ನವದೆಹಲಿ: ಮೇ 3 ರಂದು ನಡೆದಿದ್ದ ನೀಟ್ (NEET) ಪರೀಕ್ಷೆಯನ್ನು ಹಠಾತ್ ರದ್ದುಗೊಳಿಸಿದ ಸರ್ಕಾರದ ತೀರ್ಪು ದೇಶದಲ್ಲಿ ಭಾರಿ ಆಕ್ರೋಶ ಮತ್ತು ಕಳವಳಕ್ಕೆ ಕಾರಣವಾಗಿದೆ. ಭವಿಷ್ಯದ ವೈದ್ಯರಾಗುವ ಕನಸು ಹೊತ್ತಿದ್ದ ನಾಲ್ವರು ಪ್ರತಿಭಾವಂತ ವಿದ್ಯಾರ್ಥಿಗಳು ಈ ನಿರ್ಧಾರದಿಂದ ಕಂಗಾಲಾಗಿ ಬೇರೆ ಬೇರೆ ರಾಜ್ಯಗಳಲ್ಲಿ ತಮ್ಮ ಜೀವನವನ್ನು ಕೊನೆಗೊಳಿಸಿಕೊಂಡಿದ್ದಾರೆ.
ಕೈಗೆ ಬಂದ ಸೀಟು ಜಾರಿದ್ದಕ್ಕೆ ರಾಜಸ್ಥಾನದ ಪ್ರದೀಪ್ ಆತ್ಮಹತ್ಯೆ: ಕಳೆದ ಮೂರು ವರ್ಷಗಳಿಂದ ರಾಜಸ್ಥಾನದ ಸೀಕರ್ನಲ್ಲಿ ತಂಗಿ ಹಗಲಿರುಳು ಶ್ರಮಿಸುತ್ತಿದ್ದ ಪ್ರದೀಪ್ ಮೇಘವಾಲ್ ಎಂಬ ಯುವಕ ನೇಣಿಗೆ ಶರಣಾಗಿದ್ದಾನೆ. ಈ ಬಾರಿಯ ಪರೀಕ್ಷೆಯಲ್ಲಿ ಕನಿಷ್ಠ 650 ಅಂಕಗಳನ್ನು ಗಳಿಸಿ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಪಡೆಯುವುದು ಆತನ ಗುರಿಯಾಗಿತ್ತು. ಪರೀಕ್ಷೆಯೂ ಅತ್ಯುತ್ತಮವಾಗಿ ಆಗಿದ್ದರಿಂದ ಆತನಿಗೆ ದಟ್ಟ ಭರವಸೆಯಿತ್ತು. ಆದರೆ ಪೇಪರ್ ಲೀಕ್ನಿಂದಾಗಿ ಇಡೀ ಪರೀಕ್ಷೆಯೇ ರದ್ದಾದ ಸುದ್ದಿ ಕೇಳಿ ತೀವ್ರ ಬೇಸರಗೊಂಡ ಆತ, ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೂರು ವರ್ಷಗಳ ಪರಿಶ್ರಮ ಮಣ್ಣುಪಾಲು: ಯುಪಿಯ ರಿತಿಕ್ ಸಾವು: ಉತ್ತರ ಪ್ರದೇಶದ ಲಖಿಂಪುರ್ ಖೇರಿಯ 21 ವರ್ಷದ ರಿತಿಕ್ ಮಿಶ್ರಾ ಎಂಬ ವಿದ್ಯಾರ್ಥಿ ಗುರುವಾರ ಸಾವನ್ನಪ್ಪಿದ್ದಾನೆ. ಇದು ಆತನ ಮೂರನೇ ಪ್ರಯತ್ನವಾಗಿದ್ದು, ಈ ಬಾರಿ ಹೇಗಾದರೂ ಮಾಡಿ ವೈದ್ಯಕೀಯ ಪ್ರವೇಶ ಪಡೆಯಲೇಬೇಕೆಂದು ಕಠಿಣ ಸಿದ್ಧತೆ ನಡೆಸಿದ್ದನು. ಆದರೆ ಎನ್ಟಿಎ ನಿರ್ಧಾರದಿಂದಾಗಿ ಆತನ ಇಷ್ಟು ವರ್ಷಗಳ ಪರಿಶ್ರಮ ವ್ಯರ್ಥವಾದಂತಾಗಿದ್ದು, ಮನನೊಂದು ಈ ಭೀಕರ ನಿರ್ಧಾರ ಕೈಗೊಂಡಿದ್ದಾನೆ ಎಂದು ಕುಟುಂಬದವರು ಕಣ್ಣೀರಿಟ್ಟಿದ್ದಾರೆ.
ದೆಹಲಿ ಹಾಗೂ ಗೋವಾದಲ್ಲೂ ಶೈಕ್ಷಣಿಕ ಒತ್ತಡಕ್ಕೆ ವಿದ್ಯಾರ್ಥಿಗಳು ಬಲಿ: ದೆಹಲಿಯ ಆಜಾದ್ಪುರದಲ್ಲಿ 20 ವರ್ಷದ ಯುವತಿಯೊಬ್ಬಳು ತನ್ನ ಮನೆಯಲ್ಲೇ ಜೀವ ತೊರೆದಿದ್ದಾಳೆ. ಆದರೆ ಪೊಲೀಸರಿಗೆ ಯಾವುದೇ ಮಾಹಿತಿ ನೀಡದೆ ಪೋಷಕರು ಅಂತ್ಯಸಂಸ್ಕಾರ ಮುಗಿಸಿದ್ದು, ಈ ಸಾವು ಈಗ ಅನುಮಾನಕ್ಕೆ ಕಾರಣವಾಗಿ ತನಿಖೆ ಪ್ರಗತಿಯಲ್ಲಿದೆ. ಮತ್ತೊಂದೆಡೆ, ದಕ್ಷಿಣ ಗೋವಾದ ಮಾರ್ಗೋವ್ನಲ್ಲಿ ಕೇವಲ 17 ವರ್ಷದ ಬಾಲಕನೊಬ್ಬ ಓದಿನ ಒತ್ತಡ ತಡೆಯಲಾರದೆ ಬುಧವಾರ ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದು, ತನ್ನ ಸಾವಿಗೆ ಶೈಕ್ಷಣಿಕ ಒತ್ತಡವೇ ಕಾರಣ ಎಂದು ಡೆತ್ನೋಟ್ನಲ್ಲಿ ಉಲ್ಲೇಖಿಸಿದ್ದಾನೆ.
ಜೂನ್ 21ಕ್ಕೆ ಮರುಪರೀಕ್ಷೆ, ಮುಂದಿನ ವರ್ಷದಿಂದ ಹೊಸ ಮಾದರಿ: ಪ್ರಶ್ನೆಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (NTA) ಮೇ 13 ರಂದು ಪರೀಕ್ಷೆಯನ್ನು ರದ್ದುಗೊಳಿಸುವ ಕಠಿಣ ತೀರ್ಮಾನ ಕೈಗೊಂಡಿತ್ತು. ಇದೀಗ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಜೂನ್ 21 ರಂದು ಮರುಪರೀಕ್ಷೆ ನಡೆಸುವುದಾಗಿ ಪ್ರಕಟಿಸಿದ್ದಾರೆ. ಅಲ್ಲದೆ, ಇಂತಹ ಅಕ್ರಮಗಳಿಗೆ ಬ್ರೇಕ್ ಹಾಕಲು ಮುಂದಿನ ವರ್ಷದಿಂದ ನೀಟ್ ಪರೀಕ್ಷೆಯನ್ನು ಸಂಪೂರ್ಣವಾಗಿ ಕಂಪ್ಯೂಟರ್ ಆಧಾರಿತ (CBT) ಮಾದರಿಯಲ್ಲಿ ನಡೆಸಲು ಸರ್ಕಾರ ನಿರ್ಧರಿಸಿದೆ.
ನೀಟ್ ಹಗರಣಕ್ಕೆ ಸಿನಿಮೀಯ ತಿರುವು: ತಂದೆಯ ಬಂಧನದ ಬೆನ್ನಲ್ಲೇ ಎಂಬಿಬಿಎಸ್ ವಿದ್ಯಾರ್ಥಿನಿ ನಾಪತ್ತೆ
ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಹಗರಣವು ದಿನಕ್ಕೊಂದು ರೋಚಕ ತಿರುವು ಪಡೆಯುತ್ತಿದ್ದು, ಈಗ ಯಾವುದೋ ಕ್ರೈಂ ಸಿನಿಮಾದ ಕಥೆಯಂತೆ ಭಾಸವಾಗುತ್ತಿದೆ. ದೇಶದ ವೈದ್ಯಕೀಯ ಶಿಕ್ಷಣ ವ್ಯವಸ್ಥೆಯನ್ನೇ ಬುಡಮೇಲು ಮಾಡಿರುವ ಈ ಜಾಲದ ತನಿಖೆ ಈಗ ದೌಸಾದ ಸರ್ಕಾರಿ ವೈದ್ಯಕೀಯ ಕಾಲೇಜಿನ ಮೆಟ್ಟಿಲೇರಿದ್ದು, ಅಲ್ಲಿ ಓದುತ್ತಿದ್ದ ಎಂಬಿಬಿಎಸ್ ವಿದ್ಯಾರ್ಥಿನಿ ಪ್ರಗತಿ ಬಿವಾಲ್ ಎಂಬಾಕೆ ದಿಢೀರ್ ನಾಪತ್ತೆಯಾಗಿರುವುದು ಹೊಸ ಸಂಚಲನ ಮೂಡಿಸಿದೆ. ಈಕೆಯ ತಂದೆ ಮಾಂಗಿಲಾಲ್ ಬಿವಾಲ್ ಮತ್ತು ಚಿಕ್ಕಪ್ಪ ದಿನೇಶ್ ಬಿವಾಲ್ ಅವರನ್ನು ಪತ್ರಿಕೆ ಸೋರಿಕೆ ಹಗರಣದಲ್ಲಿ ಸಿಬಿಐ ಈಗಾಗಲೇ ಬಂಧಿಸಿದೆ. ಈ ಬಂಧನವಾದ ಬೆನ್ನಲ್ಲೇ ಪ್ರಗತಿ ಕಾಲೇಜಿಗೆ ರಜೆ ಅರ್ಜಿ ನೀಡಿ ಕಣ್ಮರೆಯಾಗಿದ್ದು, ತನಿಖಾಧಿಕಾರಿಗಳಲ್ಲಿ ತೀವ್ರ ಅನುಮಾನ ಮೂಡಿಸಿದೆ.
ದಾಖಲೆ ನೋಡಿ ಬೆಚ್ಚಿ ಬಿದ್ದ ಸಿಬಿಐ
ಬಿವಾಲ್ ಕುಟುಂಬದ ಸದಸ್ಯರ ಶೈಕ್ಷಣಿಕ ದಾಖಲೆಗಳನ್ನು ಗಮನಿಸಿದಾಗ ಸಿಬಿಐ ಬೆಚ್ಚಿಬಿದ್ದಿದೆ. ಒಂದೇ ಕುಟುಂಬದ ಅರ್ಧ ಡಜನ್ಗೂ ಹೆಚ್ಚು ಸದಸ್ಯರು ದೇಶದ ವಿವಿಧ ಪ್ರತಿಷ್ಠಿತ ವೈದ್ಯಕೀಯ ಕಾಲೇಜುಗಳಲ್ಲಿ ಎಂಬಿಬಿಎಸ್ ಓದುತ್ತಿದ್ದಾರೆ. ಪ್ರಗತಿ ದೌಸಾದಲ್ಲಿ ಓದುತ್ತಿದ್ದರೆ, ಆಕೆಯ ಸಹೋದರ ವಿಕಾಸ್ ಸವಾಯಿ ಮಾಧೋಪುರದಲ್ಲಿ, ಸೋದರ ಸಂಬಂಧಿಗಳಾದ ಸಾನಿಯಾ ಜೈಪುರದಲ್ಲಿ, ಪಾಲಕ್ ಮುಂಬೈನಲ್ಲಿ ಹಾಗೂ ಗುಂಜನ್ ಬನಾರಸ್ನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾರೆ. ಒಂದೇ ಕುಟುಂಬದ ಇಷ್ಟು ಮಂದಿ ಸೀಟು ಪಡೆದಿರುವುದು ಕೇವಲ ಅವರ ಪ್ರತಿಭೆಯೋ ಅಥವಾ ತಂದೆ-ಚಿಕ್ಕಪ್ಪ ನಡೆಸುತ್ತಿದ್ದ ಪತ್ರಿಕೆ ಸೋರಿಕೆ ದಂಧೆಯ ಫಲವೋ ಎಂಬುದು ಈಗ ತನಿಖೆಯ ಮುಖ್ಯ ವಿಷಯವಾಗಿದೆ. ಇದೇ ಕಾರಣಕ್ಕೆ ಇಡೀ ಕುಟುಂಬದ ಶೈಕ್ಷಣಿಕ ಹಿನ್ನೆಲೆಯನ್ನು ಸಿಬಿಐ ಜಾಲಾಡುತ್ತಿದೆ.
ಆರೋಪಿಗಳ ಮನೆಯಲ್ಲಿ ಸಿಬಿಐ ಶೋಧ
ಇತ್ತೀಚೆಗೆ ಜೈಪುರದ ಜಮವಾರಮಗಢದಲ್ಲಿರುವ ಬಿವಾಲ್ ಸಹೋದರರ ಮನೆ ಮತ್ತು ಫಾರ್ಮ್ಹೌಸ್ ಮೇಲೆ ದಾಳಿ ನಡೆಸಿದ ಸಿಬಿಐಗೆ ಅಚ್ಚರಿ ಕಾದಿತ್ತು. ದಾಳಿಯ ವೇಳೆ ಮನೆಯಲ್ಲಿ ಯಾವುದೇ ಪುರುಷ ಸದಸ್ಯರು ಇರಲಿಲ್ಲ. ಈ ಹಿನ್ನೆಲೆಯಲ್ಲಿ ಅಲ್ಲಿನ ಮಹಿಳೆಯರನ್ನು ಅಧಿಕಾರಿಗಳು ಸುದೀರ್ಘ ಕಾಲ ವಿಚಾರಣೆಗೊಳಪಡಿಸಿದ್ದಾರೆ. ಶೋಧದ ವೇಳೆ ಕೆಲವು ಐಷಾರಾಮಿ ವಾಹನಗಳು ಮತ್ತು ಹಗರಣಕ್ಕೆ ಸಂಬಂಧಿಸಿದ ಎನ್ನಲಾದ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಏಳು ಜನರನ್ನು ಬಂಧಿಸಲಾಗಿದ್ದು, ಈ ವರ್ಷ ನೀಟ್ ಬರೆದಿರುವ ದಿನೇಶ್ ಬಿವಾಲ್ ಮಗ ರಿಷಿ ಕೂಡ ತಲೆಮರೆಸಿಕೊಂಡಿದ್ದು, ಆತನಿಗಾಗಿ ಹುಡುಕಾಟ ನಡೆದಿದೆ.
ಈ ಹಗರಣದ ವ್ಯಾಪ್ತಿ ಈಗ ರಾಜಸ್ಥಾನವನ್ನೂ ಮೀರಿ ಮಹಾರಾಷ್ಟ್ರದವರೆಗೂ ಹಬ್ಬಿದೆ. ಅತ್ಯಂತ ಪೈಪೋಟಿಯಿಂದ ಕೂಡಿದ ನೀಟ್ ಪರೀಕ್ಷೆಯನ್ನು ವ್ಯವಸ್ಥಿತವಾಗಿ ಮ್ಯಾನಿಪುಲೇಟ್ ಮಾಡಿರುವ ಬೃಹತ್ ಶಿಕ್ಷಣ ಮಾಫಿಯಾ ಇದರ ಹಿಂದೆ ಕೆಲಸ ಮಾಡುತ್ತಿರುವುದು ಸ್ಪಷ್ಟವಾಗುತ್ತಿದೆ. ಎಂಬಿಬಿಎಸ್ ವಿದ್ಯಾರ್ಥಿನಿಯ ನಾಪತ್ತೆಯೊಂದಿಗೆ ಈ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದ್ದು, ಇದು ರಾಜಸ್ಥಾನದ ಇತಿಹಾಸದಲ್ಲೇ ಅತಿದೊಡ್ಡ ಶಿಕ್ಷಣ ಹಗರಣವಾಗಿ ಹೊರಹೊಮ್ಮುವ ಸಾಧ್ಯತೆಯಿದೆ. ತನಿಖೆ ತೀವ್ರಗೊಂಡಂತೆ ಇನ್ನೂ ಅನೇಕ ಪ್ರಭಾವಿಗಳ ಮತ್ತು ವಿದ್ಯಾರ್ಥಿಗಳ ಪಾತ್ರ ಹೊರಬರುವ ನಿರೀಕ್ಷೆಯಿದೆ.
ಇದನ್ನೂ ಓದಿ: ಮೇ 20 ರಂದು ದೇಶಾದ್ಯಂತ ಮೆಡಿಕಲ್ ಶಾಪ್ಗಳು ಸಂಪೂರ್ಣ ಬಂದ್!
