ಬೆಂಗಳೂರು: ರಾಜ್ಯ ಆಡಳಿತ ಯಂತ್ರದಲ್ಲಿ ಮಹತ್ವದ ಬದಲಾವಣೆ ಮಾಡಿರುವ ಕರ್ನಾಟಕ ಸರ್ಕಾರ, ಮೂವರು ಹಿರಿಯ ಐಎಎಸ್ ಅಧಿಕಾರಿಗಳನ್ನು (Breaking) ವರ್ಗಾವಣೆಗೊಳಿಸಿದೆ. ಇದರೊಂದಿಗೆ, ಕರ್ನಾಟಕ ಲೋಕಸೇವಾ ಆಯೋಗದ (KPSC) ಪ್ರಮುಖ ಹುದ್ದೆಗಳಿಗೂ ಹೊಸ ಅಧಿಕಾರಿಗಳನ್ನು ನೇಮಕ ಮಾಡಿ ಬುಧವಾರ ಅಧಿಕೃತ ಆದೇಶ ಹೊರಡಿಸಿದೆ.
ಸರ್ಕಾರದ ಇತ್ತೀಚಿನ ಆದೇಶದ ಪ್ರಕಾರ, ಸದ್ಯ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕಾರ್ಯನಿರ್ವಾಹಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಎಚ್. ಪ್ರಸನ್ನ ಅವರಿಗೆ ಹೆಚ್ಚುವರಿ ಹೊಣೆಗಾರಿಕೆಯನ್ನು ನೀಡಲಾಗಿದೆ. ಅವರನ್ನು ಕೆಪಿಎಸ್ಸಿಯ ಪರೀಕ್ಷಾ ನಿಯಂತ್ರಕರ (Controller of Examinations) ಹುದ್ದೆಗೆ ಹೆಚ್ಚುವರಿ ಪ್ರಭಾರಿಯಾಗಿ ನೇಮಕ ಮಾಡಲಾಗಿದೆ.
ದಿಗ್ವಿಜಯ್ ಬೋಡ್ಕೆಗೆ ಸ್ಥಳ ನಿಯುಕ್ತಿಯಿಲ್ಲ ಇದೇ ವೇಳೆ, ಕೆಪಿಎಸ್ಸಿಯ ಪರೀಕ್ಷಾ ನಿಯಂತ್ರಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಐಎಎಸ್ ಅಧಿಕಾರಿ ದಿಗ್ವಿಜಯ್ ಬೋಡ್ಕೆ ಅವರನ್ನು ಪ್ರಸ್ತುತ ಹುದ್ದೆಯಿಂದ ವರ್ಗಾವಣೆಗೊಳಿಸಲಾಗಿದೆ. ಆದರೆ, ಅವರಿಗೆ ಸದ್ಯಕ್ಕೆ ಯಾವುದೇ ಹೊಸ ಇಲಾಖೆ ಅಥವಾ ಜವಾಬ್ದಾರಿಯನ್ನು ನಿಗದಿಪಡಿಸದೆ ಕಾಯ್ದಿರಿಸಲಾಗಿದೆ.
ಕೆಪಿಎಸ್ಸಿ ಜಂಟಿ ಪರೀಕ್ಷಾ ನಿಯಂತ್ರಕ ಹುದ್ದೆ ಭರ್ತಿ ಮತ್ತೊಂದೆಡೆ, ದೀರ್ಘ ಕಾಲದಿಂದ ತೆರವಾಗಿಯೇ ಉಳಿದಿದ್ದ ಕರ್ನಾಟಕ ಲೋಕಸೇವಾ ಆಯೋಗದ ಜಂಟಿ ಪರೀಕ್ಷಾ ನಿಯಂತ್ರಕ ಹುದ್ದೆಗೆ ಕೊನೆಗೂ ಸರ್ಕಾರ ಅಧಿಕಾರಿಯನ್ನು ನೇಮಿಸಿದೆ. ಯಾದಗಿರಿ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ (CEO) ಲವಿಶ್ ಓರ್ಡಿಯಾ ಅವರನ್ನು ಈ ಮಹತ್ವದ ಹುದ್ದೆಗೆ ವರ್ಗಾಯಿಸಲಾಗಿದೆ. ಲವಿಶ್ ಓರ್ಡಿಯಾ ಅವರ ವರ್ಗಾವಣೆಯಿಂದ ತೆರವಾಗಿರುವ ಯಾದಗಿರಿ ಜಿಲ್ಲಾ ಪಂಚಾಯಿತಿ ಸಿಇಒ ಸ್ಥಾನಕ್ಕೆ ಸರ್ಕಾರ ಸದ್ಯಕ್ಕೆ ಯಾರನ್ನೂ ನೇಮಿಸದೆ ಬಾಕಿ ಉಳಿಸಿಕೊಂಡಿದೆ.
ನಮ್ಮ ಮೆಟ್ರೋಗೆ ಹೊಸ ಬಾಸ್: ಐಎಎಸ್ ಅಧಿಕಾರಿಗಳ ಮಹತ್ವದ ವರ್ಗಾವಣೆ, ಬಿಎಂಆರ್ಸಿಎಲ್ ಎಂಡಿಯಾಗಿ ಡಾ. ಪಿ.ಸಿ. ಜಾಫರ್ ನಿಯುಕ್ತಿ
ಬೆಂಗಳೂರು: ರಾಜ್ಯ ಆಡಳಿತ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತಂದಿರುವ ಕರ್ನಾಟಕ ಸರ್ಕಾರ, ನಾಲ್ವರು ಹಿರಿಯ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ. ಈ ಪ್ರಮುಖ ಆಡಳಿತಾತ್ಮಕ ವರ್ಗಾವಣೆಯ ಭಾಗವಾಗಿ ಬೆಂಗಳೂರು ಮೆಟ್ರೊ ರೈಲು ನಿಗಮಕ್ಕೆ (BMRCL) ನೂತನ ವ್ಯವಸ್ಥಾಪಕ ನಿರ್ದೇಶಕರನ್ನು (MD) ನೇಮಕ ಮಾಡಲಾಗಿದೆ.
ಹಣಕಾಸು ಇಲಾಖೆಯ ಆಯವ್ಯಯ ಹಾಗೂ ಸಂಪನ್ಮೂಲ ವಿಭಾಗದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದ ಹಿರಿಯ ಅಧಿಕಾರಿ ಡಾ. ಪಿ.ಸಿ. ಜಾಫರ್ ಅವರನ್ನು ಬಿಎಂಆರ್ಸಿಎಲ್ನ ನೂತನ ಎಂಡಿಯಾಗಿ ವರ್ಗಾಯಿಸಲಾಗಿದೆ. ಇದರೊಂದಿಗೆ, ಇದುವರೆಗೆ ಮೆಟ್ರೊ ನಿಗಮದ ಜವಾಬ್ದಾರಿ ಹೊತ್ತಿದ್ದ ಡಾ. ಜೆ. ರವಿಶಂಕರ್ ಅವರಿಗೆ ಸದ್ಯಕ್ಕೆ ಯಾವುದೇ ಹೊಸ ಸ್ಥಾನವನ್ನು ತೋರಿಸದೆ ವರ್ಗಾವಣೆ ಮಾಡಲಾಗಿದೆ.
ಹಣಕಾಸು ಹಾಗೂ ವಸತಿ ಇಲಾಖೆಗೂ ಹೊಸ ಕಾರ್ಯದರ್ಶಿಗಳು ಇನ್ನುಳಿದಂತೆ, ಹೊಸ ಹುದ್ದೆಯ ನಿರೀಕ್ಷೆಯಲ್ಲಿದ್ದ ಡಾ. ಎಂ.ಟಿ. ರೇಜು ಅವರನ್ನು ಡಾ. ಪಿ.ಸಿ. ಜಾಫರ್ ಅವರ ವರ್ಗಾವಣೆಯಿಂದ ತೆರವಾಗಿದ್ದ ಹಣಕಾಸು ಇಲಾಖೆಯ ಆಯವ್ಯಯ ಹಾಗೂ ಸಂಪನ್ಮೂಲ ಕಾರ್ಯದರ್ಶಿ ಹುದ್ದೆಗೆ ನೇಮಿಸಲಾಗಿದೆ.
ಹಾಗೆಯೇ, ಸ್ಥಳ ನಿಯುಕ್ತಿಯ ನಿರೀಕ್ಷೆಯಲ್ಲಿದ್ದ ಮತ್ತೊಬ್ಬ ಐಎಎಸ್ ಅಧಿಕಾರಿ ಟಿ.ಎಚ್.ಎಂ. ಕುಮಾರ್ ಅವರನ್ನು ವಸತಿ ಇಲಾಖೆಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಈ ಮುಂಚೆ ವಸತಿ ಇಲಾಖೆಯ ಹೆಚ್ಚುವರಿ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದ ಕೆ.ಪಿ. ಮೋಹನರಾಜ್ ಅವರನ್ನು ಈ ಹುದ್ದೆಯ ಪ್ರಭಾರದಿಂದ ಮುಕ್ತಗೊಳಿಸಲಾಗಿದೆ.
ಇದನ್ನೂ ಓದಿ: ಉಡುಪಿ ಶ್ರೀಕೃಷ್ಣನ ದರ್ಶನ ಪಡೆದ ಅಣ್ಣಾಮಲೈ: ಮಠದಲ್ಲಿ ಗೌರವ ಸತ್ಕಾರ
