ಬೆಂಗಳೂರು: ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಹಾಕಿರುವ ‘ರಾಮಾಯಣ’ (Ramayana) ಸಿನಿಮಾದ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಒಂದು ಕುತೂಹಲಕಾರಿ ವಿಷಯವನ್ನು ಬಿಚ್ಚಿಟ್ಟಿದ್ದಾರೆ. ಈ ಚಿತ್ರದಲ್ಲಿ ಶ್ರೀರಾಮನಾಗಿ ರಣಬೀರ್ ಕಪೂರ್ ಮತ್ತು ಲಂಕಾಧಿಪತಿ ರಾವಣನಾಗಿ ಯಶ್ ನಟಿಸುತ್ತಿರುವುದು ಅಭಿಮಾನಿಗಳಲ್ಲಿ ಭಾರಿ ಹವಾ ಎಬ್ಬಿಸಿದೆ. ಆದರೆ, ಚಿತ್ರದ ಮೊದಲ ಭಾಗದಲ್ಲಿ ಇಬ್ಬರೂ ದಿಗ್ಗಜ ನಟರು ಒಂದೇ ಫ್ರೇಮ್ನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎನ್ನುವ ಮೂಲಕ ಯಶ್ ಅಚ್ಚರಿ ಮೂಡಿಸಿದ್ದಾರೆ.
ಮುಖಾಮುಖಿ ಆಗಲ್ವಂತೆ ರಾಮ-ರಾವಣ
ಸದ್ಯ ಅಂತರಾಷ್ಟ್ರೀಯ ಮಟ್ಟದ ‘ಸಿನಿಮಾಕಾನ್’ (Cinemacon) ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಯಶ್, ಚಿತ್ರದ ಚಿತ್ರಕಥೆಯ ಬಗ್ಗೆ ಮಾತನಾಡಿದ್ದಾರೆ. “ರಾಮಾಯಣ ಎರಡು ಭಾಗಗಳಲ್ಲಿ ಮೂಡಿಬರುತ್ತಿದೆ. ಮೊದಲ ಭಾಗದಲ್ಲಿ ಶ್ರೀರಾಮ ಮತ್ತು ರಾವಣನಿಗೆ ಸಂಬಂಧಿಸಿದ ಪ್ರತ್ಯೇಕ ಕಥಾಹಂದರವಿದೆ. ನಾವಿಬ್ಬರೂ ಈ ಭಾಗದಲ್ಲಿ ಎಲ್ಲಿಯೂ ಜೊತೆಯಾಗಿ ನಟಿಸಿಲ್ಲ” ಎಂದು ಹೇಳಿದ್ದಾರೆ. ಅಂದರೆ, ಅಭಿಮಾನಿಗಳು ನಿರೀಕ್ಷಿಸುತ್ತಿರುವ ರಾಮ-ರಾವಣರ ನಡುವಿನ ಮಹಾಯುದ್ಧ ಅಥವಾ ನೇರ ಸಂಘರ್ಷವನ್ನು ನೋಡಲು ಎರಡನೇ ಭಾಗದವರೆಗೆ ಕಾಯಲೇಬೇಕಿದೆ.
#Ramayana star Yash gives us a sneak peek at his other film releasing this year #Toxic. Catch the full interview at the link below!https://t.co/ZQAqix35Op pic.twitter.com/EBkSMkukMJ
— Fandango (@Fandango) April 14, 2026
ನಿರ್ದೇಶಕ ನಿತೇಶ್ ತಿವಾರಿ ಅವರು ರಾಮಾಯಣದ ಪ್ರತಿ ಪಾತ್ರಕ್ಕೂ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಮೊದಲ ಭಾಗವು ಶ್ರೀರಾಮನ ಆರಂಭಿಕ ಜೀವನ, ಸೀತೆಯ ವಿವಾಹ ಮತ್ತು ಸೀತೆಯ ಅಪಹರಣದವರೆಗಿನ ರೋಚಕ ಕಥೆಯ ಮೇಲೆ ಕೇಂದ್ರೀಕೃತವಾಗಿದೆ. ಇನ್ನೊಂದೆಡೆ ರಾವಣನ ಸಾಮ್ರಾಜ್ಯದ ವೈಭವ ಮತ್ತು ಅವನ ಹಿನ್ನೆಲೆಯನ್ನು ಅಷ್ಟೇ ಪ್ರಭಾವಶಾಲಿಯಾಗಿ ತೋರಿಸಲು ಚಿತ್ರತಂಡ ಮುಂದಾಗಿದೆ. ಈ ರೀತಿ ಎರಡೂ ಪಾತ್ರಗಳನ್ನು ಪ್ರತ್ಯೇಕವಾಗಿ ಗಟ್ಟಿಯಾಗಿ ಕಟ್ಟಿಕೊಟ್ಟು, ಎರಡನೇ ಭಾಗದಲ್ಲಿ ಇಬ್ಬರೂ ಮುಖಾಮುಖಿಯಾದಾಗ ಸಿನಿಮಾದ ತೀವ್ರತೆಯನ್ನು ಹೆಚ್ಚಿಸುವುದು ನಿರ್ದೇಶಕರ ತಂತ್ರವಾಗಿದೆ.
ಸಹನಟ ರಣಬೀರ್ ಕಪೂರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಯಶ್, “ರಣಬೀರ್ ಅವರೊಬ್ಬ ಅದ್ಭುತ ನಟ. ಈ ಮಹಾಕಾವ್ಯವನ್ನು ಜಗತ್ತಿಗೆ ಅತ್ಯುತ್ತಮವಾಗಿ ಪ್ರಸ್ತುತಪಡಿಸಬೇಕು ಎಂಬ ವಿಷನ್ ನಮ್ಮಿಬ್ಬರದ್ದೂ ಆಗಿದೆ” ಎಂದಿದ್ದಾರೆ. ಸುಮಾರು 4,000 ಕೋಟಿ ರೂಪಾಯಿ ಬಜೆಟ್ನಲ್ಲಿ ತಯಾರಾಗುತ್ತಿರುವ ಈ ಚಿತ್ರಕ್ಕೆ ಎ.ಆರ್. ರೆಹಮಾನ್ ಮತ್ತು ಹ್ಯಾನ್ಸ್ ಜಿಮ್ಮರ್ ಸಂಗೀತ ನೀಡುತ್ತಿದ್ದಾರೆ. ಸಾಯಿ ಪಲ್ಲವಿ (ಸೀತೆ), ಸನ್ನಿ ಡಿಯೋಲ್ (ಹನುಮಂತ) ಮತ್ತು ರವಿ ದುಬೆ (ಲಕ್ಷ್ಮಣ) ಅವರಂತಹ ತಾರಾಗಣವಿರುವ ಈ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸುವುದು ಖಚಿತವಾಗಿದೆ.
ಇದನ್ನೂ ಓದಿ: ವಿಶ್ವಮಟ್ಟದಲ್ಲಿ ರಾಕಿ ಬಾಯ್ ಅಬ್ಬರ, ರಾಮಾಯಣ ಪ್ರಚಾರ ಮಾಡಿದ ಯಶ್
