ಬೆಂಗಳೂರು: ಕರ್ನಾಟಕದಲ್ಲಿ ಬರೋಬ್ಬರಿ 24 ವರ್ಷಗಳ ನಂತರ ಅಂದರೆ 2002ರ ಬಳಿಕ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಾಂದ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ತೀವ್ರ ಗೊಂದಲ ಮತ್ತು ಸವಾಲುಗಳಿಗೆ ಕಾರಣವಾಗಿದೆ. ಕಳೆದ ಎರಡು ದಶಕಗಳಲ್ಲಿ ಬೆಂಗಳೂರಿನ ಭೌಗೋಳಿಕ ಮತ್ತು ಜನಸಂಖ್ಯಾ ಚಿತ್ರಣ ಸಂಪೂರ್ಣವಾಗಿ ಬದಲಾಗಿದ್ದು, ಈ ಹಿನ್ನೆಲೆಯಲ್ಲಿ ನಗರದ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್ಒ) ಹಾಗೂ ಮತದಾರರು ಸೂಕ್ತ ದಾಖಲೆಗಳನ್ನು ಪತ್ತೆ ಹಚ್ಚಲು ಮತ್ತು ನಮೂನೆಗಳನ್ನು ಭರ್ತಿ ಮಾಡಲು ತೀವ್ರ ಪರದಾಡುವಂತಾಗಿದೆ. ನಗರದಲ್ಲಿ ಒಟ್ಟು 1.03 ಕೋಟಿಗೂ ಅಧಿಕ ಮತದಾರರಿದ್ದು, ಇದು ರಾಜ್ಯದ ಒಟ್ಟು ಮತದಾರರ ಆರನೇ ಒಂದು ಭಾಗದಷ್ಟಿದೆ. ಹೀಗಿದ್ದರೂ, ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಪರಿಷ್ಕರಣೆ ಕಾರ್ಯ ಅತ್ಯಂತ ನಿಧಾನಗತಿಯಲ್ಲಿ ಸಾಗುತ್ತಿದೆ.
ಏನೆಲ್ಲಾ ಸಮಸ್ಯೆಗಳಾಗುತ್ತಿದೆ?
2002ಕ್ಕೆ ಹೋಲಿಸಿದರೆ ವೈಟ್ಫೀಲ್ಡ್, ಮಹದೇವಪುರ, ಯಲಹಂಕ, ಕೆಂಗೇರಿಯಂತಹ ಪ್ರದೇಶಗಳು ಇಂದು ಬೃಹತ್ ನಗರೀಕರಣಕ್ಕೆ ಸಾಕ್ಷಿಯಾಗಿವೆ. ಕೆಲಸ, ಶಿಕ್ಷಣ ಹಾಗೂ ಮದುವೆ ಕಾರಣಗಳಿಗಾಗಿ ದೇಶದ ವಿವಿಧ ಮೂಲೆಗಳಿಂದ ಲಕ್ಷಾಂತರ ಜನರು ಬೆಂಗಳೂರಿಗೆ ವಲಸೆ ಬಂದಿದ್ದು, ಕ್ಷೇತ್ರಗಳ ಗಡಿಗಳೂ ಪುನರ್ ವಿಂಗಡಣೆಯಾಗಿವೆ. ಇದರಿಂದಾಗಿ ತಮ್ಮ ಹಳೆಯ ಮತದಾನದ ವಿವರಗಳನ್ನು ಅಥವಾ 2002ರ ಮತದಾರರ ಪಟ್ಟಿಯಲ್ಲಿ ಹೆಸರನ್ನು ಹುಡುಕುವುದು ನಾಗರಿಕರಿಗೆ ಕಷ್ಟಕರವಾಗಿದೆ. ಇದಕ್ಕೆ ತೋರಿಕೆಯಾಗಿ, ಹೊಸ ಪ್ರದೇಶಗಳಲ್ಲಿ ವಾಸಿಸುತ್ತಿರುವ ಅನೇಕರು ಹಳೆಯ ವಿವರ ಪತ್ತೆಯಾಗದೆ ತಪ್ಪು ಸ್ಪೆಲ್ಲಿಂಗ್ ಅಥವಾ ಹಳೆಯ ಅಸೆಂಬ್ಲಿ ಕ್ಷೇತ್ರಗಳ ವಿವರಗಳೊಂದಿಗೆ ನಮೂನೆಗಳನ್ನು ಭರ್ತಿ ಮಾಡುತ್ತಿದ್ದಾರೆ.
ಇದರೊಂದಿಗೆ, ಪರಿಷ್ಕರಣೆಗೆ ಸಂಬಂಧಿಸಿದಂತೆ ನೀಡಲಾಗುತ್ತಿರುವ ನಮೂನೆಗಳು ಕೇವಲ ಕನ್ನಡ ಭಾಷೆಯಲ್ಲಷ್ಟೇ ಲಭ್ಯವಿರುವುದು ಮತ್ತೊಂದು ದೊಡ್ಡ ತೊಡಕಾಗಿದೆ. ಇಂಗ್ಲಿಷ್ ಅಥವಾ ಇತರ ಭಾಷೆಗಳನ್ನು ಮಾತನಾಡುವ ಬಹುಸಂಖ್ಯಾತ ನಿವಾಸಿಗಳು ಈ ನಮೂನೆಗಳನ್ನು ಅರ್ಥೈಸಿಕೊಳ್ಳಲು ಮತ್ತು ಭರ್ತಿ ಮಾಡಲು ಕಷ್ಟಪಡುತ್ತಿದ್ದಾರೆ. ಮತ್ತೊಂದೆಡೆ, ಕೊಳೆಚೆ ಪ್ರದೇಶಗಳ ನಿವಾಸಿಗಳು ತಮಗೆ ನಮೂನೆಗಳು ತಲುಪದಿರುವುದು ಹಾಗೂ ಪಟ್ಟಿಯಿಂದ ಹೆಸರು ಕೈಬಿಟ್ಟು ಹೋದರೆ ಸರ್ಕಾರದ ಪಡಿತರ, ವಸತಿ ಮುಂತಾದ ಕಲ್ಯಾಣ ಯೋಜನೆಗಳ ಸೌಲಭ್ಯಗಳು ತಪ್ಪಿಹೋಗಬಹುದು ಎಂಬ ಆತಂಕದಲ್ಲಿದ್ದಾರೆ. ಆಧಾರ್, ರೇಷನ್ ಕಾರ್ಡ್, ಮತದಾರರ ಗುರುತಿನ ಚೀಟಿಗಳನ್ನು ಹಿಡಿದು ಹೆಸರು ಉಳಿಸಿಕೊಳ್ಳಲು ಅಧಿಕಾರಿಗಳ ಮೊರೆ ಹೋಗುತ್ತಿದ್ದಾರೆ.
ಸರ್ಕಾರಿ ಅಧಿಕಾರಿಗಳಿಗೂ ಸಂಕಷ್ಟ
ಇತ್ತ ಬಿಎಲ್ಒ ಆಗಿ ನಿಯೋಜನೆಗೊಂಡಿರುವ ವಿವಿಧ ಸರ್ಕಾರಿ ಇಲಾಖೆಗಳ ಸಿಬ್ಬಂದಿಗೂ ಈ ಕೆಲಸ ನುಂಗಲಾರದ ಬಿಸಿತುಪ್ಪವಾಗಿದೆ. ಸರಿಯಾದ ತರಬೇತಿ ಇಲ್ಲದೆ, ತಮ್ಮ ಮೂಲ ಕರ್ತವ್ಯಗಳ ಜೊತೆಗೆ ಮನೆ ಮನೆಗೆ ತೆರಳಿ ಪರಿಷ್ಕರಣೆ ಮಾಡುವುದು ಅವರಿಗೆ ಸವಾಲಾಗಿ ಪರಿಣಮಿಸಿದೆ. ನಗರದಲ್ಲಿ ಉದ್ಯೋಗಸ್ಥರು ಹೆಚ್ಚಿರುವುದರಿಂದ ಹಲವು ಬಾರಿ ಭೇಟಿ ನೀಡಿದರೂ ಮನೆಗಳಲ್ಲಿ ಜನರು ಸಿಗುತ್ತಿಲ್ಲ. ಅಲ್ಲದೆ, ತಾಂತ್ರಿಕ ನಿಯಮಗಳ ಬದಲಾವಣೆ, ಹಳೆಯ ದಾಖಲೆಗಳ ಲಭ್ಯತೆಯಿಲ್ಲದಿರುವುದು ಹಾಗೂ ದಿನಾಂಕ ಮತ್ತು ಹೆಸರುಗಳಲ್ಲಿನ ಸಣ್ಣಪುಟ್ಟ ತಪ್ಪುಗಳನ್ನು ‘ತರ್ಕಬದ್ಧ ವ್ಯತ್ಯಾಸಗಳು’ ಎಂದು ಗುರುತಿಸುತ್ತಿರುವುದು ಬಿಎಲ್ಒಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಇದಲ್ಲದೆ, ಮನೆಗಳಿಗೆ ಭೇಟಿ ನೀಡುವ ವೇಳೆ ಎದುರಾಗುವ ಒತ್ತಡ ಹಾಗೂ ಮಹಿಳಾ ಅಧಿಕಾರಿಗಳ ವೈಯಕ್ತಿಕ ದೂರವಾಣಿ ಸಂಖ್ಯೆಗಳು ದುರುಪಯೋಗವಾಗುತ್ತಿರುವ ದೂರುಗಳೂ ಕೇಳಿಬಂದಿವೆ.
ಜುಲೈ 22ರ ವೇಳೆಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ಸುಮಾರು 25.47 ಲಕ್ಷ ಮತದಾರರು ‘ಗೈರುಹಾಜರಿ, ಸ್ಥಳಾಂತರ, ನಕಲಿ, ಮೃತ’ (ಎಸ್ಡಿಡಿಒ) ವರ್ಗದಡಿ ಗುರುತಿಸಲ್ಪಟ್ಟಿದ್ದಾರೆ. ಆದರೆ, ಡಿಜಿಟಲೀಕರಣದ ಪ್ರಗತಿ ಮಾತ್ರ ರಾಜ್ಯಮಟ್ಟದ ಶೇ. 67.23ಕ್ಕೆ ಹೋಲಿಸಿದರೆ ಬೆಂಗಳೂರಿನಲ್ಲಿ ಕೇವಲ ಶೇ. 31.28 ರಷ್ಟಿದೆ. ಅಧಿಕಾರಿಗಳಿಂದ ಕೇವಲ ಗುರಿ ತಲುಪುವ ಮತ್ತು ಅಂಕಿಅಂಶಗಳನ್ನು ಹೆಚ್ಚಿಸುವ ಒತ್ತಡ ಹೆಗಲೇರಿದ್ದು, ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಈ ಪ್ರಕ್ರಿಯೆಯನ್ನು ಸುಗಮವಾಗಿ ಪೂರ್ಣಗೊಳಿಸುವುದು ಹೇಗೆ ಎಂಬ ಪ್ರಶ್ನೆ ಎದುರಾಗಿದೆ.
