ಬೆಂಗಳೂರು: ಹೊಳೆನರಸೀಪುರ, ಅರಕಲಗೂಡು, ಕೊಣನೂರು ಮತ್ತು ಕುಶಾಲನಗರ ಮಾರ್ಗವಾಗಿ ಶ್ರವಣಬೆಳಗೊಳ ಮತ್ತು ಮಡಿಕೇರಿ ನಡುವೆ ಹೊಸ ರೈಲು ಮಾರ್ಗ ನಿರ್ಮಿಸುವ ಪ್ರಸ್ತಾಪಿತ (Big News) ಯೋಜನೆಗೆ ಹಿನ್ನಡೆಯಾಗಿದೆ. ಈ ಮಾರ್ಗದಲ್ಲಿ ನಿರೀಕ್ಷಿತ ಪ್ರಯಾಣಿಕರು ಹಾಗೂ ಸರಕು ಸಾಗಣೆಯ ಪ್ರಮಾಣ ತೀರಾ ಕಡಿಮೆ ಇರಲಿದೆ ಎಂದು ರೈಲ್ವೆ ಸಚಿವಾಲಯ ನಡೆಸಿದ ಸಾಧ್ಯತಾ ವರದಿ (ಫೀಸಿಬಿಲಿಟಿ ಸ್ಟಡಿ) ತಿಳಿಸಿದೆ. ಲೋಕಸಭೆಯಲ್ಲಿ ಹಾಸನ ಸಂಸದ ಶ್ರೇಯಸ್ ಎಂ. ಪಟೇಲ್ ಕೇಳಿದ ಪ್ರಶ್ನೆಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಈ ಕುರಿತು ಲಿಖಿತ ಉತ್ತರ ನೀಡಿದ್ದಾರೆ
ಕೇಂದ್ರ ಸರ್ಕಾರ ಹೇಳಿದ್ದೇನು?
ಶ್ರವಣಬೆಳಗೊಳ ಮತ್ತು ಮಂಗಳೂರು ಈಗಾಗಲೇ ಹಾಸನ ಮಾರ್ಗದ ಮೂಲಕ ಹಾಲಿ ಇರುವ ರೈಲ್ವೆ ಜಾಲದಿಂದ ಸಂಪರ್ಕ ಹೊಂದಿವೆ. ಮಡಿಕೇರಿಗೆ ಸಂಪರ್ಕ ಸುಧಾರಿಸುವ ಉದ್ದೇಶದಿಂದ 117 ಕಿಲೋಮೀಟರ್ ಉದ್ದದ ಹೊಸ ರೈಲು ಮಾರ್ಗದ ಸಾಧ್ಯತಾ ಅಧ್ಯಯನ ನಡೆಸಲಾಗಿತ್ತು. ಆದರೆ, ಅರಕಲಗೂಡು ಪ್ರದೇಶವು ಹೊಳೆನರಸೀಪುರ ರೈಲ್ವೆ ನಿಲ್ದಾಣದಿಂದ ಕೇವಲ 22 ಕಿಲೋಮೀಟರ್ ದೂರದಲ್ಲಿದ್ದು, ಈಗಾಗಲೇ ಸಾರಿಗೆ ಸಂಪರ್ಕ ಸಾಧಿಸುತ್ತಿದೆ. ಹೀಗಾಗಿ ತಕ್ಷಣಕ್ಕೆ ಹೊಸ ಮಾರ್ಗದ ತುರ್ತು ಅಗತ್ಯವಿಲ್ಲ ಎಂಬ ತೀರ್ಮಾನಕ್ಕೆ ಬರಲಾಗಿದೆ. ಯಾವುದೇ ಹೊಸ ಯೋಜನೆ ಮಂಜೂರಾಗಲು ಕೇವಲ ಬೇಡಿಕೆ ಮಾತ್ರವಲ್ಲದೆ, ಹಣಕಾಸಿನ ಲಾಭದಾಯಕತೆ, ಪರಿಸರ ಕಾಳಜಿ ಹಾಗೂ ಆರ್ಥಿಕ ಅನುದಾನಗಳ ಲಭ್ಯತೆಯನ್ನು ಪರಿಗಣಿಸಲಾಗುತ್ತದೆ. ಅಲ್ಲದೆ, ಕೊಡಗು ನಿವಾಸಿಗಳು ಹಾಗೂ ಪರಿಸರ ಪ್ರೇಮಿಗಳು ಈ ಮಾರ್ಗದಿಂದ ತಲುಪುವ ಪರಿಸರ ಹಾನಿಯನ್ನು ಉಲ್ಲೇಖಿಸಿ ಯೋಜನೆಯನ್ನು ಮೊದಲಿನಿಂದಲೂ ವಿರೋಧಿಸುತ್ತಿದ್ದಾರೆ.
ಅನುದಾನದಲ್ಲಿ ಏರಿಕೆ?
ಇದೇ ವೇಳೆ, ಕರ್ನಾಟಕದಲ್ಲಿ ರೈಲ್ವೆ ಮೂಲಸೌಕರ್ಯ ಮತ್ತು ಸುರಕ್ಷತಾ ಕಾಮಗಾರಿಗಳಿಗಾಗಿ ನೀಡುವ ಆಯವ್ಯಯ ಅನುದಾನದಲ್ಲಿ ಗಣನೀಯ ಏರಿಕೆಯಾಗಿದೆ ಎಂದು ಸಚಿವರು ತಿಳಿಸಿದ್ದಾರೆ. 2009 ರಿಂದ 2014ರ ಅವಧಿಯಲ್ಲಿ ವಾರ್ಷಿಕ ಸರಾಸರಿ 835 ಕೋಟಿ ರೂಪಾಯಿ ಅನುದಾನ ನೀಡಲಾಗುತ್ತಿದ್ದರೆ, 2026-27ರ ಸಾಲಿನಲ್ಲಿ ಇದು ಒಂಬತ್ತು ಪಟ್ಟು ಹೆಚ್ಚಿ 7,748 ಕೋಟಿ ರೂಪಾಯಿಗೆ ತಲುಪಿದೆ. ಪ್ರಸ್ತುತ ರಾಜ್ಯದಲ್ಲಿ 49,272 ಕೋಟಿ ರೂಪಾಯಿ ವೆಚ್ಚದ 25 ರೈಲ್ವೆ ಯೋಜನೆಗಳಿಗೆ ಅನುಮೋದನೆ ದೊರೆತಿದ್ದು, ಕಾಮಗಾರಿಗಳು ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿವೆ.
ಇದನ್ನೂ ಓದಿ: ಬೆಂಗಳೂರಿನ ಬದಲಾದ ಚಿತ್ರಣ: ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಗೊಂದಲ, ಸವಾಲುಗಳ ಸುಳಿ
