Vijay: ಜನರಿಗೆ ತೊಂದರೆ ಆಗುವಂತೆ ಪೋಸ್ಟರ್-ಬ್ಯಾನರ್‌ ಹಾಕಬೇಡಿ: ಟಿವಿಕೆ ಕಾರ್ಯಕರ್ತರಿಗೆ ವಿಜಯ್‌ ಆದೇಶ

Vijay tvk party orders not place banner and poster

ಚೆನ್ನೈ: ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಸೂಪರ್ ಸ್ಟಾರ್ ವಿಜಯ್ (Vijay) ಅವರು ತಮ್ಮ ಆಡಳಿತದ ಮೊದಲ ದಿನವೇ ಜನಪರ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ಭಾರಿ ಸಂಚಲನ ಮೂಡಿಸಿದ್ದಾರೆ. ಮಂಗಳವಾರ ಬೆಳಿಗ್ಗೆಯಷ್ಟೇ ಶಾಲೆಗಳು, ಧಾರ್ಮಿಕ ಕೇಂದ್ರಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ವ್ಯಾಪ್ತಿಯಲ್ಲಿರುವ 717 ಸರ್ಕಾರಿ ಮದ್ಯದಂಗಡಿಗಳನ್ನು (ಟಾಸ್ಮಾಕ್) ಮುಚ್ಚುವಂತೆ ಅವರು ಅದೇಶಿಸಿದ್ದಾರೆ. ಸದ್ಯ ರಾಜ್ಯದಲ್ಲಿ ಕಾರ್ಯಾಚರಿಸುತ್ತಿರುವ 4,765 ಮದ್ಯದಂಗಡಿಗಳ ಪೈಕಿ ಶಿಕ್ಷಣ ಸಂಸ್ಥೆಗಳು ಮತ್ತು ಜನನಿಬಿಡ ಪ್ರದೇಶಗಳ ಬಳಿಯಿರುವ ಮದ್ಯದಂಗಡಿಗಳನ್ನು ಎರಡು ವಾರಗಳ ಒಳಗಾಗಿ ತೆರವುಗೊಳಿಸಲು ಸರ್ಕಾರ ಕ್ರಮ ಕೈಗೊಂಡಿದೆ.

ಬ್ಯಾನರ್‌ ಹಾಕದಂತೆ ಆದೇಶ

ಮದ್ಯದಂಗಡಿಗಳ ಮುಚ್ಚುವಿಕೆಯ ಬೆನ್ನಲ್ಲೇ ವಿಜಯ್ ಅವರು ತಮ್ಮ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಕಾರ್ಯಕರ್ತರಿಗೆ ಕಟ್ಟುನಿಟ್ಟಿನ ಶಿಸ್ತಿನ ಆದೇಶವೊಂದನ್ನು ನೀಡಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಸಂಚಾರಕ್ಕೆ ಅಡ್ಡಿಯಾಗುವಂತೆ ಬ್ಯಾನರ್, ಪೋಸ್ಟರ್ ಅಥವಾ ಕಟೌಟ್‌ಗಳನ್ನು ಅಳವಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ವಿಶೇಷವಾಗಿ ನಾಯಕರ ಹುಟ್ಟುಹಬ್ಬ ಅಥವಾ ಕೌಟುಂಬಿಕ ಕಾರ್ಯಕ್ರಮಗಳ ನೆಪದಲ್ಲಿ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುವ ಯಾವುದೇ ಆಚರಣೆಗಳನ್ನು ಮಾಡಬಾರದು ಎಂದು ಎಚ್ಚರಿಸಿದ್ದಾರೆ. ಪಕ್ಷವು ತಮಿಳುನಾಡು ಜನರ ಕಲ್ಯಾಣಕ್ಕಾಗಿ ಸ್ಥಾಪನೆಯಾಗಿದ್ದು, ಈ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪಕ್ಷದ ಅಧಿಕೃತ ಪ್ರಕಟಣೆ ತಿಳಿಸಿದೆ.

ತಮಿಳುನಾಡು ರಾಜಕಾರಣದಲ್ಲಿ ದಶಕಗಳಿಂದಲೂ ನಡೆದುಬಂದಿರುವ ಬೃಹತ್ ಕಟೌಟ್ ಮತ್ತು ಬ್ಯಾನರ್ ಸಂಸ್ಕೃತಿಗೆ ವಿಜಯ್ ಅವರ ಈ ನಿರ್ಧಾರವು ದೊಡ್ಡ ಬ್ರೇಕ್ ಹಾಕುವ ನಿರೀಕ್ಷೆಯಿದೆ. ಈ ಹಿಂದೆ ತೆರಿಗೆದಾರರ ಹಣದಲ್ಲಿ ಅಥವಾ ಜನರಿಗೆ ತೊಂದರೆಯಾಗುವಂತೆ ಅಬ್ಬರದ ಪ್ರಚಾರ ಮಾಡುವುದು ರಾಜಕೀಯ ಸಂಸ್ಕೃತಿಯ ಭಾಗವಾಗಿತ್ತು. ಆದರೆ ವಿಜಯ್ ಅವರ ಈ ನಡೆ ರಾಜ್ಯದ ಸಾರ್ವಜನಿಕ ಸಾರಿಗೆ ಮತ್ತು ರಸ್ತೆ ಸುರಕ್ಷತೆಯ ದೃಷ್ಟಿಯಿಂದ ಮಹತ್ವದ ಬದಲಾವಣೆಯಾಗಿದೆ. ಜನರ ವಿಶ್ವಾಸ ಗಳಿಸಿ ಅಧಿಕಾರಕ್ಕೆ ಬಂದಿರುವ ತಮಗೆ ಹೆಚ್ಚಿನ ಜವಾಬ್ದಾರಿಯಿದ್ದು, ಪಕ್ಷದ ಕಾರ್ಯಕರ್ತರು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಅವರು ಕರೆ ನೀಡಿದ್ದಾರೆ.

ರಾಜಕೀಯವಾಗಿ ಈ ವಾರ ವಿಜಯ್ ಅವರಿಗೆ ಅತ್ಯಂತ ನಿರ್ಣಾಯಕವಾಗಿದ್ದು, ಬಹುಶಃ ಗುರುವಾರ ಅವರು ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸಲಿದ್ದಾರೆ. ಇತ್ತೀಚೆಗಷ್ಟೇ ನಡೆದ ಚುನಾವಣೆಯಲ್ಲಿ 108 ಸ್ಥಾನಗಳನ್ನು ಗೆಲ್ಲುವ ಮೂಲಕ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳ ದಶಕಗಳ ಕಾಲದ ಪ್ರಾಬಲ್ಯವನ್ನು ವಿಜಯ್ ಮುರಿದಿದ್ದರು. ಪ್ರಸ್ತುತ ಕಾಂಗ್ರೆಸ್, ಎಡಪಕ್ಷಗಳು ಮತ್ತು ವಿಸಿಕೆ ಬೆಂಬಲದೊಂದಿಗೆ ವಿಜಯ್ ಸರ್ಕಾರವು 118ರ ಮ್ಯಾಜಿಕ್ ಸಂಖ್ಯೆಯನ್ನು ದಾಟಿದ್ದು, ಆಡಳಿತದ ಚುಕ್ಕಾಣಿ ಹಿಡಿದ ಬೆನ್ನಲ್ಲೇ ಜಾರಿಗೆ ತರುತ್ತಿರುವ ಈ ಸುಧಾರಣಾ ಕ್ರಮಗಳು ಜನರ ಮೆಚ್ಚುಗೆಗೆ ಪಾತ್ರವಾಗಿವೆ.

ಇದನ್ನೂ ಓದಿ: ಉಗ್ರರ ರಕ್ಷಣೆಗೆ ನಿಂತ ಚೀನಾಕ್ಕೆ ಭಾರತದ ಛೀಮಾರಿ: ‘ಜವಾಬ್ದಾರಿಯುತ ದೇಶಗಳ ನಡವಳಿಕೆ ಹೀಗಿರಬಾರದು’ ಎಂದ ವಿದೇಶಾಂಗ ಇಲಾಖೆ!

Leave a Reply

Your email address will not be published. Required fields are marked *