TOP NEWS

Suresh Kumar: ರಾಜಾಜಿನಗರ ಶಾಸಕ ಸುರೇಶ್ ಕುಮಾರ್ ವಿರುದ್ಧ ಲೋಕಾಯುಕ್ತಕ್ಕೆ ದೂರು: ರಾಜಕೀಯ ದುರುದ್ದೇಶದ ಸುಳ್ಳು ಆರೋಪ ಎಂದು ಬಿಜೆಪಿ ಹಿರಿಯ ನಾಯಕ ಕಿಡಿ!

Lokayukta Complaint Against MLA Suresh Kumar BJP Leader Denies Corruption Allegations

ಬೆಂಗಳೂರು: ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಹಿರಿಯ ಬಿಜೆಪಿ ಮುಖಂಡ ಹಾಗೂ ಶಾಸಕ ಎಸ್. ಸುರೇಶ್ ಕುಮಾರ್ (Suresh Kumar) ಅವರ ವಿರುದ್ಧ ಲೋಕಾಯುಕ್ತ ಸಂಸ್ಥೆಗೆ ಭ್ರಷ್ಟಾಚಾರ ಮತ್ತು ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮ ಎಸಗಿರುವ ಕುರಿತು ಗಂಭೀರ ದೂರು ಸಲ್ಲಿಕೆಯಾಗಿದೆ. ಈ ಬೆಳವಣಿಗೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಸುರೇಶ್ ಕುಮಾರ್, ತಮ್ಮ ಮೇಲಿನ ಆರೋಪಗಳು ಸಂಪೂರ್ಣ ಸತ್ಯಕ್ಕೆ ದೂರವಾಗಿದ್ದು, ರಾಜಕೀಯವಾಗಿ ಮಸಿ ಬಳಿಯುವ ಪ್ರಯತ್ನ ಎಂದು ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ, ಲೋಕಾಯುಕ್ತ ಕಚೇರಿಯಿಂದ ತಮಗೆ ನೋಟಿಸ್ ಬರುವ ಮುನ್ನವೇ, ಮುಂದಿನ ಎರಡು ದಿನಗಳಲ್ಲಿ ದೂರಿನಲ್ಲಿರುವ ಪ್ರತಿಯೊಂದು ಅಂಶಕ್ಕೂ ತಾವೇ ಖುದ್ದಾಗಿ ಲಿಖಿತ ರೂಪದ ಉತ್ತರ ನೀಡುವುದಾಗಿ ಸವಾಲು ಹಾಕಿದ್ದಾರೆ.

ಟೆಂಡರ್ ನಿಯಮ ಉಲ್ಲಂಘನೆ: ವಕೀಲ ಸೂರ್ಯ ಮುಕುಂದರಾಜ್ ದೂರು ಕಾಂಗ್ರೆಸ್ ಕಾರ್ಯಕರ್ತ ಹಾಗೂ ವಕೀಲ ಸೂರ್ಯ ಮುಕುಂದರಾಜ್ ಅವರು ಶಾಸಕರ ವಿರುದ್ಧ ಈ ದೂರು ದಾಖಲಿಸಿದ್ದಾರೆ. 2020ರಿಂದ ರಾಜಾಜಿನಗರ ವ್ಯಾಪ್ತಿಯಲ್ಲಿ ನಡೆದಿರುವ ಬಿಬಿಎಂಪಿ (BBMP) ಸಾರ್ವಜನಿಕ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಯಲ್ಲಿ ಶಾಸಕರು ಹಸ್ತಕ್ಷೇಪ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸುರೇಶ್ ಕುಮಾರ್ ಅವರು ತಮ್ಮ ರಾಜಕೀಯ ಪ್ರಭಾವ ಬಳಸಿ ಪಾಲಿಕೆ ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದಾರೆ ಹಾಗೂ ನಿಯಮಾವಳಿಗಳ ಪ್ರಕಾರ ಅರ್ಹತೆ ಹೊಂದಿದ್ದ ಎಲ್-1 (L1) ಗುತ್ತಿಗೆದಾರರನ್ನು ಬದಿಗೆ ಸರಿಸಿದ್ದಾರೆ. ಕೆಟಿಪಿಪಿ (KTPP) ಕಾಯ್ದೆಯನ್ನು ಉಲ್ಲಂಘಿಸಿ, ತಮ್ಮ ಆಪ್ತರು ಮತ್ತು ಬೇನಾಮಿ ಕಾಂಟ್ರಾಕ್ಟರ್‌ಗಳಿಗೆ ಕಾನೂನುಬಾಹಿರವಾಗಿ ಟೆಂಡರ್ ಸಿಗುವಂತೆ ಮಾಡಿದ್ದಾರೆ. ಈ ಮೂಲಕ ಸಾರ್ವಜನಿಕ ಹಣ ಪೋಲಾಗಿದ್ದು, ತನಿಖೆ ನಡೆಸಬೇಕು ಎಂದು ದೂರುದಾರರು ಒತ್ತಾಯಿಸಿದ್ದಾರೆ.

40 ವರ್ಷದ ರಾಜಕೀಯ ಜೀವನದಲ್ಲಿ ಕಪ್ಪುಚುಕ್ಕೆ ಇಲ್ಲ: ಶಾಸಕರ ಸ್ಪಷ್ಟನೆ ತಮ್ಮ ಮೇಲಿನ ಆರೋಪಗಳನ್ನು ಬಲವಾಗಿ ನಿರಾಕರಿಸಿರುವ ಸುರೇಶ್ ಕುಮಾರ್, “ನನ್ನ ನಾಲ್ಕು ದಶಕಗಳ ಸುದೀರ್ಘ ಸಾರ್ವಜನಿಕ ಹಾಗೂ ರಾಜಕೀಯ ಬದುಕಿನಲ್ಲಿ ನಾನು ಎಂದೂ ಯಾವುದೇ ಕಾಂಟ್ರಾಕ್ಟ್ ವಿಚಾರಗಳಲ್ಲಿ ಭಾಗಿಯಾಗಿಲ್ಲ. ಬೇನಾಮಿ ಗುತ್ತಿಗೆದಾರರನ್ನು ಸಾಕುವುದು ನನ್ನ ರಕ್ತದಲ್ಲೇ ಇಲ್ಲ. ಸರ್ಕಾರಿ ಖಜಾನೆಗೆ ನಷ್ಟ ಉಂಟುಮಾಡುವ ಯೋಚನೆಯೂ ನನಗಿಲ್ಲ. ಬೆಂಗಳೂರಿನ ರಾಜಕೀಯ ವಲಯ ಹಾಗೂ ಬಿಬಿಎಂಪಿಯ ಪ್ರತಿಯೊಬ್ಬ ಅಧಿಕಾರಿಗೂ ನನ್ನ ಪ್ರಾಮಾಣಿಕತೆ ಮತ್ತು ವ್ಯಕ್ತಿತ್ವ ಏನು ಎಂಬುದು ಚೆನ್ನಾಗಿ ಗೊತ್ತಿದೆ. ಚುನಾವಣೆ ಹತ್ತಿರ ಬರುತ್ತಿರುವಾಗ ನನ್ನ ಹೆಸರನ್ನು ಕೆಡಿಸಲು ನಡೆಸಿರುವ ವ್ಯವಸ್ಥಿತ ಪಿತೂರಿ ಇದು” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕೆಲಸ ಮಾಡದೆ ಬಿಲ್ ಎತ್ತುವವರ ಪರ ವಕಾಲತ್ತು! ದೂರುದಾರರ ನಡೆಗೆ ಕನಿಕರ ವ್ಯಕ್ತಪಡಿಸಿರುವ ಶಾಸಕರು, “ಈ ದೂರಿನ ಹಿಂದೆ ಯಾರ ಕೈವಾಡವಿದೆ ಮತ್ತು ದೂರುದಾರರು ಯಾರ ಇಶಾರೆಯಂತೆ ಆಡುತ್ತಿದ್ದಾರೆ ಎಂಬುದು ನನಗೆ ಚೆನ್ನಾಗಿ ತಿಳಿದಿದೆ. ಬೆಂಗಳೂರಿನಲ್ಲಿ ಕೆಲಸವನ್ನೇ ಮಾಡದೆ ಕೋಟ್ಯಂತರ ರೂಪಾಯಿ ಬಿಲ್ ಪಡೆದುಕೊಳ್ಳುವ ಕುಖ್ಯಾತ ಗ್ಯಾಂಗ್ ಒಂದಿದೆ. ವಕೀಲ ಸೂರ್ಯ ಮುಕುಂದರಾಜ್ ಅವರು ಅಂತಹ ವಂಚಕರ ಪರವಾಗಿ ನಿಂತು ನನ್ನ ವಿರುದ್ಧ ದೂರು ನೀಡಿರುವುದು ಅತ್ಯಂತ ಹಾಸ್ಯಾಸ್ಪದ” ಎಂದು ಲೇವಡಿ ಮಾಡಿದ್ದಾರೆ. ಲೋಕಾಯುಕ್ತ ಸಂಸ್ಥೆಯು ಈ ಪ್ರಕರಣದ ಸತ್ಯಾಸತ್ಯತೆಯನ್ನು ಹೊರತರಬೇಕು ಎಂದು ಆಗ್ರಹಿಸಿರುವ ಅವರು, ಯಾವುದೇ ಅಧಿಕೃತ ನೋಟಿಸ್ ಬರುವ ಮುನ್ನವೇ ದೂರಿನ ಎಲ್ಲ ವಿವರಗಳಿಗೂ ಸೂಕ್ತ ದಾಖಲೆಗಳ ಸಮೇತ ಲಿಖಿತ ಉತ್ತರ ನೀಡಿ, ದೂರುದಾರರ ಹಿನ್ನೆಲೆಯ ಬಗ್ಗೆಯೂ ತನಿಖೆ ನಡೆಸುವಂತೆ ಮನವಿ ಮಾಡುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ರಾಜ್ಯದ ವಸತಿ ಕಟ್ಟಡ ಮಾಲೀಕರಿಗೆ ಸರ್ಕಾರದಿಂದ ಬಿಗ್ ರಿಲೀಫ್: ಓಸಿ, ಸಿಸಿ ದಾಖಲೆ ಸಲ್ಲಿಕೆ ಅವಧಿ ಆಗಸ್ಟ್ 15 ರವರೆಗೆ ವಿಸ್ತರಣೆ!

Leave a Reply

Your email address will not be published. Required fields are marked *