ಬೆಂಗಳೂರು: ಬೆಂಗಳೂರು ಮಹಾನಗರದ ಸಂಚಾರ ದಟ್ಟಣೆಯನ್ನು ನಿಯಂತ್ರಿಸುವ ಮತ್ತು ಉಪನಗರಗಳ ನಡುವಿನ ಸಂಪರ್ಕವನ್ನು ಸುಧಾರಿಸುವ ಮಹತ್ವಾಕಾಂಕ್ಷೆಯ ಎರಡನೇ ಹಂತದ ಪೆರಿಫೆರಲ್ ರಿಂಗ್ ರಸ್ತೆ (ಪಿಆರ್ಆರ್-2) ನಿರ್ಮಾಣ ಕಾಮಗಾರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (BDA) ಸಕಲ ಸಿದ್ಧತೆಗಳನ್ನು ಕೈಗೊಂಡಿದೆ. ಹೊಸೂರು, ಮೈಸೂರು ಹಾಗೂ ತುಮಕೂರು ರಾಷ್ಟ್ರೀಯ ಹೆದ್ದಾರಿಗಳನ್ನು ಪರಸ್ಪರ ಬೆಸೆಯಲಿರುವ ಈ ಬೃಹತ್ ಯೋಜನೆಯ ಅನುಷ್ಠಾನಕ್ಕಾಗಿ ಒಟ್ಟು 1,427 ಎಕರೆ ಪ್ರದೇಶದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಪ್ರಾಧಿಕಾರ ಮುಂದಾಗಿದೆ. ಒಟ್ಟಾರೆ 52 ಕಿಲೋಮೀಟರ್ ಉದ್ದ ಮತ್ತು 10 ಪಥಗಳನ್ನು ಹೊಂದಿರುವ ಈ ವಿಶಾಲವಾದ ರಸ್ತೆ ನಿರ್ಮಾಣದ ಅಂದಾಜು ವೆಚ್ಚವು ಸುಮಾರು 3,500 ಕೋಟಿ ರೂಪಾಯಿಗಳಷ್ಟE ಎಂದು ಅಂದಾಜಿಸಲಾಗಿದೆ. ಈಗಾಗಲೇ ಮಾಗಡಿ ರಸ್ತೆ ಹಾಗೂ ಮೈಸೂರು ರಸ್ತೆಗಳ ನಡುವಿನ ಸುಮಾರು 10 ಕಿಲೋಮೀಟರ್ ವ್ಯಾಪ್ತಿಯ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದ್ದು, ಉಳಿದ 42 ಕಿಲೋಮೀಟರ್ಗಳಷ್ಟು ದೀರ್ಘವಾದ ಭಾಗಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಅಂತಿಮ ಅಧಿಸೂಚನೆಯನ್ನು ಹೊರಡಿಸಲಾಗಿದೆ. ವಿಶೇಷವೆಂದರೆ ಈ ನೂತನ ರಿಂಗ್ ರಸ್ತೆಯು ಸರ್ಕಾರದ ಮಹತ್ವಾಕಾಂಕ್ಷೆಯ ಪ್ರಸ್ತಾವಿತ ಬಿಡದಿ ಸ್ಮಾರ್ಟ್ ಸಿಟಿಗೂ ಅತ್ಯುತ್ತಮ ಸಂಪರ್ಕ ಕಲ್ಪಿಸಲಿದೆ.
1,126ಕ್ಕೂ ಅಧಿಕ ಭೂಮಾಲೀಕರು ಕಳೆದುಕೊಳ್ಳಲಿದ್ದಾರೆ ಜಾಗ
ಈ ಬೃಹತ್ ಭೂಸ್ವಾಧೀನ ಪ್ರಕ್ರಿಯೆಯಿಂದಾಗಿ ಸುತ್ತಮುತ್ತಲಿನ ಪ್ರದೇಶಗಳ ಸುಮಾರು 1,126ಕ್ಕೂ ಅಧಿಕ ಭೂಮಾಲೀಕರು ತಮ್ಮ ಆಸ್ತಿಯನ್ನು ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಅತ್ತಿಬೆಲೆ, ಜಿಗಣಿ, ಬೇಗೂರು, ಉತ್ತರಹಳ್ಳಿ, ಕೆಂಗೇರಿ ಹಾಗೂ ದಾಸನಪುರ ಸೇರಿದಂತೆ ಒಟ್ಟು 30 ಹಳ್ಳಿಗಳು ಈ ಯೋಜನೆಯ ನೇರ ವ್ಯಾಪ್ತಿಗೆ ಒಳಪಡಲಿವೆ. ಮುಂದುವರಿದು, ಮೈಸೂರು ರಸ್ತೆ, ತುಮಕೂರು ರಸ್ತೆ, ಕನಕಪುರ ರಸ್ತೆ ಮತ್ತು ಹೊಸೂರು ರಸ್ತೆಗಳ ಪ್ರಮುಖ ತಿರುವುಗಳಲ್ಲಿ ಸುಗಮ ವಾಹನ ಸಂಚಾರಕ್ಕಾಗಿ ಅತ್ಯಾಧುನಿಕ ಮಾದರಿಯ ‘ಕ್ಲೋವರ್ಲೀಫ್ ಜಂಕ್ಷನ್’ ನಿರ್ಮಿಸಲು ಬಿಡಿಎಗೆ ಹೆಚ್ಚುವರಿ ಭೂಮಿಯ ಅಗತ್ಯತೆ ಎದುರಾಗಿದೆ.
ಸುಮಾರು ಎರಡು ದಶಕಗಳ ಹಿಂದೆ ಅಂದರೆ 2004ರಲ್ಲಿಯೇ ಈ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ದೊರೆತು, 2005ರ ಡಿಸೆಂಬರ್ನಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ ವಿವಿಧ ಕಾರಣಗಳಿಂದ ಕಾಮಗಾರಿ ವಿಳಂಬವಾದ ಹಿನ್ನೆಲೆಯಲ್ಲಿ ಭೂಮಾಲೀಕರು ನ್ಯಾಯಾಲಯದ ಮೊರೆ ಹೋಗಿದ್ದರು. ಪರಿಣಾಮವಾಗಿ ನ್ಯಾಯಾಲಯವು ಹಿಂದಿನ ಪ್ರಾಥಮಿಕ ಅಧಿಸೂಚನೆಗಳನ್ನು ರದ್ದುಪಡಿಸಿತ್ತು. ಇಷ್ಟು ವರ್ಷಗಳ ಕಾಲ ನನೆಗುದಿಗೆ ಬಿದ್ದಿದ್ದ ಈ ಮಹತ್ವದ ಯೋಜನೆಗೆ ಈಗ ಮರುಜೀವ ಸಿಕ್ಕಿದೆ.
ರೈತರಿಂದ ತೀವ್ರ ವಿರೋಧ
ಆದರೆ ಎರಡು ದಶಕಗಳ ಹಿಂದಿನ ಅಧಿಸೂಚನೆಯನ್ನು ಆಧರಿಸಿ ಪ್ರಸ್ತುತ ಭೂಮಿ ವಶಪಡಿಸಿಕೊಳ್ಳುವುದಕ್ಕೆ ಸ್ಥಳೀಯ ರೈತರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಇಂದಿನ ಮಾರುಕಟ್ಟೆ ಮೌಲ್ಯಕ್ಕೆ ತಕ್ಕಂತೆ ಸೂಕ್ತ ಪರಿಹಾರ ಧನವನ್ನು ನೀಡದಿದ್ದರೆ ಭೂಸ್ವಾಧೀನ ಪ್ರಕ್ರಿಯೆಯನ್ನು ಉಗ್ರವಾಗಿ ವಿರೋಧಿಸುವುದಾಗಿ ‘ಕರ್ನಾಟಕ ಪ್ರಾಂತ ರೈತ ಸಂಘ’ದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ. ಯಶವಂತ ಎಚ್ಚರಿಕೆ ನೀಡಿದ್ದಾರೆ. ಈ ಮಧ್ಯೆ, ‘ಬೆಂಗಳೂರು ಬಿಸಿನೆಸ್ ಕಾರಿಡಾರ್’ ಯೋಜನೆಗೆ ಜಾರಿಗೆ ತಂದಿರುವ ಪರಿಹಾರದ ನೀತಿ ನಿಯಮಗಳನ್ನೇ ಸಣ್ಣಪುಟ್ಟ ತಿದ್ದುಪಡಿಗಳೊಂದಿಗೆ ಈ ಪಿಆರ್ಆರ್-2 ಯೋಜನೆಗೂ ಅಳವಡಿಸಿಕೊಳ್ಳಲು ಸರ್ಕಾರದ ಅನುಮೋದನೆ ಕೋರಲಾಗಿದೆ. ಬೆಂಗಳೂರು ನಗರದ ಸುತ್ತಮುತ್ತ ಪ್ರಸ್ತುತ ಚಾಲ್ತಿಯಲ್ಲಿರುವ 71 ಕಿ.ಮೀ ಬೆಂಗಳೂರು ಬಿಸಿನೆಸ್ ಕಾರಿಡಾರ್, ಸರ್ಜಾಪುರದ ಸ್ವಿಫ್ಟ್ ಸಿಟಿ, ದೊಡ್ಡಬಳ್ಳಾಪುರದ ಕ್ವಿನ್ ಸಿಟಿ ಹಾಗೂ ಸ್ಯಾಟಲೈಟ್ ಟೌನ್ ರಿಂಗ್ ರಸ್ತೆ (STRR) ಯೋಜನೆಗಳ ಸಾಲಿಗೆ ಈಗ ಈ ಎರಡನೇ ಹಂತದ ಪೆರಿಫೆರಲ್ ರಿಂಗ್ ರಸ್ತೆ ಯೋಜನೆಯೂ ಸೇರ್ಪಡೆಗೊಂಡಿದ್ದು, ಇದು ರಾಜಧಾನಿಯ ಭವಿಷ್ಯದ ಸಾರಿಗೆ ಸ್ವರೂಪವನ್ನೇ ಬದಲಾಯಿಸುವ ನಿರೀಕ್ಷೆಯಿದೆ.
ಇದನ್ನೂ ಓದಿ: ರಾಜ್ಯದ ಡ್ಯಾಮ್ಗಳ ನೀರಿನ ಸಂಗ್ರಹದ ಸಂಪೂರ್ಣ ಚಿತ್ರಣ ಇಲ್ಲಿದೆ!
