಗಿ ರೈತರು ಯಾವುದೇ ಕಾರಣಕ್ಕೂ ಇಂತಹವರ ಆಮಿಷಕ್ಕೆ ಒಳಗಾಗದೆ, ಅಧಿಕೃತ ಪರವಾನಗಿ ಹೊಂದಿರುವ ಮಾರಾಟಗಾರರಿಂದ ಸೂಕ್ತ ರಸೀದಿ ಪಡೆದೇ ಕೀಟನಾಶಕಗಳನ್ನು ಖರೀದಿಸಬೇಕು ಎಂದು ಅವರು ಕೋರಿದ್ದಾರೆ. ಸದ್ಯ ಈ ಜಾಲದ ವಿರುದ್ಧ ಚಿಕ್ಕಬಳ್ಳಾಪುರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ.
ಇದನ್ನೂ ಓದಿ: ಸೀರೆ ತರಲಿಲ್ಲವೆಂದು ಪತಿಗೇ ಬಿತ್ತು ಧರ್ಮದೇಟು: ಕುಕ್ಕರ್ ಮುಚ್ಚಳದಿಂದ ಜಜ್ಜಿ, ಕತ್ತು ಹಿಸುಕಿ ಕೊಂದ ಪಾಪಿ ಪತ್ನಿ!
