ಬೆಂಗಳೂರು: ಭಾರತೀಯ ಸಿನಿರಂಗದ ಇತಿಹಾಸದಲ್ಲೇ ಅತ್ಯಂತ ಅದ್ದೂರಿಯಾಗಿ ಮೂಡಿಬರುತ್ತಿರುವ ಪೌರಾಣಿಕ ಮಹಾಕಾವ್ಯ ‘ರಾಮಾಯಣ’ದ ಬಗ್ಗೆ ಸೌತ್ ಸ್ಟಾರ್ ನಟಿ ಕಾಜಲ್ ಅಗರ್ವಾಲ್ (Ramayana) ಹಲವು ಸ್ವಾರಸ್ಯಕರ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಲಂಕಾಧಿಪತಿ ರಾವಣನಾಗಿ ಕಾಣಿಸಿಕೊಳ್ಳಲಿರುವ ರಾಕಿಂಗ್ ಸ್ಟಾರ್ ಯಶ್ ಅವರ ಅಪ್ರತಿಮ ಅಭಿನಯಕ್ಕೆ ಕಾಜಲ್ ಮನಸಾರೆ ಫಿದಾ ಆಗಿದ್ದಾರೆ. ಯಶ್ ಅವರನ್ನು ಓರ್ವ ಅದ್ಭುತ ಪ್ರತಿಭಾವಂತ ನಟ ಎಂದು ಬಣ್ಣಿಸಿರುವ ಅವರು, ಕೆಜಿಎಫ್ ನಾಯಕನೊಂದಿಗೆ ಕ್ಯಾಮೆರಾ ಎದುರಿಸಿದ ಅನುಭವವನ್ನು ಕೊಂಡಾಡಿದ್ದಾರೆ.
ಶೀಘ್ರದಲ್ಲಿ ಎರಡನೇ ಪಾರ್ಟ್ ಶೂಟಿಂಗ್
ನಿರ್ದೇಶಕ ನಿತೇಶ್ ತಿವಾರಿ ಹಾಗೂ ನಿರ್ಮಾಪಕ ನಿಖಿಲ್ ದ್ವಿವೇದಿ ಅವರ ಮಹತ್ವಾಕಾಂಕ್ಷೆಯ ಈ ಸಿನಿಮಾದಲ್ಲಿ ಯಶ್ ರಾವಣನಾಗಿ ಅಬ್ಬರಿಸಲಿದ್ದರೆ, ಕಾಜಲ್ ಅಗರ್ವಾಲ್ ಅವರು ರಾವಣನ ಪತ್ನಿ ಮಂಡೋದರಿಯ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ಸದ್ಯದ ಶೂಟಿಂಗ್ ಪ್ರಗತಿಯ ಬಗ್ಗೆ ಮಾತನಾಡಿರುವ ಕಾಜಲ್, ಚಿತ್ರದ ಮೊದಲ ಭಾಗದ ಚಿತ್ರೀಕರಣ ಯಶಸ್ವಿಯಾಗಿ ಪೂರ್ಣಗೊಂಡಿದೆ. ಸದ್ಯಕ್ಕೆ ಫಸ್ಟ್ ಪಾರ್ಟ್ ಕೆಲಸಗಳು ಮುಗಿದಿದ್ದು, ಶೀಘ್ರದಲ್ಲೇ ಎರಡನೇ ಭಾಗದ ಚಿತ್ರೀಕರಣಕ್ಕೆ ಚಾಲನೆ ಸಿಗಲಿದೆ ಎಂದು ತಿಳಿಸಿದ್ದಾರೆ.
ಈ ಸಿನಿಮಾದಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ ಹಾಗೂ ಸಾಯಿ ಪಲ್ಲವಿ ಸೀತೆಯಾಗಿ ನಟಿಸುತ್ತಿದ್ದು, ಇವರೊಂದಿಗೆ ರಾವಣ-ಮಂಡೋದರಿ ಜೋಡಿಯ ಸೀನ್ಗಳನ್ನು ಕಣ್ಣುಂಬಿಕೊಳ್ಳಲು ಪ್ರೇಕ್ಷಕರು ಕಾಯುತ್ತಿದ್ದಾರೆ. ನಿರ್ದೇಶಕರ ಯೋಜನೆಯ ಪ್ರಕಾರ, ಸಿನಿಮಾದ ಮೊದಲ ಭಾಗದಲ್ಲಿ ರಾಮನ ಬಾಲ್ಯ, ಸೀತಾ ಕಲ್ಯಾಣ ಹಾಗೂ ಸೀತ ಅಪಹರಣದವರೆಗಿನ ಕಥೆಗೆ ಒತ್ತು ನೀಡಲಾಗಿದೆ. ಕಥೆಯಲ್ಲಿ ರಾವಣನ ಸಾಮ್ರಾಜ್ಯದ ವೈಭವ ಮತ್ತು ಲಂಕೆಯ ದೃಶ್ಯಗಳು ಹೆಚ್ಚಾಗಿ ಎರಡನೇ ಭಾಗದಲ್ಲಿ ತೆರೆದುಕೊಳ್ಳುವುದರಿಂದ, ಯಶ್ ಹಾಗೂ ಕಾಜಲ್ ಅವರ ಕಾಂಬಿನೇಷನ್ ಸೀನ್ಗಳು ‘ರಾಮಾಯಣ 2’ ಚಿತ್ರದಲ್ಲಿ ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡಲಿವೆ. ರಾವಣನ ಪಾತ್ರಕ್ಕೆ ಪ್ರತ್ಯೇಕ ಮತ್ತು ಸಮಾನ ಪ್ರಾಮುಖ್ಯತೆ ನೀಡಲಾಗುತ್ತಿದ್ದು, ಎರಡನೇ ಭಾಗದಲ್ಲಿ ರಾಮ-ರಾವಣರ ಮುಖಾಮುಖಿ ಚಿತ್ರದ ಗಾಂಭೀರ್ಯವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲಿದೆ.
ಎ.ಆರ್. ರೆಹಮಾನ್ ಸಂಗೀತ
ಸರಿಸುಮಾರು 4,000 ಕೋಟಿ ರೂಪಾಯಿಗಳ ಬ್ರಹ್ಮಾಂಡ ಬಜೆಟ್ನಲ್ಲಿ ಸಿದ್ಧವಾಗುತ್ತಿರುವ ಈ ಸಿನಿಮಾ ಭಾರತೀಯ ಚಿತ್ರರಂಗದ ದಿಕ್ಕನ್ನೇ ಬದಲಾಯಿಸಲಿದೆ ಎನ್ನಲಾಗುತ್ತಿದೆ. ಈ ದೃಶ್ಯ ವೈಭವಕ್ಕೆ ಆಸ್ಕರ್ ವಿಜೇತ ಎ.ಆರ್. ರೆಹಮಾನ್ ಹಾಗೂ ಹಾಲಿವುಡ್ನ ಪ್ರಸಿದ್ಧ ಸಂಗೀತ ನಿರ್ದೇಶಕ ಹ್ಯಾನ್ಸ್ ಜಿಮ್ಮರ್ ಒಟ್ಟಾಗಿ ಸಂಗೀತ ನೀಡುತ್ತಿರುವುದು ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.
ಇದನ್ನೂ ಓದಿ: ಒಟಿಟಿ ಹಾಗೂ ಟಿವಿಗೆ ಬರಲು ರೆಡಿಯಾಯ್ತು ‘ಡೆವಿಲ್’ ಚಿತ್ರ, ಖುಷಿಯಲ್ಲಿ ಚಾಲೆಂಜಿಂಗ್ ಸ್ಟಾರ್ ಫ್ಯಾನ್ಸ್
