ಭುವನೇಶ್ವರ: ಕಳ್ಳರು ಪೊಲೀಸರನ್ನು ಕಂಡರೆ ಓಡಿಹೋಗುವುದು ನಮಗೆ ಗೊತ್ತು. ಆದರೆ ಒಡಿಶಾದ ಬಸಂತಿ ಕಾಲೋನಿಯಲ್ಲಿ ನಡೆದ ಘಟನೆಯಲ್ಲಿ, ಇಬ್ಬರು ಕಳ್ಳರು ಸಾರ್ವಜನಿಕರ ಹೊಡೆತಕ್ಕೆ ಹೆದರಿ ತಾವೇ ಪೊಲೀಸರಿಗೆ ಫೋನ್ ಮಾಡಿ “ನಮ್ಮನ್ನು ಕಾಪಾಡಿ” ಎಂದು (Theft) ಕೇಳಿಕೊಂಡಿದ್ದಾರೆ! ಈ ವಿಲಕ್ಷಣ ಕಥೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಮನೆಗೆ ನುಗ್ಗಿದ್ದ ಖದೀಮರು: ನಾನಕ್ ಸಿಂಗ್ ಮತ್ತು ಸತ್ಯೇಂದ್ರ ಕುಮಾರ್ ಸಿಂಗ್ ಎಂಬಿಬ್ಬರು ಕಳ್ಳರು ಗಣೇಶ್ ಬಿಸ್ವಾಲ್ ಎಂಬುವವರ ಎರಡು ಅಂತಸ್ತಿನ ಮನೆಗೆ ಕನ್ನ ಹಾಕಿದ್ದರು. ಮನೆಯವರು ಊರಲ್ಲಿಲ್ಲದ ಸಮಯ ನೋಡಿ ಬೀಗ ಮುರಿದು ಒಳಗೆ ಹೋಗಿದ್ದ ಇವರು, ಅಲ್ಮೇರಾದಲ್ಲಿದ್ದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ದೋಚಿದ್ದರು. ಆದರೆ ಇವರ ಅದೃಷ್ಟ ಹೆಚ್ಚು ಹೊತ್ತು ಸಾಲಲಿಲ್ಲ.
ಸಿಕ್ಕಿಬಿದ್ದಿದ್ದು ಹೇಗೆ? ತಡರಾತ್ರಿ ಪಕ್ಕದ ಮನೆಯ ವೃದ್ಧರೊಬ್ಬರು ಟಿವಿ ನೋಡುತ್ತಿದ್ದಾಗ ಕಳ್ಳತನವಾಗುತ್ತಿದ್ದ ಮನೆಯಲ್ಲಿ ಕಿರಿಕಿರಿ ಶಬ್ದ ಕೇಳಿಸಿದೆ. ಕೂಡಲೇ ಎಚ್ಚೆತ್ತ ಅವರು ಅಕ್ಕಪಕ್ಕದ ಮನೆಯವರನ್ನು ಕರೆದಿದ್ದಾರೆ. ಎಲ್ಲರೂ ಸೇರಿ ಮನೆಯ ಮುಖ್ಯ ದ್ವಾರವನ್ನು ಹೊರಗಿನಿಂದ ಭದ್ರವಾಗಿ ಲಾಕ್ ಮಾಡಿದ್ದಾರೆ. ಕಳ್ಳರಿಗೆ ಹೊರಗೆ ಹೋಗಲು ದಾರಿಯೇ ಇಲ್ಲದಂತಾಯಿತು.
ಪೊಲೀಸರಿಗೇ ಕರೆ ಮಾಡಿದ ಕಳ್ಳರು! ಹೊರಗೆ ಜನರ ಗುಂಪು ಜಮಾಯಿಸಿ ಆಕ್ರೋಶ ವ್ಯಕ್ತಪಡಿಸುತ್ತಿರುವುದನ್ನು ಕಂಡು ಮನೆಯೊಳಗಿದ್ದ ಕಳ್ಳರು ಬೆಚ್ಚಿಬಿದ್ದರು. “ಹೊರಗೆ ಹೋದರೆ ಸಾರ್ವಜನಿಕರು ನಮ್ಮನ್ನು ಸುಮ್ಮನೆ ಬಿಡುವುದಿಲ್ಲ” ಎಂಬ ಭಯದಿಂದ ಇವರು ತಕ್ಷಣವೇ ಪೊಲೀಸ್ ಸಹಾಯವಾಣಿ 112 ಕ್ಕೆ ಕರೆ ಮಾಡಿದ್ದಾರೆ. “ಸರ್, ನಮ್ಮನ್ನು ಯಾರೋ ಮನೆಯೊಳಗೆ ಲಾಕ್ ಮಾಡಿದ್ದಾರೆ, ಜನರು ನಮ್ಮ ಮೇಲೆ ದಾಳಿ ಮಾಡುವ ಭಯವಿದೆ, ದಯವಿಟ್ಟು ಬಂದು ನಮ್ಮನ್ನು ರಕ್ಷಿಸಿ” ಎಂದು ಪೊಲೀಸರಲ್ಲಿ ಅಂಗಲಾಚಿದ್ದಾರೆ!
ಪೊಲೀಸ್ ಕಸ್ಟಡಿಯಲ್ಲಿ ಕಳ್ಳರು: ಮಾಹಿತಿ ಸಿಕ್ಕ ತಕ್ಷಣ ರಾತ್ರಿ 2.30ರ ವೇಳೆಗೆ ಸ್ಥಳಕ್ಕೆ ಬಂದ ಪೊಲೀಸರು, ಮನೆಯ ಬೀಗ ತೆರೆದು ಕಳ್ಳರನ್ನು ಜನರ ಕೆಂಗಣ್ಣಿನಿಂದ ರಕ್ಷಿಸಿ ಠಾಣೆಗೆ ಕರೆದೊಯ್ದಿದ್ದಾರೆ. ವಿಚಾರಣೆ ವೇಳೆ ಕಳ್ಳರು ತಾವು ಕದ್ದ ಆಭರಣಗಳನ್ನು ಭಯದಿಂದ ಮನೆಯಲ್ಲೇ ಬಿಟ್ಟಿರುವುದಾಗಿ ಒಪ್ಪಿಕೊಂಡಿದ್ದಾರೆ. ಸಾರ್ವಜನಿಕರ ಜಾಗೃತಿಯಿಂದಾಗಿ ಕಳ್ಳತನವಾದ ವಸ್ತುಗಳು ವಾಪಸ್ ಸಿಕ್ಕಿದ್ದು, ಕಳ್ಳರ ಈ ವಿಚಿತ್ರ ನಡೆ ಜನರಲ್ಲಿ ನಗು ಮೂಡಿಸಿದೆ.
ಇದನ್ನೂ ಓದಿ: ಅಸ್ಸಾಂ ಮುಖ್ಯಮಂತ್ರಿ ಸ್ಥಾನಕ್ಕೆ ಹಿಮಂತ ಬಿಸ್ವ ಶರ್ಮಾ ರಾಜೀನಾಮೆ: ಮೇ 12ಕ್ಕೆ ನೂತನ ಸರ್ಕಾರದ ಪದಗ್ರಹಣ?
