ಅಯೋಧ್ಯೆ: ವಿಶ್ವಪ್ರಸಿದ್ಧ ಅಯೋಧ್ಯೆಯ ರಾಮ ಮಂದಿರದ (Ram Mandir) ಕಾಣಿಕೆ ಹಣದ ಕಳವು ಹಗರಣ ದಿನಕ್ಕೊಂದು ಹೊಸ ತಿರುವು ಪಡೆಯುತ್ತಿದ್ದು, ಪ್ರತಿದಿನವೂ ಆಘಾತಕಾರಿ ಸತ್ಯಗಳು ಹೊರಬರುತ್ತಿವೆ. ರಾಮ ಮಂದಿರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿರುವ ಚಂಪತ್ ರಾಯ್, ಈ ಇಡೀ ದೋಚುವಿಕೆ ಹಗರಣದ ಮುಖ್ಯ ಸೂತ್ರಧಾರ ತನ್ನ ಆಪ್ತ ಚಾಲಕ ಟಿನ್ನು ಯಾದವ್ ಎಂದು ತಮ್ಮ ಆಪ್ತರ ಬಳಿ ಒಪ್ಪಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ರಾಮಶಂಕರ್ ಯಾದವ್ ಅಲಿಯಾಸ್ ಟಿನ್ನು ಯಾದವ್, ಚಂಪತ್ ರಾಯ್ ಅವರ ದೀರ್ಘಕಾಲದ ನಂಬಿಕಸ್ಥ ಚಾಲಕನಾಗಿದ್ದು, ಆ ನಂಬಿಕೆಯನ್ನೇ ಬಂಡವಾಳವಾಗಿಸಿಕೊಂಡು ಇಷ್ಟೊಂದು ದೊಡ್ಡ ಮಟ್ಟದ ವಂಚನೆ ಎಸಗಿದ್ದಾನೆ ಎಂದು ಚಂಪತ್ ರಾಯ್ ಹೇಳಿದ್ದಾರೆನ್ನಲಾಗಿದೆ. ಅಷ್ಟೇ ಅಲ್ಲದೆ, ತಾನು ಸಿಕ್ಕಿಬೀಳುವ ಮುನ್ಸೂಚನೆ ಸಿಗುತ್ತಿದ್ದಂತೆಯೇ ಟಿನ್ನು ಯಾದವ್ ಈ ಹಗರಣದ ಮಾಹಿತಿಯನ್ನು ಸಮಾಜವಾದಿ ಪಕ್ಷದ ನಾಯಕರೊಬ್ಬರಿಗೆ ಲೀಕ್ ಮಾಡಿದ್ದ ಎಂದೂ ಮೂಲಗಳು ತಿಳಿಸಿವೆ.
ಟಿನ್ನು ಯಾದವ್ ಮನೆಯಲ್ಲಿ ಭಾರಿ ಪ್ರಮಾಣದ ನಗದು ಪತ್ತೆ
ಈ ಕಾಣಿಕೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಚಂಪತ್ ರಾಯ್ ಅವರ ಹೇಳಿಕೆಯನ್ನು ರಹಸ್ಯವಾಗಿ ದಾಖಲಿಸಿಕೊಂಡಿದ್ದಾರೆ. ಕಳೆದ ಜೂನ್ 27 ರಂದು ಈ ಹಗರಣದ ತೀವ್ರತೆ ಹೆಚ್ಚಾಗುತ್ತಿದ್ದಂತೆಯೇ ಚಂಪತ್ ರಾಯ್ ಹಾಗೂ ಮತ್ತೊಬ್ಬ ಟ್ರಸ್ಟಿ ಅನಿಲ್ ಮಿಶ್ರಾ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು. ಪ್ರಕರಣದ ತನಿಖೆ ನಡೆಸುತ್ತಿರುವ ಅಯೋಧ್ಯೆ ಪೊಲೀಸರು ಕಳವು ಆರೋಪದ ಮೇಲೆ ಟಿನ್ನು ಯಾದವ್ ಸೇರಿದಂತೆ ಅವಿನಾಶ್ ಶುಕ್ಲಾ, ಅನುಕಲ್ಪ್ ಮಿಶ್ರಾ, ಲವ್ ಕುಶ್ ಮಿಶ್ರಾ, ಮನೀಶ್ ಕುಮಾರ್ ಯಾದವ್, ಕರುಣೇಶ್ ಪಾಂಡೆ, ರಾಮಶಂಕರ್ ಮಿಶ್ರಾ ಮತ್ತು ಸುಭಾಷ್ ಶ್ರೀವಾಸ್ತವ ಎಂಬ ಎಂಟು ಜನರನ್ನು ಬಂಧಿಸಿದ್ದಾರೆ. ಇತ್ತೀಚೆಗಷ್ಟೇ ಪೊಲೀಸರು ಎಲ್ಲಾ ಆರೋಪಿಗಳ ಮನೆಗಳ ಮೇಲೆ ದಾಳಿ ನಡೆಸಿದ್ದು, ಮುಖ್ಯ ಆರೋಪಿ ಟಿನ್ನು ಯಾದವ್ ಮನೆಯಲ್ಲಿ ಭಾರಿ ಪ್ರಮಾಣದ ನಗದು ಪತ್ತೆಯಾಗಿದೆ.
ಮಂದಿರದ ಹುಂಡಿಗಳಿಂದ ಕಾಣಿಕೆ ಹಣವನ್ನು ಎಣಿಕೆ ಮಾಡುವ ಬೇಸ್ಮೆಂಟ್ ರೂಮ್ಗೆ ಸಾಗಿಸುವ ಉಸ್ತುವಾರಿಯನ್ನು ಟಿನ್ನು ಯಾದವ್ಗೆ ನೀಡಲಾಗಿತ್ತು. ಆ ಕೊಠಡಿಯ ಒಂದು ಕೀ ಟಿನ್ನು ಬಳಿ ಇದ್ದರೆ, ಮತ್ತೊಂದು ಕೀ ಬ್ಯಾಂಕ್ ಸಿಬ್ಬಂದಿಯ ಬಳಿ ಇರುತ್ತಿತ್ತು. ಇದನ್ನೇ ದುರುಪಯೋಗಪಡಿಸಿಕೊಂಡ ಟಿನ್ನು, ಬ್ಯಾಂಕ್ ಸಿಬ್ಬಂದಿಯ ಜೊತೆ ಶಾಮೀಲಾಗಿ ಕೋಟ್ಯಂತರ ರೂಪಾಯಿ ಕಾಣಿಕೆ ಹಣ ಹಾಗೂ ಅಮೂಲ್ಯ ವಸ್ತುಗಳನ್ನು ಲೂಟಿ ಮಾಡಿದ್ದಾನೆ. ಕದ್ದ ಹಣವನ್ನು ಈತ ಮತ್ತು ಬ್ಯಾಂಕ್ ಸಿಬ್ಬಂದಿ ಹಂಚಿಕೊಳ್ಳುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ಇದರ ನಡುವೆ, ಮತ್ತೊಬ್ಬ ಆರೋಪಿ ಅವಿನಾಶ್ ಶುಕ್ಲಾನ ಸಹೋದರ ಅಮಿತ್ ಶುಕ್ಲಾ ಎಂಬಾತ ಕಂತೆ ಕಂತೆ ನೋಟುಗಳನ್ನು ಹಿಡಿದುಕೊಂಡಿರುವ ಹಳೆಯ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಪೊಲೀಸರು ಇದರ ಸತ್ಯಾಸತ್ಯತೆಯನ್ನೂ ಪರಿಶೀಲಿಸುತ್ತಿದ್ದಾರೆ.
89 ಲಕ್ಷ ರೂಪಾಯಿ ನಗದು ಜಪ್ತಿ
ಬಂಧಿತ ಆರೋಪಿಗಳ ಪೈಕಿ ಅವಿನಾಶ್ ಶುಕ್ಲಾ ನೀಡಿದ ಮಾಹಿತಿ ಮೇರೆಗೆ ಪೊಲೀಸರು ಬರೋಬ್ಬರಿ 89 ಲಕ್ಷ ರೂಪಾಯಿ ನಗದನ್ನು ಜಪ್ತಿ ಮಾಡಿದ್ದಾರೆ. ಅವಿನಾಶ್ನ ಇನ್ನೊಬ್ಬ ಸಹೋದರ ಅಭಿಷೇಕ್ ನಡೆಸುತ್ತಿದ್ದ ಯೋಗ ಕೇಂದ್ರದ ಮೇಲೂ ಜೂನ್ 5 ರಂದೇ ಪೊಲೀಸರು ದಾಳಿ ನಡೆಸಿದ್ದರು. ಅಲ್ಲಿ ಇಡಲಾಗಿದ್ದ ನಾಲ್ಕು ಪೆಟ್ಟಿಗೆಗಳಲ್ಲಿದ್ದ ಕಂಬಳಿಗಳ ನಡುವೆ ಈ ಕೋಟ್ಯಂತರ ಹಣವನ್ನು ಬಚ್ಚಿಡಲಾಗಿತ್ತು. ಅಚ್ಚರಿಯೆಂದರೆ, ಅದರಲ್ಲಿ ಒಂದು ಪೆಟ್ಟಿಗೆಯ ಮೇಲೆ ‘ರಾಮರಾಜ್ಯ ಕೋಶ’ ಎಂದು ಬರೆಯಲಾಗಿತ್ತು ಎಂದು ಯೋಗ ಕೇಂದ್ರದ ವ್ಯವಸ್ಥಾಪಕಿ ಸೀಮಾ ತಿವಾರಿ ಖಚಿತಪಡಿಸಿದ್ದಾರೆ. ಸದ್ಯ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದು, ಈ ಜಾಲದ ಹಿಂದೆ ಇನ್ನು ಯಾರಿದ್ದಾರೆ ಹಾಗೂ ಹಣ ಎಲ್ಲೆಲ್ಲಿಗೆ ಹರಿದುಹೋಗಿದೆ ಎಂಬುದರ ಕನಿಷ್ಠ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ.
ಇದನ್ನೂ ಓದಿ: ದೆಹಲಿಯಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು: ಪಾಕ್ ಐಎಸ್ಐ ಬೆಂಬಲಿತ ನಾಲ್ವರು ಶಂಕಿತ ಉಗ್ರರ ಬಂಧನ
