ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಕಠಿಣ ಜೀವಾವಧಿ ಶಿಕ್ಷೆ ಅನುಭವಿಸುತ್ತಾ ಪರಪ್ಪನ ಅಗ್ರಹಾರ ಜೈಲು ಸೇರಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅವರ ಬ್ಯಾರಕ್ನಲ್ಲಿ ಮೊಬೈಲ್ ಫೋನ್ ಹಾಗೂ ಪೆನ್ಡ್ರೈವ್ ಸಿಕ್ಕಿರುವುದು ಜೈಲು ಆಡಳಿತದಲ್ಲಿ ತಲ್ಲಣ ಮೂಡಿಸಿದೆ. ಸುರಕ್ಷತಾ ವಲಯದಲ್ಲಿ ಇಂತಹ ನಿಷೇಧಿತ ವಸ್ತುಗಳು ಪತ್ತೆಯಾದ ಬೆನ್ನಲ್ಲೇ, ಕಾರಾಗೃಹ ಮತ್ತು ಸುಧಾರಣಾ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ.
ನಿಯಮ ಗಾಳಿಗೆ ತೂರಿದ ಮಾಜಿ ಸಂಸದ ಈ ಕುರಿತು ವಿವರಣೆ ನೀಡಿರುವ ಡಿಜಿಪಿ ಅಲೋಕ್ ಕುಮಾರ್, ಸಿಸಿಬಿ ಪೊಲೀಸರು ನಡೆಸಿದ ದಿಢೀರ್ ತಪಾಸಣೆ ವೇಳೆ ಈ ಅಕ್ರಮ ಬಯಲಾಗಿದೆ ಎಂದಿದ್ದಾರೆ. ಜೈಲು ನಿಯಮಾವಳಿಗಳ ಪ್ರಕಾರ ಶಿಕ್ಷೆಗೊಳಗಾದ ಪ್ರತಿಯೊಬ್ಬ ಕೈದಿಯೂ ಬಿಳಿ ಸಮವಸ್ತ್ರ ಧರಿಸುವುದು ಕಡ್ಡಾಯ. ಆದರೆ ಪ್ರಜ್ವಲ್ ರೇವಣ್ಣ ಅವರಿಗೆ ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ಅವರು ರೂಲ್ಸ್ ಬ್ರೇಕ್ ಮಾಡಿ ಸಿವಿಲ್ ಬಟ್ಟೆಯಲ್ಲೇ ಇದ್ದರು. ಸದ್ಯ ಅವರ ಬ್ಯಾರಕ್ಗೆ ಮೊಬೈಲ್ ತಲುಪಿದ್ದು ಹೇಗೆ ಮತ್ತು ಅದರಲ್ಲಿದ್ದ ಸಿಮ್ ಕಾರ್ಡ್ ಯಾರ ಹೆಸರಲ್ಲಿದೆ ಎಂಬ ಬಗ್ಗೆ ಜಾಲಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಆಂಧ್ರದ ಏರ್ಟೆಲ್ 5G ಸಿಮ್ ಪತ್ತೆ: ಟೆಲಿಕಾಂ ಕಂಪನಿ ವಿರುದ್ಧವೂ ತನಿಖೆ ಇನ್ನು ಜೈಲಿನಲ್ಲಿ ಸಿಕ್ಕಿರುವ ಮೊಬೈಲ್ನಲ್ಲಿ ಆಂಧ್ರಪ್ರದೇಶದ ನೋಂದಣಿಯಿರುವ ಏರ್ಟೆಲ್ ಸಿಮ್ ಕಾರ್ಡ್ ಬಳಕೆಯಾಗಿರುವುದು ಬೆಳಕಿಗೆ ಬಂದಿದೆ. ಜೈಲಿನಲ್ಲಿ ನೆಟ್ವರ್ಕ್ ಜಾಮರ್ಗಳಿದ್ದರೂ ಆಂಧ್ರದ ಏರ್ಟೆಲ್ 5G ಸಿಗ್ನಲ್ ಮಾತ್ರ ಅಲ್ಲಿ ಲಭ್ಯವಾಗುತ್ತಿತ್ತು ಎನ್ನಲಾಗಿದೆ. “ನಮ್ಮ ಕಡೆಯಿಂದ ಕಟ್ಟುನಿಟ್ಟಿನ ಸೂಚನೆಗಳಿದ್ದರೂ ಟೆಲಿಕಾಂ ಕಂಪನಿಗಳು ಇಂತಹ ಸಿಮ್ಗಳನ್ನು ಜೈಲಿನೊಳಗೆ ಸರಬರಾಜು ಮಾಡುತ್ತಿವೆ. ಕಾರಾಗೃಹದಲ್ಲಿ ಆಂಧ್ರ ಮೂಲದ ಸಿಮ್ಗಳ ಬಳಕೆ ಹೆಚ್ಚಾಗುತ್ತಿದ್ದು, ಪ್ರಸ್ತುತ ಸಿಮ್ ಕಳೆದ ಮಾರ್ಚ್ನಿಂದಲೇ ಆಕ್ಟಿವ್ ಆಗಿರುವುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಏರ್ಟೆಲ್ ಕಂಪನಿಯನ್ನು ಸಹ ಈ ಪ್ರಕರಣದಲ್ಲಿ ಸಹ-ಆರೋಪಿ (Co-accused) ಮಾಡಲು ನಿರ್ದೇಶನ ನೀಡಿದ್ದೇನೆ” ಎಂದು ಡಿಜಿಪಿ ಸ್ಪಷ್ಟಪಡಿಸಿದರು.
ಜೈಲಿನ ವೈ-ಫೈ ಕಟ್; ಜೈಲಾಧಿಕಾರಿಗಳಿಗೆ ನೋಟಿಸ್ ಜೈಲಿನೊಳಗಿನಿಂದ ಸೋಶಿಯಲ್ ಮೀಡಿಯಾ ಅಕೌಂಟ್ಗಳನ್ನು ನಿರ್ವಹಿಸುತ್ತಿರುವ ಅನುಮಾನ ವ್ಯಕ್ತವಾಗಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಜೈಲಿನ ವೈ-ಫೈ ಸಂಪರ್ಕವನ್ನು ಪೂರ್ಣವಾಗಿ ಕಟ್ ಮಾಡಲಾಗಿದೆ. ಜೈಲಿನ ಅಧಿಕೃತ ವೈ-ಫೈ ಏನಾದರೂ ದುರ್ಬಳಕೆಯಾಗಿದ್ದರೆ ಅದಕ್ಕೆ ಕಾರಣರಾದವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಜಿಡಿಪಿ ಎಚ್ಚರಿಸಿದ್ದಾರೆ.
ಜೈಲು ಆಡಳಿತದಲ್ಲಿ ಲೋಪವಾಗಿರುವುದನ್ನು ಒಪ್ಪಿಕೊಂಡ ಅವರು, ಅಕ್ರಮಕ್ಕೆ ಸಾಥ್ ನೀಡಿದ ಜೈಲು ಸಿಬ್ಬಂದಿ ವಿರುದ್ಧ ಈಗಾಗಲೇ ಇಲಾಖಾ ಕ್ರಮ ಜರುಗಿಸಲಾಗಿದೆ. ನಿನ್ನೆ ಬೆಳಗ್ಗೆಯಷ್ಟೇ ವರ್ಗಾವಣೆಗೊಂಡ ಅಧಿಕಾರಿಯೊಬ್ಬರನ್ನೂ ತನಿಖೆಯ ವ್ಯಾಪ್ತಿಗೆ ತರಲಾಗಿದೆ. ಸದ್ಯ ಜೈಲಿನ ಸೂಪರಿಂಟೆಂಡೆಂಟ್ ಹಾಗೂ ಎಸ್ಪಿ ಅವರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದ್ದು, ಸಿಸಿಬಿ ಮತ್ತು ಜೈಲು ಇಲಾಖೆ ಜಂಟಿಯಾಗಿ ಈ ಹಗರಣದ ಮೂಲ ಹುಡುಕಲು ತನಿಖೆ ಚುರುಕುಗೊಳಿಸಿವೆ.
ಇದನ್ನೂ ಓದಿ: ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ ರೂ100 ಕೋಟಿ ಬೀಜಧನ ನೀಡುವಂತೆ ಮಾಜಿ ಸಚಿವ ದಿನೇಶ್ ಗುಂಡೂರಾವ್ ಒತ್ತಾಯ
