ನವದೆಹಲಿ: ಅಯೋಧ್ಯೆಯ ರಾಮ ಮಂದಿರದ (Ram Mandir) ದೇಣಿಗೆಯಲ್ಲಿ ನಡೆದಿದೆ ಎನ್ನಲಾದ ಭಾರಿ ಅವ್ಯವಹಾರ ಮತ್ತು ಹಣ ದುರುಪಯೋಗದ ವಿಚಾರವಾಗಿ ಕಾಂಗ್ರೆಸ್ ಪಕ್ಷವು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತನ್ನ ವಾಗ್ದಾಳಿಯನ್ನು ತೀವ್ರಗೊಳಿಸಿದೆ. ಈ ಹಗರಣದ ಕುರಿತು ಪ್ರಧಾನಿಯವರು ಮೌನ ವಹಿಸಿರುವುದು ದೇಶದ ಕೋಟ್ಯಂತರ ಭಕ್ತರ ಧಾರ್ಮಿಕ ಭಾವನೆಗಳಿಗೆ ಮಾಡಿದ ನೇರ ದ್ರೋಹ ಎಂದು ಕಾಂಗ್ರೆಸ್ ಆರೋಪಿಸಿದೆ. ಇದೇ ವೇಳೆ, ರಾಮ ಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲು ಯೋಜಿಸಿದ್ದ ಕಾಂಗ್ರೆಸ್ ನಿಯೋಗದ ನೇತೃತ್ವ ವಹಿಸಬೇಕಿದ್ದ ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಜಯ್ ರೈ ಅವರನ್ನು ಪೊಲೀಸರು ಹೋಟೆಲ್ನಲ್ಲಿಯೇ ವಶಕ್ಕೆ ಪಡೆದಿರುವುದು ರಾಜಕೀಯ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಟ್ವೀಟ್ನಲ್ಲಿ ಆಕ್ರೋಶ ವ್ಯಕ್ತಪಡಿಸಿದ ಜೈರಾಮ್ ರಮೇಶ್
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಶ್ರೀರಾಮ ಮಂದಿರದಲ್ಲಿ ನಡೆದಿರುವ ಲೂಟಿಯ ಬಗ್ಗೆ ಪ್ರಧಾನಿ ಮೋದಿ ಅವರ ಮೌನವು ಭಕ್ತರ ನಂಬಿಕೆಯ ಮೇಲಿನ ದಾಳಿಯಾಗಿದೆ ಎಂದು ಕಿಡಿಕಾರಿದ್ದಾರೆ. ಯಾವುದೇ ಪಾರದರ್ಶಕ ಮಾನದಂಡಗಳಿಲ್ಲದೆ ಮತ್ತು ಸಾರ್ವಜನಿಕ ಸಮಾಲೋಚನೆ ನಡೆಸದೆ ಮೋದಿ ಸರ್ಕಾರವು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅನ್ನು ರಚಿಸಿ, ಅದಕ್ಕೆ ಆರ್ಎಸ್ಎಸ್ ಸದಸ್ಯರನ್ನು ನೇಮಿಸಿದೆ. ತದನಂತರ ಇಡೀ ಟ್ರಸ್ಟ್ ಅನ್ನು ಮಾಹಿತಿ ಹಕ್ಕು ಕಾಯ್ದೆಯ (RTI) ವ್ಯಾಪ್ತಿಯಿಂದ ಹೊರಗಿಡಲಾಗಿದೆ ಎಂದು ದೂರಿದ್ದಾರೆ. ಅಯೋಧ್ಯೆಗೆ ತಲುಪುತ್ತಿದ್ದಂತೆ ತಮ್ಮನ್ನು ಪೊಲೀಸರು ಜೀಪ್ನಲ್ಲಿ ಕರೆದೊಯ್ದಿದ್ದಾರೆ ಎಂದು ಅಜಯ್ ರೈ ಆರೋಪಿಸಿದ್ದು, ಬಿಜೆಪಿ ಸರ್ಕಾರದ ಸರ್ವಾಧಿಕಾರ ಧೋರಣೆ ಪರಾಕಾಷ್ಠೆ ತಲುಪಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಹಾಲಿ ಇರುವ ರಾಮ ಮಂದಿರ ಟ್ರಸ್ಟ್ ಅನ್ನು ತಕ್ಷಣವೇ ವಿಸರ್ಜಿಸಬೇಕು ಮತ್ತು ಸುಪ್ರೀಂ ಕೋರ್ಟ್ ಉಸ್ತುವಾರಿಯಲ್ಲಿ ಈ ಹಗರಣದ ಸಮಗ್ರ ತನಿಖೆಯಾಗಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.
ಈ ನಡುವೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಎಂಟು ಮಂದಿ ಆರೋಪಿಗಳ ಪರವಾಗಿ ನ್ಯಾಯಾಲಯದಲ್ಲಿ ಯಾವುದೇ ವಕೀಲರು ವಕಾಲತ್ತು ವಹಿಸುವುದಿಲ್ಲ ಎಂದು ಫೈಜಾಬಾದ್ ಬಾರ್ ಅಸೋಸಿಯೇಷನ್ ಮಹತ್ವದ ನಿರ್ಧಾರ ಕೈಗೊಂಡಿದೆ. ಜೊತೆಗೆ ಇಡೀ ಹಗರಣವನ್ನು ಸಿಬಿಐ (CBI) ತನಿಖೆಗೆ ಒಪ್ಪಿಸಬೇಕು ಎಂದು ವಕೀಲರ ಸಂಘ ನಿರ್ಣಯ ಅಂಗೀಕರಿಸಿದೆ. ಮತ್ತೊಂದೆಡೆ, ಈ ದೇಣಿಗೆ ಅಕ್ರಮಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ಅರ್ಜಿಯ ತುರ್ತು ವಿಚಾರಣೆಯನ್ನು ನಡೆಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಜಸ್ಟಿಸ್ ಎಂ.ಎಂ. ಸುಂದರೇಶ್ ಮತ್ತು ಜಸ್ಟಿಸ್ ಶೀಲ್ ನಾಗು ಅವರಿದ್ದ ಪೀಠವು, ಬೇಸಿಗೆ ರಜೆಯ ನಂತರ ಜುಲೈ 13 ರಂದು ನ್ಯಾಯಾಲಯ ಪುನಾರಂಭಗೊಂಡ ಬಳಿಕ ಈ ಅರ್ಜಿಯನ್ನು ಪಟ್ಟಿ ಮಾಡಲಾಗುವುದು ಎಂದು ತಿಳಿಸಿದೆ. ಈ ಹಗರಣಕ್ಕೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಕೂಡಾ ತೀವ್ರ ವಾಗ್ದಾಳಿ ನಡೆಸಿದ್ದು, ನಿಜವಾದ ಸನಾತನಿಗಳು ದೇವರಿಗೆ ದ್ರೋಹ ಬಗೆದಿರುವ ಬಿಜೆಪಿಗೆ ಮತ ಹಾಕಬಾರದು ಎಂದು ಕರೆ ನೀಡಿದ್ದಾರೆ.
श्रीराम मंदिर में लूट पर पीएम मोदी की चुप्पी देश के करोड़ों लोगों की धार्मिक आस्था पर सीधा आघात है।
— Jairam Ramesh (@Jairam_Ramesh) June 30, 2026
मोदी सरकार ने ट्रस्ट का गठन बिना किसी पारदर्शी मानदंड या जन-परामर्श के किया, RSS के लोगों को इसमें जगह दी। फिर पूरे ट्रस्ट को RTI से बाहर भी कर दिया।
मोदी जी, चुप्पी तोड़िए। https://t.co/amTskz043k
ಬಿಜೆಪಿ ಹೇಳೋದೇನು?
ವಿರೋಧ ಪಕ್ಷಗಳ ಈ ಸರಣಿ ಆರೋಪಗಳಿಗೆ ತಿರುಗೇಟು ನೀಡಿರುವ ಬಿಜೆಪಿ, ಆರೋಪಿಗಳನ್ನು ವಕೀಲರು ಬಹಿಷ್ಕರಿಸಿರುವುದು ಹಿಂದೂ ಸಮಾಜ ನೀಡಿದ ಪ್ರಬಲ ಸಂದೇಶವಾಗಿದೆ ಎಂದು ಸಮರ್ಥಿಸಿಕೊಂಡಿದೆ. ದೇಣಿಗೆ ಲೂಟಿ ಮಾಡಿದವರು ಕಾನೂನು ಕ್ರಮ ಮತ್ತು ಸಾಮಾಜಿಕ ಬಹಿಷ್ಕಾರ ಎರಡನ್ನೂ ಎದುರಿಸುತ್ತಿದ್ದಾರೆ ಎಂದು ಬಿಜೆಪಿ ಹೇಳಿದೆ. ತಪ್ಪು ಮಾಡಿದವರಿಗೆ ಕಠಿಣ ಶಿಕ್ಷೆಯಾಗಲಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈಗಾಗಲೇ ಸ್ಪಷ್ಟಪಡಿಸಿದ್ದು, ಕಾನೂನುಬದ್ಧವಾಗಿಯೇ ತನಿಖೆ ನಡೆಯುತ್ತಿದೆ ಎಂದು ತಿಳಿಸಿದೆ. ಟ್ರಸ್ಟ್ ನೀಡಿದ ದೂರಿನ ಮೇರೆಗೆ ಜೂನ್ 13 ರಂದು ಉತ್ತರ ಪ್ರದೇಶ ಸರ್ಕಾರ ರಚಿಸಿದ್ದ ವಿಶೇಷ ತನಿಖಾ ತಂಡವು (SIT) ನಡೆಸಿದ ಕಾರ್ಯಾಚರಣೆಯಲ್ಲಿ ಅವಿನಾಶ್ ಶುಕ್ಲಾ, ಅನುಕಲ್ಪ್ ಮಿಶ್ರಾ ಸೇರಿದಂತೆ ಎಂಟು ಜನರನ್ನು ಬಂಧಿಸಲಾಗಿದೆ. ಆದರೆ, ಪೊಲೀಸರು ಕೇವಲ ಕೆಳಹಂತದ ವ್ಯಕ್ತಿಗಳನ್ನು ಮಾತ್ರ ಬಂಧಿಸುತ್ತಿದ್ದು, ಹಗರಣದ ಅಸಲಿ ಕಿಂಗ್ಪಿನ್ಗಳನ್ನು ರಕ್ಷಿಸಲಾಗುತ್ತಿದೆ ಎಂದು ವಿರೋಧ ಪಕ್ಷಗಳು ಗಂಭೀರವಾಗಿ ಆಪಾದಿಸಿವೆ.
ಇದನ್ನೂ ಓದಿ: ಭದ್ರತಾ ಪಡೆಗಳ ಬಿಗ್ ಆಪರೇಷನ್: ಕಥುವಾದಲ್ಲಿ ಉಗ್ರರ ಸಹಚರನ ಹೆಡೆಮುರಿ ಕಟ್ಟಿದ ಪೊಲೀಸರು!
