ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಯುದ್ಧದ ಭೀತಿಯಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಅಡುಗೆ ಅನಿಲದ (LPG) ಬೆಲೆ ಗಗನಕ್ಕೇರುತ್ತಿದ್ದರೂ, ಕೇಂದ್ರ ಸರ್ಕಾರವು ದೇಶದ ಗ್ರಾಹಕರ ಮೇಲೆ ಇದರ ಹೊರೆ ಬೀಳದಂತೆ ಭಾರಿ ಪ್ರಮಾಣದ ಸಬ್ಸಿಡಿಯನ್ನು ತಾನೇ ಭರಿಸುತ್ತಿದೆ ಎಂದು ಕೇಂದ್ರ ಸರ್ಕಾರ ಗುರುವಾರ ಲೋಕಸಭೆಯಲ್ಲಿ ತಿಳಿಸಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ದರಗಳು ತೀವ್ರವಾಗಿ ಏರಿಕೆಯಾಗಿದ್ದರೂ, ಸಾರ್ವಜನಿಕರ ಹಿತದೃಷ್ಟಿಯಿಂದ ದೇಶೀಯ ಅಡುಗೆ ಅನಿಲದ ಬೆಲೆಯನ್ನು ನಿಯಂತ್ರಣದಲ್ಲಿಡಲಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಸರ್ಕಾರವೇ ಭರಿಸಿದೆ ಎಂದ ಕೇಂದ್ರ
ಲೋಕಸಭೆಯಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿರುವ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ರಾಜ್ಯ ಸಚಿವ ಸುರೇಶ್ ಗೋಪಿ ಅವರು, ತೈಲ ಮಾರಾಟ ಕಂಪನಿಗಳು ಭಾರಿ ನಷ್ಟವನ್ನು ಅನುಭವಿಸುತ್ತಿದ್ದರೂ ಸಹ, 14.2 ಕೆಜಿಯ ದೇಶೀಯ ಎಲ್ಪಿಜಿ ಸಿಲಿಂಡರ್ನ ಚಿಲ್ಲರೆ ಮಾರಾಟ ಬೆಲೆಯನ್ನು 942 ರೂಪಾಯಿಗಳಲ್ಲೇ ಕಾಯ್ದುಕೊಳ್ಳಲಾಗಿದೆ ಎಂದು ಸವಿಸ್ತಾರವಾಗಿ ವಿವರಿಸಿದ್ದಾರೆ. ಜಾಗತಿಕ ಮಾರುಕಟ್ಟೆಯ ದರಗಳಿಗೆ ಹೋಲಿಸಿದರೆ, ಜೂನ್ 2026ರಲ್ಲಿ ಪ್ರತಿ ಸಿಲಿಂಡರ್ ಮೇಲೆ 700 ರೂಪಾಯಿಗಿಂತಲೂ ಹೆಚ್ಚು ಹಾಗೂ ಜುಲೈ 2026ರಲ್ಲಿ 500 ರೂಪಾಯಿಗಿಂತಲೂ ಅಧಿಕ ಪರೋಕ್ಷ ಸಬ್ಸಿಡಿಯನ್ನು ಸರ್ಕಾರವೇ ಭರಿಸಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಪಶ್ಚಿಮ ಏಷ್ಯಾದ ಸಂಘರ್ಷದಿಂದಾಗಿ ಎಲ್ಪಿಜಿ ಬೆಲೆ ನಿರ್ಧಾರಣೆಯ ಜಾಗತಿಕ ಮಾನದಂಡವಾಗಿರುವ ‘ಸೌದಿ ಕಾಂಟ್ರಾಕ್ಟ್ ಪ್ರೈಸ್’ (Saudi CP) ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಪ್ರತಿ ಮೆಟ್ರಿಕ್ ಟನ್ಗೆ 780 ಡಾಲರ್ಗೆ ತಲುಪಿತ್ತು. ಜೂನ್ ವೇಳೆಗೆ ಇದು ಮತ್ತಷ್ಟು ಏರಿಕೆಯಾಗಿ 796 ಡಾಲರ್ ಮುಟ್ಟಿತ್ತು. ಒಂದು ವೇಳೆ ಸರ್ಕಾರ ಸಬ್ಸಿಡಿ ನೀಡದೆ ಮಾರುಕಟ್ಟೆ ದರಕ್ಕೆ ಲಿಂಕ್ ಮಾಡಿದ್ದರೆ, ಭಾರತದಲ್ಲಿ ಸಾರ್ವಜನಿಕರು ಒಂದು ಸಿಲಿಂಡರ್ಗೆ ಬರೋಬ್ಬರಿ 1,695 ರೂಪಾಯಿ ನೀಡಬೇಕಾಗುತ್ತಿತ್ತು ಎಂದು ಸಚಿವಾಲಯ ತಿಳಿಸಿದೆ. ಇದರ ನಡುವೆ, ಪ್ರಧಾನ ಮಂತ್ರಿ ಉಜ್ವಲ ಯೋಜನೆಯ (PMUY) 10.5 ಕೋಟಿಗೂ ಅಧಿಕ ಫಲಾನುಭವಿಗಳಿಗೆ ಪ್ರತಿ ಸಿಲಿಂಡರ್ ಮೇಲೆ ಹೆಚ್ಚುವರಿಯಾಗಿ 300 ರೂಪಾಯಿ ಸಬ್ಸಿಡಿ ನೀಡಲಾಗುತ್ತಿದ್ದು, ದೆಹಲಿಯಲ್ಲಿ ಅವರಿಗೆ ಕೇವಲ 642 ರೂಪಾಯಿಗೆ ಸಿಲಿಂಡರ್ ಲಭ್ಯವಾಗುತ್ತಿದೆ.
ಇಂಧನ ಪೂರೈಕೆ ಕೊರತೆ ಆಗದಂತೆ ಕ್ರಮ
ಜಾಗತಿಕವಾಗಿ ಅಡುಗೆ ಅನಿಲ ಸಾಗಣೆಯ ಪ್ರಮುಖ ಮಾರ್ಗವಾಗಿರುವ ‘ಸ್ಟ್ರೈಟ್ ಆಫ್ ಹಾರ್ಮುಜ್’ನಲ್ಲಿ ಉಂಟಾಗಿರುವ ಅಡೆತಡೆಗಳ ನಡುವೆಯೂ ದೇಶದಲ್ಲಿ ಇಂಧನ ಪೂರೈಕೆಗೆ ಧಕ್ಕೆಯಾಗದಂತೆ ಕೇಂದ್ರ ಸರ್ಕಾರ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಈ ಹಿಂದೆ ಭಾರತದ ಎಲ್ಪಿಜಿ ಅಗತ್ಯದ ಶೇಕಡಾ 60 ರಷ್ಟು ಭಾಗ ಆಮದಾಗುತ್ತಿತ್ತು ಮತ್ತು ಈ ಆಮದಿನ ಶೇಕಡಾ 90 ರಷ್ಟು ಭಾಗ ಇದೇ ಜಲಸಂಧಿಯ ಮೂಲಕ ಹಾದು ಬರುತ್ತಿತ್ತು. ಈ ಸವಾಲನ್ನು ಎದುರಿಸಲು ಸರ್ಕಾರವು ದೇಶೀಯ ಎಲ್ಪಿಜಿ ಉತ್ಪಾದನೆಯನ್ನು ದಿನಕ್ಕೆ 34 ಸಾವಿರ ಮೆಟ್ರಿಕ್ ಟನ್ನಿಂದ 54 ಸಾವಿರ ಮೆಟ್ರಿಕ್ ಟನ್ಗೆ ಹೆಚ್ಚಿಸಿದೆ. ಇದರೊಂದಿಗೆ ಆಮದು ಮೂಲಗಳನ್ನು ವಿಸ್ತರಿಸಿ, ದಾಸ್ತಾನು ನಿರ್ವಹಣೆಯನ್ನು ಉತ್ತಮಗೊಳಿಸುವ ಮೂಲಕ ದೇಶಾದ್ಯಂತ ಅಡುಗೆ ಅನಿಲದ ಕೊರತೆಯಾಗದಂತೆ ನೋಡಿಕೊಳ್ಳಲಾಗಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯ ತೀವ್ರ ಏರಿಳಿತದ ನಡುವೆಯೂ ಮಾರ್ಚ್ನಿಂದ ಜೂನ್ 2026ರ ಅವಧಿಯಲ್ಲಿ ದೇಶಾದ್ಯಂತ 56 ಕೋಟಿಗೂ ಹೆಚ್ಚು ದೇಶೀಯ ಸಿಲಿಂಡರ್ಗಳನ್ನು ಯಶಸ್ವಿಯಾಗಿ ಸರಬರಾಜು ಮಾಡಲಾಗಿದೆ. ಇದರಲ್ಲಿ 12 ಕೋಟಿಗೂ ಹೆಚ್ಚು ಸಿಲಿಂಡರ್ಗಳನ್ನು ಉಜ್ವಲ ಯೋಜನೆಯ ಫಲಾನುಭವಿಗಳಿಗೆ ತಲುಪಿಸಲಾಗಿದೆ. ತೈಲ ಕಂಪನಿಗಳು ಅನುಭವಿಸುತ್ತಿರುವ ನಷ್ಟವನ್ನು ಸರಿದೂಗಿಸಲು ಸರ್ಕಾರವು ಆರ್ಥಿಕ ನೆರವು ನೀಡುತ್ತಿದ್ದು, ಈ ಹಿಂದೆ 22,000 ಕೋಟಿ ರೂಪಾಯಿ ಬಿಡುಗಡೆ ಮಾಡಿತ್ತು. ಪ್ರಸ್ತುತ ಸಾಲಿನಲ್ಲಿ ಗ್ರಾಹಕರನ್ನು ಬೆಲೆ ಏರಿಕೆಯಿಂದ ರಕ್ಷಿಸಲು ಮತ್ತಷ್ಟು ಆರ್ಥಿಕ ಪ್ಯಾಕೇಜ್ ಒದಗಿಸುತ್ತಿದೆ. ಆದಾಗ್ಯೂ, ಜಾಗತಿಕ ತೈಲ ದರಗಳ ಏರಿಕೆಯ ತೀವ್ರತೆಯಿಂದಾಗಿ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಒಟ್ಟು ನಷ್ಟದ ಪ್ರಮಾಣವು ಜೂನ್ 30, 2026ರ ಅಂತ್ಯಕ್ಕೆ 51,000 ಕೋಟಿ ರೂಪಾಯಿ ದಾಟಿದೆ ಎಂದು ಸಚಿವಾಲಯ ಕಳಕಳಿ ವ್ಯಕ್ತಪಡಿಸಿದೆ.
ಇದನ್ನೂ ಓದಿ: ನೀಟ್ ಪರೀಕ್ಷೆ ಅಕ್ರಮ: ಪ್ರಧಾನಿ ಮೋದಿ ಅಭಯ, ಸೋನಮ್ ವಾಂಗ್ಚುಕ್ ಉಪವಾಸ ಸತ್ಯಾಗ್ರಹ ಅಂತ್ಯ
