ಮಂಗಳೂರು: ಕರಾವಳಿಯ ಬಂಟ್ವಾಳ ತಾಲೂಕಿನ ಬಿ.ಸಿ. ರೋಡ್ ಬಸ್ ನಿಲ್ದಾಣದಲ್ಲಿ ನಡೆದ ಯುವತಿ ಲಾವಣ್ಯ ಹತ್ಯೆ ಪ್ರಕರಣ ಭಾರಿ ಸಂಚಲನ ಮೂಡಿಸಿದ್ದು, ಆರೋಪಿ (Crime) ಚೇತನ್ನ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಆತ ಕೇಸರಿ ಶಾಲು ಧರಿಸಿ ಬಜರಂಗದಳದ ಮುಖಂಡನಂತೆ ಕಾಣುವ ಚಿತ್ರಗಳು ಹರಿದಾಡುತ್ತಿದ್ದು, ಸಾರ್ವಜನಿಕರಲ್ಲಿ ಗೊಂದಲ ಮೂಡಿಸಿವೆ.
ಫೋಟೋ ವಿವಾದಕ್ಕೆ ಬಜರಂಗದಳ ಸ್ಪಷ್ಟನೆ: ವೈರಲ್ ಫೋಟೋಗಳ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಬಜರಂಗದಳದ ಪ್ರಮುಖರು, ಆರೋಪಿಗೂ ತಮ್ಮ ಸಂಘಟನೆಗೂ ಯಾವುದೇ ನೇರ ಅಥವಾ ಪರೋಕ್ಷ ಸಂಬಂಧವಿಲ್ಲ ಎಂದು ಸಾರಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಚಿತ್ರಗಳು ಅಪ್ಪಟ ನಕಲಿಯಾಗಿದ್ದು, ಸಂಘಟನೆಯ ಹೆಸರನ್ನು ಕೆಡಿಸಲು ಕೆಲವು ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಆತನ ಫೋಟೋವನ್ನು ಎಡಿಟ್ ಮಾಡಿ ಸುಳ್ಳು ಸುದ್ದಿ ಹರಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆಯ ಹಿನ್ನೆಲೆ: ಗುರುವಾರ ಸಂಜೆ ಲಾವಣ್ಯ ಅವರು ಎಂದಿನಂತೆ ಬಿ.ಸಿ. ರೋಡ್ ಬಸ್ ನಿಲ್ದಾಣದಲ್ಲಿ ನಿಂತಿದ್ದಾಗ ಏಕಾಏಕಿ ನುಗ್ಗಿದ ಹಂತಕ, ಹರಿತವಾದ ಆಯುಧದಿಂದ ಆಕೆಯ ಮೇಲೆ ಕ್ರೂರವಾಗಿ ದಾಳಿ ನಡೆಸಿದ್ದ. ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವತಿಯನ್ನು ಸ್ಥಳೀಯರು ಕೂಡಲೇ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ದರಾದರೂ ಚಿಕಿತ್ಸೆ ಫಲಕಾರಿಯಾಗದೆ ಆಕೆ ಕೊನೆಯುಸಿರೆಳೆದಿದ್ದಾಳೆ. ಸಾರ್ವಜನಿಕ ಸ್ಥಳದಲ್ಲೇ ನಡೆದ ಈ ಭೀಕರ ಕೃತ್ಯದ ಕುರಿತು ಬಂಟ್ವಾಳ ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.
ಕಾರ್ಯಾಚರಣೆ ನಡೆಸಿ 24 ಗಂಟೆಯೊಳಗೆ ಆರೋಪಿ ಅರೆಸ್ಟ್: ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಕೇವಲ 24 ಗಂಟೆಗಳ ಒಳಗೆ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಮಂಗಳೂರಿನ ಪಚ್ಚನಾಡಿ ಎಂಬಲ್ಲಿ ಕಾರಿನೊಳಗೆ ಅವಿತು ಕುಳಿತಿದ್ದ ಹಂತಕ ಚೇತನ್ನನ್ನು ಪೊಲೀಸರು ಸುತ್ತುವರೆದು ವಶಕ್ಕೆ ಪಡೆದಿದ್ದಾರೆ.
ಆತ್ಮಹತ್ಯೆ ನಾಟಕವಾಡಿದ ಹಂತಕ: ಪೊಲೀಸ್ ಜೀಪ್ ಏರುತ್ತಿದ್ದಂತೆಯೇ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ, ತಾನು ಈಗಾಗಲೇ ಇಲಿ ಪಾಷಾಣ (ವಿಷ) ಸೇವಿಸಿರುವುದಾಗಿ ಹೇಳಿ ನಾಟಕವಾಡಿದ್ದಾನೆ. ಇದರಿಂದ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ಆತನನ್ನು ಬಂಟ್ವಾಳ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ.
ಎನ್ಕೌಂಟರ್ ಮಾಡಲು ಪೋಷಕರ ಆಗ್ರಹ: ಕಣ್ಣೆದುರೇ ಬೆಳೆದ ಮಗಳನ್ನು ಕಳೆದುಕೊಂಡು ದುಃಖದ ಸಾಗರದಲ್ಲಿ ಮುಳುಗಿರುವ ಲಾವಣ್ಯ ತಂದೆ ಬಾಲಕೃಷ್ಣ ಗೌಡ ಅವರು ಕೊಲೆಗಡುಕನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ನನ್ನ ಮಗಳನ್ನು ಬಲಿಪಡೆದ ಆ ಹಂತಕನನ್ನು ಜೈಲಿಗೆ ಕಳುಹಿಸುವ ಬದಲು ಪೊಲೀಸರು ನೇರವಾಗಿ ಎನ್ಕೌಂಟರ್ ಮಾಡಬೇಕು” ಎಂದು ಕಣ್ಣೀರಿಡುತ್ತಾ ಒತ್ತಾಯಿಸಿದ್ದಾರೆ. ಚೇತನ್ ಕೇವಲ ದೂರದ ಸಂಬಂಧಿಯಾಗಿದ್ದು, ಆತನಿಗೆ ನಮ್ಮ ಮನೆಗೆ ಬರುವ ಹಕ್ಕಿರಲಿಲ್ಲ ಮತ್ತು ಆತನ ಬಗ್ಗೆ ನಮಗೆ ಅಷ್ಟಾಗಿ ಗೊತ್ತಿರಲಿಲ್ಲ ಎಂದು ಅವರು ತಿಳಿಸಿದ್ದಾರೆ.
