TOP NEWS

Crime: ನಟಿ ಕೃಷಿ ತಾಪಂಡ ಮನೆಯಲ್ಲಿ ಉದ್ಯಮಿ ವೈಶಾಕ್ ಆತ್ಮಹತ್ಯೆ ಪ್ರಕರಣ: ಸಾವಿನ ನಿಖರ ಕಾರಣ ಕೋರಿ ಪತ್ನಿಯಿಂದ ಪೊಲೀಸ್ ದೂರು!

Actress Krishi thapanda friend vaishak files complaint crime

ಬೆಂಗಳೂರು: ರಾಜಧಾನಿಯ ರಾಜರಾಜೇಶ್ವರಿ ನಗರದಲ್ಲಿರುವ (RR Nagar) ಸ್ಯಾಂಡಲ್‌ವುಡ್ ನಟಿ ಕೃಷಿ ತಾಪಂಡ ಅವರ ಅಪಾರ್ಟ್‌ಮೆಂಟ್‌ನಲ್ಲಿ ಉದ್ಯಮಿ ವೈಶಾಕ್ ನೇಣಿಗೆ ಶರಣಾಗಿರುವ (Crime) ಘಟನೆ ಹೊಸ ತಿರುವು ಪಡೆದುಕೊಂಡಿದೆ. ಪತ್ನಿ ಹಾಗೂ ಮಗನಿದ್ದರೂ ವೈಶಾಕ್ ನಟಿಯ ಫ್ಲಾಟ್‌ನಲ್ಲಿ ಏಕೆ ಉಳಿದುಕೊಂಡಿದ್ದರು ಎಂಬ ಅನುಮಾನಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಮೃತರ ಪತ್ನಿ ಮೇಘಾ ಅವರು ಪೊಲೀಸರಿಗೆ ಅಧಿಕೃತ ದೂರು ನೀಡಿದ್ದಾರೆ. ನಟಿಗೆ ತಾವು ಸಾಯುತ್ತಿರುವುದಾಗಿ ಕೊನೆಯ ಸಂದೇಶ ರವಾನಿಸಿದ ಬಳಿಕ ಉದ್ಯಮಿ ಈ ಕಠಿಣ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.

ಪೊಲೀಸರಿಗೆ ನೀಡಿರುವ ದೂರಿನಲ್ಲಿ ಪತ್ನಿ ಮೇಘಾ, ನಟಿ ಕೃಷಿ ತಾಪಂಡ ಅವರ ಎಲಿಗೆಂಟ್ ಟೆರಸ್ ಅಪಾರ್ಟ್‌ಮೆಂಟ್‌ನ ಫ್ಲಾಟ್ ಸಂಖ್ಯೆ 403ಕ್ಕೆ ತಾವು ಭೇಟಿ ನೀಡಿದಾಗ ಎದುರಾದ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ನಿನ್ನೆ ರಾತ್ರಿ 11 ಗಂಟೆಯ ಸುಮಾರಿಗೆ ಪೊಲೀಸರು ತಮ್ಮ ಮಾವನವರಿಗೆ (ವೈಶಾಕ್ ತಂದೆ) ಕರೆ ಮಾಡಿ ವೈಶಾಕ್ ಸಾವನ್ನಪ್ಪಿರುವ ಆಘಾತಕಾರಿ ವಿಷಯವನ್ನು ಮುಟ್ಟಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಅಪಾರ್ಟ್‌ಮೆಂಟ್ ಕೋಣೆಯಲ್ಲಿ ಕಂಡುಬಂದ ದೃಶ್ಯ

ಮಾಹಿತಿ ಸಿಗುತ್ತಿದ್ದಂತೆಯೇ ಮೇಘಾ ಅವರು ಕುಟುಂಬಸ್ಥರೊಂದಿಗೆ ನಟಿಯ ಫ್ಲಾಟ್‌ಗೆ ಧಾವಿಸಿದ್ದಾರೆ. ಅಲ್ಲಿನ ಮಲಗುವ ಕೋಣೆಯ ಮಂಚದ ಮೇಲೆ ವೈಶಾಕ್ ಅವರ ಮೃತದೇಹ ಅಂಗಾತ ಬಿದ್ದಿತ್ತು. ಕೋಣೆಯ ಸೀಲಿಂಗ್ ಫ್ಯಾನ್‌ಗೆ ಸೀರೆಯೊಂದನ್ನು ಕಟ್ಟಿ ನೇಣು ಬಿಗಿದುಕೊಂಡಿದ್ದು, ತೂಕ ತಡೆಯಲಾರದೆ ಸೀರೆ ಅರ್ಧಕ್ಕೆ ಹರಿದು ಹೋಗಿತ್ತು. ವೈಶಾಕ್ ಅವರ ಕುತ್ತಿಗೆಯ ಸುತ್ತಲೂ ನೇಣಿನ ಆಳವಾದ ಗಾಯದ ಗುರುತುಗಳು ಸ್ಪಷ್ಟವಾಗಿ ಕಾಣಿಸುತ್ತಿದ್ದವು ಎಂದು ಮೇಘಾ ಹೇಳಿದ್ದಾರೆ. ತದನಂತರ ರಾಜರಾಜೇಶ್ವರಿ ನಗರ ಪೊಲೀಸರು ಸ್ಥಳಕ್ಕೆ ಬಂದು ಮೃತದೇಹವನ್ನು ಪೋಸ್ಟ್‌ಮಾರ್ಟಮ್‌ಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ.

ಕೌಟುಂಬಿಕ ಕಲಹದ ಬಗ್ಗೆ ಪತ್ನಿ ಬಿಚ್ಚಿಟ್ಟ ಮಾಹಿತಿ

ಒಂದು ತಿಂಗಳಿಂದ ಮಾತುಕತೆ ಇರಲಿಲ್ಲ: ತಮ್ಮ ದೂರಿನಲ್ಲಿ ಪತಿಯೊಂದಿಗಿದ್ದ ಮುನಿಸನ್ನು ಒಪ್ಪಿಕೊಂಡಿರುವ ಮೇಘಾ, “ನಮ್ಮಿಬ್ಬರ ವೈವಾಹಿಕ ಜೀವನದಲ್ಲಿ ವಿರಸವಿತ್ತು ಮತ್ತು ಆಗಾಗ ಗಲಾಟೆಗಳು ನಡೆಯುತ್ತಿದ್ದವು. ಕಳೆದ ಒಂದು ತಿಂಗಳಿಂದ ನನ್ನ ಪತಿ ನನ್ನೊಂದಿಗೆ ಮಾತನಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿದ್ದರು. ಕೇವಲ ಮೊಬೈಲ್ ಮೆಸೇಜ್ ಮೂಲಕ ನಮ್ಮ 14 ವರ್ಷದ ಮಗನ ಬಗ್ಗೆ ಮಾತ್ರ ಮಾಹಿತಿ ಪಡೆಯುತ್ತಿದ್ದರು, ಆದರೆ ನನ್ನ ಬಗ್ಗೆ ಯಾವುದೇ ವಿಚಾರಣೆ ನಡೆಸುತ್ತಿರಲಿಲ್ಲ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸದ್ಯಕ್ಕೆ ತಮಗೆ ಈ ಸಾವಿನ ಹಿಂದೆ ಯಾರ ಮೇಲೂ ಪ್ರತ್ಯೇಕ ಶಂಕೆ ಇಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದರೂ, ಪತಿಯ ಆತ್ಮಹತ್ಯೆಗೆ ಅಸಲಿ ಕಾರಣವೇನು ಎಂಬುದನ್ನು ತನಿಖೆ ನಡೆಸಿ ಪತ್ತೆಹಚ್ಚಬೇಕು ಎಂದು ಮೇಘಾ ಆಗ್ರಹಿಸಿದ್ದಾರೆ. ಪತ್ನಿಯ ದೂರಿನ ಅನ್ವಯ ಪೊಲೀಸರು ಸದ್ಯಕ್ಕೆ ಅನುಮಾನಾಸ್ಪದ ಸಾವು (UDR) ಎಂದು ಪ್ರಕರಣ ದಾಖಲಿಸಿಕೊಂಡಿದ್ದು, ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ.

ಇದನ್ನೂ ಓದಿ: ಆ್ಯಪ್ ಲಿಂಕ್ ಕಳಿಸಿ ಹ್ಯಾಕಿಂಗ್: ಜಾಮತಾರಾ ಸೈಬರ್ ಗ್ಯಾಂಗ್‌ನ ನಯವಂಚಕ ಆಟ ಬಯಲಿಗೆಳೆದ ಪೊಲೀಸರು!

Leave a Reply

Your email address will not be published. Required fields are marked *