ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ನಾಳೆ ಅಧಿಕಾರ ಸೂತ್ರ ಹಿಡಿಯಲಿರುವ ಡಿ.ಕೆ. ಶಿವಕುಮಾರ್ (DK Shivakumar) ಅವರು, ಗಾಂಧಿ ಕುಟುಂಬದೊಂದಿಗೆ ತಮಗಿರುವ ದಶಕಗಳ ಕಾಲದ ಭಾವನಾತ್ಮಕ ನಂಟನ್ನು ನೆನಪಿಸಿಕೊಂಡು ಧನ್ಯವಾದ ಅರ್ಪಿಸಿದ್ದಾರೆ. ತಮ್ಮ ರಾಜಕೀಯ ಬದುಕಿನ ಏಳುಬೀಳುಗಳ ವಿವಿಧ ಹಂತಗಳಲ್ಲಿ ಗಾಂಧಿ ಪರಿವಾರದ ನಾಯಕರು ತಮಗೆ ನೀಡಿದ ಅಪ್ರತಿಮ ಬೆಂಬಲ, ನಂಬಿಕೆ ಮತ್ತು ಪ್ರೋತ್ಸಾಹವನ್ನು ಸ್ಮರಿಸಿ ಅವರು ಸುದೀರ್ಘವಾದ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ.
ತಮ್ಮ ಅಧಿಕೃತ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿರುವ ಡಿ.ಕೆ. ಶಿವಕುಮಾರ್, “ನನ್ನ ಇಂದಿನ ರಾಜಕೀಯ ಬೆಳವಣಿಗೆಯನ್ನು ರೂಪಿಸುವಲ್ಲಿ ಗಾಂಧಿ ಕುಟುಂಬದ ಕೊಡುಗೆ ಅಪಾರವಾದದ್ದು. ಅವರು ಕೇವಲ ಹೈಕಮಾಂಡ್ ನಾಯಕರಾಗಿ ಅಷ್ಟೇ ಅಲ್ಲದೆ, ವೈಯಕ್ತಿಕವಾಗಿ ನನ್ನ ಬದುಕಿನ ಪ್ರತಿ ಹಂತದಲ್ಲೂ ನನ್ನ ಬೆನ್ನಿಗೆ ನಿಂತಿದ್ದಾರೆ” ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.
ಸಾಮರ್ಥ್ಯ ಗುರುತಿಸಿದ್ದ ರಾಜೀವ್ ಗಾಂಧಿ: ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರೊಂದಿಗಿನ ದಿನಗಳನ್ನು ಮೆಲುಕು ಹಾಕಿರುವ ಡಿಕೆಶಿ, “ನನ್ನಲ್ಲಿದ್ದ ನಾಯಕತ್ವದ ಗುಣಗಳ ಬಗ್ಗೆ ನನಗೇ ಸ್ಪಷ್ಟತೆ ಇಲ್ಲದಿದ್ದ ಕಾಲದಲ್ಲಿ, ಒಬ್ಬ ಸಾಮಾನ್ಯ ಯುವ ಕಾರ್ಯಕರ್ತನಾಗಿದ್ದ ನನ್ನನ್ನು ಗುರುತಿಸಿ ಪ್ರೋತ್ಸಾಹಿಸಿದ್ದೇ ರಾಜೀವ್ ಗಾಂಧಿ ಅವರು. ಅವರ ಆ ನಂಬಿಕೆಯೇ ನನ್ನನ್ನು ಸಾರ್ವಜನಿಕ ಸೇವೆಗೆ ಧುಮುಕಲು ಮತ್ತು ದೊಡ್ಡ ಕನಸುಗಳನ್ನು ಕಾಣಲು ಪ್ರೇರೇಪಿಸಿತು. ನಿಜವಾದ ನಾಯಕ ಎಂದರೆ ಇತರರ ಸಾಮರ್ಥ್ಯವನ್ನು ಮುಂಚಿತವಾಗಿಯೇ ಅರಿತು, ಅವರು ಬೆಳೆಯಲು ದಾರಿ ಮಾಡಿಕೊಡುವವನು. ರಾಜೀವ್ ಗಾಂಧಿ ಅವರು ನನ್ನ ಪಾಲಿಗೆ ಅದೇ ಮಾರ್ಗದರ್ಶಕರಾಗಿದ್ದರು” ಎಂದಿದ್ದಾರೆ.
ಕಷ್ಟದ ದಿನಗಳಲ್ಲಿ ಧೈರ್ಯ ತುಂಬಿದ ಸೋನಿಯಾ ಗಾಂಧಿ: ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನಾಯಕತ್ವದ ಬಗ್ಗೆ ಬರೆದುಕೊಂಡಿರುವ ನೂತನ ಸಿಎಂ, “ಯಶಸ್ಸಿನ ದಿನಗಳಲ್ಲಿ ಜೊತೆಗಿರುವುದು ದೊಡ್ಡ ವಿಷಯವಲ್ಲ. ಆದರೆ ಒಬ್ಬ ವ್ಯಕ್ತಿ ಅತ್ಯಂತ ಕಠಿಣ ಹಾಗೂ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿರುವಾಗ ಹೆಗಲಿಗೆ ಹೆಗಲು ಕೊಟ್ಟು ಧೈರ್ಯ ತುಂಬುವುದೇ ಅಸಲಿ ನಾಯಕತ್ವ. ಅದನ್ನು ನಾನು ಶ್ರೀಮತಿ ಸೋನಿಯಾ ಗಾಂಧಿ ಅವರಿಂದ ಕಲಿತಿದ್ದೇನೆ. ನನ್ನ ರಾಜಕೀಯ ಜೀವನದ ಅತ್ಯಂತ ಸವಾಲಿನ ಮತ್ತು ಕರಾಳ ದಿನಗಳಲ್ಲಿ ಸೋನಿಯಾ ಗಾಂಧಿ ಅವರು ನನ್ನ ಮೇಲಿಟ್ಟಿದ್ದ ಅಚಲವಾದ ವಿಶ್ವಾಸವನ್ನು ನಾನು ಜೀವನದ ಕೊನೆಯ ಉಸಿರಿರುವವರೆಗೂ ಮರೆಯಲು ಸಾಧ್ಯವಿಲ್ಲ” ಎಂದು ಭಾವುಕರಾಗಿದ್ದಾರೆ.
ರಾಹುಲ್ ಗಾಂಧಿ ಸದಾ ಸ್ಫೂರ್ತಿಯ ಸೆಲೆ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ದೂರದೃಷ್ಟಿಯನ್ನು ಶ್ಲಾಘಿಸಿರುವ ಅವರು, “ಎಲ್ಲ ವರ್ಗದ ಜನರನ್ನು ಒಳಗೊಂಡ ಸಮೃದ್ಧ ಭಾರತವನ್ನು ನಿರ್ಮಿಸುವ ರಾಹುಲ್ ಗಾಂಧಿ ಅವರ ಚಿಂತನೆ, ಪ್ರಜಾಪ್ರಭುತ್ವ ಮೌಲ್ಯಗಳ ಮೇಲಿನ ಗೌರವ ಹಾಗೂ ಇತರರ ಅಹವಾಲುಗಳನ್ನು ತಾಳ್ಮೆಯಿಂದ ಆಲಿಸುವ ಸೌಜನ್ಯ ನನ್ನಂತಹ ಲಕ್ಷಾಂತರ ಕಾರ್ಯಕರ್ತರಿಗೆ ದಿನನಿತ್ಯ ಸ್ಫೂರ್ತಿ ನೀಡುತ್ತದೆ. ನನ್ನ ಸಾರ್ವಜನಿಕ ಹೋರಾಟದ ಪಯಣದುದ್ದಕ್ಕೂ ಅವರ ಬೆಂಬಲ ನನಗೆ ಒಂದು ಗಟ್ಟಿ ಬಂಡೆಯಂತೆ ಆಸರೆಯಾಗಿದೆ” ಎಂದು ವರ್ಣಿಸಿದ್ದಾರೆ.
The Gandhi family has played a defining role in my political journey, not merely through leadership, but through the faith they placed in me at different stages of my life.
— DK Shivakumar (@DKShivakumar) June 2, 2026
I often reflect on Shri Rajiv Gandhi avaru, who saw potential in a young worker even before I could see it… pic.twitter.com/vHqOHvNYQY
ಪ್ರಿಯಾಂಕಾ ಗಾಂಧಿ ಅವರ ಸರಳತೆಗೆ ಡಿಕೆಶಿ ಫಿದಾ: ಇನ್ನು ಪ್ರಿಯಾಂಕಾ ಗಾಂಧಿ ಅವರ ಕಾರ್ಯವೈಖರಿಯನ್ನು ಕೊಂಡಾಡಿರುವ ಡಿಕೆಶಿ, “ಶ್ರೀಮತಿ ಪ್ರಿಯಾಂಕಾ ಗಾಂಧಿ ಅವರು ತಳಮಟ್ಟದ ಪ್ರತಿಯೊಬ್ಬ ಕಾರ್ಯಕರ್ತನನ್ನೂ ಅತ್ಯಂತ ಗೌರವ ಹಾಗೂ ಸರಳತೆಯಿಂದ ನಡೆಸಿಕೊಳ್ಳುತ್ತಾರೆ. ರಾಜಕೀಯ ಎಂದರೆ ಕೇವಲ ಅಧಿಕಾರವಲ್ಲ, ಅದು ಜನರೊಂದಿಗೆ ನೇರ ಸಂಪರ್ಕ ಸಾಧಿಸುವುದು ಮತ್ತು ಅವರ ಆಶೋತ್ತರಗಳಿಗೆ ಧ್ವನಿಯಾಗುವುದು ಎಂಬುದನ್ನು ಅವರು ಸದಾ ನೆನಪಿಸುತ್ತಾರೆ. ಅವರ ಪ್ರೀತಿ ಮತ್ತು ಮಾರ್ಗದರ್ಶನ ನನಗೆ ಅತ್ಯಂತ ಅಮೂಲ್ಯವಾದದ್ದು” ಎಂದಿದ್ದಾರೆ.
ಹೈಕಮಾಂಡ್ ನಂಬಿಕೆಗೆ ದ್ರೋಹ ಬಗೆಯಲಾರೆ: ತಮ್ಮ ಸಂದೇಶದ ಕೊನೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ಗೆ ಕೃತಜ್ಞತೆ ಸಲ್ಲಿಸಿರುವ ಡಿ.ಕೆ. ಶಿವಕುಮಾರ್, “ನನ್ನ ಪಾಲಿಗೆ ಗಾಂಧಿ ಕುಟುಂಬ ಎಂದರೆ ನಾಯಕತ್ವದ ವಿಭಿನ್ನ ಆಯಾಮಗಳ ಪ್ರತೀಕ. ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷದ ಕೆಲಸ ಆರಂಭಿಸಿದ ನನ್ನನ್ನು ನಂಬಿ, ಇಂದು ಕರ್ನಾಟಕದಂತಹ ಪ್ರಗತಿಪರ ರಾಜ್ಯವನ್ನು ಮುನ್ನಡೆಸುವ ಇಷ್ಟು ದೊಡ್ಡ ಹೊಣೆಗಾರಿಕೆಯನ್ನು ನೀಡಲಾಗಿದೆ. ಹೈಕಮಾಂಡ್ ನನ್ನ ಮೇಲಿಟ್ಟಿರುವ ಈ ಭರವಸೆಯನ್ನು ನಾನು ಸದಾ ಗೌರವಿಸುತ್ತೇನೆ. ಗಾಂಧಿ ಪರಿವಾರದ ಸಮರ್ಥ ನಾಯಕತ್ವದಲ್ಲಿ ಹಾಗೂ ಕರ್ನಾಟಕದ ಜನತೆಯ ಆಶೀರ್ವಾದದೊಂದಿಗೆ, ನಾವೆಲ್ಲರೂ ಒಟ್ಟಾಗಿ ನಂಬಿರುವ ಮೌಲ್ಯಗಳನ್ನು ಎತ್ತಿಹಿಡಿಯುವ ಮೂಲಕ ಪ್ರಗತಿಪರ ಹಾಗೂ ಸಮೃದ್ಧ ಕರ್ನಾಟಕವನ್ನು ನಿರ್ಮಿಸಲು ನಾನು ಸಂಪೂರ್ಣ ಬದ್ಧತೆಯಿಂದ ದುಡಿಯುತ್ತೇನೆ” ಎಂದು ಸಂಕಲ್ಪ ಮಾಡಿದ್ದಾರೆ.
ಇದನ್ನೂ ಓದಿ: ಹೈಕೋರ್ಟ್ ಆವರಣದಲ್ಲಿದ್ದ ಬೃಹತ್ ಕಟೌಟ್ಗಳನ್ನು ಕಿತ್ತೆಸೆದ ಪೊಲೀಸರು!
