ಕೋಲಾರ: ಶ್ರೀನಿವಾಸಪುರ (Kolar) ವಿಧಾನಸಭಾ ಕ್ಷೇತ್ರದ ಸುಗಟೂರು ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಸುಮಾರು 2 ಕೋಟಿ ರೂಪಾಯಿ ವೆಚ್ಚದ ಡಾಂಬರು ಮತ್ತು ಸಿ.ಸಿ. ರಸ್ತೆ ಕಾಮಗಾರಿಗಳಿಗೆ ಸಂಸದ ಎಂ. ಮಲ್ಲೇಶ್ ಬಾಬು ಹಾಗೂ ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ಅವರು ಜಂಟಿಯಾಗಿ ಚಾಲನೆ ನೀಡಿದರು.
ಕಾಮಗಾರಿ ಗುಣಮಟ್ಟದಲ್ಲಿ ರಾಜಿ ಇಲ್ಲ
ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಮಲ್ಲೇಶ್ ಬಾಬು ಅವರು, ಗುತ್ತಿಗೆದಾರರು ಕಾಮಗಾರಿಯಲ್ಲಿ ಗುಣಮಟ್ಟವನ್ನು ಕಡ್ಡಾಯವಾಗಿ ಕಾಪಾಡಬೇಕು ಮತ್ತು ನಿಗದಿತ ಅವಧಿಯೊಳಗೆ ಕೆಲಸವನ್ನು ಪೂರ್ಣಗೊಳಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಹೆಲಿಕ್ಯಾಪ್ಟರ್ ಜೋಡಣಾ ಘಟಕ ಪ್ರಾರಂಭ
ಕೇಂದ್ರ ಸರ್ಕಾರದಿಂದ ಅಭಿವೃದ್ಧಿ ಕಾರ್ಯಗಳಿಗಾಗಿ ವರ್ಷಕ್ಕೆ 5 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗುತ್ತಿದ್ದು, ಈ ಅನುದಾನವನ್ನು ವಿವಿಧ ವಿಭಾಗಗಳಾಗಿ ಹಳ್ಳಿಗಳಿಗೆ ಹಂಚಿಕೆ ಮಾಡಲಾಗುತ್ತಿದೆ. ಗ್ರಾಮೀಣ ಭಾಗದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಅವರು ವಿವರಿಸಿದರು. ಇದೇ ವೇಳೆ ವೇಮಗಲ್ ಬಳಿ ಹೆಲಿಕ್ಯಾಪ್ಟರ್ ಜೋಡಣಾ ಘಟಕ ಪ್ರಾರಂಭವಾಗಿರುವ ಬಗ್ಗೆ ಮಾಹಿತಿ ನೀಡಿದ ಸಂಸದರು, ಡಿಪ್ಲೊಮಾ ಮತ್ತು ಐ.ಟಿ.ಐ. ಪೂರೈಸಿರುವ ನಿರುದ್ಯೋಗಿ ಯುವಕರಿಗೆ ಈ ಘಟಕದಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳು ದೊರೆಯಲಿವೆ ಎಂದು ಭರವಸೆ ನೀಡಿದರು.
