ಹೈದರಾಬಾದ್: ತೆಲುಗಿನ ಖ್ಯಾತ ನಟ ಜೂನಿಯರ್ ಎನ್ಟಿಆರ್ ಅವರ ಕುಟುಂಬಕ್ಕೆ ಆಂಧ್ರಪ್ರದೇಶದ ರಾಜಕೀಯದೊಂದಿಗೆ ದಶಕಗಳ ಅವಿನಾಭಾವ ಸಂಬಂಧವಿದೆ. ಹೀಗಾಗಿಯೇ ಅವರ ಅಭಿಮಾನಿಗಳು ಇತ್ತೀಚೆಗೆ ಘೋಷಿಸಿದ ಕಾರ್ಯಕ್ರಮವೊಂದು ನಟನ ರಾಜಕೀಯ ಪ್ರವೇಶದ ವದಂತಿಗಳಿಗೆ ಕಾರಣವಾಗಿತ್ತು. ಆದರೆ, ಈ ಕುರಿತು ಜೂನಿಯರ್ ಎನ್ಟಿಆರ್ (Jr NTR) ಅವರ ಕಚೇರಿ ಅಧಿಕೃತ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದೆ. ‘ರಾ ಎನ್ಟಿಆರ್’ (Raw NTR) ಎಂಬ ಸಂಘಟನೆಯು ಹಮ್ಮಿಕೊಂಡಿರುವ ‘ಊರು ವಾಡಾ’ (Ooru Vaada) ಎಂಬ ಮುಂಬರುವ ಕಾರ್ಯಕ್ರಮಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ನಟ ಸ್ಪಷ್ಟಪಡಿಸಿದ್ದಾರೆ.
ಅಧಿಕೃತ ಮಾಹಿತಿ ನೀಡಿದ ಎನ್ಟಿಆರ್
ಜೂನಿಯರ್ ಎನ್ಟಿಆರ್ ಅವರ ಕಚೇರಿ ಬಿಡುಗಡೆ ಮಾಡಿರುವ ಪತ್ರದಲ್ಲಿ, ‘ರಾ ಎನ್ಟಿಆರ್’ ಹೆಸರಿನ ಸಂಘಟನೆಯು ನಡೆಸುತ್ತಿರುವ ಚಟುವಟಿಕೆಗಳು ಜೂನಿಯರ್ ಎನ್ಟಿಆರ್ ಅವರಿಗೆ ಸಂಬಂಧಿಸಿದ್ದೇನೋ ಎಂಬಂತಹ ಗೊಂದಲವನ್ನು ಸೃಷ್ಟಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ ಎಂದು ತಿಳಿಸಲಾಗಿದೆ. ಈ ಸಂಘಟನೆಯೊಂದಿಗೆ ಅಥವಾ ಅದರ ಯಾವುದೇ ಚಟುವಟಿಕೆಗಳೊಂದಿಗೆ ನಟನಿಗಾಗಲಿ ಅಥವಾ ಅವರ ಕಚೇರಿಗಾಗಲಿ ಯಾವುದೇ ರೀತಿಯ ಒಡನಾಟ, ಸಂಬಂಧ ಅಥವಾ ಭಾಗೀದಾರಿಕೆ ಇಲ್ಲ. ಅಲ್ಲದೆ, ಅವರ ಪರವಾಗಿ ಮಾತನಾಡಲು ಅಥವಾ ಪ್ರತಿನಿಧಿಸಲು ಈ ಸಂಘಟನೆಗೆ ಯಾವುದೇ ಅಧಿಕಾರ ನೀಡಿಲ್ಲ. ಜೂನಿಯರ್ ಎನ್ಟಿಆರ್ ಅವರಿಗೆ ಸಂಬಂಧಿಸಿದ ಯಾವುದೇ ಅಧಿಕೃತ ಸಾಮಾಜಿಕ ಕಾರ್ಯಗಳು ಅಥವಾ ಪ್ರಕಟಣೆಗಳನ್ನು ಅವರ ಅಧಿಕೃತ ತಂಡದ ಮೂಲಕ ಮಾತ್ರ ತಿಳಿಸಲಾಗುವುದು. ಮಾಧ್ಯಮಗಳು ಮತ್ತು ಅಭಿಮಾನಿಗಳು ಇಂತಹ ಪರಿಶೀಲಿಸದ ವದಂತಿಗಳನ್ನು ನಂಬಬಾರದು ಎಂದು ವಿನಂತಿಸಲಾಗಿದೆ.
An official statement from Mr NTR’s office. pic.twitter.com/TrOLo0N3S4
— Vamsi Kaka (@vamsikaka) July 14, 2026
ಮತ್ತೊಂದೆಡೆ, ಜೂನಿಯರ್ ಎನ್ಟಿಆರ್ ಹೆಸರಿನಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಳ್ಳುವ ‘ರಾ ಎನ್ಟಿಆರ್’ ಸಂಘಟನೆಯು, ಜುಲೈ 18 ರಂದು ತಿರುಪತಿಯಲ್ಲಿ ‘ಊರು ವಾಡಾ’ (ಬೀದಿಯಿಂದ ಬೀದಿಗೆ) ಎಂಬ ಅಭಿಯಾನದ ಬಗ್ಗೆ ಪತ್ರಿಕಾಗೋಷ್ಠಿ ಹಮ್ಮಿಕೊಂಡಿದೆ. ಈ ಕಾರ್ಯಕ್ರಮದ ಪ್ರಕಟಣೆಯ ಬೆನ್ನಲ್ಲೇ ಇದು ಜೂನಿಯರ್ ಎನ್ಟಿಆರ್ ಅವರ ರಾಜಕೀಯ ಪ್ರವೇಶದ ಮುನ್ನುಡಿ ಎಂಬ ಚರ್ಚೆಗಳು ಆರಂಭವಾಗಿದ್ದವು. ತೀವ್ರ ಗೊಂದಲ ಸೃಷ್ಟಿಯಾದ ಕಾರಣ ಸ್ವತಃ ಆ ಸಂಘಟನೆಯೂ ಮತ್ತೊಂದು ಸ್ಪಷ್ಟನೆ ನೀಡಿ, ಇದು ಕೇವಲ ನಮ್ಮ ಅಭಿಯಾನದ ದೃಷ್ಟಿಕೋನವನ್ನು ಹಂಚಿಕೊಳ್ಳಲು ಮೊದಲೇ ಯೋಜಿಸಲಾದ ಕಾರ್ಯಕ್ರಮವಾಗಿದ್ದು, ನಟನ ರಾಜಕೀಯ ಪ್ರವೇಶದ ವದಂತಿಗಳಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದೆ.
ಎನ್ಟಿಆರ್ ಕುಟುಂಬದ ರಾಜಕೀಯ ಹಿನ್ನಲೆ
ಜೂನಿಯರ್ ಎನ್ಟಿಆರ್ ಅವರು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಟಿಡಿಪಿ ಪಕ್ಷದ ಸಂಸ್ಥಾಪಕ ದಿವಂಗತ ಎನ್.ಟಿ. ರಾಮರಾವ್ ಅವರ ಮೊಮ್ಮಗನಾಗಿದ್ದಾರೆ. ಅವರ ತಂದೆ ಹರಿಕೃಷ್ಣ, ಚಿಕ್ಕಪ್ಪ ಬಾಲಕೃಷ್ಣ ಸೇರಿದಂತೆ ಇಡೀ ಕುಟುಂಬ ಸಿನಿಮಾ ಮತ್ತು ರಾಜಕೀಯ ಎರಡರಲ್ಲೂ ಸಕ್ರಿಯವಾಗಿದೆ. ಪ್ರಸ್ತುತ ಆಂಧ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಸೋದರಮಾವ ಹಾಗೂ ನಾರಾ ಲೋಕೇಶ್ ಅವರ ಸೋದರಸಂಬಂಧಿಯಾಗಿದ್ದಾರೆ. ಹಿಂದೆ ಜೂನಿಯರ್ ಎನ್ಟಿಆರ್ ಟಿಡಿಪಿ ಪರ ಪ್ರಚಾರ ಮಾಡಿದ್ದರೂ, ನೇರ ರಾಜಕೀಯಕ್ಕೆ ಬರುವ ಆಸಕ್ತಿಯನ್ನು ಎಂದೂ ತೋರಿಸಿಲ್ಲ. ಸದ್ಯ ಅವರು ಪ್ರಶಾಂತ್ ನೀಲ್ ನಿರ್ದೇಶನದ ‘ಡ್ರ್ಯಾಗನ್’ ಚಿತ್ರದ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದು, ಆ ಬಳಿಕ ತ್ರಿವಿಕ್ರಮ್ ಶ್ರೀನಿವಾಸ್ ಅವರೊಂದಿಗೂ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ: ‘ನ್ಯೂಕ್ಲಿಯರ್ ಬಾಂಬ್’ನಂತೆ ಬರಲಿದ್ದಾನೆ ರಿಚ್ಚಿ: ರಿಚರ್ಡ್ ಆ್ಯಂಟನಿ ಬಗ್ಗೆ ಅಜನೀಶ್ ಬಿಗ್ ಅಪ್ಡೇಟ್
