ನವದೆಹಲಿ: ಬೆಂಗಳೂರು ನಗರದಲ್ಲಿನ ರಕ್ಷಣಾ ಇಲಾಖೆಯ ವಿಮಾನ ನಿಲ್ದಾಣಗಳ ಸುತ್ತಮುತ್ತಲ ಪ್ರದೇಶದಲ್ಲಿ ವಿಧಿಸಲಾಗಿರುವ ಎತ್ತರದ ನಿರ್ಬಂಧಗಳು ನಗರದ ಅಭಿವೃದ್ಧಿಗೆ ಅಡ್ಡಿಯಾಗುತ್ತಿವೆ. ಈ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ನವದೆಹಲಿಯಲ್ಲಿ ಸಕಾರಾತ್ಮಕ ಸಭೆ ನಡೆಸಿದ್ದೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ತಿಳಿಸಿದ್ದಾರೆ.
ಮಾಹಿತಿ ನೀಡಿದ ಡಿಸಿಎಂ
ಈ ಕುರಿತು ಮಾಹಿತಿ ನೀಡಿರುವ ಅವರು, ಎಚ್ಎಎಲ್ (HAL) ಮತ್ತು ಯಲಹಂಕ ವಾಯುನೆಲೆಗಳ ಸುತ್ತಮುತ್ತ ನಿರಾಕ್ಷೇಪಣಾ ಪತ್ರ (NOC) ನೀಡುವಾಗ ವಿಧಿಸಲಾಗುತ್ತಿರುವ ಕಠಿಣ ನಿಯಮಗಳು ಅಭಿವೃದ್ಧಿ ಕಾಮಗಾರಿಗಳಿಗೆ ತಡೆ ಉಂಟು ಮಾಡುತ್ತಿವೆ ಎಂದು ವಿವರಿಸಿದ್ದಾರೆ. ಪ್ರಸ್ತುತ ಜಾರಿಯಲ್ಲಿರುವ ನಿಯಮಗಳ ವ್ಯಾಖ್ಯಾನದಿಂದಾಗಿ ವಿಮಾನ ನಿಲ್ದಾಣಗಳ ಸುತ್ತಲಿನ ವಿಶಾಲ ಪ್ರದೇಶಗಳು ಎತ್ತರದ ಮಿತಿಗೆ ಒಳಪಟ್ಟಿದ್ದು, ಇದು ನಗರದ ಮಧ್ಯಭಾಗದ ಅಭಿವೃದ್ಧಿ ಮತ್ತು ದೀರ್ಘಕಾಲೀನ ಮೂಲಸೌಕರ್ಯ ಯೋಜನೆಗಳ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.
Had a constructive meeting with Defence Minister @rajnathsingh avaru in New Delhi regarding the height restrictions being imposed around defence airports in Bengaluru while granting NOCs for construction. These restrictions, particularly around HAL and Yelahanka airbases, are… pic.twitter.com/VdEvGF61m8
— DK Shivakumar (@DKShivakumar) April 24, 2026
ಜಾಗತಿಕ ತಂತ್ರಜ್ಞಾನ ಹಬ್ ಆಗಿ ಹೊರಹೊಮ್ಮುತ್ತಿರುವ ಬೆಂಗಳೂರಿನ ನಗರಾಭಿವೃದ್ಧಿಯು ಅನಗತ್ಯವಾಗಿ ಕುಂಠಿತವಾಗದಂತೆ ನೋಡಿಕೊಳ್ಳುವುದು ಮುಖ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ವಿಮಾನಯಾನ ಸುರಕ್ಷತೆಯನ್ನು ಖಾತ್ರಿಪಡಿಸುವುದರ ಜೊತೆಗೆ, ನಗರದ ಅಭಿವೃದ್ಧಿ ಅಗತ್ಯಗಳನ್ನು ಪೂರೈಸುವಂತಹ ಸಮತೋಲಿತ ಪರಿಹಾರ ಕಂಡುಕೊಳ್ಳಲು ಕೇಂದ್ರ ಸಚಿವರ ಮಧ್ಯಪ್ರವೇಶ ಕೋರಿದ್ದೇನೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ: ಸಿಇಟಿ ಪರೀಕ್ಷೆ ವೇಳೆ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ವಿವಾದ; ಕಾಲೇಜಿನ ಮೂವರು ಸಿಬ್ಬಂದಿ ಅಮಾನತು
