ಬೆಂಗಳೂರು: ಬಿಡದಿ ಭಾಗದಲ್ಲಿ ಕೈಗಾರಿಕಾ ಉದ್ದೇಶಕ್ಕಾಗಿ ನಡೆಯುತ್ತಿರುವ ಜಮೀನು ಸ್ವಾಧೀನ ಪ್ರಕ್ರಿಯೆ ಹಾಗೂ ಇದರ ವಿರುದ್ಧ ಜೆಡಿಎಸ್ ಹಮ್ಮಿಕೊಂಡಿರುವ ಹೋರಾಟದ ವಿರುದ್ಧ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಟೀಕೆಗಳಿಗೆ ಕಡಕ್ ಕೌಂಟರ್ ನೀಡಿರುವ ಸಿಎಂ, ವಿರೋಧ ಪಕ್ಷಗಳು ಕೇವಲ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಈ ಇಡೀ ವಿಷಯವನ್ನು ವಿವಾದ ಮಾಡುತ್ತಿವೆ ಎಂದು ಜರೆದಿದ್ದಾರೆ.
ಕುಮಾರಸ್ವಾಮಿ ಆಧಾರ ರಹಿತ ಆರೋಪ
ಬಿಡದಿ ಜಮೀನು ವಿಚಾರದಲ್ಲಿ ಕುಮಾರಸ್ವಾಮಿ ಅವರು ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಕಿಡಿಕಾರಿರುವ ಡಿ.ಕೆ. ಶಿವಕುಮಾರ್, ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್. ಯಡಿಯೂರಪ್ಪ ಹಾಗೂ ಜಗದೀಶ್ ಶೆಟ್ಟರ್ ಅವರ ನಿರ್ಧಾರಗಳನ್ನೇ ಈಗಿನ ಸರ್ಕಾರ ಮುಂದುವರಿಸಿಕೊಂಡು ಹೋಗುತ್ತಿದೆ. ಶೆಟ್ಟರ್ ಅವರ ಕಾಲದಲ್ಲಿ ಸರಿಸುಮಾರು ಒಂದು ಸಾವಿರ ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲಾಗಿತ್ತು, ಆಗ ಜಮೀನು ಕಳೆದುಕೊಂಡವರು ರೈತರಾಗಿರಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಈ ಯೋಜನೆಯ ಮೂಲ ಪಿತಾಮಹರೇ ಕುಮಾರಸ್ವಾಮಿ ಅವರು ಎಂದು ಕುಟುಕಿರುವ ಸಿಎಂ, ಅಂದು ಅವರದ್ದೇ ಆಡಳಿತವಿದ್ದಾಗ ಬಿಡದಿಯ ಈ ವಲಯವನ್ನು ಯಾಕೆ ‘ರೆಡ್ ಝೋನ್’ ಎಂದು ಘೋಷಿಸಿದರು ಮತ್ತು ಅವರೇ ಯಾಕೆ ನೋಟಿಫಿಕೇಷನ್ ಹೊರಡಿಸಿದ್ದರು ಎಂದು ಉತ್ತರಿಸುವಂತೆ ಸವಾಲು ಹಾಕಿದ್ದಾರೆ. ರೈತರ ಮೇಲೆ ಅಷ್ಟೊಂದು ಪ್ರೀತಿ ಇದ್ದಿದ್ದರೆ ತಮ್ಮ ಅಧಿಕಾರಾವಧಿಯಲ್ಲೇ ಅದನ್ನು ರದ್ದು ಮಾಡಬಹುದಿತ್ತಲ್ಲವೇ ಎಂದು ಸಿಎಂ ಲೇವಡಿ ಮಾಡಿದ್ದಾರೆ.
ಕಾನೂನುಬಾಹಿರವಾಗಿ ಭೂಮಿಯನ್ನು ಬಿಡುಗಡೆ (ಡಿ-ನೋಟಿಫೈ) ಮಾಡಿ ನಾನು ಜೈಲು ಪಾಲಾಗಲು ತಯಾರಿಲ್ಲ ಎಂದು ಮುಖ್ಯಮಂತ್ರಿಗಳು ಖಡಕ್ ಆಗಿ ನುಡಿದಿದ್ದಾರೆ. ನಮ್ಮ ಸರ್ಕಾರ ಭೂಮಿ ಕಳೆದುಕೊಳ್ಳುವ ರೈತ ಕುಟುಂಬಗಳಿಗೆ ಯಾವುದೇ ಅನ್ಯಾಯ ಮಾಡುತ್ತಿಲ್ಲ. ಬದಲಿಗೆ ಇತಿಹಾಸದಲ್ಲೇ ಮೊದಲ ಬಾರಿಗೆ ಎಕರೆಗೆ ಬರೋಬ್ಬರಿ 2.5 ಕೋಟಿ ರೂಪಾಯಿಗಳವರೆಗೂ ಭಾರಿ ಮೊತ್ತದ ಪರಿಹಾರ ನೀಡಲಾಗುತ್ತಿದೆ. ಇದರೊಂದಿಗೆ ಶೇಕಡಾ 50 ರಷ್ಟು ಅಭಿವೃದ್ಧಿಪಡಿಸಿದ ಸೈಟುಗಳನ್ನು ಕೊಡುವುದಾಗಿ ಭರವಸೆ ನೀಡಲಾಗಿದೆ. ಹೀಗಿರುವಾಗ ರೈತರ ಹಿತ ಕಾಯುತ್ತಿರುವ ಸರ್ಕಾರದ ವಿರುದ್ಧ ಪಾದಯಾತ್ರೆ ಮಾಡಲು ಹೊರಟಿರುವುದು ಹಾಸ್ಯಾಸ್ಪದ ಎಂದಿದ್ದಾರೆ. ರಾಜ್ಯದಲ್ಲಿ ಹೊಸ ಕೈಗಾರಿಕೆಗಳನ್ನು ತರುತ್ತೇವೆ ಎಂದು ದೊಡ್ಡದಾಗಿ ಮಾತನಾಡುವ ಕುಮಾರಸ್ವಾಮಿ ಅವರು, ಅದಕ್ಕೆ ಬೇಕಾದ ಜಮೀನನ್ನು ಎಲ್ಲಿಂದ ತರುತ್ತಾರೆ ಎಂದು ಪ್ರಶ್ನಿಸುವ ಮೂಲಕ ಜೆಡಿಎಸ್ ಹೋರಾಟಕ್ಕೆ ಸಿಎಂ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: ಬಸ್ ದರ ಏರಿಕೆಗೆ ಸಾರಿಗೆ ನಿಗಮ ಪ್ರಸ್ತಾವನೆ, ಸಿಎಂ ಹೇಳಿದ್ದೇನು?
