ಚೆನ್ನೈ: ದಿವಂಗತ ನಟಿ ಶ್ರೀದೇವಿ (Sridevi) ಅವರು ಸುಮಾರು ನಾಲ್ಕು ದಶಕಗಳ ಹಿಂದೆ ಖರೀದಿಸಿದ್ದ ಚೆನ್ನೈನ ಜಮೀನಿನ ಮಾಲೀಕತ್ವಕ್ಕೆ (Bollywood) ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಆಸ್ತಿಯ ಮೇಲೆ ಹೂಡಲಾಗಿದ್ದ ಸಿವಿಲ್ ಮೊಕದ್ದಮೆಯನ್ನು ನ್ಯಾಯಾಲಯ ರದ್ದುಗೊಳಿಸಿದ್ದು, ಬೋನಿ ಕಪೂರ್ ಹಾಗೂ ಅವರ ಪುತ್ರಿಯರಾದ ಜಾನ್ವಿ ಮತ್ತು ಖುಷಿ ಕಪೂರ್ ಅವರಿಗೆ ನೆಮ್ಮದಿ ತಂದಿದೆ.
ವಿವಾದದ ಹಿನ್ನೆಲೆ ಏನು? ಚೆನ್ನೈನ ಶೋಲಿಂಗನಲ್ಲೂರು ಪ್ರದೇಶದಲ್ಲಿರುವ 2.70 ಎಕರೆ ಜಮೀನಿನ ಕುರಿತು ಎಂ.ಸಿ. ಶಿವಕಾಮಿ ಮತ್ತು ಇತರರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಈ ಜಮೀನು ಮೂಲತಃ ಎಂ.ಸಿ. ಚಂದ್ರಶೇಖರನ್ ಎಂಬುವವರಿಗೆ ಸೇರಿದ್ದು, ಅವರ ಕಾನೂನುಬದ್ಧ ವಾರಸುದಾರರು ನಾವೇ ಎಂದು ಅರ್ಜಿದಾರರು ವಾದಿಸಿದ್ದರು. 1988ರಲ್ಲಿ ಶ್ರೀದೇವಿ ಅವರಿಗೆ ಈ ಜಮೀನನ್ನು ಮಾರಾಟ ಮಾಡಿದವರಿಗೆ ಅದರ ಹಕ್ಕಿರಲಿಲ್ಲ ಮತ್ತು ಇದು ವಂಚನೆಯಿಂದ ಕೂಡಿದೆ ಎಂದು ಅವರು ಆರೋಪಿಸಿದ್ದರು. 2023ರಲ್ಲಿ ಆಸ್ತಿಯ ಪಟ್ಟಾ ಬೋನಿ ಕಪೂರ್ ಕುಟುಂಬದ ಹೆಸರಿಗೆ ಬದಲಾದಾಗ ಈ ವಿಷಯ ನಮಗೆ ತಿಳಿಯಿತು ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದ್ದರು.
ನ್ಯಾಯಾಲಯದ ತೀರ್ಪು: ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಟಿ.ವಿ. ತಮಿಳ್ಸೆಲ್ವಿ ಅವರು, ಅರ್ಜಿದಾರರ ವಾದವನ್ನು ತಳ್ಳಿಹಾಕಿದ್ದಾರೆ. ಜಮೀನಿನ ಮೂಲ ಮಾಲೀಕ ಎನ್ನಲಾದ ಚಂದ್ರಶೇಖರನ್ ಅವರು 1995ರಲ್ಲಿ ನಿಧನರಾಗುವವರೆಗೂ 1988ರ ಈ ಮಾರಾಟ ಪ್ರಕ್ರಿಯೆಯನ್ನು ಎಲ್ಲಿಯೂ ಪ್ರಶ್ನಿಸಿರಲಿಲ್ಲ. ಸುಮಾರು 40 ವರ್ಷಗಳ ದೀರ್ಘ ಕಾಲದ ನಂತರ ಈಗ ಈ ಬಗ್ಗೆ ದಾವೆ ಹೂಡಿರುವುದು ಕಾನೂನುಬದ್ಧವಾಗಿ ಸರಿಯಲ್ಲ. ಕಾಲಮಿತಿ ಮೀರಿದ ಕಾರಣಕ್ಕಾಗಿ ಈ ದೂರನ್ನು ಮಾನ್ಯ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದ ನ್ಯಾಯಾಲಯವು ಪ್ರಕರಣವನ್ನು ವಜಾಗೊಳಿಸಿದೆ.
ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಕಪೂರ್ ಸಹೋದರಿಯರು: ಕಾನೂನು ಸಂಕಷ್ಟದಿಂದ ಮುಕ್ತರಾಗಿರುವ ಜಾನ್ವಿ ಕಪೂರ್ ಮತ್ತು ಖುಷಿ ಕಪೂರ್ ಸದ್ಯ ಚಿತ್ರರಂಗದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಜಾನ್ವಿ ಕಪೂರ್ ಅಭಿನಯದ ‘ಹೋಮ್ಬೌಂಡ್’ ಇತ್ತೀಚೆಗೆ ಗಮನ ಸೆಳೆದಿತ್ತು, ಈಗ ಅವರು ರಾಮ್ ಚರಣ್ ನಟನೆಯ ‘ಪೆದ್ದಿ’ ಚಿತ್ರದ ಮೂಲಕ ತೆರೆಗೆ ಬರಲು ಸಜ್ಜಾಗುತ್ತಿದ್ದಾರೆ. ಇನ್ನು ಖುಷಿ ಕಪೂರ್ ಅವರು ‘ನಾದಾನಿಯಾನ್’ ಚಿತ್ರದ ಯಶಸ್ಸಿನ ಖುಷಿಯಲ್ಲಿದ್ದಾರೆ. ಈ ನ್ಯಾಯಾಲಯದ ತೀರ್ಪು ಕಪೂರ್ ಕುಟುಂಬದ ಸಂತಸವನ್ನು ಇಮ್ಮಡಿಗೊಳಿಸಿದೆ.
ಇದನ್ನೂ ಓದಿ: ಪುಷ್ಪ 2 ಕಾಲ್ತುಳಿತ ಪ್ರಕರಣ, ಗಾಯಗೊಂಡಿದ್ದ ಬಾಲಕನ ಮನೆಗೆ ಅಲ್ಲು ಅರ್ಜುನ್ ಫ್ಯಾಮಿಲಿ ಭರವಸೆ
