ದಾವಣಗೆರೆ: ನಗರದ ಶೇಖರಪ್ಪ ನಗರದಲ್ಲಿ ಇಂದು ಬೆಳಿಗ್ಗೆ ಭೀಕರ (Crime) ಕೊಲೆ ಪ್ರಕರಣವೊಂದು ನಡೆದಿದ್ದು, ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಪ್ರಿಯಕರನೇ ಮಹಿಳೆಯೊಬ್ಬಳನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಕೊಲೆಯಾದ ದುರ್ದೈವಿಯನ್ನು ೪೫ ವರ್ಷದ ನಾಗರತ್ನ ಎಂದು ಗುರುತಿಸಲಾಗಿದ್ದು, ಈ ಸಂಬಂಧ ೩೬ ವರ್ಷದ ಆರೋಪಿ ನಾಗರಾಜ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಏನಿದು ಪ್ರಕರಣ?
ಮಾಹಿತಿಗಳ ಪ್ರಕಾರ, ನಾಗರತ್ನ ಅವರು ಹಿಂದೆ ತಮ್ಮ ಪತಿಯನ್ನು ತ್ಯಜಿಸಿ ಮೂರು ಮಕ್ಕಳೊಂದಿಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಇವರು ಕಳೆದ ಹಲವು ವರ್ಷಗಳಿಂದ ಆರೋಪಿ ನಾಗರಾಜ್ ಎಂಬಾತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು. ಬೆಳಗಿನ ಜಾವ ಸುಮಾರು ೧೦:೩೦ ರ ಸುಮಾರಿಗೆ ಇಬ್ಬರ ನಡುವೆ ಕೌಟುಂಬಿಕ ಅಥವಾ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದಂತೆ ತೀವ್ರ ಜಗಳ ನಡೆದಿದೆ. ಕೋಪದ ಕೈಗೆ ಬುದ್ಧಿ ಕೊಟ್ಟ ಆರೋಪಿ ನಾಗರಾಜ್, ನಾಗರತ್ನ ಅವರ ಮೇಲೆ ತೀಕ್ಷ್ಣವಾದ ಚಾಕುವಿನಿಂದ ಮನಬಂದಂತೆ ದಾಳಿ ಮಾಡಿದ್ದಾನೆ.
ಮಾರಣಾಂತಿಕ ಇರಿತದಿಂದಾಗಿ ತೀವ್ರ ರಕ್ತಸ್ರಾವ ಗೊಂಡ ನಾಗರತ್ನ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಕೃತ್ಯ ಎಸಗಿ ಪರಾರಿಯಾಗಲು ಯತ್ನಿಸುತ್ತಿದ್ದ ಆರೋಪಿ ನಾಗರಾಜ್ನನ್ನು ತಕ್ಷಣವೇ ಸ್ಥಳೀಯರು ಸುತ್ತುವರಿದು ಹಿಡಿದು, ಆತನಿಗೆ ಧರ್ಮದೇಟು ನೀಡಿ ಆರ್ಎಂಸಿ ಯಾರ್ಡ್ ಪೊಲೀಸ್ ಠಾಣೆಯ ಸಿಬ್ಬಂದಿಗೆ ಒಪ್ಪಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಸರ್ಕಾರಿ ಕಚೇರಿಯಲ್ಲೇ ಮಾರಣಾಂತಿಕ ದಾಳಿ: ಮಾಜಿ ಯೋಧ ರುದ್ರಪ್ಪ, ಪುತ್ರಿ ಶಶಿಕಲಾ ಸ್ಥಳದಲ್ಲೇ ಸಾವು!
ಬೆಳಗಾವಿ: ಜಿಲ್ಲೆಯ ಕಿತ್ತೂರು ತಾಲೂಕಿನ ಅವರಾದಿ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲೇ ನಡೆದ ಮಾಜಿ ಯೋಧ ಹಾಗೂ ಅವರ ಪುತ್ರಿಯ (Crime) ಭೀಕರ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತಕ್ಷಣವೇ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಸ್ವಂತ ದಾಯಾದಿಗಳೇ ಈ ಕೃತ್ಯ ಎಸಗಿದ್ದು, ಬಂಧಿತರನ್ನು ಕೊಲೆಯಾದ ರುದ್ರಪ್ಪ ಅವರ ಸಹೋದರರಾದ ಬಸಪ್ಪ ಕುಂದರಗಿ, ಸಂಗಪ್ಪ ಕುಂದರಗಿ ಹಾಗೂ ಸಂಗಪ್ಪನ ಪುತ್ರ ಮಡಿವಾಳಪ್ಪ ಕುಂದರಗಿ ಎಂದು ಗುರುತಿಸಲಾಗಿದೆ.
ಏನಿದು ಘಟನೆ?
ಘಟನೆಯ ವಿವರಗಳ ಪ್ರಕಾರ, ಅವರಾದಿ ಗ್ರಾಮದ ನಿವಾಸಿ, ಮಾಜಿ ಯೋಧ ರುದ್ರಪ್ಪ ಕುಂದರಗಿ (೬೭) ಮತ್ತು ಅವರ ಪುತ್ರಿ ಶಶಿಕಲಾ ಕುಂದರಗಿ (೨೬) ಕೊಲೆಯಾದ ದುರ್ದೈವಿಗಳು. ಇವರ ಕುಟುಂಬದಲ್ಲಿ ಕಳೆದ ಕೆಲವು ಸಮಯದಿಂದ ಜಮೀನಿನ ಹಂಚಿಕೆ ವಿಚಾರವಾಗಿ ತೀವ್ರ ದಾಯಾದಿ ಕಲಹ ಏರ್ಪಟ್ಟಿತ್ತು. ಒಟ್ಟು ೩೮ ಗುಂಟೆ ಜಮೀನನ್ನು ಮೂವರು ಸಹೋದರರಿಗೆ ಸಮನಾಗಿ ಹಂಚಿಕೆ ಮಾಡುವಂತೆ ಹಿಂದೆ ನ್ಯಾಯಾಲಯ ಆದೇಶ ನೀಡಿತ್ತು. ಆದರೆ, ರುದ್ರಪ್ಪ ಅವರು ತಮಗೆ ನ್ಯಾಯಾಲಯದಿಂದ ಬಂದಿದ್ದ ಪಾಲಿನ ಜಮೀನನ್ನು ಈಗಾಗಲೇ ಬೇರೆಯವರಿಗೆ ಮಾರಾಟ ಮಾಡಿದ್ದರು. ಹೀಗಿದ್ದರೂ, ಉಳಿದ ಸಹೋದರರ ವಶದಲ್ಲಿರುವ ಜಮೀನಿನಲ್ಲೂ ತಮಗೆ ಮತ್ತಷ್ಟು ಪಾಲು ಬೇಕು ಎಂದು ಅವರು ಒತ್ತಾಯಿಸುತ್ತಿದ್ದರು ಎನ್ನಲಾಗಿದೆ.
ಈ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಕಾನೂನುಬದ್ಧವಾಗಿ ಆಸ್ತಿ ಪಾಲುದಾರಿಕೆ ಅರ್ಜಿಯನ್ನು ಸಲ್ಲಿಸಲು ರುದ್ರಪ್ಪ ಅವರು ತಮ್ಮ ಮಗಳು ಶಶಿಕಲಾ ಹಾಗೂ ಕಾರು ಚಾಲಕನೊಂದಿಗೆ ಅವರಾದಿ ಗ್ರಾಮ ಪಂಚಾಯಿತಿ ಕಚೇರಿಗೆ ಆಗಮಿಸಿದ್ದರು. ಈ ವಿಷಯ ತಿಳಿದ ಆರೋಪಿಗಳಾದ ಬಸಪ್ಪ, ಸಂಗಪ್ಪ ಹಾಗೂ ಮಡಿವಾಳಪ್ಪ ರೊಚ್ಚಿಗೆದ್ದು ಮಾರಕಾಸ್ತ್ರಗಳೊಂದಿಗೆ ಪಂಚಾಯಿತಿ ಕಚೇರಿಯೊಳಗೆ ನುಗ್ಗಿದ್ದಾರೆ. ಅಲ್ಲಿಯೇ ಸಾರ್ವಜನಿಕರ ಎದುರಲ್ಲೇ ರುದ್ರಪ್ಪ ಹಾಗೂ ಅವರ ಪುತ್ರಿ ಶಶಿಕಲಾ ಮೇಲೆ ಭೀಕರವಾಗಿ ದಾಳಿ ನಡೆಸಿ ಕೊಚ್ಚಿ ಕೊಂದಿದ್ದಾರೆ.
ಜನರ ಮುಂದೆಯೇ ನಡೆದಿದ್ದ ಕೊಲೆ
ಈ ಅನಿರೀಕ್ಷಿತ ಮಾರಣಾಂತಿಕ ದಾಳಿಯಲ್ಲಿ ತೀವ್ರ ರಕ್ತಸ್ರಾವದಿಂದ ಮಾಜಿ ಯೋಧ ಹಾಗೂ ಅವರ ಮಗಳು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಇದೇ ವೇಳೆ ಅವರನ್ನು ರಕ್ಷಿಸಲು ಮುಂದಾದ ರುದ್ರಪ್ಪ ಅವರ ಕಾರು ಚಾಲಕನಿಗೂ ತೀವ್ರ ಗಾಯಗಳಾಗಿದ್ದು, ಆತನನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗ್ರಾಮ ಪಂಚಾಯಿತಿಯಂತಹ ಸರ್ಕಾರಿ ಕಚೇರಿಯಲ್ಲೇ ನಡೆದ ಈ ರಕ್ತಪಾತದಿಂದ ಇಡೀ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮೂವರೂ ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಭೀಕರ ಕೊಲೆ: ಫೋನ್ ಕಾಲ್ ರಿಸೀವ್ ಮಾಡಿಲ್ಲವೆಂದು ಪತಿಯಿಂದಲೇ ಹೆಂಡತಿಯ ಹತ್ಯೆ
