ಬೆಂಗಳೂರು: ರಾಜ್ಯ ಸರ್ಕಾರದ ಅತ್ಯಂತ ಮಹತ್ವಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲೊಂದಾದ ‘ಗೃಹಲಕ್ಷ್ಮಿ’ (Gruhalakshmi) ಯೋಜನೆಯಡಿ ಅನರ್ಹರು ಹಾಗೂ ಮರಣ ಹೊಂದಿದ ಫಲಾನುಭವಿಗಳ ಖಾತೆಗೆ ಹಣ ಪಾವತಿಯಾಗುತ್ತಿದೆ ಮತ್ತು ಸಿಎಜಿ ಲೆಕ್ಕ ತಪಾಸಣೆ ವರದಿಯಲ್ಲಿ ಆಕ್ಷೇಪಣೆಗಳು ವ್ಯಕ್ತವಾಗಿವೆ ಎಂಬ ವರದಿಗಳು ಭಾರಿ ಸದ್ದು ಮಾಡಿದ್ದವು. ಈ ಎಲ್ಲಾ ಗೊಂದಲಗಳು ಮತ್ತು ಆರೋಪಗಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಸುದೀರ್ಘ ಹಾಗೂ ಸಮಗ್ರ ಸ್ಪಷ್ಟನೆಯನ್ನು ನೀಡಿದೆ. ಯೋಜನೆಯು ಸಂಪೂರ್ಣವಾಗಿ ನಿಯಮಾನುಸಾರ ಮತ್ತು ಪಾರದರ್ಶಕವಾಗಿ ಅನುಷ್ಠಾನಗೊಳ್ಳುತ್ತಿದ್ದು, ಯಾವುದೇ ಅಕ್ರಮಕ್ಕೆ ಇಲ್ಲಿ ಅವಕಾಶವಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಇಲಾಖೆಯು ನೀಡಿರುವ ವಿವರಗಳ ಪ್ರಕಾರ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ವಿತರಿಸುವ ಅಂತ್ಯೋದಯ, ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿಗಳಲ್ಲಿ ‘ಕುಟುಂಬದ ಯಜಮಾನಿ’ ಎಂದು ನಮೂದಾಗಿರುವ ಮಹಿಳೆಯರು ಹಾಗೂ ಲಿಂಗತ್ವ ಅಲ್ಪಸಂಖ್ಯಾತರು ಈ ಯೋಜನೆಗೆ ಅರ್ಹರಾಗಿದ್ದಾರೆ. ಆದರೆ, ಯಜಮಾನಿ ಅಥವಾ ಆಕೆಯ ಪತಿ ಆದಾಯ ತೆರಿಗೆ ಪಾವತಿದಾರರಾಗಿದ್ದಲ್ಲಿ ಹಾಗೂ ಜಿಎಸ್ಟಿ ರಿಟರ್ನ್ಸ್ ಸಲ್ಲಿಸುವವರಾಗಿದ್ದಲ್ಲಿ ಅಂತಹವರನ್ನು ಯೋಜನೆಯಿಂದ ಹೊರಗಿಡಲಾಗಿದೆ. ಪ್ರಸ್ತುತ ಏಪ್ರಿಲ್ 2026ರ ಅಂತ್ಯದ ವೇಳೆಗೆ ರಾಜ್ಯದಲ್ಲಿ ಒಟ್ಟು 1,30,35,318 ಫಲಾನುಭವಿಗಳು ಈ ಯೋಜನೆಯಡಿ ಯಶಸ್ವಿಯಾಗಿ ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ ಪರಿಶಿಷ್ಟ ಜಾತಿಯ 24.95 ಲಕ್ಷ, ಪರಿಶಿಷ್ಟ ಪಂಗಡದ 9.75 ಲಕ್ಷ ಹಾಗೂ ಇತರ ವರ್ಗದ 95.66 ಲಕ್ಷಕ್ಕೂ ಹೆಚ್ಚು ಮಹಿಳೆಯರಿದ್ದಾರೆ. ಪ್ರತಿ ತಿಂಗಳು ಹಣ ಬಿಡುಗಡೆ ಮಾಡುವ ಮುನ್ನ ಆದಾಯ ತೆರಿಗೆ ಮತ್ತು ವಾಣಿಜ್ಯ ತೆರಿಗೆ ಇಲಾಖೆಗಳ ತಂತ್ರಾಂಶದ (API) ಮೂಲಕ ಫಲಾನುಭವಿಗಳ ಅರ್ಹತೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ಅನರ್ಹರನ್ನು ಸ್ವಯಂಚಾಲಿತವಾಗಿ ಕೈಬಿಡಲಾಗುತ್ತಿದೆ. ಹೀಗೆ ಪತ್ತೆಯಾದ 1,94,560 ಆದಾಯ ತೆರಿಗೆ ಮತ್ತು ಜಿಎಸ್ಟಿ ಪಾವತಿದಾರ ಮಹಿಳೆಯರನ್ನು ಯೋಜನೆಯಿಂದ ಹೊರಗಿಡಲಾಗಿದೆ.
ಹಣ ವಾಪಾಸ್ಗೆ ಕ್ರಮ
ಮಾಧ್ಯಮಗಳಲ್ಲಿ ಪ್ರಸಾರವಾದ ಮೃತ ಫಲಾನುಭವಿಗಳ ಖಾತೆಗೆ ಹಣ ಸಂದಾಯವಾಗಿರುವ ಆರೋಪಕ್ಕೂ ಇಲಾಖೆ ಸೂಕ್ತ ವಿವರಣೆ ನೀಡಿದೆ. ಯೋಜನೆ ಆರಂಭವಾದಾಗಿನಿಂದ ಇದುವರೆಗೆ ನೋಂದಾಯಿತ ಫಲಾನುಭವಿಗಳ ಪೈಕಿ ಒಟ್ಟು 2,88,376 ಮಹಿಳೆಯರು ಮರಣ ಹೊಂದಿದ್ದಾರೆ. ಇವರಲ್ಲಿ 1,03,922 ಕುಟುಂಬಗಳು ಪಡಿತರ ಚೀಟಿಯಲ್ಲಿ ಯಜಮಾನಿಯ ಹೆಸರನ್ನು ಬದಲಾಯಿಸಿಕೊಂಡು ನಿಯಮಾನುಸಾರ ಹೊಸದಾಗಿ ಮರು ನೋಂದಣಿ ಮಾಡಿಸಿ ಧನಸಹಾಯ ಪಡೆಯುತ್ತಿದ್ದಾರೆ. ಆದರೆ, ಇನ್ನು ಕೆಲವು ಪ್ರಕರಣಗಳಲ್ಲಿ ಫಲಾನುಭವಿಗಳು ಮೃತಪಟ್ಟ ಮಾಹಿತಿ ಸಕಾಲದಲ್ಲಿ ಇಲಾಖೆಯ ತಂತ್ರಾಂಶದಲ್ಲಿ ನವೀಕರಣಗೊಳ್ಳದ ಕಾರಣ, ಸುಮಾರು 1,08,755 ಮೃತ ಮಹಿಳೆಯರ ಖಾತೆಗಳಿಗೆ ಒಟ್ಟು 115 ಕೋಟಿ ರೂಪಾಯಿ ಜಮೆಯಾಗಿರುವುದು ನಿಜ ಎಂದು ಇಲಾಖೆ ಒಪ್ಪಿಕೊಂಡಿದೆ.
ಆದರೆ ಈ ಹಣವನ್ನು ಸರ್ಕಾರ ದುರುಪಯೋಗಕ್ಕೆ ಅವಕಾಶ ನೀಡಿಲ್ಲ. ಮೃತ ಫಲಾನುಭವಿಗಳ ಖಾತೆಗೆ ಹೋಗಿರುವ ಹಣವನ್ನು ಸರ್ಕಾರದ ಖಾತೆಗೆ ಮರು ಜಮೆ ಮಾಡಿಸಲು ರಾಜ್ಯ ಮಟ್ಟದ ಬ್ಯಾಂಕರ್ಗಳ ಸಮಿತಿ (SLBC), ಲೀಡ್ ಬ್ಯಾಂಕ್ಗಳು, ಸಹಕಾರ ಮತ್ತು ಖಾಸಗಿ ಬ್ಯಾಂಕ್ಗಳೊಂದಿಗೆ ಇಲಾಖೆಯು ಸರಣಿ ಸಭೆಗಳನ್ನು ನಡೆಸಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಇದರ ಫಲವಾಗಿ ಈಗಾಗಲೇ 15.24 ಕೋಟಿ ರೂಪಾಯಿ ಮೊತ್ತ ಸರ್ಕಾರದ ತಿಜೂರಿಗೆ ಮರು ಭರಣವಾಗಿದ್ದು, ಬಾಕಿ ಹಣವನ್ನು ಹಿಂಪಡೆಯುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಇನ್ನು ಮುಂದೆ ಇಂತಹ ತಪ್ಪುಗಳು ಆಗದಂತೆ ತಡೆಯಲು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ (PDO) ಜವಾಬ್ದಾರಿ ನೀಡಲಾಗಿದ್ದು, ಫಲಾನುಭವಿಗಳು ಮರಣ ಹೊಂದಿದ ತಕ್ಷಣ ಆ ಮಾಹಿತಿಯನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ (CDPO) ಲಾಗಿನ್ ಮೂಲಕ ತಂತ್ರಾಂಶಕ್ಕೆ ಅಪ್ಲೋಡ್ ಮಾಡಿ, ಹಣ ಪಾವತಿಗೂ ಮುನ್ನವೇ ಅವರ ಹೆಸರನ್ನು ಪಟ್ಟಿಯಿಂದ ಕೈಬಿಡುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.
ಸಿಎಜಿ ಆಕ್ಷೇಪಣೆಗಳಿಗೆ ತಾಂತ್ರಿಕ ಹಾಗೂ ವಾಸ್ತವಿಕ ಸ್ಪಷ್ಟನೆ
ಸಿಎಜಿ ಲೆಕ್ಕ ತಪಾಸಣೆ ವರದಿಯಲ್ಲಿ ಎತ್ತಲಾದ ತಾಂತ್ರಿಕ ಪ್ರಶ್ನೆಗಳಿಗೂ ಇಲಾಖೆ ತಾರ್ಕಿಕ ಉತ್ತರ ನೀಡಿದೆ. ಒಂದೇ ಬ್ಯಾಂಕ್ ಖಾತೆಗೆ ಹಲವು ಫಲಾನುಭವಿಗಳ ಹಣ ಜಮೆಯಾಗುತ್ತಿರುವ ಆಕ್ಷೇಪಣೆಗೆ ಪ್ರತಿಕ್ರಿಯಿಸಿರುವ ಇಲಾಖೆ, ಗ್ರಾಮೀಣ ಭಾಗಗಳಲ್ಲಿ ಅತ್ತೆ-ಸೊಸೆ ಅಥವಾ ತಾಯಿ-ಮಗಳ ಹೆಸರಿನಲ್ಲಿ ಜಂಟಿ (Joint) ಬ್ಯಾಂಕ್ ಖಾತೆಗಳಿರುತ್ತವೆ. ಅವರು ಬೇರೆ ಬೇರೆ ಪಡಿತರ ಚೀಟಿ ಹೊಂದಿದ್ದರೂ ಖಾತೆ ಒಂದೇ ಆಗಿರುವುದರಿಂದ ಆಧಾರ್ ಆಧಾರಿತ ಪಾವತಿ ವ್ಯವಸ್ಥೆಯಡಿ (ABPS) ಒಂದೇ ಖಾತೆಗೆ ಇಬ್ಬರ ಹಣ ಜಮೆಯಾಗಿರುವುದು ಕ್ಷೇತ್ರ ಭೇಟಿಯ ಪರಿಶೀಲನೆಯಲ್ಲಿ ದೃಢಪಟ್ಟಿದೆ. ಇದರೊಂದಿಗೆ ಕೆಲವು ಬ್ಯಾಂಕುಗಳ ತಾಂತ್ರಿಕ ದೋಷಗಳಿಂದಾಗಿ (Narration Error) ಪ್ರತಿಕ್ರಿಯಾ ಕಡತಗಳಲ್ಲಿ ತಪ್ಪು ವಿವರಗಳು ಸೃಷ್ಟಿಯಾಗಿರುತ್ತವೆ ವಿನಃ ಇದರಲ್ಲಿ ಯಾವುದೇ ಲೋಪವಾಗಿಲ್ಲ.
ಅದೇ ರೀತಿ, ಒಬ್ಬರೇ ಫಲಾನುಭವಿ ಒಂದಕ್ಕಿಂತ ಹೆಚ್ಚು ಖಾತೆಗಳನ್ನು ಹೊಂದಿದ್ದಾರೆಂಬ ಆಕ್ಷೇಪಣೆಗೆ ಉತ್ತರಿಸಿರುವ ಇಲಾಖೆ, ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ (Aadhaar Seeding) ಮಾಡಿಸುವುದು ಸಂಪೂರ್ಣವಾಗಿ ಗ್ರಾಹಕರ ಹಕ್ಕಾಗಿದೆ. ಫಲಾನುಭವಿಗಳು ತಮಗೆ ಇಷ್ಟಬಂದ ಬ್ಯಾಂಕಿಗೆ ಆಧಾರ್ ಲಿಂಕ್ ಬದಲಾಯಿಸಿದಾಗ, ಆಯಾ ತಿಂಗಳ ಹಣ ಆ ಹೊಸ ಖಾತೆಗೆ ಹೋಗುತ್ತದೆ. ಹೀಗಾಗಿ ಬೇರೆ ಬೇರೆ ತಿಂಗಳ ಹಣ ಬೇರೆ ಬೇರೆ ಖಾತೆಯಲ್ಲಿ ಕಾಣಿಸಬಹುದೇ ಹೊರತು, ಒಂದೇ ತಿಂಗಳಿನಲ್ಲಿ ಒಬ್ಬ ಫಲಾನುಭವಿಗೆ ಒಂದಕ್ಕಿಂತ ಹೆಚ್ಚು ಖಾತೆಗೆ ಹಣ ಪಾವತಿಯಾಗಲು ಸಾಧ್ಯವೇ ಇಲ್ಲ. ಇನ್ನು ಕೆಲವು ಖಾತೆಗಳ ವಿವರಗಳಿಲ್ಲದೆಯೂ ಹಣ ಪಾವತಿಯಾಗಿದೆ ಎಂಬ ಆಂಶಕ್ಕೆ ಬ್ಯಾಂಕುಗಳ ಸರ್ವರ್ ಸಮಸ್ಯೆ ಮತ್ತು ತಾಂತ್ರಿಕ ದೋಷವೇ ಕಾರಣವಾಗಿದ್ದು, ನಂತರದ ತಿಂಗಳುಗಳಲ್ಲಿ ಬ್ಯಾಂಕುಗಳು ಈ ವಿವರಗಳನ್ನು ಒದಗಿಸಿವೆ. ಒಟ್ಟಾರೆಯಾಗಿ, ಗೃಹಲಕ್ಷ್ಮಿ ಯೋಜನೆಯು ಅತ್ಯಂತ ವ್ಯವಸ್ಥಿತವಾಗಿ ಚಾಲ್ತಿಯಲ್ಲಿದ್ದು, ಅರ್ಹ ನಾರಿಯರಿಗೆ ಯಾವುದೇ ಅಡೆತಡೆಯಿಲ್ಲದೆ ಮಾಸಿಕ ಸಹಾಯಧನ ತಲುಪುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ನೂತನ ಜಿಲ್ಲಾ ಉಸ್ತುವಾರಿ ಪಟ್ಟಿ ರಿಲೀಸ್ ಮಾಡಿದ ಸರ್ಕಾರ
