ಹರಿಹರದ ವೀರಶೈವ (Davanagere) ಲಿಂಗಾಯತ ಪಂಚಮಸಾಲಿ ಪೀಠದ ಮಾಜಿ ಪೀಠಾಧ್ಯಕ್ಷ ವಚನಾನಂದ ಸ್ವಾಮೀಜಿ ಅವರಿಗೆ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡ ಮಟ್ಟದ ಕಾನೂನು ರಿಲೀಫ್ ಸಿಕ್ಕಿದೆ. ಮಕ್ಕಳ ಮೇಲಿನ ದೌರ್ಜನ್ಯ ಮತ್ತು ದುರ್ಬಳಕೆಯ ಆರೋಪದ ಹಿನ್ನೆಲೆಯಲ್ಲಿ ಬಂಧನದ ಭೀತಿ ಎದುರಿಸುತ್ತಿದ್ದ ಅವರಿಗೆ ದಾವಣಗೆರೆ ಜಿಲ್ಲಾ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಜಾಮೀನು ನೀಡಿದ ನ್ಯಾಯಾಲಯ ತಮ್ಮ ವಿರುದ್ಧದ ಗಂಭೀರ ಆರೋಪಗಳಿಂದಾಗಿ ಬಂಧನಕ್ಕೊಳಗಾಗುವ ಆತಂಕದಲ್ಲಿದ್ದ ಸ್ವಾಮೀಜಿ, ಏಪ್ರಿಲ್ 21ರಂದು ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಅಡಿಯಲ್ಲಿ ಸಲ್ಲಿಸಲಾಗಿದ್ದ ಈ ಅರ್ಜಿಯನ್ನು ಕೂಲಂಕಷವಾಗಿ ಪರಿಶೀಲಿಸಿದ ದಾವಣಗೆರೆಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು, ಮೇ 2ರಂದು ಅವರಿಗೆ ಜಾಮೀನು ನೀಡಿ ಆದೇಶಿಸಿದೆ. ಈ ತೀರ್ಪಿನಿಂದಾಗಿ ವಚನಾನಂದ ಶ್ರೀಗಳ ಬಂಧನದ ಭೀತಿ ಸದ್ಯಕ್ಕೆ ದೂರವಾಗಿದೆ.
ಮಠದ ಸುತ್ತ ಬಿಗಿ ಬಂದೋಬಸ್ತ್ ಸ್ವಾಮೀಜಿಯವರನ್ನು ಪೀಠದಿಂದ ಕೆಳಗಿಳಿಸಿದ ನಂತರ ಹರಿಹರದ ಮಠದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಮಠದ ಟ್ರಸ್ಟ್ ಸದಸ್ಯರು ಮತ್ತು ಸ್ವಾಮೀಜಿ ಪರವಾಗಿರುವ ಬೆಂಬಲಿಗರ ನಡುವೆ ಶಕ್ತಿ ಪ್ರದರ್ಶನ ಹಾಗೂ ವಾಗ್ವಾದಗಳು ಮುಂದುವರಿದಿವೆ. ಮಠದ ಆವರಣದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯಬಾರದು ಎಂಬ ಮುನ್ನೆಚ್ಚರಿಕೆ ಕ್ರಮವಾಗಿ, ದಾವಣಗೆರೆ ಜಿಲ್ಲಾಡಳಿತವು ಮೇ 4ರಿಂದ ಮಠದ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದೆ. ಸಂಘರ್ಷ ತಡೆಯಲು ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, ಪರಿಸ್ಥಿತಿ ಇನ್ನೂ ಉದ್ವಿಗ್ನವಾಗಿಯೇ ಉಳಿದಿದೆ.
ಇದನ್ನೂ ಓದಿ: ಡಿಜಿಲಾಕರ್ ಯಶಸ್ವಿ ಅನುಷ್ಠಾನ, ಕರ್ನಾಟಕ್ಕೆ ಕೇಂದ್ರ ಗೌರವ
