ಬೆಂಗಳೂರು: ಸ್ಯಾಂಡಲ್ವುಡ್ನ'(Sandalwood) ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಿರ್ದೇಶಿಸಿ, ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡುತ್ತಿರುವ ಬಹುನಿರೀಕ್ಷಿತ ‘ರಿಚರ್ಡ್ ಆ್ಯಂಟನಿ’ ಚಿತ್ರದ ಕುರಿತು ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಇಲ್ಲಿದೆ ಒಂದು ಬೊಂಬಾಟ್ ಸುದ್ದಿ!
ಚಿತ್ರ ಘೋಷಣೆಯಾಗಿ ವರ್ಷಗಳು ಕಳೆದರೂ ಯಾವುದೇ ಹೊಸ ಅಪ್ಡೇಟ್ ಇಲ್ಲದೆ ನಿರಾಸೆಯಲ್ಲಿದ್ದ ಸಿನಿ ರಸಿಕರಿಗೆ, ಖ್ಯಾತ ಸಂಗೀತ ನಿರ್ದೇಶಕ ಬಿ. ಅಜನೀಶ್ ಲೋಕನಾಥ್ ಭರವಸೆಯ ಮಾತುಗಳನ್ನಾಡಿದ್ದಾರೆ.
ಶೂಟಿಂಗ್ ಶುರುವಾಗುವುದಷ್ಟೇ ಬಾಕಿ!
ಇತ್ತೀಚೆಗೆ ನಡೆದ ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ವೇದಿಕೆ ಮೇಲೆ ಮಾತನಾಡಿದ ಅಜನೀಶ್ ಅವರಿಗೆ ‘ರಿಚರ್ಡ್ ಆ್ಯಂಟನಿ’ ಚಿತ್ರದ ಬಗ್ಗೆ ಪ್ರಶ್ನೆ ಎದುರಾಯಿತು. ಇದಕ್ಕೆ ಅತ್ಯುತ್ಸಾಹದಿಂದಲೇ ಉತ್ತರಿಸಿದ ಅವರು, “ಚಿತ್ರಕ್ಕಾಗಿ ನಾನೂ ರೆಡಿ, ರಕ್ಷಿತ್ ಶೆಟ್ಟಿ ಅವರೂ ರೆಡಿ. ಇಡೀ ಚಿತ್ರತಂಡ ಹಾಗೂ ಅಭಿಮಾನಿಗಳು ಸಜ್ಜಾಗಿದ್ದಾರೆ. ಇನ್ನೇನಿದ್ದರೂ ಶೂಟಿಂಗ್ ಆರಂಭವಾಗುವುದೊಂದೇ ಬಾಕಿ ಇದೆ” ಎಂದು ಸ್ಪಷ್ಟಪಡಿಸಿದ್ದಾರೆ.
ಕೇವಲ ಸಿನಿಮಾವಲ್ಲ, ಇದು ‘ನ್ಯೂಕ್ಲಿಯರ್ ಬಾಂಬ್’
ಚಿತ್ರದ ಕಥೆ ಹಾಗೂ ಔಟ್ಪುಟ್ ಬಗ್ಗೆ ಅಪಾರ ವಿಶ್ವಾಸ ವ್ಯಕ್ತಪಡಿಸಿದ ಅಜನೀಶ್, “ರಿಚರ್ಡ್ ಆ್ಯಂಟನಿ ಚಿತ್ರ ಬಿಡುಗಡೆಯಾದಾಗ ಅದೊಂದು ಸಾಮಾನ್ಯ ಸಿನಿಮಾವಾಗಿರದೆ, ನ್ಯೂಕ್ಲಿಯರ್ ಬಾಂಬ್ನಂತೆ ಚಿತ್ರರಂಗದಲ್ಲಿ ಧೂಳೆಬ್ಬಿಸಲಿದೆ ಎಂಬ ಬಲವಾದ ನಂಬಿಕೆ ನನಗಿದೆ. ರಕ್ಷಿತ್ ಶೆಟ್ಟಿ ಅವರು ಒಂದು ಅದ್ಭುತ ಕಲ್ಪನೆ ಹಾಗೂ ದೊಡ್ಡ ಬ್ಯಾಂಗ್ನೊಂದಿಗೆ ಪ್ರೇಕ್ಷಕರ ಮುಂದೆ ಬರಲಿದ್ದಾರೆ” ಎಂದು ವಿವರಿಸಿದರು.
ದುಪ್ಪಟ್ಟಾದ ನಿರೀಕ್ಷೆ
ಬ್ಲಾಕ್ ಬಸ್ಟರ್ ಹಿಟ್ ‘ಉಳಿದವರು ಕಂಡಂತೆ’ ಚಿತ್ರದ ಮುಂದುವರಿದ ಭಾಗವಾಗಿ (ಸೀಕ್ವೆಲ್) ಈ ಸಿನಿಮಾ ಮೂಡಿಬರುತ್ತಿದ್ದು, ಐಕಾನಿಕ್ ‘ರಿಚ್ಚಿ’ ಪಾತ್ರದ ಸುತ್ತ ಕಥೆ ಹೆಣೆಯಲಾಗಿದೆ. ಅಜನೀಶ್ ಅವರ ಈ ಪವರ್ಫುಲ್ ಮಾತುಗಳು ಇದೀಗ ರಕ್ಷಿತ್ ಶೆಟ್ಟಿ ಅಭಿಮಾನಿಗಳಲ್ಲಿ ಚಿತ್ರದ ಮೇಲಿನ ನಿರೀಕ್ಷೆಯನ್ನು ನೂರ್ಮಡಿಗೊಳಿಸಿದೆ.
ಕೊನೆಗೂ ‘ರಿಚರ್ಡ್ ಆ್ಯಂಟನಿ’ ಬಗ್ಗೆ ಮೌನ ಮುರಿದ ರಕ್ಷಿತ್ ಶೆಟ್ಟಿ: ಸಿನಿಮಾ ತಡವಾಗುತ್ತಿರುವುದಕ್ಕೆ ಅಸಲಿ ಕಾರಣ ಬಿಚ್ಚಿಟ್ಟ ಸಿಂಪಲ್ ಸ್ಟಾರ್!
ಬೆಂಗಳೂರು: ಸ್ಯಾಂಡಲ್ವುಡ್ನ ಪ್ರಖ್ಯಾತ ನಟ, ನಿರ್ದೇಶಕ ‘ಸಿಂಪಲ್ ಸ್ಟಾರ್’ ರಕ್ಷಿತ್ ಶೆಟ್ಟಿ ಅವರ ಬಹುನಿರೀಕ್ಷಿತ ಪ್ರಾಜೆಕ್ಟ್ ‘ರಿಚರ್ಡ್ ಆ್ಯಂಟನಿ’ (Richard Antony) ಬಗ್ಗೆ ಯಾವುದೇ ಮಾಹಿತಿ ಇಲ್ಲದೆ ಅಭಿಮಾನಿಗಳು ಸಿನಿಮಾ ನಿಂತೇ ಹೋಯಿತೇನೋ ಎಂದು ಆತಂಕಗೊಂಡಿದ್ದರು. ಆದರೆ, ಇದೀಗ ಸ್ವತಃ ರಕ್ಷಿತ್ ಶೆಟ್ಟಿ ಅವರೇ ಈ ಕುರಿತು ಮೌನ ಮುರಿದಿದ್ದು, ಸಿನಿಮಾ ವಿಳಂಬವಾಗುತ್ತಿರುವುದಕ್ಕೆ ಅಸಲಿ ಕಾರಣವನ್ನು ಹಂಚಿಕೊಂಡಿದ್ದಾರೆ.
ದೊಡ್ಡ ಕೆಲಸಕ್ಕೆ ಸಮಯ ಬೇಕು: ಅಮೆರಿಕದಲ್ಲಿ ‘ಶೆಟ್ಟರ’ ಹೇಳಿಕೆ
ಅಮೆರಿಕದಲ್ಲಿ ನಡೆದ ‘ನಾವಿಕ ಕನ್ನಡಿಗ ಸಮ್ಮೇಳನ’ದಲ್ಲಿ ಭಾಗವಹಿಸಿದ್ದ ರಕ್ಷಿತ್ ಶೆಟ್ಟಿ ಅವರಿಗೆ ಅಲ್ಲಿದ್ದ ಪ್ರೇಕ್ಷಕರಿಂದ ‘ರಿಚರ್ಡ್ ಆ್ಯಂಟನಿ’ ಕುರಿತು ಪ್ರಶ್ನೆ ಎದುರಾಯಿತು. ಅದಕ್ಕೆ ಉತ್ತರಿಸಿದ ಅವರು, “ಯಾವುದೇ ಆದರೂ ಒಂದು ದೊಡ್ಡ ಮತ್ತು ಅತ್ಯುತ್ತಮವಾದ ಕೆಲಸವನ್ನು ಮಾಡಬೇಕೆಂದರೆ ಕೆಲವೊಮ್ಮೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಆ ಕಾರಣಕ್ಕಾಗಿಯೇ ನಾನು ಈ ಚಿತ್ರಕ್ಕಾಗಿ ಹೆಚ್ಚಿನ ಸಮಯವನ್ನು ವಿನಿಯೋಗಿಸುತ್ತಿದ್ದೇನೆ” ಎಂದು ಸ್ಪಷ್ಟಪಡಿಸಿದರು.
ಥಿಯೇಟರ್ಗೆ ಬಾರದವರೂ ಸಿನಿಮಾ ನೋಡುವಂತೆ ಮಾಡುತ್ತೇನೆ!
ಅಭಿಮಾನಿಗಳ ಆತಂಕಕ್ಕೆ ಧೈರ್ಯ ತುಂಬಿದ ರಕ್ಷಿತ್, “ಕೆಲವೊಮ್ಮೆ ನಮ್ಮ ಕೆಲಸಗಳು ತುಂಬಾ ನಿಧಾನವಾಗುತ್ತಿವೆ ಎಂದು ನಮಗೂ ಅನಿಸುತ್ತದೆ. ಆದರೆ ನಾನು ಭರವಸೆ ನೀಡುತ್ತೇನೆ, ನಾನು ಮತ್ತೆ ಚಿತ್ರರಂಗಕ್ಕೆ ಮರಳಿದಾಗ ಸಾಮಾನ್ಯ ದಿನಗಳಲ್ಲಿ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಹೋಗದವರೂ ಸಹ ಥಿಯೇಟರ್ ಕಡೆಗೆ ಹೆಜ್ಜೆ ಹಾಕುವಂತಹ ಅದ್ಭುತ ಸಿನಿಮಾವನ್ನು ಹೊತ್ತು ತರುತ್ತೇನೆ” ಎಂದು ಹೇಳುವ ಮೂಲಕ ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.
4 ವರ್ಷಗಳ ಸುದೀರ್ಘ ಕಾಯುವಿಕೆ
ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರ್ಮಾಣವಾಗಲಿರುವ ‘ರಿಚರ್ಡ್ ಆ್ಯಂಟನಿ’ ರಕ್ಷಿತ್ ಶೆಟ್ಟಿ ಅವರ ಕನಸಿನ ಸಿನಿಮಾವಾಗಿದೆ. ಸುಮಾರು ನಾಲ್ಕು ವರ್ಷಗಳ ಹಿಂದೆ ಇದರ ಟೀಸರ್ ಬಿಡುಗಡೆಯಾಗಿ ಭಾರಿ ಧೂಳೆಬ್ಬಿಸಿತ್ತು. ಆದರೆ ಆ ಬಳಿಕ ಯಾವುದೇ ಅಪ್ಡೇಟ್ ಸಿಕ್ಕಿರಲಿಲ್ಲ. ರಕ್ಷಿತ್ ಶೆಟ್ಟಿ ಅವರ ಮೈಲಿಗಲ್ಲು ಸಿನಿಮಾ ‘ಉಳಿದವರು ಕಂಡಂತೆ’ ಬಿಡುಗಡೆಯಾಗಿ 11 ವರ್ಷಗಳು ಕಳೆದಿದ್ದರೂ ಅದರ ಸೀಕ್ವೆಲ್ ಆದ ಈ ಚಿತ್ರದ ಬಗ್ಗೆ ಮಾಹಿತಿ ಇಲ್ಲದಿದ್ದಕ್ಕೆ ಅಭಿಮಾನಿಗಳು ಬೇಸರಗೊಂಡಿದ್ದರು.
‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ಭರ್ಜರಿ ಯಶಸ್ಸಿನ ನಂತರ ರಕ್ಷಿತ್ ಶೆಟ್ಟಿ ಬೆಳ್ಳಿಪರದೆ ಮೇಲೆ ಕಾಣಿಸಿಕೊಂಡಿಲ್ಲ. ಅವರು ಮಾತು ಕೊಟ್ಟಂತೆಯೇ ‘ರಿಚರ್ಡ್ ಆ್ಯಂಟನಿ’ ಚಿತ್ರದ ಸ್ಕ್ರಿಪ್ಟ್ ಮತ್ತು ಪೂರ್ವತಯಾರಿಗಾಗಿ ಸಮಯ ತಗೆದುಕೊಳ್ಳುತ್ತಿದ್ದಾರೆ ಎಂಬುದು ಸದ್ಯ ಅವರ ಮಾತುಗಳಿಂದ ಸ್ಪಷ್ಟವಾಗಿದ್ದು, ಚಿತ್ರಪ್ರೇಮಿಗಳಿಗೆ ನೆಮ್ಮದಿ ತಂದಿದೆ.
