TOP NEWS

Vande Mataram: ‘ವಂದೇ ಮಾತರಂ’ ಗೌರವದ ವಿಚಾರದಲ್ಲಿ ರಾಜಿಯಿಲ್ಲ: ಕಾಂಗ್ರೆಸ್ ನಿರ್ಧಾರ ಖಂಡಿಸಿ ಬಿಜೆಪಿ ಮಹತ್ವದ ನಿರ್ಣಯ

BJP Hits Out at Congress Over Vande Mataram Announces Nationwide Awareness Campaign

ನವದೆಹಲಿ: ‘ವಂದೇ ಮಾತರಂ’ (Vande Mataram) ರಾಷ್ಟ್ರಗೀತೆಯ ಸಂಪೂರ್ಣ ಆಶಯಕ್ಕೆ ಮತ್ತು ಇತಿಹಾಸಕ್ಕೆ ಧಕ್ಕೆ ತರುವ ಯಾವುದೇ ಪ್ರಯತ್ನಗಳನ್ನು ಸಹಿಸುವುದಿಲ್ಲ ಎಂದು ಪ್ರತಿಪಾದಿಸಿರುವ ಬಿಜೆಪಿ, ಕಾಂಗ್ರೆಸ್ ಪಕ್ಷದ ನಿರ್ಧಾರವನ್ನು ಉಗ್ರವಾಗಿ ಖಂಡಿಸಿ ಮಹತ್ವದ ನಿರ್ಣಯ ಅಂಗೀಕರಿಸಿದೆ. ಅಷ್ಟೇ ಅಲ್ಲದೆ, ವಂದೇ ಮಾತರಂ ಗೀತೆಯ ಭವ್ಯ ಪರಂಪರೆಯನ್ನು ದೇಶದ ಮೂಲೆ ಮೂಲೆಗೂ ತಲುಪಿಸಲು ಬೃಹತ್ ಜಾಗೃತಿ ಅಭಿಯಾನ ಆರಂಭಿಸುವುದಾಗಿ ಘೋಷಿಸಿದೆ.

ಪದಾಧಿಕಾರಿಗಳ ಸಭೆಯಲ್ಲಿ ಖಂಡನಾ ನಿರ್ಣಯ ಅಂಗೀಕಾರ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಪಕ್ಷದ ನೂತನ ಪದಾಧಿಕಾರಿಗಳ ಸಭೆಯಲ್ಲಿ ಈ ಖಂಡನಾ ನಿರ್ಣಯವನ್ನು ಅಂಗೀಕರಿಸಲಾಯಿತು. ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಮಾಹಿತಿ ಹಂಚಿಕೊಂಡ ನಿತಿನ್ ನವೀನ್, 1937ರ ತಮ್ಮ ಹಳೆಯ ನಿರ್ಣಯವನ್ನೇ ಪುನರುಚ್ಚರಿಸಿ ಕಾಂಗ್ರೆಸ್ ತನ್ನ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ ಗೀತೆಯ ಕೇವಲ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಲು ನಿರ್ಧರಿಸಿರುವುದು ಅತ್ಯಂತ ಖಂಡನೀಯ. ರಾಜಕೀಯ ಲಾಭ ಹಾಗೂ ಓಲೈಕೆ ರಾಜಕಾರಣಕ್ಕಾಗಿ ರಾಷ್ಟ್ರಗೀತೆಯ ಗೌರವದೊಂದಿಗೆ ರಾಜಿ ಮಾಡಿಕೊಳ್ಳುವುದನ್ನು ಬಿಜೆಪಿ ಎಂದಿಗೂ ಒಪ್ಪುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೋಮುವಾದಿ ಒತ್ತಡ ಹಾಗೂ ಮತಬ್ಯಾಂಕ್ ರಾಜಕಾರಣಕ್ಕಾಗಿ ವಂದೇ ಮಾತರಂ ಗೀತೆಯನ್ನು ತುಂಡರಿಸಲು ಹೊರಟಿರುವ ಕಾಂಗ್ರೆಸ್‌ನ ಈ ಧೋರಣೆಯನ್ನು ದೇಶಾದ್ಯಂತ ಬಿಜೆಪಿ ಬಲವಾಗಿ ವಿರೋಧಿಸಲಿದೆ. ವಂದೇ ಮಾತರಂ ಕೇವಲ ಒಂದು ಗೀತೆಯಲ್ಲ, ಅದು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಅಮರ ಸಂಕೇತ ಹಾಗೂ ಕೋಟ್ಯಂತರ ದೇಶಪ್ರೇಮಿಗಳ ಭಾವನೆಯಾಗಿದೆ. ಇಂತಹ ರಾಷ್ಟ್ರೀಯ ಹೆಮ್ಮೆಯ ಸಂಕೇತಕ್ಕೆ ರಾಜಕೀಯ ಲಾಭಕ್ಕಾಗಿ ಧಕ್ಕೆ ತರಲು ಬಿಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಬಿಜೆಪಿ ವಿಶೇಷ ಜಾಗೃತಿ ಅಭಿಯಾನ

ಈ ಹಿನ್ನೆಲೆಯಲ್ಲಿ ದೇಶದ ನವಪೀಳಿಗೆಗೆ ಹಾಗೂ ಯುವಜನತೆಗೆ ಸಂಪೂರ್ಣ ‘ವಂದೇ ಮಾತರಂ’ ಗೀತೆಯ ಆರು ಚರಣಗಳ ಮಹತ್ವ, ಅದರ ನೈಜ ಅರ್ಥ ಮತ್ತು ಸ್ವಾತಂತ್ರ್ಯ ಸಂಗ್ರಾಮದ ಚರಿತ್ರೆಯನ್ನು ತಿಳಿಸಿಕೊಡಲು ಬಿಜೆಪಿ ವಿಶೇಷ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಿದೆ. ಇದಲ್ಲದೆ, ಮಹಾತ್ಮ ಗಾಂಧೀಜಿಯವರು ವಂದೇ ಮಾತರಂ ಗೀತೆಯನ್ನು “ಸಾಮ್ರಾಜ್ಯಶಾಹಿ ವಿರೋಧಿ ಘೋಷಣೆ” ಹಾಗೂ “ಅತ್ಯಂತ ಪವಿತ್ರ ರಾಷ್ಟ್ರೀಯ ಭಾವನೆ” ಎಂದು ಬಣ್ಣಿಸಿದ್ದ ಹೇಳಿಕೆಯನ್ನು ಸಹ ಈ ಅಭಿಯಾನದ ಮೂಲಕ ಸಾರ್ವಜನಿಕರಿಗೆ ತಲುಪಿಸಲು ನಿರ್ಧರಿಸಲಾಗಿದೆ. ಭಾರತೀಯ ಸಶಸ್ತ್ರ ಪಡೆಗಳು ಹಾಗೂ ಸ್ವಾತಂತ್ರ್ಯ ಹೋರಾಟಗಾರರಿಗೆ ಪ್ರೇರಣೆಯಾಗಿದ್ದ ಪೂರ್ಣ ವಂದೇ ಮಾತರಂ ಗೀತೆಯ ಘನತೆ ಮತ್ತು ರಾಷ್ಟ್ರೀಯತೆಯನ್ನು ಕಾಪಾಡಲು ಬಿಜೆಪಿ ಬದ್ಧವಾಗಿದೆ ಎಂದು ನವೀನ್ ತಿಳಿಸಿದ್ದಾರೆ.

ಇದನ್ನೂ ಓದಿ:  ಆರ್ಟ್ ಆಫ್ ಲಿವಿಂಗ್ ಸಂಸ್ಥೆಗೆ ಸುಪ್ರೀಂ ಕೋರ್ಟ್ ಬಿಗ್ ರಿಲೀಫ್

Leave a Reply

Your email address will not be published. Required fields are marked *